ಪಂಚೆ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಿಸಿದ್ದ ಜಿ ಟಿ ಮಾಲ್ ಅನ್ನು 7 ದಿನ ಬಂದ್ ಮಾಡಿಸಿದ ಕಾಂಗ್ರೆಸ್ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಮಾಲ್ ವಿರುದ್ಧ ಕ್ರಮಕ್ಕೆ ಜಾತ್ಯತೀತ ಜನತಾದಳ ಪಕ್ಷವೂ ಆಗ್ರಹಿಸಿತ್ತು. ಆದರೆ, ರೈತರ ಅರ್ಜಿ ಕಸಕ್ಕೆ ಎಸೆದ ಸಿಎಂಗೆ ಯಾವ ಶಿಕ್ಷೆ? ಸಿದ್ದರಾಮಯ್ಯ ವಿರುದ್ಧ ಕ್ರಮ ಯಾವಾಗ ಎಂದು ಜೆಡಿಎಸ್ ಪ್ರಶ್ನಿಸಿದೆ.
ಎಕ್ಸ್ ತಾಣದಲ್ಲಿ ಶುಕ್ರವಾರ ಪೋಸ್ಟ್ ಮಾಡಿರುವ ಜೆಡಿಎಸ್, “ಚಾಮರಾಜನಗರದಲ್ಲಿ ನಡೆದಿದ್ದ ಕೃತಜ್ಞತಾ ಸಮಾವೇಶದಲ್ಲಿ ರೈತರು ಸಮಸ್ಯೆಗಳನ್ನು ಪರಿಹರಿಸಲು ನೀಡಿದ್ದ ಮನವಿ ಪತ್ರಗಳನ್ನು ಸಿಎಂ ಸಿದ್ದರಾಮಯ್ಯ ಅವರೇ ಕಸದ ಬುಟ್ಟಿಗೆ ಎಸೆದಿದ್ದರಲ್ಲಾ? ಅದು ಅನ್ನದಾತನಿಗೆ ಮಾಡಿದ ಅಪಮಾನವಲ್ಲವೇ?” ಎಂದು ಕೇಳಿದ್ದಾರೆ.
ರೈತರ ಅರ್ಜಿಯನ್ನು ಕಾಲ ಕಸದಂತೆ ಬಿಸಾಕಿದ ಮುಖ್ಯಮಂತ್ರಿಗಳ ಮಹಾಪರಾಧಕ್ಕೆ ಯಾವ ರೀತಿಯ ಕಠಿಣ ಕ್ರಮ ಜರುಗಿಸಬೇಕು? ರೈತ ದೇಶದ ಬೆನ್ನೆಲುಬು. ದೇಶಕ್ಕೆ ಅನ್ನ ಕೊಡುವ ಅನ್ನದಾತರನ್ನು ತುಚ್ಚವಾಗಿ ಕಂಡಿರುವ ನೀವು, ನಾಡಿನ ರೈತರ ಕ್ಷಮೆ ಕೇಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದೇ ಲೇಸು ಎಂದಿದ್ದಾರೆ.





