ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ವನ್ನು ಬ್ರಿಟಿಷರನ್ನು ಸ್ವಾಗತಿಸಲು ಬರೆಯಲಾಗಿದೆ. ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎಂಬ ಬಿಜೆಪಿ ಸಂಸದ, ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕಾಗೇರಿ ತಿಳಿದುದು ‘ವಾಟ್ಸ್ಆ್ಯಪ್ ಇತಿಹಾಸದ ಪಾಠ’, ಇದು ಸಂಪೂರ್ಣ ಅಸಂಬದ್ಧ ಎಂದು ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಾಗೇರಿ, “ಇತಿಹಾಸವನ್ನು ಕೆದಕಲು ಹೋಗುವುದಿಲ್ಲ. ಆದರೆ, ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕೆಂದು ಬಲವಾದ ಒತ್ತಾಯವಿತ್ತು. ಆದಾಗ್ಯೂ, ನಮ್ಮ ಪೂರ್ವಜರು ವಂದೇ ಮಾತರಂ ಜೊತೆಗೆ, ಬ್ರಿಟಿಷರನ್ನು ಸ್ವಾಗತಿಸಲು ರಚಿಸಲಾದ ‘ಜನ ಗಣ ಮನ’ವನ್ನು ಸಹ ಸೇರಿಸಬೇಕೆಂದು ನಿರ್ಧರಿಸಿದರು. ಇಂದು, ನಾವು ಅದನ್ನು ಸ್ವೀಕರಿಸಿದ್ದೇವೆ. ಅದನ್ನು ಅನುಸರಿಸುತ್ತಿದ್ದೇವೆ” ಎಂದು ಹೇಳಿದ್ದರು.
ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರಿಯಾಂಕ್ ಖರ್ಗೆ, ಇದೊಂದು ಆರ್ಎಸ್ಎಸ್ನ ವಾಟ್ಸ್ಆ್ಯಪ್ ಯೂನಿರ್ವಸಿಟಿ ಕಲಿಸಿರುವ ಇತಿಹಾಸದ ಪಾಠ ಎಂದಿದ್ದಾರೆ. “ಬಿಜೆಪಿ ಸಂಸದ ಕಾಗೇರಿ ಅವರು ಈಗ ನಮ್ಮ ರಾಷ್ಟ್ರಗೀತೆ ‘ಬ್ರಿಟಿಷರಿಗಾಗಿ’ ಬರೆದದ್ದು ಎನ್ನುತ್ತಿದ್ದಾರೆ. ಇದು ಸಂಪೂರ್ಣವಾಗಿ ಅಸಂಬದ್ದವಾದ ಹೇಳಿಕೆ. ಟ್ಯಾಗೋರ್ ಅವರು 1911ರಲ್ಲಿ ‘ಭಾರೋತೋ ಭಾಗ್ಯೋ ಬಿಧಾತ’ ಎಂಬ ಸ್ತುತಿಗೀತೆಯನ್ನು ಬರೆದರು; ಅದರ ಮೊದಲ ಚರಣ ಜನ ಗಣ ಮನವಾಯಿತು. ಇದನ್ನು ಮೊದಲು 1911ರ ಡಿಸೆಂಬರ್ 27ರಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶದಲ್ಲಿ ಹಾಡಲಾಯಿತು. ಯಾವುದೇ ರಾಜ ಗೌರವಕ್ಕಾಗಿ ಬರೆದದ್ದು ಅಥವಾ ಹಾಡಿದ್ದಲ್ಲ” ಎಂದು ಪ್ರಿಯಾಂಕ್ ಖರ್ಗೆ ನೈಜ ಇತಿಹಾಸವನ್ನು ವಿವರಿಸಿದ್ದಾರೆ. ಕಾಗೇರಿ ಅವರಿಗೆ ನಿಜ ಇತಿಹಾಸದ ಪಾಠ ಮಾಡಿದ್ದಾರೆ.
Another day, another RSS “WhatsApp history” lesson.@BJP4Karnataka MP Sri. Kageri now claims our National Anthem is “British.”
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 6, 2025
Utter Nonsense.
•Sri. Tagore wrote the hymn Bharoto Bhagyo Bidhata in 1911; its first stanza became Jana Gana Mana.
•it was first sung on 27 Dec… pic.twitter.com/oimSw8IQvl
“ಸಂಸದರು ಇತಿಹಾಸವನ್ನು ಮರುಪರಿಶೀಲಿಸಲು ಬಯಸುವುದಿಲ್ಲ ಎಂದಿದ್ದಾರೆ. ಆದರೆ, ಪ್ರತಿಯೊಬ್ಬ ಬಿಜೆಪಿ, ಆರ್ಎಸ್ಎಸ್ ನಾಯಕರು, ಕಾರ್ಯಕರ್ತರು ಹಾಗೂ ‘ಸ್ವಯಂಸೇವಕರು’ ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ನ ಸಂಪಾದಕೀಯಗಳನ್ನು ಓದುವ ಮೂಲಕ ಇತಿಹಾಸವನ್ನು ಪುನರ್ವಿಮರ್ಶಿಸಬೇಕು. ಸಂವಿಧಾನ, ತ್ರಿವರ್ಣ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಅಗೌರವಿಸುವ ದೊಡ್ಡ ಸಂಪ್ರದಾಯವನ್ನು ಆರ್ಎಸ್ಎಸ್ ಹೊಂದಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ವೈಆರ್ಎಸ್ಎಸ್ (ವೈರಸ್) ಅನ್ನು ಗುಣಪಡಿಸಬೇಕಿದೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಷ್ಟ್ರಗೀತೆ ಕುರಿತು ಸಂಘಪರಿವಾರದ ನಿರಂತರ ವಿವಾದ
ರಾಷ್ಟ್ರಗೀತೆ ಕುರಿತು ಆರ್ಎಸ್ಎಸ್ ಮತ್ತು ಬಲಪಂಥೀಯವಾದಿಗಳು ನಿರಂತರವಾಗಿ ಸುಳ್ಳು ಹರಡುತ್ತಲೇ ಬಂದಿದ್ದಾರೆ. ಆದರೆ, ಇತಿಹಾಸವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿಲ್ಲ. 1911ರ ಡಿಸೆಂಬರ್ 11ರಂದು ರವೀಂದ್ರನಾಥ ಟ್ಯಾಗೋರ್ ಅವರು ‘ಭಾರೋತೋ ಭಾಗ್ಯೋ ಬಿಧಾತ’ವನ್ನು ಬರೆದರು. ಆದರೆ, ಅವರು ಬರೆದ ಮರುದಿನವೇ, ಕಿಂಗ್ ಜಾರ್ಜ್-V ಅನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಲು ಬ್ರಿಟಿಷರು ‘ದೆಹಲಿ ದರ್ಬಾರ್’ ಆಯೋಜಿಸಿದ್ದರು. ಆ ಕಾರಣದಿಂದಾಗಿ, ರಾಷ್ಟ್ರಗೀತೆಯನ್ನು ಕಿಂಗ್ ಜಾರ್ಜ್-Vನನ್ನು ಸ್ವಾಗತಿಸುವುದಕ್ಕಾಗಿ ಬರೆಯಲಾಗಿದೆ ಎಂದು ತಪ್ಪಾಗಿ ಸಂಘಪರಿವಾರ ಅರ್ಥೈಸಿ ಅಪಪ್ರಚಾರ ಮಾಡುತ್ತಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸಾಧನೆಗಳೇ ಇಲ್ಲ; ವಿಪಕ್ಷ ನಾಯಕರ ವೈಯಕ್ತಿಕ ಟೀಕೆಗೆ ಜೋತು ಬಿದ್ದ ಬಿಜೆಪಿ
ಆದಾಗ್ಯೂ, ಈ ಗೀತೆಯನ್ನು ಟ್ಯಾಗೋರ್ ಅವರು ಅಂದೇ ಹಾಡಿರಲಿಲ್ಲ. ಈ ಗೀತೆಯನ್ನು ಮೊದಲು ಹಾಡಿದ್ದು, ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ 1911ರ ಡಿಸೆಂಬರ್ 28ರಂದು ಆಯೋಜಿಸಲಾಗಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡಲಾಯಿತು. ಆ ನಂತರ, 1912ರ ಫೆಬ್ರವರಿಯಲ್ಲಿ ಆದಿ ಬ್ರಹ್ಮ ಸಮಾಜದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ 2ನೇ ಬಾರಿಗೆ ಹಾಡಲಾಯಿತು.
ಗೀತೆಯಲ್ಲಿರುವ ‘ಅಧಿನಾಯಕ’ ಎಂಬ ಪದದ ಕಾರಣಕ್ಕಾಗಿ ವಿವಾದವನ್ನು ಸೃಷ್ಟಿಸಲಾಗಿದೆ. ಆದರೆ, ಈ ಬಗ್ಗೆ 1937ರಲ್ಲಿ ಸ್ವತಃ ಟ್ಯಾಗೋರ್ ಅವರೇ ಪತ್ರವೊಂದರಲ್ಲಿ ಸ್ಪಷ್ಟನೆ ನೀಡಿದ್ದರು. “5ನೇ, 6ನೇ ಅಥವಾ ಯಾವುದೇ ಜಾರ್ಜ್ಗಳ ಆಡಳಿತದಲ್ಲಿ ಮಾನವನ ಹಣೆಬರಹವನ್ನು ರೂಪಿಸಲು ಸಾಧ್ಯವಿಲ್ಲ. ‘ಜನ ಗಣ ಮನ’ ಗೀತೆಯಲ್ಲಿ ನಾನು ಉಲ್ಲೇಖಿಸಿದ್ದು, ಭಾರತದ ಹಣೆಬರಹವನ್ನು ರೂಪಿಸುವವನು, ಎಲ್ಲ ಏಳುಬೀಳುಗಳ ನಡುವೆ ದೇಶಕ್ಕೆ ದಾರಿ ತೋರುವವನು, ಮಾರ್ಗದರ್ಶನ ಮಾಡುವವನು ಎಂಬುದಾಗಿಯೇ ಹೊರತು, ಬ್ರಿಟಿಷ್ ದೊರೆಗಳಿಗಾಗಿ ಅಲ್ಲ” ಎಂದು ಸ್ಪಷ್ಟವಾಗಿ ವಿವರಿಸಿದ್ದರು.




