ರಾಜ್ಯದ ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಘೋಷಿಸಿದ್ದಾರೆ.
ಗೋರಖ್ಪುರದಲ್ಲಿ ನಡೆದ ‘ಏಕತಾ ಯಾತ್ರೆ’ ಮತ್ತು ವಂದೇ ಮಾತರಂ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಯುಪಿ ಸಿಎಂ, “ರಾಷ್ಟ್ರದ ಬಗ್ಗೆ ಗೌರವ ಮತ್ತು ಹೆಮ್ಮೆಯನ್ನು ಮೂಡಿಸುವ ಗುರಿಯನ್ನು ನಾವು ಹೊಂದಿದ್ದೇವೆ. ರಾಷ್ಟ್ರೀಯ ಗೀತೆ ವಂದೇ ಮಾತರಂ ಬಗ್ಗೆ ಗೌರವ ಇರಬೇಕು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ದೇಶದ ಹಿರಿಯ ಎಸ್ಪಿ ಸಂಸದ ಶಫೀಕುರ್ ರೆಹಮಾನ್ ಬರ್ಕ್ ನಿಧನ
“ಸಮಾಜವಾದಿ ಪಕ್ಷದ ಸಂಸದರೊಬ್ಬರು ರಾಷ್ಟ್ರೀಯ ಗೀತೆಯ ವಿರುದ್ಧ ಮತ್ತೊಮ್ಮೆ ಪ್ರತಿಭಟಿಸಿದ್ದಾರೆ. ಭಾರತದ ಸಮಗ್ರತೆಯ ಶಿಲ್ಪಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಗೆ ಹಾಜರಾಗದ ಅವರುಗಳು ಜಿನ್ನಾಗೆ ಗೌರವ ನೀಡುವ ಕಾರ್ಯಕ್ರಮಗಳಿಗೆ ನಾಚಿಕೆಯಿಲ್ಲದೆ ಹಾಜರಾಗುತ್ತಾರೆ” ಎಂದು ಟೀಕಿಸಿದರು.
“1896ರಿಂದ 1922ರವರೆಗೆ, ಪ್ರತಿ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಹಾಡಲಾಗುತ್ತಿತ್ತು. ಆದರೆ 1923ರಲ್ಲಿ, ಜೌಹರ್ ಕಾಂಗ್ರೆಸ್ ಅಧ್ಯಕ್ಷರಾದಾಗ ವಂದೇ ಮಾತರಂ ಹಾಡು ಆರಂಭವಾಗುತ್ತಿದ್ದಂತೆ ತಕ್ಷಣ ಹೊರನಡೆದು ಅಧಿವೇಶನದಲ್ಲಿ ಭಾಗಿಯಾಗಲು ನಿರಾಕರಿಸಿದರು. ವಂದೇ ಮಾತರಂ ಮಾಡಿದ ಆ ವಿರೋಧವು ಭಾರತದ ವಿಭಜನೆಗೆ ದುರದೃಷ್ಟಕರ ಕಾರಣಗಳಲ್ಲಿ ಒಂದಾಯಿತು” ಎಂದು ದೂರಿದ್ದಾರೆ.
1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಮೊದಲ ಬಾರಿಗೆ ಹಾಡಲಾಗಿತ್ತು. ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ ಈ ಗೀತೆಯನ್ನು ರವೀಂದ್ರನಾಥ ಠಾಗೋರ್ ಅವರು ಹಾಡಿದ್ದರು. ಈ ಹಾಡು ತಾಯ್ನಾಡನ್ನು ದುರ್ಗಾ, ಲಕ್ಷ್ಮಿ, ಸರಸ್ವತಿಯಂತಹ ಹಿಂದೂ ದೇವತೆಗಳಿಗೆ ಹೋಲಿಸುವುದು ಸರ್ವ ಧರ್ಮೀಯ ದೇಶವಾದ ಭಾರತಕ್ಕೆ ಸೂಕ್ತವಲ್ಲ ಎಂಬ ವಿಚಾರದಲ್ಲಿ ಮೊದಲು ವಿವಾದ ಆರಂಭವಾಯಿತು.
ಈ ಕಾರಣಗಳಿಂದಾಗಿ, ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ಸಲುವಾಗಿ, 1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಹಾಡಿನ ವಿವಾದಾತ್ಮಕ ಭಾಗಗಳನ್ನು ಕೈಬಿಟ್ಟು, ಕೇವಲ ಮೊದಲ ಎರಡು ಪದ್ಯಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಬಳಸಲು ನಿರ್ಧರಿಸಿತು. ಹಾಗೆಯೇ ವಿವಾದ ರಹಿತವಾದ ರವೀಂದ್ರನಾಥ ಠಾಗೋರರ ‘ಜನ ಗಣ ಮನ’ ಗೀತೆಯನ್ನು ಭಾರತದ ರಾಷ್ಟ್ರಗೀತೆಯಾಗಿ ಸ್ವೀಕರಿಸಲಾಯಿತು. ಆದರೆ ಇಂದಿಗೂ ಈ ವಿಚಾರದಲ್ಲಿ ರಾಜಕೀಯವನ್ನು ನಡೆಸುತ್ತಿರುವ ಬಿಜೆಪಿ ವಂದೇ ಮಾತರಂ ರಾಷ್ಟ್ರ ಗೀತೆಯಾಗಬೇಕು ಎಂದು ಹೇಳಿಕೊಳ್ಳುತ್ತಿದೆ.





