ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ಮಾಜಿ ಶಾಸಕ, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಘೇರಾವ್ ಹಾಕಿರುವ ಘಟನೆ ಶುಕ್ರವಾರ ನಡೆದಿದೆ.
ವರುಣಾ ಕ್ಷೇತ್ರದ ಮುದ್ದುಬೀರನ ಹುಂಡಿ ಗ್ರಾಮಸ್ಥರು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಘೇರಾವ್ ಹಾಕಿದ್ದು, ಗ್ರಾಮದ ಒಳಗೆ ಪ್ರವೇಶಿಸದಂತೆ ತಡೆದಿದರು. ಗ್ರಾಮದ ಕುಂದುಕೊರತೆ ಸಭೆ ನಡೆಸಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಗ್ರಾಮ ಪ್ರವೇಶ ಮಾಡದಂತೆ ಘೋರಾವ್ ಹಾಕಿರುವ ಗ್ರಾಮಸ್ಥರು ಯತೀಂದ್ರ ಸಿದ್ದರಾಮಯ್ಯರನ್ನು ಎಳೆದಾಡಿದ್ದಾರೆ. ಮಹಿಳೆಯರು ಕೂಡ ಯತೀಂದ್ರ ವಿರುದ್ಧ ಸಿಟ್ಟು, ಆಕ್ರೋಶ ಹೊರಹಾಕಿದ್ದಾರೆ. ಸ್ಥಳದಲ್ಲಿ ನೂಕಾಟ, ತಳ್ಳಾಟ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಆ ಕೂಡಲೇ ಪೊಲೀಸರು ಮಧ್ಯ ಪ್ರವೇಶ ಮಾಡಿ ಗ್ರಾಮಸ್ಥರನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದರು. ಆದರೆ ಪೊಲೀಸರ ಮಾತಿಗೂ ಬಗ್ಗದ ಗ್ರಾಮಸ್ಥರು, ಮಾಜಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಿಡಿ
ಯತೀಂದ್ರ ಸಿದ್ದರಾಮಯ್ಯ ಅವರಿಗೆ ಘೇರಾವ್ ಹಾಕಿರುವ ಘಟನೆ ಹಿಡಿದುಕೊಂಡು ಸಿದ್ದರಾಮಯ್ಯ ಮತ್ತು ಪುತ್ರನ ಮೇಲೆ ಬಿಜೆಪಿ ಕಿಡಿಕಾರಿದೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಬಿಜೆಪಿ, “ಮಜಾವಾದಿ ಸಿದ್ದರಾಮಯ್ಯ ಅವರ ಮೇಲೆ ವರುಣಾ ಕ್ಷೇತ್ರದ ಮತದಾರರ ಸಿಟ್ಟು ಎಷ್ಟಿದೆ ಎಂದರೆ, ಪುತ್ರ ಯತೀಂದ್ರ ಅವರನ್ನೇ ಮುದ್ದಬೀರನಹುಂಡಿ ಗ್ರಾಮಸ್ಥರು ಘೇರಾವ್ ಹಾಕಿ ತಳ್ಳಾಡಿದ್ದಾರೆ. ಗ್ರಾಮಸ್ಥರ ಆಕ್ರೋಶಕ್ಕೆ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಕೇವಲ ಕಿವಿ ಮೇಲೆ ಹೂ ಇಡುವ ಕೆಲಸವನ್ನೇ ಮಾಡುತ್ತಾ ಬಂದ ಅಪ್ಪ-ಮಗನಿಗೆ ಜನರು ಜಾಗೃತರಾಗಿ ಬಿಸಿ ಮುಟ್ಟಿಸಿದ್ದಾರೆ” ಎಂದು ಕುಟುಕಿದೆ.
“ರಾಜ್ಯದ ಜನರ ತಾಳ್ಮೆಯ ಕಟ್ಟೆ ಒಡೆದಿದೆ. ಕಾಂಗ್ರೆಸ್ ಶಾಸಕರು, ಸಚಿವರು ಜನರ ಎದುರು ಹೋದರೆ ತಕ್ಕ ಮಂಗಳಾರತಿ ಆಗುವುದು ಉಚಿತ ಖಚಿತ ನಿಶ್ಚಿತ! ಕಾಂಗ್ರೆಸ್ ಸರ್ಕಾರಕ್ಕೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕು. ಖಾಲಿ ಬಕೆಟ್ ಅಲ್ಲಾಡಿಸುವುದನ್ನು ಇನ್ನಾದರೂ ಬಿಡಿ!” ಎಂದು ಬಿಜೆಪಿ ಟೀಕಿಸಿದೆ.





