ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರುಗಳು ‘ಅಬ್ಕಿ ಬಾರ್ 400 ಪಾರ್’ (ಈ ಬಾರಿ 400ಕ್ಕಿಂತ ಅಧಿಕ ಗೆಲುವು) ಎಂಬ ಘೋಷಣೆಯನ್ನು ಮೊಳಗಿಸುತ್ತಿರುವ ನಡುವೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬಿಜೆಪಿಗೆ ತಿರುಗೇಟು ನೀಡಿದರು.
ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ಮೇಡ್ಚಲ್ನಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ, ಬಿಜೆಪಿಯನ್ನು ಈ 400 ಸೀಟು ಗೆಲುವಿನ ವಿಚಾರದಲ್ಲಿ ಕುಟುಕಿದರು. ಈ ಹಿಂದೆ ಪ್ರಧಾನಿಯೆಂದರೆ ದೊಡ್ಡಣ್ಣನಿದ್ದಂತೆ ಎಂದು ಮೋದಿಯನ್ನು ಹೊಗಳಿದ್ದ ರೇವಂತ್ ರೆಡ್ಡಿ ಈಗ ಸ್ಥಳೀಯ ರಾಜಕೀಯ ಪಕ್ಷಗಳ ಜೊತೆ ಬಿಜೆಪಿ ಮೈತ್ರಿಯನ್ನು ಪ್ರಶ್ನಿಸಿದರು.
“ಬಿಜೆಪಿ ಪಕ್ಷಕ್ಕೆ ಈ ಬಾರಿ 400ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದ್ದರೆ, ಇತರೆ ರಾಜ್ಯಗಳಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಬಿಜೆಪಿ ಸಂಪರ್ಕಿಸುತ್ತಿರುವುದೇಕೆ?” ಎಂದು ಪ್ರಶ್ನಿಸಿದ ರೆಡ್ಡಿ ಕೆಲವು ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಯನ್ನು ಉಲ್ಲೇಖಿಸಿದರು.
“ಮಹಾರಾಷ್ಟ್ರದಲ್ಲಿ ಅವರು (ಬಿಜೆಪಿ) ಎನ್ಸಿಪಿ ಮತ್ತು ಶಿವಸೇನಾ ಪಕ್ಷಗಳನ್ನು ಇಬ್ಘಾಗಗೊಳಿಸಿದರು. ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೆಡಿಎಸ್ ಪಕ್ಷದೊಂದಿಗೆ ಕೈಜೋಡಿಸಿದರು. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ” ಎಂದು ರೇವಂತ್ ರೆಡ್ಡಿ ಹೇಳಿದರು.
”ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ವರ್ಷಗಳಿಂದ ಅಂತರ ಕಾಯ್ದುಕೊಂಡಿದ್ದ ನಾಯಕರುಗಳ ಜೊತೆ ಮತ್ತು ಪಕ್ಷಗಳೊಂದಿಗೆ ಈಗ ಮತ್ತೆ ಮೈತ್ರಿಮಾಡಿಕೊಳ್ಳುತ್ತಿದ್ದಾರೆ. ಇದು ದೇಶದಲ್ಲಿ ಬಿಜೆಪಿ ಎಷ್ಟು ದುರ್ಬಲವಾಗಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ,” ಎಂದರು.
ಇನ್ನು “ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಆರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ” ಎಂದು ಹೇಳಿಕೆ ನೀಡಿದ್ದ ಬಿಆರ್ಎಸ್ ಮುಖಂಡರಾದ ಕೆ.ಚಂದ್ರಶೇಖರ ರಾವ್, ಕೆ.ಟಿ.ರಾಮರಾವ್, ಟಿ.ಹರೀಶ್ ರಾವ್ ಮತ್ತು ಕೆ.ಕವಿತಾರನ್ನು ಟೀಕಿಸಿದ ರೇವಂತ್ ರೆಡ್ಡಿ, “ಕಾಂಗ್ರೆಸ್ ಅನ್ನು ಕಿತ್ತೊಗೆಯಲು ಪ್ರಯತ್ನಿಸಿದರೆ ಪರಿಸ್ಥಿತಿ ನೆಟ್ಟಗಿರದು” ಎಂದು ಎಚ್ಚರಿಸಿದರು.
ಆಂಧ್ರ ಪ್ರದೇಶದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಬಿಜೆಪಿ, ತೆಲುಗುದೇಶಂ ಪಕ್ಷ (ಟಿಡಿಪಿ) ಮತ್ತು ಜನಸೇನಾ ಪಕ್ಷಗಳು ಮೈತ್ರಿ ಮಾಡಿಕೊಂಡಿದೆ. 2018ರಲ್ಲಿ ಎನ್ಡಿಎ ತೊರೆದಿದ್ದ ಟಿಡಿಪಿ, ಆರು ವರ್ಷಗಳ ಬಳಿಕ ಮತ್ತೆ ಎನ್ಡಿಎ ಮಡಿಲು ಸೇರಿದೆ.




