ಆಳಂದ ಕ್ಷೇತ್ರದಲ್ಲಿ ಮತ ಕಳವಿಗೆ ಯತ್ನಿಸಿದ್ದವರಿಗೆ ಚುನಾವಣಾ ಆಯೋಗವು ನೆರವು ನೀಡಿದೆ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ. ಆದರೆ, ಕೆಲವರು ‘ಮತಗಳವು ಕುರಿತು ಚುನಾವಣಾ ಆಯೋಗದ ಮೇಲೆ ಆರೋಪ ಮಾಡುವುದು ಸರಿಯಲ್ಲ’ ಎಂದು ವಾದಿಸಿ ಪತ್ರ ಬರೆದಿದ್ದಾರೆ. ಅವರು ಅವರೆಲ್ಲರೂ ಒಮ್ಮೆ ಆಳಂದ ಕ್ಷೇತ್ರಕ್ಕೆ ಭೇಟಿ ನೀಡಿ ವಾಸ್ತವವನ್ನು ಪರಿಶೀಲಿಸಲಿ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕ ಬಿ.ಆರ್ ಪಾಟೀಲ್ ಹೇಳಿದ್ದಾರೆ.
ಇತ್ತೀಚೆಗೆ, ಚುನಾವಣಾ ಆಯೋಗವನ್ನು ಸಮರ್ಥಿಸಿಕೊಂಡು 272 ಮಂದಿ ಚಿಂತಕರು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರ ಬರೆದವರಲ್ಲಿ, ನಿವೃತ್ತ ನ್ಯಾಯಮೂರ್ತಿ ಎಸ್.ಎನ್ ಧಿಂಗ್ರಾ, ನಿರ್ಮಲ್ ಕೌರ್ ಹಾಗೂ ಇತರ ಚಿಂತಕರು ಸೇರಿಸಿದ್ದಾರೆ. ಅವರು ಪತ್ರ ಬರೆದಿರುವುದನ್ನು ಬಿ.ಆರ್ ಪಾಟೀಲ್ ಖಂಡಿಸಿದ್ದು, ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಆರ್ ಪಾಟೀಲ್, “ಆಳಂದ ಕ್ಷೇತ್ರದ ಮತಗಳವು ಆರೋಪ ಕುರಿತು ಎಸ್ಐಟಿ ತನಿಖೆ ಮಾಡುತ್ತಿದೆ. ಅಂತೆಯೇ, ವಿವಿಧೆಡೆ ತನಿಖೆ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪತ್ರ ಬರೆದಿರುವುದು ಯಾಕೆ? ತಮ್ಮ ಅಭಿಪ್ರಾಯ ಹೇಳುವುದಿದ್ದರೆ, ತನಿಖೆ ಮುಗಿದ ಬಳಿಕ ಹೇಳಲಿ” ಎಂದಿದ್ದಾರೆ.
“ಪತ್ರ ಬರೆದವರು ಆಳಂದ ಕ್ಷೇತ್ರಕ್ಕೆ ಭೇಟಿ ನೀಡಲಿ, ಪರಿಶೀಲನೆ ನಡೆಸಲಿ. ಅವರಿಗೆ ಬರುವುದಾದರೆ ಎಲ್ಲ ರೀತಿಯ ಸಕಲ ವ್ಯವಸ್ಥೆ ಮಾಡಿಕೊಡುವೆ. ಕ್ಷೇತ್ರದಲ್ಲಿ ತಿರುಗಾಡಿ ತಂತ್ರ, ಪ್ರತಿತಂತ್ರಗಳ ಬಗ್ಗೆ ಖುದ್ದು ತಿಳಿದುಕೊಳ್ಳಲಿ” ಎಂದಿದ್ದಾರೆ.
“ಆಳಂದ ಕ್ಷೇತ್ರದಲ್ಲಿ ಮತಕಳವು ನಡೆಸಿರುವ ಬಗ್ಗೆ ನಾನು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆ. ಆಯೋಗದ ತನಿಖೆಯಲ್ಲಿಯೇ 5,994 ಮತಗಳು ಅಳಿಸಲು ಅರ್ಜಿ ಸಲ್ಲಿಸಿರುವುದು ಗೊತ್ತಾಗಿದೆ. ಆ ಬಳಿಕ, ಚುನಾವಣಾ ಅಧಿಕಾರಿಯೇ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆಯೇ ತನಿಖೆ ನಡೆಯುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.




