ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 2026-27ರ ಆರ್ಥಿಕ ವರ್ಷದ ಬಜೆಟ್ ಮಂಡಿಸುತ್ತಿದ್ದಾರೆ. “ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇಂಧನ ಭದ್ರತೆಯನ್ನು ಬಲಪಡಿಸಲಾಗಿದೆ. ಸರ್ಕಾರವು ಸಾಮಾನ್ಯ ಜನರಿಗೆ ಆದ್ಯತೆ ನೀಡಿದ್ದು, ನೀತಿ ನಿರ್ಧಾರಗಳು ಬಲವಾದ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿವೆ. ಭಾರತದ ಅಭಿವೃದ್ಧಿ ಪಯಣವು ನಿರಂತರ ಆರ್ಥಿಕ ಬೆಳವಣಿಗೆ ಮತ್ತು ನಿಯಂತ್ರಿತ ಹಣದುಬ್ಬರದಿಂದ ಗುರುತಿಸಲ್ಪಟ್ಟಿದೆ” ಎಂದು ಹೇಳಿದ್ದಾರೆ.
“ನಾವು ಉತ್ಪಾದನಾ ವಲಯದ ಮೇಲೆ ಗಮನ ಹರಿಸುತ್ತಿದ್ದೇವೆ. ಹಳೆಯ ಉತ್ಪಾದನಾ ವಲಯಗಳು ಮತ್ತು ಎಂಎಸ್ಎಂಇಗಳನ್ನು ಬಲಪಡಿಸುವುದು ಸರ್ಕಾರದ ಆದ್ಯತೆಯಾಗಿದೆ. ಆರ್ಥಿಕ ವಲಯದ ಜೊತೆಗೆ ಭದ್ರತೆಯನ್ನು ಬಲಪಡಿಸಲು ಸರ್ಕಾರವು ಮುಂದಾಗಿದೆ” ಎಂದು ಹೇಳಿದ್ದಾರೆ.
ಬಜೆಟ್ನಲ್ಲಿ ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾ ಹಾಗೂ ಕೇರಳ ರಾಜ್ಯಗಳಿಗೆ ‘ಅರ್ಥ್ ಮಿನರಲ್ ಕಾರಿಡಾರ್ ಯೋಜನೆ’ಯನ್ನು ಘೋಷಿಸಲಾಗಿದೆ.
“ಸೆಮಿಕಂಡಕ್ಟರ್ ವಲಯದಲ್ಲಿ ಸಂಶೋಧನೆಗೆ ಒತ್ತುಕೊಡಲು ಈ ವಲಯಕ್ಕೆ 40 ಸಾವಿರ ಕೋಟಿ ರೂ. ಒದಗಿಸಲಾಗಿದೆ.
ಒಡಿಶಾ, ಕೇರಳ, ಆಂಧ್ರದಲ್ಲಿ ಮೈನಿಂಗ್ ಸಂಶೋಧನೆಗಳನ್ನು ನಡೆಸಲಾಗುತ್ತದೆ. ಜಾಗತಿಕ ಬಯೋಫಾರ್ಮಾ ಹಬ್ ಕನಸನ್ನು ನನಸು ಮಾಡಲು ಬಯೋಫಾರ್ಮಾ ಹಬ್ಗೆ 10 ಲಕ್ಷ ಕೋಟಿ ರೂ. ನೀಡಲಾಗುತ್ತದೆ. 3 ಹೊಸ ಫಾರ್ಮಾ ಕಾಲೇಜುಗಳನ್ನು ನಿರ್ಮಿಸಲಾಗುತ್ತದೆ. ಎಂಎಸ್ಎಂಇಗಳಿಗೆ 7 ಲಕ್ಷ ಕೋಟಿ ರೂ. ಅನುದಾನ ನೀಡಲಾಗುತ್ತದೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
“ಟೆಕ್ಸ್ಟೈಲ್ ವಲಯವನ್ನು ಮತ್ತಷ್ಟು ವಿಸ್ತರಿಸಲು ಕಂಟೇನರ್ ಉತ್ಪಾದನೆಗೆ 10 ಸಾವಿರ ಕೋಟಿ ರೂ. ಒದಗಿಸಲಾಗುತ್ತದೆ. ಮೆಗಾ ಟೆಕ್ಸ್ಟೈಲ್ಸ್ ಪಾರ್ಕ್ ರಚಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗೆ ಒತ್ತುಕೊಡಲು ‘ಮಹಾತ್ಮಾ ಗಾಂಧಿ ಗ್ರಾಮ್ ಸ್ವರಾಜ್ ಯೋಜನೆ’ಯನ್ನು ರೂಪಿಸಲಾಗಿದೆ. ಖಾದಿ ಗುಡಿಕೈಗಾರಿಕೆಗೆ ಒತ್ತು ನೀಡಲು ‘ಟೆಕ್ಸ್ಟೈಲ್ಸ್ ಪಾರ್ಕ್’ ನಿರ್ಮಿಸಲಾಗುತ್ತದೆ. ಎಸ್ಎಂಇ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂ. ನೀಡಲಾಗುತ್ತದೆ. 200 ಕೈಗಾರಿಕಾ ವಲಯಗಳನ್ನು ಅಭಿವೃದ್ದಿ ಪಡಿಸುವುದು ಸರ್ಕಾರದ ಗುರಿಯಾಗಿದೆ” ಎಂದು ಹೇಳಿದ್ದಾರೆ.
“2, 3ನೇ ಹಂತದ ನಗರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು 12.2 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಈ ನಗರಗಳಿಗೆ ಹೈಸ್ಪೀಡ್ ರೈಲು ಸಂಪರ್ಕ ಒದಗಿಸಲು 5 ವರ್ಷಗಳಲ್ಲಿ 5 ಸಾವಿರ ಕೋಟಿ ಅನುದಾನ ನೀಡಲಾಗುವುದು. ಮುಂಬೈ-ಪುಣೆ, ಪುಣೆ-ಹೈದ್ರಾಬಾದ್, ದೆಹಲಿ-ವಾರಾಣಸಿ, ವಾರಾಣಸಿ-ಸಿಲಿಗುರಿ, ಚೆನ್ನೈ-ಬೆಂಗಳೂರು ಹೈ ಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಜಾರಿಗೊಳಿಸಲಾಗುವುದು” ಎಂದಿದ್ದಾರೆ.
ದೇಶದಲ್ಲಿ ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗವಾಗಲಿವೆ ಎಂದು ಹೇಳಿರುವ ನಿರ್ಮಲಾ ಸೀತಾರಾಮನ್, “ಕ್ಯಾನ್ಸರ್ ಸಂಬಂಧಿತ 17 ಔಷಧಿಗಳಿಗೆ ವಿನಾಯಿತಿ ನೀಡಲಾಗುತ್ತದೆ. ಮೆಡಿಕಲ್ ಟೂರಿಸಂ ಸೇವೆ ಯೋಜನೆಯಡಿ 5 ಪ್ರಾದೇಶಿಕ ವೈದ್ಯಕೀಯ ಪ್ರವಾಸ ಹಬ್ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಕೋವಿಡ್ ನಂತರ ಆಯುರ್ವೇದಕ್ಕೆ ಹೆಚ್ಚು ಆದ್ಯತೆ ದೊರೆಯುತ್ತಿದ್ದು, ದೇಶದಲ್ಲಿ 3 ಹೊಸ ಆಯುರ್ವೇದ ಇನ್ಸ್ಟಿಟ್ಯೂಟ್ಗಳನ್ನು ಸ್ಥಾಪಿಸಲಾಗುತ್ತದೆ” ಎಂದಿದ್ದಾರೆ.
“ಕೌಶಲಾಭಿವೃದ್ಧಿಗೆ ಕೇಂದ್ರ ಸರ್ಕಾರವು ಒತ್ತು ಕೊಡುತ್ತಿದ್ದು, ಹೈ ಪವರ್ ಶಿಕ್ಷಣ-ಉದ್ಯೋಗ ಯೋಜನೆ, ಹೊಸ ಕೌಶಲಾಭಿವೃದ್ಧಿ ತರಬೇತಿ ಯೋಜನೆಗಳ ಅಡಿಯಲ್ಲಿ 10 ವಿವಿಧ ರೀತಿಯ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತದೆ. ಎಲ್ಲಾ ವಲಯದವರಿಗಾಗಿ ತಂತ್ರಜ್ಞಾನ ಅಳವಡಿಕೆ ಮತ್ತು ಹೊಸ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ” ಎಂದಿದ್ದಾರೆ.
“ವಿಶ್ವದರ್ಜೆಯ ಟ್ರೆಕ್ಕಿಂಗ್ಗೆ ಭಾರತದಲ್ಲಿ ಅವಕಾಶ ಒದಗಿಸುವ ಯೋಜನೆ ರೂಪಿಸಲಾಗಿದೆ. ಹಿಮಾಚಲ, ಉತ್ತರಾಖಂಡ ಹಾಗೂ ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ವಿಶ್ವದರ್ಜೆಯ ಟ್ರೆಕ್ಕಿಂಗ್ಅನ್ನು ತೆರೆಯಲಾಘುತ್ತದೆ. ಪಶ್ಚಿಮಘಟ್ಟದ ಹಲವೆಡೆ ವಿಶ್ವದರ್ಜೆಯ ಟ್ರೆಕ್ಕಿಂಗ್ ಆದ್ಯತೆ ನೀಡಲಾಗುತ್ತದೆ” ಎಂದು ಹೇಳಿದ್ದಾರೆ.
“15,000 ಶಾಲೆಗಳು, 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ಗಳನ್ನು ಸ್ಥಾಪಿಸಲಾಗುತ್ತದೆ. ದೇಶದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
ಇನ್ನು, ಆದಾಯ ತೆರಿಗೆ ಕ್ಷೇತ್ರದಲ್ಲಿ ಬದಲಾವಣೆ ತರಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. “ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ. ತಾಂತ್ರಿಕ ದೋಷಗಳನ್ನು ದಂಡಗಳಾಗಿ ಪರಿವರ್ತಿಸಲು ಹೊಸ ಕಾನೂನು ಪ್ರಸ್ತಾಪಿಸುತ್ತದೆ. ಸಣ್ಣ ತೆರಿಗೆ ಅಪರಾಧಗಳು ದಂಡವನ್ನು ಮಾತ್ರ ಆಕರ್ಷಿಸುತ್ತವೆ. ವಿದೇಶಿ ಪ್ರಯಾಣದ ಮೇಲಿನ ತೆರಿಗೆ ಪ್ರಮಾನವು ಕಡಿಮೆಯಾಗಲಿದೆ. ವಿದೇಶಿ ಶಿಕ್ಷಣ ಪ್ರವಾಸದ ಟಿಸಿಎಸ್ ದರವನ್ನು 5%ಕ್ಕೆ ಇಳಿಸಲಾಗಿದೆ. ಈ ಕಾನೂನು ಅಘೋಷಿತ ಆದಾಯವನ್ನು ಒಂದು ಕೋಟಿ ರೂಪಾಯಿಗಳಿಗೆ ಮಿತಿಗೊಳಿಸಲು ಪ್ರಸ್ತಾಪಿಸುತ್ತದೆ. ಅಪಘಾತ ವಿಮೆ ಮೇಲೆ ಟಿಡಿಎಸ್ ಇರುವುದಿಲ್ಲ” ಎಂದು ಹೇಳಿದ್ದಾರೆ. ಆದರೆ, ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.
“ವಿಮಾನ ಬಿಡಿಭಾಗಗಳು, ಮೈಕ್ರೋವೇವ್, ಓವನ್ಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಲಾಗಿದೆ” ಎಂದು ಘೋಷಿಸಿದ್ದಾರೆ.
“ಸಮುದ್ರ ಉತ್ಪನ್ನಗಳು, ಲೆದರ್ ಶೂ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಸೋಲಾರ್ ಗ್ಲಾಸ್ ಕಚ್ಚಾವಸ್ತು ಆಮದು ಹೆಚ್ಚಲಿದೆ” ಎಂದು ವಿವರಿಸಿದ್ದಾರೆ.
“ಸಾಲ ಮತ್ತು ಜಿಡಿಪಿ ನಡುವಿನ ಅಂತರ ಕಡಿಮೆಯಾಗಿದೆ. 26.7 ಲಕ್ಷ ಕೋಟಿ ರೂ.ಗಳನ್ನು ತೆರಿಗೆಯಾಗಿ ಸಂಗ್ರಹಿಸಲಾಗಿದೆ. ಆದರೆ, 34 ಲಕ್ಷ ಕೋಟಿ ರೂ.ಗಳನ್ನು ಇತರ ಮೂಲಗಳಿಂದ ಪಡೆದಿದ್ದೇವೆ. 2026-27ರಲ್ಲಿ ಸಾಲ ಕೊರತೆ 36.5 ಲಕ್ಷ ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. 53.5 ಲಕ್ಷ ಕೋಟಿ ರೂಪಾಯಿಗಳ ವೆಚ್ಚವನ್ನು ಘೋಷಿಸಲಾಗಿದೆ. ಹಣಕಾಸಿನ ಕೊರತೆಯನ್ನು ಸರಿದೂಗಿಸಲು ನಾವು ಮಾರುಕಟ್ಟೆಯಿಂದ ಸಾಲ ಪಡೆಯುತ್ತೇವೆ” ಎಂದು ಹೇಳಿದ್ದಾರೆ.




