ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಅಭಿಷೇಕ್ ಘೋಸಲ್ಕರ್ ಅವರು ಫೇಸ್ಬುಕ್ ಲೈವ್ ನಡೆಸುತ್ತಿದ್ದಾಗಲೇ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅಭಿಷೇಕ್ ಸಾವನ್ನಪ್ಪಿದ್ದಾರೆ. ಆತನನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮೌರಿಸ್ ನೊರೊನ್ಹಾ ಕೊಲೆ ಮಾಡಿದ್ದು, ಆತ ಕೂಡ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಬೊರಿವಲಿಯ ಐಸಿ ಕಾಲೋನಿಯಲ್ಲಿರುವ ಮಾರಿಸ್ ನೊರೊನ್ಹಾ ಅವರ ಕಚೇರಿಯಲ್ಲಿ ಘಟನೆ ನಡೆಸಿದೆ. ಘಟನೆ ನಡೆದಾಗ ಅಭಿಷೇಕ್ ಘೋಸಲ್ಕರ್ ಅವರು ಫೇಸ್ಬುಕ್ನಲ್ಲಿ ಲೈವ್ ನಡೆಸುತ್ತಿದ್ದರು. ಆಗಲೇ ಗುಂಡಿನ ದಾಳಿ ನಡೆಸಿದ್ದು, ಅಭಿಷೇಕ್ ಅವರ ಹೊಟ್ಟೆ ಮತ್ತು ಭುಜಕ್ಕೆ ಗುಂಡು ಹೊಕ್ಕಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಘಟನೆ ಮತ್ತು ಇತ್ತೀಚೆಗೆ ಥಾಣೆ ಜಿಲ್ಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ನಡೆಸಿದದ ಗುಂಡಿನ ದಾಳಿ, ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಉದ್ದವ್ ಠಾಕ್ರೆ ಬಣದ ಮಾಜಿ ಶಾಸಕ ವಿನೋದ್ ಘೋಸಲ್ಕರ್ ಅವರ ಪುತ್ರ ಅಭಿಷೇಕ್ ಘೋಸಲ್ಕರ್. ಅವರು ಮುಂಬೈ ಮಹಾನಗರ ಪಾಲಿಕೆಯಲ್ಲಿ ಸದಸ್ಯರಾಗಿದ್ದಾರೆ. ಅಲ್ಲದೆ, ಮುಂಬೈ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರೂ ಆಗಿದ್ದರು.
ಅವರ ಮೇಲೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ ಮಾರಿಸ್ ನೊರೊನ್ಹಾ ಎಂಬಾತ, ಕೊನೆಗೆ ತನಗೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಭಿಷೇಕ್ ಘೋಸಲ್ಕರ್ ಮತ್ತು ಮೌರಿಸ್ ನೊರೊನ್ಹಾ ನಡುವೆ ವೈಯಕ್ತಿಕ ವೈಷಮ್ಯವಿತ್ತು. ಆದರೆ, ಐಸಿ ಕಾಲೋನಿ ಪ್ರದೇಶದ ಅಭಿವೃದ್ಧಿಗಾಗಿ ಇಬ್ಬರೂ ಜೊತೆಯಾಗಿ ನಿಂತಿದ್ದಾರೆ ಎಂಬುದನ್ನು ತಿಳಿಸಲು ಅಭಿಷೇಕ್ ಫೇಸ್ಬುಕ್ ಲೈವ್ ನಡೆಸುತ್ತಿದ್ದರು. ಆದರೆ, ಇದೇ ವೇಳೆ, ಅವರ ಮೇಲೆ ಮಾರಿಸ್ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಾವು ಗುಂಡಿನ ದಾಳಿಯ ಬಗ್ಗೆ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ತೆರಳಿದೆವು. ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದೆವು. ಆದರೆ, ಇಬ್ಬರೂ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ. (ಫೊರೆನ್ಸಿಕ್) ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ”ಎಂದು ಡಿಸಿಪಿ ರಾಜ್ ತಿಲಕ್ ರೌಶನ್ ತಿಳಿಸಿದ್ದಾರೆ.
ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ಸಂಜಯ್ ರಾವತ್, “ಉಪಮುಖ್ಯಮಂತ್ರಿ, ಗೃಹ ಸಚಿವ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.




