ಅಯೋಧ್ಯೆಯ ರಾಮ ಮಂದಿರಕ್ಕೆ ತೆರಳುತ್ತಿದ್ದ ರೈಲಿಗೆ ಹೊಸಪೇಟೆಯಲ್ಲಿ ಬೆಂಕಿ ಹಚ್ಚಿ ಸುಡುತ್ತೇವೆ ಎಂದು ಬೆದರಿಕೆ ಹಾಕಿದವರನ್ನು ಒದ್ದು ಒಳಗೆ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಇದು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದ ಫಲ. ಗಲಾಟೆ ಮಾಡಿದವರನ್ನ ಒದ್ದು ಒಳಗಡೆ ಹಾಕಬೇಕು. ಮತ ಬ್ಯಾಂಕ್ಗೋಸ್ಕರ ಇಂತಹ ಘಟನೆಗಳಿಗೆ ಕಾಂಗ್ರೆಸ್ ಉತ್ತೇಜನ ನೀಡುತ್ತಿದೆ. ಅಯೋಧ್ಯೆಗೆ ಹೋಗಿ ಬಂದರೆ ತಪ್ಪೇನು? ಬೆದರಿಕೆ ಹಾಕಿದವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ” ಎಂದು ಆಗ್ರಹಿಸಿದರು.
ಪಿಎಫ್ಐ ನವರ ಬೆದರಿಕೆ: ಆರ್ ಅಶೋಕ್
“ಕಾಂಗ್ರೆಸ್ ನಾಯಕ ಹರಿಪ್ರಸಾದ್ ಮಂತ್ರಿ ಆಗುವ ಕನಸು ಕಂಡಿದ್ದರು. ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೂ ಮನ್ನವೇ ಗೋಧ್ರಾ ಹತ್ಯೆ ಬಗ್ಗೆ ಉಲ್ಲೇಖ ಮಾಡಿದ್ದರು. ಅಯೋಧ್ಯೆಗೆ ಹೋಗುವವರು ಹಿಂದೂಗಳು. ಅವರಿಗೆ ಮುಸ್ಲಿಂ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ. ಪಿಎಫ್ಐನವರು ಬೆದರಿಕೆ ಹಾಕಿದ್ದಾರೆ” ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಬೆಂಗಳೂರಿನಲ್ಲಿಆರೋಪಿಸಿದ್ದಾರೆ.
ಸಮಗ್ರ ತನಿಖೆಗೆ ಸಿ ಟಿ ರವಿ ಆಗ್ರಹ
“ಅಯೋಧ್ಯೆಯಿಂದ ವಾಪಸಾಗುತ್ತಿದ್ದ ವಿಶೇಷ ರೈಲಿಗೆ ಹೊಸಪೇಟೆಯಲ್ಲಿ ಒಬ್ಬ ಮತಾಂಧ ವ್ಯಕ್ತಿ ಹತ್ತಿದ್ದ. ಅಯೋಧ್ಯೆಗೆ ತೆರಳಿ ಹಿಂತಿರುಗುತ್ತಿದ್ದ ರಾಮಭಕ್ತರನ್ನು ಬೆದರಿಸಿ ಗೋಧ್ರಾ ಮಾದರಿಯಲ್ಲಿ ನಿಮ್ಮನ್ನೆಲ್ಲ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಗೋಧ್ರಾ ಮಾದರಿಯಲ್ಲಿ ರೈಲನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ ಪ್ರಕರಣದ ಸಮಗ್ರ ತನಿಖೆ ಮಾಡಬೇಕು” ಎಂದು ಸಿ ಟಿ ರವಿ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಎಲ್ಲ ರಾಮಭಕ್ತರು ಸೇರಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದರೂ ಕೂಡ ಆರೋಪಿ ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ” ಎಂದು ಆರೋಪಿಸಿದರು.





