2015–16ರ ಆರ್ಥಿಕ ವರ್ಷದಲ್ಲಿ ಆದಾಯವನ್ನು ಬಹಿರಂಗಪಡಿಸದೇ ಇದ್ದಿದ್ದಕ್ಕಾಗಿ ಆದಾಯ ತೆರಿಗೆ ಇಲಾಖೆಯು ವಿಧಿಸಿದ್ದ 1.50 ಕೋಟಿ ರೂ. ದಂಡದ ಆದೇಶವನ್ನು ಪ್ರಶ್ನಿಸಿ ನಟ-ರಾಜಕಾರಣಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ಕಾನೂನು ಸಮಯ ಮಿತಿಯೊಳಗೆ ದಂಡದ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೆಂಥಿಲ್ಕುಮಾರ್ ರಾಮಮೂರ್ತಿ ವಿಚಾರಣೆ ನಡೆಸಿದ್ದಾರೆ. “ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 275 (1) (ಎ) ಅಡಿಯಲ್ಲಿ ಸಮಯ ಮಿತಿಯೊಳಗೆ ದಂಡ ವಿಧಿಸಿ ಇಟಿ ಇಲಾಖೆ ಆದೇಶ ಹೊರಡಿಸಿದೆ. ಇದರಲ್ಲಿ ಹಸ್ತಕ್ಷೇಪ ಮಾಡುವುದು ವ್ಯವಸ್ಥೆ ದೌರ್ಬಲ್ಯಕ್ಕೆ ಕಾರಣವಾಗುತ್ತದೆ” ಎಂದು ಹೇಳಿದ್ದು, ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಆದಾಗ್ಯೂ, “ದಂಡದ ವಿರುದ್ಧ ಎತ್ತಲಾದ ಇತರ ಆಧಾರಗಳನ್ನು ನಾವು ಪರಿಶೀಲಿಸಿಲ್ಲ ಎಂದಿರುವ ನ್ಯಾಯಾಧೀಶರು, “ಸಮಯ ಮಿತಿಯನ್ನು ಹೊರತುಪಡಿಸಿ ಇತರ ಆಧಾರದ ಮೇಲೆ ಮೇಲ್ಮನವಿ ಪ್ರಾಧಿಕಾರದ ಮುಂದೆ ದಂಡ ಆದೇಶವನ್ನು ಅರ್ಜಿದಾರರು ಪ್ರಶ್ನಿಸಬಹುದು” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಟ್ರಂಪ್–ಮೋದಿ ಒಪ್ಪಂದ | ಇದು ಪರಸ್ಪರ ಸಹಕಾರವೋ ಅಥವಾ ಅಮೆರಿಕದ ಒತ್ತಡದ ಹೇರಿಕೆಯೋ?
2015ರಲ್ಲಿ ವಿಜಯ್ ಮತ್ತು ಎಸ್ಕೆಟಿ ನಿರ್ಮಾಪಕರ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸಿದ್ದರು. ಶೋಧದ ಸಮಯದಲ್ಲಿ, ಅಧಿಕಾರಿಗಳು ನಿರ್ಮಾಪಕರಿಂದ 16 ಕೋಟಿ ರೂ.ಗಳ ಚೆಕ್ ಪಾವತಿಯ ಜೊತೆಗೆ 4.93 ಕೋಟಿ ರೂ.ಗಳ ನಗದು ರಶೀದಿಯನ್ನು ತೋರಿಸುವ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಆ ಚೆಕ್ ಮತ್ತು ನಗದು ರಶೀದಿಗಳನ್ನು ಆದಾಯ ಘೋಷಣೆಯಲ್ಲಿ ಬಹಿರಂಗಪಡಿಸಲಾಗಿಲ್ಲವೆಂದು ಹೇಳಿದ್ದ ಐಟಿ ಇಲಾಖೆ, 2022ರ ಜೂನ್ 30ರಂದು ವಿಜಯ್ಗೆ 1.50 ಕೋಟಿ ರೂ.ಗಳ ದಂಡವನ್ನು ವಿಧಿಸಿತ್ತು.
ದಂಡದ ಆದೇಶವನ್ನು ವಿಜಯ್ ಪ್ರಶ್ನಿಸಿದ್ದರು. ಅವರ ಅರ್ಜಿಯನ್ನು ಆದಾಯ ತೆರಿಗೆ ಆಯುಕ್ತರು (ಮೇಲ್ಮನವಿ) ಅನುಮತಿಸಿದ್ದರು. ನಂತರ, ಇಟಿ ಇಲಾಖೆಯು ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮೊರೆಹೋಗಿತ್ತು. ನ್ಯಾಯಮಂಡಳಿಯು ಇಲಾಖೆಯ ಮೇಲ್ಮನವಿಯನ್ನು ಅನುಮತಿಸಿ. ದಂಡದ ಆದೇಶವನ್ನು ಅಂಗೀಕರಿಸಿತ್ತು. ಬಳಿಕ, ವಿಜಯ್ ಅವರು 2022ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆರಂಭದಲ್ಲಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ದಂಡದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೀಗ, ಅವರನ್ನು ಅರ್ಜಿಯನ್ನು ವಜಾಗೊಳಿಸಿದೆ.




