ದೆಹಲಿ ಬಾಂಬ್ ಸ್ಫೋಟದಿಂದ ನಿಜವಾಗಿಯೂ ಯಾರಿಗೆ ಲಾಭವಾಗಲಿದೆ ಎಂಬುದನ್ನು ನಾವು ತಿಳಿಯಬೇಕು ಎಂದು ಜನಾಧಿಕಾರಿ ಸಂಘರ್ಷ ಪರಿಷತ್ (ಜೆಎಸ್ಪಿ) ಸಹ ಅಧ್ಯಕ್ಷ ಆದರ್ಶ್ ಅಯ್ಯರ್ ಹೇಳಿದ್ದಾರೆ. “ಇದು ನಿಜವಾಗಿಯೂ ಭಯೋತ್ಪಾದಕ ಸ್ಫೋಟವೋ ಅಥವಾ ಅಲ್ಲವೋ ಎಂಬುದು ತಿಳಿಯಬೇಕು. ಒಂದು ವೇಳೆ ಇದು ಬಾಂಬ್ ಸ್ಫೋಟವಾಗಿದ್ದರೆ ಇದರಿಂದ ನಿಜವಾಗಿಯೂ ಯಾರಿಗೆ ಲಾಭ ಎಂಬುದನ್ನು ನಾವು ವಿಶ್ಲೇಷಿಸಬೇಕು” ಎಂದೂ ಜೆಎಸ್ಪಿ ನಾಯಕ ಅಭಿಪ್ರಾಯಿಸಿದ್ದಾರೆ.
ನವೆಂಬರ್ 10ರಂದು ಸಂಜೆ ದೆಹಲಿ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಕ ಕಾರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು ಈವರೆಗೆ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ದೆಹಲಿ ಪೊಲೀಸರು ಇದನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಿದ್ದು ಯುಎಪಿಎ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಕೂಡಾ ತನಿಖೆ ಆರಂಭಿಸಿದೆ. ಕಾರಿನ ಮಾಲೀಕನ ಬಂಧನ ಮಾಡಲಾಗಿದೆ. ಜತೆಗೆ ದೆಹಲಿ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಇದನ್ನು ಓದಿದ್ದೀರಾ? ದೆಹಲಿ ಸ್ಪೋಟ: ದೊರೆಯ ಜನ್ಮ ದಿನಾಚರಣೆಗಾಗಿ ಭೂತಾನ್ಗೆ ಹಾರಿದ ಮೋದಿ; ನೆಟ್ಟಿಗರ ಆಕ್ರೋಶ
ಬಿಹಾರದಲ್ಲಿಎರಡನೇ ಹಂತದ ವಿಧಾನಸಭೆ ಚುನಾವಣೆ ನಡೆಯುವುದಕ್ಕೂ ಮುನ್ನ ಸಂಭವಿಸಿದ ಈ ಬಾಂಬ್ ಸ್ಫೋಟದ ಬಗ್ಗೆ ವಿಶ್ಲೇಷಣೆ ನಡೆಸುವ ಅಗತ್ಯವಿದೆ ಎಂದು ಆದರ್ಶ್ ಅಯ್ಯರ್ ಹೇಳಿದ್ದಾರೆ. “ಈ ಸ್ಫೋಟದ ಹಿಂದೆ ಸದ್ಯ ಸುದ್ದಿ ಹರಡಲಾಗುತ್ತಿರುವಂತೆ ಮುಸ್ಲಿಂ ಭಯೋತ್ಪಾದನೆಯಿದ್ದರೆ, ಅಂತಹ ಭಯೋತ್ಪಾದನೆಯನ್ನು ನಿಭಾಯಿಸಲು ಮೋದಿ/ಬಿಜೆಪಿ ಅಧಿಕಾರದಲ್ಲಿರುವುದು ಅತ್ಯಗತ್ಯ. ಆದರೆ ಬಿಜೆಪಿ ಮುಸ್ಲಿಮರಿಗೆ ನಿರಂತರ ಕಿರುಕುಳ ನೀಡುತ್ತಿರುವ ಕಾರಣದಿಂದಾಗಿ ಮೋದಿ ಸರ್ಕಾರ ಅಧಿಕಾರದಲ್ಲಿರುವುದು ಇಷ್ಟವಿಲ್ಲ” ಎಂದಿದ್ದಾರೆ.
“ನಿಜವಾಗಿಯೂ ನಾವು ತಾರ್ಕಿಕವಾಗಿ ಯೋಚಿಸಿದರೆ, ಮುಸ್ಲಿಮರು ತಮಗೆ ತೊಂದರೆ ಕೊಡುವ ಬಿಜೆಪಿ/ಮೋದಿ ವಿರುದ್ಧ ಸೇಡು ತೀರಿಸಲು ಬಯಸಿದರೆ, ಬಿಹಾರ ಚುನಾವಣೆಗೆ ಮುನ್ನ ಏಕೆ ಸ್ಫೋಟ ನಡೆಸುತ್ತಾರೆ? ಅದು ಕೂಡಾ ಬಿಹಾರದಲ್ಲಿ ಬಿಜೆಪಿ ಹೀನಾಯ ಸೋಲು ಕಾಣುವುದು ಖಚಿತವಾಗಿರುವಾಗ ಯಾಕೆ ಸ್ಫೋಟ ನಡೆಸುತ್ತಾರೆ? ಈ ಸ್ಫೋಟ ನಡೆಸಿದರೆ ಮುಸ್ಲಿಮರು ಬಿಜೆಪಿಯ ಚುನಾವಣಾ ನಿರೀಕ್ಷೆಗಳನ್ನು ಸುಧಾರಿಸಿದ್ದಂತೆ ಆಗುತ್ತದೆ. ಆದರೆ ವಾಸ್ತವದಲ್ಲಿ ಮುಸ್ಲಿಮರು ಅದನ್ನು ಮಾಡಲು ಬಯಸಲ್ಲ” ಎಂದು ಹೇಳಿದ್ದಾರೆ.
“ಆದ್ದರಿಂದ ಚುನಾವಣೆಗೆ ಮುನ್ನ ಮುಸ್ಲಿಮರು ಬಾಂಬ್ ಸ್ಫೋಟದಲ್ಲಿ ತೊಡಗುತ್ತಾರೆ ಎಂಬ ವಾದ ಸರಿಯಲ್ಲ. ಹಾಗಿರುವಾಗ ಚುನಾವಣೆಗೆ ಸ್ವಲ್ಪ ಮೊದಲು ಅಂತಹ ಸ್ಫೋಟಗಳು ಏಕೆ ಸಂಭವಿಸುತ್ತದೆ ಎಂಬುದಕ್ಕೆ ಸಂಭವನೀಯ ಕಾರಣಗಳ ಬಗ್ಗೆಯೂ ಚಿಂತನೆ ನಡೆಸಬೇಕು. ಅದು ಕೂಡಾ ಮೋದಿ, ಅಮಿತ್ ಶಾ ಎಂಬ ಚಾಣಕ್ಯರ ಇಮೇಜ್ ಮೇಲೆ ಪರಿಣಾಮ ಬೀರುವ ಚುನಾವಣೆ ವೇಳೆ ನಡೆದ ಈ ಸ್ಫೋಟದ ಕಾರಣದ ಬಗ್ಗೆ ವಿಶ್ಲೇಷಣೆ ನಡೆಸಲೇಬೇಕು” ಎಂದು ಅಭಿಪ್ರಾಯಿಸಿದ್ದಾರೆ.
“ಸದ್ಯ ಮತಗಳ್ಳತನ, ಮತದಾರರ ಹಕ್ಕನ್ನು ಕಿತ್ತುಕೊಳ್ಳುವುದು, ಮತದಾರರನ್ನು ಅನಧಿಕೃತವಾಗಿ ಪಟ್ಟಿಯಿಂದ ಡಿಲೀಟ್ ಮಾಡುವುದು-ಸೇರಿಸುವುದು, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಳ್ಳುವುದು ಮೊದಲಾದ ಘಟನೆಗಳು ನಡೆದಿದೆ. ಕರ್ನಾಟಕದಂತೆಯೇ ಬಿಹಾರ ರಾಜ್ಯ ಚುನಾವಣೆಯಲ್ಲೂ ಸೋಲುವ ಬಗ್ಗೆ ಮೋದಿ ಗಂಭೀರವಾಗಿ ಚಿಂತೆಗೆ ಒಳಗಾಗಿದ್ದಾರೆ. ಹಾಗಿರುವಾಗ ಮೋದಿ/ಶಾ ಮತ್ತು ಅವರ ಬೆಂಬಲಿಗರಿಗೆ ಹತ್ತಿರವಿರುವ ಬಲಪಂಥೀಯ ಶಕ್ತಿಗಳು ಈ ಸ್ಫೋಟ ನಡೆಸಿರಬಹುದು ಎಂಬುದಕ್ಕೆ ಬಲವಾದ ಕಾರಣಗಳಿವೆ. ಮುಸ್ಲಿಮರು ಭಾರತಕ್ಕೆ ಅಪಾಯಕಾರಿ ಮತ್ತು ಎಲ್ಲಾ ಧರ್ಮನಿಷ್ಠ ಹಿಂದೂಗಳು ಬಿಹಾರದಲ್ಲಿ ಬಿಜೆಪಿಗೆ ಮಾತ್ರ ಮತ ಹಾಕಬೇಕು ಎಂಬ ಬಲವಾದ ಸಂದೇಶ ರವಾನಿಸುವ ಉದ್ದೇಶದಿಂದ ಬಲಪಂಥೀಯ ಶಕ್ತಿಗಳೇ ಈ ಸ್ಫೋಟ ನಡೆಸಿರಬಹುದು” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣೆ ವೇಳೆಯಲ್ಲೇ ಬಾಂಬ್ ಬ್ಲಾಸ್ಟ್ಗಳು ಆಗುವುದೇಕೆ? ಕೇಂದ್ರ ಉತ್ತರಿಸಲಿ: ಸಿದ್ದರಾಮಯ್ಯ
ಮತಗಳ್ಳತನದ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಅಕ್ರಮವಾಗಿ ಮತಗಳನ್ನು ಸೇರಿಸಿ/ಅಳಿಸಲು ಇಸಿಐ ಬಿಜೆಪಿಗೆ ಅವಕಾಶ ಮಾಡಿಕೊಟ್ಟಿದೆ. ಮತಗಳ್ಳತನದ ಮೂಲಕವೇ ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲಬಹುದು. ಆದರೆ, ಈ ಬಾಂಬ್ ಸ್ಫೋಟದಂತಹ ಯಾವುದೇ ಸರಿಯಾದ, ಬಲವಾದ ಕಾರಣವಿಲ್ಲದೆ ಬಿಜೆಪಿ ಗೆದ್ದರೆ, ಬಿಹಾರದ ಜನರು ಮತ್ತು ವಿರೋಧ ಪಕ್ಷದವರು ಮೋದಿ/ಬಿಜೆಪಿ ವಿರುದ್ಧ ಪ್ರಶ್ನೆ ಎತ್ತುತ್ತಾರೆ. ಅದು ಮೋದಿ/ಶಾಗೆ ಹಾನಿ ಉಂಟು ಮಾಡಬಹುದು ಎಂದು ಸಾಬೀತಾಗುತ್ತದೆ. ಬಹುಶಃ ಒಂದು ಸಣ್ಣ ಅಂತರ್ಯುದ್ಧದಂತಹ ಪರಿಸ್ಥಿತಿಗೂ ಕಾರಣವಾಗಬಹುದು” ಎಂದು ದೂರಿದ್ದಾರೆ.
“ಆದ್ದರಿಂದ, ಪಕ್ಷದೊಳಗೆ ಅಂತಹ ಬಿಕ್ಕಟ್ಟನ್ನು ತಪ್ಪಿಸಲು, ರಾಜಧಾನಿ ದೆಹಲಿಯಲ್ಲಿ ಬಾಂಬ್ ಸ್ಫೋಟವನ್ನು ನಡೆಸಿ ಕೆಲವು ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡಾದರೂ ಚುನಾವಣೆಗಳನ್ನು ಗೆದ್ದು ಪ್ರಶ್ನಾತೀತ ಸರ್ವಾಧಿಕಾರಿಯಾಗಲು ಮೋದಿ ಬಯಸುತ್ತಾರೆ. ಮೋದಿ/ಶಾ ಅವರಿಗೆ ಅಧಿಕಾರ ಮಾತ್ರ ಪವಿತ್ರವಾದುದ್ದು. ಹಿಂದೂ ಧರ್ಮ, ಕರ್ಮ, ಸಂಸ್ಕೃತಿ, ಸದಾಚಾರ, ಧರ್ಮ, ನೀತಿಶಾಸ್ತ್ರ ಇತ್ಯಾದಿ ಎಲ್ಲವೂ ಅವರಿಗೆ ಮುಖ್ಯವಲ್ಲ. ದೆಹಲಿಯ ಕೇಂದ್ರ ಮತ್ತು ರಾಜ್ಯ ಎರಡೂ ಮೋದಿ/ಶಾ ಅವರ ಹಿಡಿತದಲ್ಲಿದೆ” ಎಂದು ದೂರಿದ್ದಾರೆ.
“ಹಿಂದಿನ ಎಲ್ಲಾ ಸ್ಫೋಟಗಳ ಸಮಯವನ್ನು ಪರಿಶೀಲಿಸಿದರೆ, ಕರಾಳ ಸತ್ಯವನ್ನು ನಾವು ಅರಿತುಕೊಳ್ಳಬಹುದು. ಇವುಗಳು ಮೋದಿ/ಶಾ ಅವರು ಚುನಾವಣೆಗಳನ್ನು ಗೆಲ್ಲಲು ಕಾರಣವಾದ ವಾಸ್ತವ. ಮುಗ್ಧ ಹಿಂದೂಗಳ ಜೀವಗಳನ್ನು ಬಲಿಕೊಟ್ಟು ಚುನಾವಣೆಗಳನ್ನು ಗೆಲ್ಲಲು ನಡೆಸಿದ ಅಮಾನವೀಯ ಸ್ಫೋಟಗಳ ಸರಣಿ ಇದಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.





