20 ವರ್ಷ ಹಳೆಯ ಮನರೇಗಾ (MGNREGA) ಯೋಜನೆಯನ್ನು ರದ್ದುಗೊಳಿಸಿ, ಹೊಸದಾಗಿ ರೂಪಿಸಲಾಗಿರುವ VB-G RAM G ಮಸೂದೆಯನ್ನು ವಿಪಕ್ಷಗಳ ವಿರೋಧದ ನಡೆವೆಯೂ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿವೆ ಮಸೂದೆ ಅಂಗೀಕಾರವನ್ನು ವಿರೋಧಿಸಿ, ಮಸೂದೆಯಲ್ಲಿ ನ್ಯೂನತೆಗಳನ್ನು ತಿದ್ದಲು ಮಸೂದೆಯನ್ನು ಸಂಸದೀಯ ಸಮಿತಿಗೆ ವರ್ಗಾಯಿಸಲು ಆಗ್ರಹಿಸಿ ವಿಪಕ್ಷಗಳ ಸಂಸದರು ರಾತ್ರಿಯಿಡೀ ಧರಣಿ ನಡೆಸಿದ್ದಾರೆ.
ಅಸ್ತಿತ್ವದಲ್ಲಿರುವ ಮನರೇಗಾದಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿರುವುದು, ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೇರಿರುವುದು, ಯೋಜನೆಯ ಸಂಪೂರ್ಣ ನಿಯಂತ್ರಣವನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿರುವುದನ್ನು ವಿಪಕ್ಷಗಳು ಬಲವಾಗಿ ಟೀಕಿಸಿವೆ. ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರು ಮಸೂದೆಯ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಎಂಸಿ ಸಂಸದರು ಸೇರಿದಂತೆ ವಿಪಕ್ಷಗಳ ಹಲವು ಸಂಸದರು ಸಂಸತ್ತಿನ ಆವರಣದಲ್ಲಿರುವ ಸಂವಿಧಾನ್ ಸದನದ ಹೊರಗೆ 12 ಗಂಟೆಗಳ ಕಾಲ ರಾತ್ರಿಯಿಡೀ ಧರಣಿ ನಡೆಸಿದ್ದಾರೆ.
ರಾಜ್ಯಸಭೆಯಲ್ಲಿ ಮಸೂದೆ ಕುರಿತು ಐದು ಗಂಟೆಗಳ ಚರ್ಚೆ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, “ಕಾಂಗ್ರೆಸ್ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಹಲವಾರು ಬಾರಿ ಕೊಂದಿದೆ. ಅವರ ಹೆಸರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ” ಎಂದು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ವಿಬಿ- ಜಿ ರಾಮ್ ಜಿ | ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಹೊಸ ಕಾಯಿದೆ
ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಭಾಗದ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಮನರೇಗಾ ಯೋಜನೆಯನ್ನು ಯುಪಿಎ ಸರ್ಕಾರ ರೂಪಿಸಿತ್ತು. ಪ್ರತಿ ಕಾರ್ಮಿಕರಿಗೆ 100 ದಿನಗಳ ಉದ್ಯೋಗ ಖಾತರಿಪಡಿಸುವುದು ಯೋಜನೆಯ ಉದ್ದೇಶವಾಗಿತ್ತು. ಯೋಜನೆಯಲ್ಲಿ ಕಾರ್ಮಿಕರಿಗೆ ಪಾವತಿ ಮಾಡಲಾಗುವ ವೇತನದ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಪ್ರದೇಶಕ್ಕೆ ಅನುಗುಣವಾಗಿ ಉದ್ಯೋಗದ ಬೇಡಿಕೆಯನ್ನು ರೂಪಿಸುವ ಅಧಿಕಾರ ಗ್ರಾಮ ಪಂಚಾಯತಿಗಳ ಗ್ರಾಮ ಸಭೆಗಳಿಗೆ ಇತ್ತು.
ಆದರೆ, ಈ ಯೋಜನೆಯನ್ನು ಬುಡಮೇಲು ಮಾಡಿರುವ ಕೇಂದ್ರ ಸರ್ಕಾರ, VB-G RAM G ಮಸೂದೆಯನ್ನು ರೂಪಿಸಿದೆ. ಈ ಮಸೂದೆಯ ಅಡಿಯಲ್ಲಿ ಕಾರ್ಮಿಕರಿಗೆ 125 ದಿನಗಳ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ. ಆದರೆ, ಮೋದಿ ಸರ್ಕಾರದ ಆಡಳಿತದಲ್ಲಿ 100 ದಿನಗಳ ಉದ್ಯೋಗವನ್ನೇ ಒದಗಿಸಲಾಗಿಲ್ಲ. 125 ದಿನಗಳ ಉದ್ಯೋಗದ ಭರವಸೆಯು ಮನರೇಗಾವನ್ನು ರದ್ದುಗೊಳಿಸುವ ಬಳಸಲಾಗಿರುವ ಅಸ್ತ್ರವೆಂದು ಆರೋಪಿಸಲಾಗಿದೆ. ಅಲ್ಲದೆ, ಯೋಜನೆಯಲ್ಲಿ ಕಾರ್ಮಿಕರಿಗೆ ನೀಡಲಾಗುವ ವೇತನದ ಮೊತ್ತದಲ್ಲಿ 60% ಕೇಂದ್ರವೂ – 40% ರಾಜ್ಯವೂ ಭರಿಸಬೇಕಾಗುತ್ತದೆ. ತೆರಿಗೆ ಸಂಗ್ರಹವೆಲ್ಲವೂ ಕೇಂದ್ರದ ಕೈಯಲ್ಲಿರುವಾಗ ಇದು ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ, ಉದ್ಯೋಗ ಬೇಡಿಕೆಗಳ ವಿಚಾರದಲ್ಲಿ ಗ್ರಾಮಸಭೆಗಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ.




