ಸದ್ಯ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಪೂರ್ಣವಾದ ಬಳಿಕ 12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಫೆಬ್ರವರಿ 7ರಂದು ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಅದಾದ ಬಳಿಕ ಶೀಘ್ರವೇ ಅಂದರೆ ಬಹುತೇಕ ಈ ತಿಂಗಳಲ್ಲೇ ನಮ್ಮ ರಾಜ್ಯದಲ್ಲಿಯೂ ಈ ಪ್ರಕ್ರಿಯೆ ಆರಂಭವಾಗಲಿದೆ. ಈ ಪ್ರಕ್ರಿಯೆಯ ಅಪಾಯ ದೇಶದಾದ್ಯಂತ ಚರ್ಚೆಯಲ್ಲಿರುವಾಗ ನಮ್ಮ ರಾಜ್ಯ ಕಾಂಗ್ರೆಸ್ ಮಾತ್ರ ಅಪಾಯವನ್ನು ಬದಿಗಿಟ್ಟಂತಿದೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಂದರೆ SIR ಪ್ರಕ್ರಿಯೆ ಸದ್ಯ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ. ಆರಂಭದಲ್ಲಿ ಬಿಹಾರದಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಯ ‘ಎಫೆಕ್ಟ್’ ಮರೆಯಲಾಗದ್ದು. ಜತೆಗೆ ಇದು ಬಿಜೆಪಿ ಕೀಳು ರಾಜಕೀಯ ಯಾವ ಹಂತಕ್ಕೆ ತಲುಪಿದೆ ಎಂಬುದರ ಎಚ್ಚರಿಕೆ ಕರೆಗಂಟೆ. ಸದ್ಯ ಬಿಜೆಪಿ ಕೈಯಲ್ಲಿ ಅಧಿಕಾರದ ಚುಕ್ಕಾಣಿ ಇರುವ ಬಿಹಾರದಲ್ಲಿ ಎಸ್ಐಆರ್ ಬಳಿಕ ಮತದಾನದ ಹಕ್ಕು ಕಳೆದುಕೊಂಡವರು 64 ಲಕ್ಷ ಮಂದಿ. ಇದಾದ ಬಳಿಕ ಚುನಾವಣಾ ಆಯೋಗದ ದೌಡು ಇತರ ರಾಜ್ಯಗಳಿಗೆ ಸಾಗಿ ಸದ್ಯ 12 ರಾಜ್ಯಗಳಲ್ಲಿ ಜನರ ಮತದಾನದ ಹಕ್ಕನ್ನು SIR ನೆಪದಲ್ಲಿ ಕಸಿಯಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಆಗುತ್ತಿರುವುದೂ ಅದೇ. ಮುಂದೆ ಕರ್ನಾಟಕದಲ್ಲಿ ನಡೆಯಲಿರುವುದೂ ಇದೇ! ಆದರೆ ಈ ಎಸ್ಐಆರ್ ಬಿಸಿ ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಟ್ಟಿದಂತಿಲ್ಲ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಕೈಗೊಂಬೆಯಾಗಿರುವ ಚುನಾವಣಾ ಆಯೋಗವು ಸದ್ಯ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಹುತೇಕ ಈ ವರ್ಷ ಅಥವಾ ಮುಂದಿನ ವರ್ಷದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿದೆ. 2026ರಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ, ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಚುನಾವಣೆ ನಡೆದರೆ, 2027ರಲ್ಲಿ ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಉತ್ತರಾಖಂಡ, ಗೋವಾ, ಮಣಿಪುರ, ಹಿಮಾಚಲ ಪ್ರದೇಶವು ವಿಧಾನಸಭೆ ಚುನಾವಣೆಯನ್ನು ಎದುರಿಸಲಿದೆ.
ಇದನ್ನು ಓದಿದ್ದೀರಾ? SIR ವಿವಾದ | ಸುಪ್ರೀಂ ಕೋರ್ಟ್ನಲ್ಲಿ ಖುದ್ದು ವಾದ ಮಂಡಿಸಿದ ಮಮತಾ ಬ್ಯಾನರ್ಜಿ!
ಇವಿಷ್ಟು ರಾಜ್ಯಗಳಲ್ಲಿ ದಕ್ಷಿಣ ಭಾರತದ ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ, ಪಶ್ಚಿಮ ಭಾರತದ ಗುಜರಾತ್, ಗೋವಾ, ಪಶ್ಚಿಮ ಬಂಗಾಳದಲ್ಲಿ ಇನ್ನೆರಡು ವರ್ಷದೊಳಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಮೊದಲು ಎಸ್ಐಆರ್ ಪ್ರಕ್ರಿಯೆ ನಡೆದ ಬಿಹಾರದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವುದು. ಚುನಾವಣೆಗೂ ಕೆಲವೇ ತಿಂಗಳುಗಳು ಇರುವಾಗ ಅವೈಜ್ಞಾನಿಕವಾಗಿ, ಆತುರದಲ್ಲಿ ಮತದಾರರ ಪಟ್ಟಿ ‘ವಿಶೇಷ ತೀವ್ರ ಪರಿಷ್ಕರಣೆ’ಗೆ ಒಳಗಾದ ರಾಜ್ಯ ಬಿಹಾರ. ಅಲ್ಲಿ ಮತದಾನದ ಹಕ್ಕು ಕಳೆದುಕೊಂಡಲ್ಲಿ ಬಹುತೇಕರು ದಾಖಲೆಗಳ ಕೊರತೆ, ಕಾಗುಣಿತ ತಪ್ಪಿನಿಂದಾಗಿ ತಾನು ‘ಆ ರಾಜ್ಯದಲ್ಲಿರುವ ಭಾರತೀಯ’ ಎಂದು ಸಾಬೀತುಪಡಿಸಲಾಗದವರು! ಆ ರಾಜ್ಯದವರೇ ಆದರೂ, ಮತದಾನ ಮಾಡಲು ಅರ್ಹರಾಗಿದ್ದರೂ ತಮ್ಮ ಹಕ್ಕನ್ನು ಚುನಾವಣಾ ಆಯೋಗ ಕಸಿಯುವಾಗ ಏನೂ ಮಾಡಲಾಗದ ಅಸಹಾಯಕರು!
ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಡಿಲೀಟ್ ಆದ 65 ಲಕ್ಷ ಜನರಲ್ಲಿ ಬಹುತೇಕರು ಬಿಹಾರದಿಂದ ಬೇರೆ ರಾಜ್ಯಗಳಿಗೆ ವಲಸೆ ಹೋದವರು. ಬಿಹಾರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವ ಕಾರಣ ಉದ್ಯೋಗಕ್ಕಾಗಿ ಹೊರರಾಜ್ಯಗಳಿಗೆ ತೆರಳುವುದು ಅಲ್ಲಿ ಸಾಮಾನ್ಯ. ಹೀಗೆ ವಲಸೆ ಹೋಗಿ ದುಡಿಯುತ್ತಿರುವ ಲಕ್ಷಾಂತರ ವಲಸೆ ಕಾರ್ಮಿಕರನ್ನು ಕಾಯಂ ಆಗಿ ಸ್ಥಳಾಂತರಗೊಂಡವರು’ ಎಂದು ಪಟ್ಟಿಯಿಂದ ತೆಗೆದುಹಾಕಲಾಗಿದೆ. ದಾಖಲೆಗಳು ಇಲ್ಲ, ಮನೆ ಬಳಿ ಬಂದಾಗ ಲಭ್ಯವಿರಲಿಲ್ಲ ಎಂಬ ಕಾರಣ ನೀಡಿ ಸುಮಾರು 22.7 ಲಕ್ಷ ಮಹಿಳಾ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಅದರಲ್ಲೂ ಅಧಿಕವಾಗಿ ದಲಿತರು, ಮುಸ್ಲಿಂ ಸಮುದಾಯದ ಜನರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸಬೇಕಾಗಿದ್ದ 20 ಲಕ್ಷಕ್ಕೂ ಅಧಿಕ ಯುವಕರು ಚುನಾವಣಾ ಆಯೋಗ ಕೇಳುವ ತಲೆಬುಡವಿಲ್ಲದ ದಾಖಲೆಗಳನ್ನು ನೀಡಲಾಗದೆ ನೋಂದಣಿಯೇ ಆಗಿಲ್ಲ. ವಿರೋಧದ ನಡುವೆಯೂ ಈ ಎಲ್ಲಾ ಗೊಂದಲದ ಪ್ರಕ್ರಿಯೆ ಮುಗಿದು, ಚುನಾವಣೆ ನಡೆಯಿತು ವಿಪಕ್ಷಗಳು ಬಹುತೇಕ ಮತಗಳನ್ನು ಕಳೆದುಕೊಂಡಿತು.
ಅಲ್ಪಸಂಖ್ಯಾತರ, ದಲಿತರ, ಮಹಿಳೆಯರ ಮತದಾನದ ಹಕ್ಕನ್ನು ಕಿತ್ತೆಸೆದು ಬಿಜೆಪಿಗೆ ಲಾಭ ಮಾಡಿಕೊಡುವ ಚುನಾವಣಾ ಆಯೋಗದ ಈ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ವಿರೋಧಗಳ ನಡುವೆಯೂ 12 ರಾಜ್ಯಗಳಲ್ಲಿ ಎಸ್ಐಆರ್ ಸಾಗುತ್ತಿದೆ. ಹತ್ತಾರು ಬಿಎಲ್ಒಗಳನ್ನು ಈ ಪ್ರಕ್ರಿಯೆ ಬಲಿತೆಗೆದುಕೊಂಡಿದೆ. ಇವೆಲ್ಲವುದರ ನಡುವೆ ತಮ್ಮ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸುವುದರ ವಿರುದ್ಧವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಫೆಬ್ರವರಿ 4ರಂದು ನಡೆದ ವಿಚಾರಣೆಗೆ ಖುದ್ದಾಗಿ ಹಾಜರಾಗಿ ತಮ್ಮ ಪರವಾಗಿ ತಾವೇ ವಾದ ಮಂಡಿಸಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ತನ್ನದೇ ಪ್ರಕರಣವನ್ನು ಸ್ವತಃ ವಾದಿಸಿದ ಭಾರತದ ಮೊದಲ ಹಾಲಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನು ಓದಿದ್ದೀರಾ? SIR | ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವ ಇಸಿಐ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ
“ಎಸ್ಐಆರ್ ಪ್ರಕ್ರಿಯೆಯು ಕೇವಲ ಮತದಾರರ ಹೆಸರನ್ನು ಕೈಬಿಡಲು ನಡೆಸಲಾಗುತ್ತಿರುವ ಸಂಚು. ಪಶ್ಚಿಮ ಬಂಗಾಳವನ್ನು ಮಾತ್ರ ಗುರಿಯಾಗಿಸಿಕೊಂಡು ಈ ಪರಿಷ್ಕರಣೆ ನಡೆಸಲಾಗುತ್ತಿದೆ ಮತ್ತು ಚುನಾವಣಾ ಆಯೋಗವು ‘ವಾಟ್ಸಾಪ್ ಆಯೋಗ’ದಂತೆ ವರ್ತಿಸುತ್ತಿದೆ. ಈ ಪ್ರಕ್ರಿಯೆಯ ಒತ್ತಡದಿಂದಾಗಿ ರಾಜ್ಯದಲ್ಲಿ ಸುಮಾರು 150 ಜನರು ಸಾವನ್ನಪ್ಪಿದ್ದಾರೆ” ಎಂದು ಮಮತಾ ಬ್ಯಾನರ್ಜಿ ಅವರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಮಮತಾರ ಈ ನಡೆಯನ್ನು ನೆಟ್ಟಿಗರು ಸೇರಿದಂತೆ ಹಲವು ರಾಜಕೀಯ ಧುರೀಣರು ಮಮತಾ ಬ್ಯಾನರ್ಜಿಯ ಈ ಧೈರ್ಯವನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಈ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಎಂಬ ಹಕ್ಕು ಕಸಿಯುವ ಪ್ರಕ್ರಿಯೆಗೆ ಒಳಗಾಗಲಿರುವ ಕರ್ನಾಟಕದಲ್ಲಿ ನಡೆಯುತ್ತಿರುವುದೇನು ಎಂದು ಕೊಂಚ ಗಮನ ಹರಿಸುವುದು ಮುಖ್ಯ.
ಸದ್ಯ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಪೂರ್ಣವಾದ ಬಳಿಕ 12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಫೆಬ್ರವರಿ 7ರಂದು ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಅದಾದ ಬಳಿಕ ಶೀಘ್ರವೇ ಅಂದರೆ ಬಹುತೇಕ ಈ ತಿಂಗಳಲ್ಲೇ ನಮ್ಮ ರಾಜ್ಯದಲ್ಲಿಯೂ ಈ ಪ್ರಕ್ರಿಯೆ ಆರಂಭವಾಗಲಿದೆ. ಈ ಪ್ರಕ್ರಿಯೆಯ ಅಪಾಯ ದೇಶದಾದ್ಯಂತ ಚರ್ಚೆಯಲ್ಲಿರುವಾಗ ನಮ್ಮ ರಾಜ್ಯ ಕಾಂಗ್ರೆಸ್ ಮಾತ್ರ ಅಪಾಯವನ್ನು ಬದಿಗಿಟ್ಟಂತಿದೆ. ಸಿಎಂ ಕೂಡಾ ಕೊಂಚ ಸಲೀಸಾಗಿರುವಂತಿದೆ. ಇನ್ನೂ ಈ ಪ್ರಕ್ರಿಯೆಯ ಅಪಾಯ ಅರಿತಂತಿಲ್ಲ. ಅಷ್ಟಕ್ಕೂ ಬ್ಯಾನರ್ಜಿ ಕೆಚ್ಚು ಸಿದ್ದರಾಮಯ್ಯನವರಿಗೆ ಪಾಠವಾಗಬಹುದೇ?
ಎಸ್ಐಆರ್ ಪ್ರಕ್ರಿಯೆ ಬಗ್ಗೆ ಆತಂಕರಹಿತರಾಗಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯನವರು, “ಎಸ್ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷವು ರಾಜಕೀಯ ದೃಷ್ಟಿಕೋನದಿಂದ ನೋಡುವುದಿಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ” ಎಂದು ಹೇಳಿಕೊಂಡಿದ್ದಾರೆ! ಹಾಗೆಯೇ, “ಈ ಪ್ರಕ್ರಿಯೆಯಲ್ಲಿ ಯಾವುದೇ ಒಬ್ಬ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬುದು ಸರ್ಕಾರದ ಏಕೈಕ ಕಾಳಜಿ. ಈ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯುತವಾಗಿ ನಡೆಸಿ” ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. “ಯಾವುದೇ ಮತದಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ” ಎಂದಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಎಚ್ಚರಿಕೆಯತ್ತ ಸಿಎಂ ಕೊಂಚ ಕಣ್ಣಾಯಿಸುವುದು, ಆಲಿಸುವುದು ಒಳಿತು ಅನಿಸುವುದಿಲ್ಲವೇ?
ಎಸ್ಐಆರ್ ಪ್ರಕ್ರಿಯೆ ಮತ್ತು ಈ ಮೂಲಕ ನಡೆಸುವ ಮತಗಳ್ಳತನದ ವಿರುದ್ಧವಾಗಿ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದವರು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ. ಎಸ್ಐಆರ್ ಪ್ರಕ್ರಿಯೆಯು ಬಡವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಒಂದು ‘ಸಾಂಸ್ಥಿಕ ಮತಗಳ್ಳತನ’ (Institutionalised vote theft). ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿ ಜತೆ ಸೇರಿ ಈ ‘ಮತಗಳ್ಳತನ’ಕ್ಕೆ ಸಹಕರಿಸುತ್ತಿದೆ. ಈ ಪ್ರಕ್ರಿಯೆಯ ವಿರುದ್ಧ ರಾಜಕೀಯವಾಗಿ, ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಕಾಂಗ್ರೆಸ್ ಘಟಕವು ಎಸ್ಐಆರ್ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಆದರೆ ನಮ್ಮ ರಾಜ್ಯದಲ್ಲಿ ಆಡಾಳಿತರೂಢ ಕಾಂಗ್ರೆಸ್ ನಿಲುವೇ ಬೇರೆ ಇರುವಂತಿದೆ. ಸಿಎಂ ಸಿದ್ದರಾಮಯ್ಯ ಅವರು ‘ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ’ ಎಂದು ಹೇಳುವುದಾದರೆ, ತಮ್ಮದೇ ಪಕ್ಷದ ರಾಹುಲ್ ಗಾಂಧಿ ಅವರ ಹೋರಾಟವನ್ನು ಕಡೆಗಣಿಸಿದಂತೆ ಅಲ್ಲವೇ? ಹಲವು ರಾಜ್ಯಗಳಲ್ಲಿ ಎಸ್ಐಆರ್ ವಿರುದ್ಧ ಹೋರಾಡುತ್ತಿರುವ ನಾಯಕರುಗಳು ಎಲ್ಲರೂ ರಾಜಕೀಯ ಮಾಡುವುದು ಎಂದು ಹೇಳಿದಂತಲ್ಲವೇ? ಅಷ್ಟಕ್ಕೂ ಕಾಲ ಮಿಂಚಿ ಹೋದ ಮೇಲೆ ಚಿಂತಿಸುತ್ತಾ ಕೂರುವುದಕ್ಕಿಂತ ಬ್ಯಾನರ್ಜಿಯಂತೆ ಹಠದಿಂದ ಎಸ್ಐಆರ್ ವಿರುದ್ಧ ಮುನ್ನುಗುವುದು ರಾಜ್ಯದ ಹಿತದೃಷ್ಟಿಯಿಂದ ಒಳಿತಲ್ಲವೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




