ಬಿಜೆಪಿ ಉತ್ತರ ಪ್ರದೇಶದ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 2027ರ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಯಾದವೇತರ ಒಬಿಸಿ ಮತಗಳಿಗೆ ಹೊಸ ಗಾಳವನ್ನು ಎಸೆದಿದ್ದು, ಒಬಿಸಿಗೆ ಸೇರಿದ ಪಂಕಜ್ ಚೌಧರಿ ಅವರನ್ನು ಅಧ್ಯಕ್ಷರನ್ನಾಗಿಸುವ ತಯಾರಿಯಲ್ಲಿದೆ. ಶನಿವಾರ, ಲಕ್ನೋದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮುಂಚೂಣಿಯಲ್ಲಿರುವ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಸೇರಿದಂತೆ ಹಿರಿಯ ನಾಯಕರು ಕಚೇರಿಗೆ ಆಗಮಿಸಿದ್ದರು.
61 ವರ್ಷದ ಪಂಕಜ್, ಶನಿವಾರ ಮಧ್ಯಾಹ್ನ ದೆಹಲಿಯಿಂದ ಲಕ್ನೋಗೆ ಬಂದಿಳಿದರು. ಪಂಕಜ್ ಅವರು ಬರುವುದು ವಿಳಂಬವಾದ ಕಾರಣ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗಬೇಕಿದ್ದ ನಾಮಪತ್ರ ಸಲ್ಲಿಸುವ ಸಮಯವನ್ನೂ ಬದಲಾಯಿಸಲಾಗಿತ್ತು. ನಾಮಪತ್ರ ಸಲ್ಲಿಕೆ ಮಧ್ಯಾಹ್ನ 3 ಗಂಟೆಯವರೆಗೆ ಮುಂದುವರಿದಿತ್ತು.
ಇದನ್ನು ಓದಿದ್ದೀರಾ? ನೂತನ ಕೇಂದ್ರ ಸಚಿವ ಸಂಪುಟ: ಯಾರಿಗೆ, ಯಾವ ಖಾತೆ? ಸಂಪೂರ್ಣ ಪಟ್ಟಿ
ಹೊಸ ರಾಜ್ಯಾಧ್ಯಕ್ಷರ ಘೋಷಣೆ ಭಾನುವಾರ ನಡೆಯುವುದಾದರೂ ಪಂಕಜ್ ಚೌಧರಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಒಬಿಸಿ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಏಕೀಕರಣವನ್ನು ಗುರಿಯಾಗಿಸಿಕೊಂಡು ಸಮಾಜವಾದಿ ಪಕ್ಷ(ಎಸ್ಪಿ) ‘ಪಿಡಿಎ’ ಅಭಿಯಾನವನ್ನು ನಡೆಸುತ್ತಿರುವಾಗಲೇ ಬಿಜೆಪಿ ಒಬಿಸಿ ಮತಗಳನ್ನು ಗುರಿಯಾಗಿಸಿಕೊಂಡು ಪಂಕಜ್ ಚೌಧರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕಾಣುತ್ತಿದೆ.
ಪಂಕಜ್ ಚೌಧರಿ ಯಾರು ಗೊತ್ತಾ?
1964ರ ನವೆಂಬರ್ 20ರಂದು ಜನಿಸಿದ ಪಂಕಜ್ ಚೌಧರಿ ಗೋರಖ್ಪುರ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಅವರು, ಗೋರಖ್ಪುರ ಬಳಿಯ ಪೂರ್ವ ಯುಪಿಯ ಮಹಾರಾಜ್ಗಂಜ್ನಲ್ಲಿ ಏಳು ಬಾರಿ ಬಿಜೆಪಿ ಸಂಸದರಾದವರು. ರಾಜಕೀಯ ಜೀವನವನ್ನು 1989ರಲ್ಲಿ ಗೋರಖ್ಪುರ ಮುನ್ಸಿಪಲ್ ಕಾರ್ಪೊರೇಷನ್ ಸದಸ್ಯರಾಗಿ ಪ್ರಾರಂಭಿಸಿದ ಪಂಕಜ್ ಅವರು ನಂತರ ಉಪ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಕುರ್ಮಿ ಸಮುದಾಯಕ್ಕೆ ಸೇರಿದ ನಾಯಕ ಪಂಕಜ್ ಆಗಿದ್ದು, ಈ ಸಮುದಾಯವು ಉತ್ತರ ಪ್ರದೇಶದ ಸುಮಾರು ಶೇ.8ರಷ್ಟು ಒಬಿಸಿ ಮತದಾರರನ್ನು ಒಳಗೊಂಡಿದೆ. ಉತ್ತರ ಪ್ರದೇಶದ ಪೂರ್ವ ಮತ್ತು ಮಧ್ಯ ವಲಯದಲ್ಲಿ ಹೆಚ್ಚಾಗಿ ಈ ಸಮುದಾಯ ನೆಲೆಸಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ವೀರೇಂದ್ರ ಚೌಧರಿ ಅವರನ್ನು 35,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ ಪಂಕಜ್, ಕೇಂದ್ರ ಸಚಿವ ಸಂಪುಟದಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವರಾಗಿ ಜವಾಬ್ದಾರಿಯನ್ನು ಪಡೆದರು. ಪಂಕಜ್ ಚೌಧರಿ ಅವರಿಗೆ ಪಕ್ಷದ ಉನ್ನತ ನಾಯಕರ ಬೆಂಬಲವೂ ಇದೆ ಎಂದು ಹೇಳಲಾಗಿದೆ.
2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪಂಕಜ್ ಪರವಾಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ, “ಪಂಕಜ್ ಅವರು ಅತ್ಯಂತ ಅನುಭವಿ ರಾಜಕಾರಣಿ. ನೀವು ದೀಪ ಹಿಡಿದು ಹುಡುಕಿದರೂ ಅವರಂತಹ ಸಂಸದರು ಸಿಗುವುದಿಲ್ಲ” ಎಂದು ಶ್ಲಾಘಿಸಿದ್ದರು.
2023ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಗೋರಖ್ಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಂಕಜ್ ಚೌಧರಿ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ದರು. ನಂತರ ಪಂಕಜ್ ಅವರು ಪ್ರಧಾನಿಯನ್ನು ಶ್ರೀರಾಮ ಮತ್ತು ಕೃಷ್ಣರಿಗೆ ಹೋಲಿಸಿ ಶ್ಲಾಘಿಸಿ ಧನ್ಯವಾದ ತಿಳಿಸಿದ್ದರು! ಇದೀಗ ಯಾದವೇತರ ಒಬಿಸಿ ಮತಗಳನ್ನು ಸೆಳೆಯುವ ಕಾರ್ಯತಂತ್ರವನ್ನು ಬಿಜೆಪಿ ರೂಪಿಸಿದ್ದಂತಿದೆ.





