“ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ಈಗ ‘ವಂದೇ ಭಾರತ್’ ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, “ರಾಷ್ಟ್ರೀಯ ಗೀತೆಯನ್ನು ಇತರರ ಮೇಲೆ ತಮ್ಮ ನಂಬಿಕೆಗಳನ್ನು ಹೇರುವ ಸಾಧನವಾಗಿ ಬಳಸಬಾರದು” ಎಂದು ಪ್ರತಿಪಾದಿಸಿದ್ದಾರೆ.
ಲೋಕಸಭೆಯಲ್ಲಿ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ ಯಾದವ್, “ವಂದೇ ಮಾತರಂ ಅನ್ನು ಉತ್ಸಾಹದಿಂದ ಅನುಸರಿಸಬೇಕು. ಏಕೆಂದರೆ ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರನ್ನು ಜತೆಯಾಗಿಸಿದ ಹಾಡು” ಎಂದು ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ
“ವಂದೇ ಮಾತರಂ ರಾಜಕೀಯ ಸಾಧನವಲ್ಲ. ಅವರು(ಬಿಜೆಪಿ ನಾಯಕರು) ತಾವೇ ವಂದೇ ಮಾತರಂ ಗೀತೆಯನ್ನು ರಚಿಸಿದಂತೆ ಮಾತನಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ವ್ಯಕ್ತಿಗಳು ‘ವಂದೇ ಮಾತರಂ’ನ ಅರ್ಥವನ್ನು ನಿಜವಾಗಿಯೂ ಹೇಗೆ ಅರ್ಥಮಾಡಿಕೊಳ್ಳಬಹುದು” ಎಂದು ಪ್ರಶ್ನಿಸಿದರು.
“ಇಂದು ವಿಭಜನೆಯನ್ನು ಸೃಷ್ಟಿಸಲು ವಂದೇ ಮಾತರಂ ಅನ್ನು ಬಳಸಲಾಗುತ್ತಿದೆ. ಈ ವ್ಯಕ್ತಿಗಳು ಇನ್ನೂ ಬ್ರಿಟಿಷರು ಬಳಸಿದ ಅದೇ ‘ಒಡೆದು ಆಳುವ’ ನೀತಿಯನ್ನು ಅನುಸರಿಸುತ್ತಿದ್ದಾರೆ. ಆಳುವ ಕಡೆಯಲ್ಲಿರುವವರು ತಮಗೆ ಎಂದಿಗೂ ಸೇರದ ಪ್ರತಿಷ್ಠಿತ ನಾಯಕರನ್ನು ತಮ್ಮ ಸಿದ್ಧಾಂತದವರು ಎಂದು ಬಿಂಬಿಸುವ ಪ್ರಯತ್ನವನ್ನು ಪದೇ ಪದೇ ಮಾಡಿದ್ದಾರೆ” ಎಂದೂ ದೂರಿದರು.
“ಜನರು ಸಂಪೂರ್ಣ ‘ವಂದೇ ಮಾತರಂ’ ಗೀತೆಯನ್ನು ನೆನಪಿಸಿಕೊಳ್ಳದಿರಬಹುದು ಅಥವಾ ಅದರ ಮಹತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದಿದ್ದರೂ, ಆ ಎರಡು ಪದಗಳನ್ನು ಉಚ್ಚರಿಸುವುದರಿಂದ ಹೆಮ್ಮೆ ಉಂಟಾಗುತ್ತದೆ. ಗೀತೆ ಜನರ ಹೃದಯದಲ್ಲಿ ಆಳವಾಗಿ ಬೇರೂರಿವೆ. ಬ್ರಿಟಿಷ್ ಆಳ್ವಿಕೆಯಿಂದ ಹೊರಬರಲು ಜನರನ್ನು ಒಗ್ಗೂಡಿಸುವಲ್ಲಿ ವಂದೇ ಮಾತರಂ ನಿರ್ಣಾಯಕ ಪಾತ್ರ ವಹಿಸಿದೆ. ಅದರ 150ನೇ ವರ್ಷದಲ್ಲಿ, ಈ ಗೀತೆಯನ್ನು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ಹೇರುವ ಅಥವಾ ಇತರರ ಮೇಲೆ ಒತ್ತಡ ಹೇರುವ ಸಾಧನವಾಗಿ ಬಳಸಬಾರದು” ಎಂದು ಒತ್ತಿ ಹೇಳಿದರು.





