ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಜೆಡಿಎಸ್ ಮುಖಂಡ ಸಾ ರಾ ಮಹೇಶ್ ಅವರು ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಸಿಎಂ ಸಿದ್ದರಾಮಯ್ಯ ವಿರುದ್ಧ ವಗ್ದಾಳಿ ನಡೆಸಿದರು.
“ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವುದು ‘ಎಸ್ಐಟಿ’ ಅಲ್ಲ, ಬದಲಿಗೆ ‘ಸಿದ್ದರಾಮಯ್ಯ–ಶಿವಕುಮಾರ್ ಇನ್ವೆಸ್ಟಿಗೇಟಿವ್ ಟೀಮ್’ (ಎಸ್ಎಸ್ಐಟಿ)” ಎಂದು ಸಾ ರಾ ಮಹೇಶ್ ಕಿಡಿಕಾರಿದರು.
“ಕೆಲವು ದಿನದ ಹಿಂದೆ ದದ್ದಲ್ ಅವರೇ ಎಸ್ಐಟಿ ತನ್ನನ್ನು ಬಂಧಿಸಲಿ ಎಂದು ಹೇಳಿಕೆ ನೀಡಿದ್ದರು. ಎಸ್ಐಟಿ ನಮ್ಮದೇ ಸಂಸ್ಥೆ ಎಂದು ಆಡಳಿತ ಪಕ್ಷದ ಶಾಸಕರು ಭಾವಿಸಿದ್ದಾರೆ. ಕರ್ನಾಟಕದಲ್ಲಿ ಹಿಂದೆಂದೂ ಪೊಲೀಸರನ್ನು ಈ ಮಟ್ಟಕ್ಕೆ ಬಳಸಿಕೊಂಡ ಉದಾಹರಣೆ ಇಲ್ಲ” ಹರಿಹಾಯ್ದರು.
“ಹಣ ದುರ್ಬಳಕೆ ಹಗರಣದಲ್ಲಿ ಎಸ್ಐಟಿ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಬಳ್ಳಾರಿ ಶಾಸಕ ಬಿ. ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹೆಸರನ್ನೇ ಈಗ ಕೈಬಿಡಲಾಗಿದೆ. ಎಸ್ಐಟಿಯಿಂದ ಪಾರದರ್ಶಕ ತನಿಖೆ ನಡೆಯುತ್ತಿಲ್ಲ” ಎಂದು ಆರೋಪಿಸಿದರು.
ಯಾದಗಿರಿ ಪಿಎಸ್ಐ ಪರಶುರಾಮ ಆತ್ಮಹತ್ಯೆ ವಿಚಾರವಾಗಿಯೂ ಮಾತನಾಡಿದ ಅವರು, “ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ, ಅವರ ಮಗ ಪಂಪನಗೌಡ ಅವರೇ ಕಾರಣ ಎಂದು ಮೃತರ ಪತ್ನಿ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಸಂವಿಧಾನದ ಮೇಲೆ ಗೌರವ ಇದ್ದರೆ ಕೂಡಲೇ ಶಾಸಕರನ್ನು ಬಂಧಿಸಬೇಕು. ಶಾಸಕ ಸ್ಥಾನದಿಂದ ಅವರನ್ನು ಅಮಾನತು ಮಾಡಬೇಕು” ಎಂದು ಆಗ್ರಹಿಸಿದರು.





