ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಯ ಹೆಸರನ್ನು ದೆಹಲಿಯ ಬದಲಾಗಿ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಒತ್ತಾಯಿಸಿದೆ. ಈ ಸಂಬಂಧ ದೆಹಲಿ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಅವರಿಗೆ ಪತ್ರ ಬರೆದಿದೆ.
ವಿಎಚ್ಪಿಯ ದೆಹಲಿ ಘಟಕವು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದ್ರಪ್ರಸ್ಥ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ ರೈಲು ನಿಲ್ದಾಣವನ್ನು ಇಂದ್ರಪ್ರಸ್ಥ ರೈಲು ನಿಲ್ದಾಣ ಮತ್ತು ಶಹಜಹಾನಾಬಾದ್ ಅಭಿವೃದ್ಧಿ ಮಂಡಳಿಯನ್ನು ಇಂದ್ರಪ್ರಸ್ಥ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ನೆಹರು ಸ್ಮಾರಕದ ಮರುನಾಮಕರಣ : ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ
“ರಾಜಧಾನಿಯ ಹೆಸರನ್ನು ಅದರ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಯೊಂದಿಗೆ ಸಂಪರ್ಕಿಸಿ ಇಟ್ಟುಕೊಳ್ಳಲು ದೆಹಲಿಯ ಹೆಸರನ್ನು ಇಂದ್ರಪ್ರಸ್ಥ ಎಂದು ಬದಲಾಯಿಸಬೇಕು” ಎಂದು ವಿಎಚ್ಪಿ ದೆಹಲಿ ಪ್ರಾಂತ್ ಕಾರ್ಯದರ್ಶಿ ಸುರೇಂದ್ರ ಕುಮಾರ್ ಗುಪ್ತಾ ಪತ್ರದಲ್ಲಿ ತಿಳಿಸಿದ್ದಾರೆ.
“ಹೆಸರುಗಳು ಕೇವಲ ಬದಲಾವಣೆಗಳಲ್ಲ. ಅವು ರಾಷ್ಟ್ರದ ಪ್ರಜ್ಞೆಯ ಪ್ರತಿಬಿಂಬವಾಗಿದೆ. ನಾವು ದೆಹಲಿ ಎಂದು ಹೇಳಿದಾಗ, ನಾವು 2,000 ವರ್ಷಗಳ ಅವಧಿಯನ್ನು ಮಾತ್ರ ನೋಡುತ್ತೇವೆ. ಆದರೆ ನಾವು ಇಂದ್ರಪ್ರಸ್ಥ ಎಂದು ಹೇಳಿದಾಗ, ನಾವು 5,000 ವರ್ಷಗಳಷ್ಟು ವಿಸ್ತಾರವಾದ ಅದ್ಭುತ ಇತಿಹಾಸದೊಂದಿಗೆ ಸಂಪರ್ಕ ಹೊಂದುತ್ತೇವೆ” ಎಂದು ಹೇಳಿದರು.
ಹಾಗೆಯೇ “ದೆಹಲಿಯ ಪಾರಂಪರಿಕ ಕೋಟೆಗಳು, ದೇವಾಲಯಗಳು ಮತ್ತು ಹಿಂದೂ ರಾಜರ ಸ್ಮಾರಕಗಳು ಇರಬೇಕು. ಮುಸ್ಲಿಂ ಆಕ್ರಮಣಕಾರರ ಸ್ಮಾರಕಗಳು ಇರುವಲ್ಲೆಲ್ಲಾ, ಪಾಂಡವರ ಕಾಲದ ಹಿಂದೂ ವೀರರು, ಋಷಿಗಳು ಮತ್ತು ಸ್ಥಳಗಳನ್ನು ಸಹ ಪರಿಚಯಿಸಬೇಕು. ಅವುಗಳ ಬಳಿ ಸ್ಮಾರಕಗಳನ್ನು ನಿರ್ಮಿಸಬೇಕು” ಎಂದು ವಿಎಚ್ಪಿ ಕಾರ್ಯಕಾರಿಣಿ ಒತ್ತಾಯಿಸಿದ್ದಾರೆ.
ಸ್ಥಳದ ಹೆಸರು ಬದಲಾಯಿಸಬೇಕು ಎಂಬ ಆಗ್ರಹವು ಜನರ ಗಮನವನ್ನು ನೈಜ ವಿಚಾರಗಳಿಂದ ಬೇರೆಡೆ ಸೆಳೆಯುವ ಯತ್ನವಾಗಿದೆ. ಹಾಗೆಯೇ ಈ ರೀತಿ ಜನಪ್ರಿಯ ಹೆಸರುಗಳನ್ನು ಬದಲಾಯಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ವಿಪಕ್ಷಗಳು ಹೇಳಿದೆ.





