ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, "ವಿಮಾನ ಟಿಕೆಟ್ ದರಗಳನ್ನು ಮಿತಿಗೊಳಿಸಲು ಸರ್ಕಾರಕ್ಕೆ ವಿಶೇಷ ಅಧಿಕಾರವಿದೆ" ಎಂದು ಹೇಳಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ "ವಿಮಾನಯಾನ ದರಗಳಿಗೆ ವರ್ಷವಿಡೀ ಗರಿಷ್ಠ ಮಿತಿ ಹೇರಿಕೆ ಸಾಧ್ಯವಿಲ್ಲ" ಎಂದು ಹೇಳಿ ತಮ್ಮ ಕರ್ತವ್ಯದಿಂದ ನುಣುಚಿಕೊಂಡಿದ್ದಾರೆ.
ಇತ್ತೀಚೆಗೆ ದೇಶದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನಯಾನಗಳ ರದ್ಧತಿ ಮತ್ತು ವಿಳಂಬವು ಲಕ್ಷಾಂತರ ಪ್ರಯಾಣಿಕರ ಮೇಲೆ ಪ್ರಭಾವ ಬೀರಿದೆ. ಇಂದಿಗೂ ಈ ಬಿಕ್ಕಟ್ಟು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬಂದಿಲ್ಲ. ಇಂಡಿಗೋ ಅವ್ಯವಸ್ಥೆಯು ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಗಳ ಗಮನವನ್ನೂ ಸೆಳೆದಿದೆ. ಒಂದೆಡೆ ಕೆಲ ಪ್ರಯಾಣಿಕರು ತಾವು ತಲುಪಬೇಕಾದ ಸ್ಥಳಕ್ಕೆ ತಲುಪಲು ಪರದಾಡಿದರೆ, ಇನ್ನು ಕೆಲ ಪ್ರಯಾಣಿಕರು ತಮ್ಮ ಲಗೇಜ್ ಬ್ಯಾಗ್ ಅನ್ನು ಹಿಂಪಡೆಯಲು ಒದ್ದಾಡಿದ್ದಾರೆ. ಕೆಲ ಪ್ರಯಾಣಿಕರು ಟಿಕೆಟ್ ಮೊತ್ತ ಮರುಪಾವತಿಯಾಗದ ವಿಚಾರದಲ್ಲಿ ಆಕ್ರೋಶಿತರಾಗಿದ್ದಾರೆ.
ಇವೆಲ್ಲವುದರ ನಡುವೆ ಉಳಿದ ವಿಮಾನಯಾನ ಸಂಸ್ಥೆಗಳು ಬೇಡಿಕೆ ಹೆಚ್ಚಾದಂತೆ ಟಿಕೆಟ್ ದರವನ್ನೂ ಭಾರೀ ಪ್ರಮಾಣದಲ್ಲಿ ಏರಿಸಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾಗಿದ್ದು ಯಾರು? ಸರ್ಕಾರವಲ್ಲವೇ? ಆದರೆ ಮೋದಿ ಸರ್ಕಾರ ಮಾಡುತ್ತಿರುವುದೇನು ಎಂಬ ಪ್ರಶ್ನೆ ಹುಟ್ಟಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತಾವೆಂದಿಗೂ ಕಾರ್ಪೋರೇಟ್ ಸಂಸ್ಥೆಗಳ ಪರವಾಗಿಯೇ ಇರುತ್ತೇವೆ, ಜನಸಾಮಾನ್ಯರ ಪರವಾಗಿ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಂತಿದೆ. ಜತೆಗೆ ‘ಹವಾಯಿ ಚಪ್ಪಲಿ ಧರಿಸಿದವರು ಹವಾಯಿ ಜಹಜು ಹತ್ತಬೇಕು’ ಮೋದಿ ಮಾತು ಮಾತಾಗಿಯೇ ಉಳಿಯುವಂತಿದೆ.
ಇದನ್ನು ಓದಿದ್ದೀರಾ? ಇಂಡಿಗೋ ಬಿಕ್ಕಟ್ಟು: ಸಂಕಷ್ಟಕ್ಕೆ ಒಳಗಾದ ಪ್ರಯಾಣಿಕ ಹೇಳುವುದೇನು?
ಇಂಡಿಗೋ ವಿಮಾನಯಾನ ಸಂಸ್ಥೆಯು ದೇಶದಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಬಹುತೇಕ ಸ್ವಾಧೀನವನ್ನು ಹೊಂದಿದ್ದ ಸಂಸ್ಥೆ. ಶೇ.65ಕ್ಕೂ ಅಧಿಕ ವಿಮಾನಯಾನ ಮಾರ್ಗವನ್ನು ಇಂಡಿಗೋ ಹೊಂದಿತ್ತು. ಇದರಿಂದಾಗಿ ಒಂದು ಸಂಸ್ಥೆಯ ವಿಮಾನ ಸೇವೆಯ ವ್ಯತ್ಯಯವು ಇಡೀ ದೇಶದ ಮೇಲೆ ಪ್ರಭಾವ ಬೀರಿತು. ಜತೆಜತೆಗೆ ಪರ್ಯಾಯ ವಿಮಾನಗಳಿಗೆ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಾಯಿತು. ಈ ಬೇಡಿಕೆಗೆ ತಕ್ಕುದಾಗಿ ವಿಮಾನಯಾನ ದರಗಳು ಗಗನಕ್ಕೇರಿದವು. ಕೆಲವು ಪ್ರಮುಖ ಮಾರ್ಗಗಳಲ್ಲಿ ದರಗಳು ಸಾಮಾನ್ಯಕ್ಕಿಂತ ಹತ್ತಾರು ಪಟ್ಟು ಹೆಚ್ಚಾಗಿದ್ದವು.
ದೆಹಲಿ-ಬೆಂಗಳೂರು, ದೆಹಲಿ-ಮುಂಬೈ, ಮತ್ತು ಬೆಂಗಳೂರು-ಚೆನ್ನೈ ಮುಂತಾದ ಪ್ರಮುಖ ಮಾರ್ಗಗಳಲ್ಲಿ ಒಂದು ಕಡೆಯ ಟಿಕೆಟ್ಗಳ ಬೆಲೆಗಳು ಸಾಮಾನ್ಯವಾಗಿ ಐದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿ ಆಸುಪಾಸಿನಲ್ಲಿರುತ್ತದೆ. ಆದರೆ ಇಂಡಿಗೋ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಮಾರ್ಗದ ಟಿಕೆಟ್ ದರವು 70,000 ರೂಪಾಯಿಯಿಂದ 1 ಲಕ್ಷ ರೂ.ವರೆಗೂ ತಲುಪಿದ್ದವು. ಪರಿಸ್ಥಿತಿ ಎಷ್ಟರಪಟ್ಟಿಗೆ ಹದಗೆಟ್ಟಿತ್ತೆಂದರೆ, ದೆಹಲಿ ಅಥವಾ ಬೆಂಗಳೂರಿನಿಂದ ಲಂಡನ್, ದುಬೈ ಅಥವಾ ಬ್ಯಾಂಕಾಕ್ನಂತಹ ಅಂತಾರಾಷ್ಟ್ರೀಯ ಸ್ಥಳಗಳಿಗೆ ಪ್ರಯಾಣಿಸುವುದು, ದೇಶೀಯ ಮಾರ್ಗಗಳಲ್ಲಿ ಪ್ರಯಾಣಿಸುವುದಕ್ಕಿಂತ ಅಗ್ಗವಾಗಿತ್ತು!
ಇವೆಲ್ಲವುದರ ನಡುವೆ ಜನರ ಆಕ್ರೋಶಕ್ಕೆ ಮಣಿದ ಕೇಂದ್ರ ಸಚಿವಾಲಯವು ದೇಶೀಯ ವಿಮಾನಗಳಿಗೆ ತಾತ್ಕಾಲಿಕ ಗರಿಷ್ಠ ದರ ಮಿತಿಯನ್ನು ವಿಧಿಸಿತು. ವಿಮಾನಯಾನದ ದೂರವನ್ನು ಆಧರಿಸಿ, ಟಿಕೆಟ್ ಬೆಲೆಗಳಿಗೆ ಈ ಕೆಳಗಿನಂತೆ ನಾಲ್ಕು ಶ್ರೇಣಿಯ ಮಿತಿಗಳನ್ನು ನಿಗದಿಪಡಿಸಲಾಯಿತು.
500 ಕಿ.ಮೀ. ವರೆಗೆ: ಗರಿಷ್ಠ ₹7,500 ರೂ.
500-1000 ಕಿ.ಮೀ. ವರೆಗೆ: ಗರಿಷ್ಠ ₹12,000 ರೂ.
1000-1500 ಕಿ.ಮೀ. ವರೆಗೆ: ಗರಿಷ್ಠ ₹15,000 ರೂ.
1500 ಕಿ.ಮೀ. ಗಿಂತ ಹೆಚ್ಚು: ಗರಿಷ್ಠ ₹18,000 ರೂ.
ಆದರೆ ಈ ಬೆಲೆ ಏರಿಕೆಗೆ ತಾತ್ಕಾಲಿಕವಲ್ಲ ಶಾಶ್ವತ ಪರಿಹಾರಬೇಕು ಎಂಬ ಆಗ್ರಹವೂ ಕೇಳಿ ಬಂದಿದೆ. ಲೋಕಸಭೆಯಲ್ಲಿ ಶುಕ್ರವಾರ ‘ದೇಶದಲ್ಲಿ ವಿಮಾನ ದರವನ್ನು ನಿಯಂತ್ರಿಸಲು ಸೂಕ್ತ ಕ್ರಮಗಳು’ ಎಂಬ ನಿರ್ಣಯದ ಮೇಲೆ ಚರ್ಚೆಯೂ ನಡೆದಿದೆ. ಈ ಚರ್ಚೆಯಲ್ಲಿ ಪ್ರತಿಕ್ರಿಯಿಸಿದ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, “ವಿಮಾನ ಟಿಕೆಟ್ ದರಗಳನ್ನು ಮಿತಿಗೊಳಿಸಲು ಸರ್ಕಾರಕ್ಕೆ ವಿಶೇಷ ಅಧಿಕಾರವಿದೆ” ಎಂದು ಹೇಳಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ “ವಿಮಾನಯಾನ ದರಗಳಿಗೆ ವರ್ಷವಿಡೀ ಗರಿಷ್ಠ ಮಿತಿ ಹೇರಿಕೆ ಸಾಧ್ಯವಿಲ್ಲ” ಎಂದೂ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರನ್ವೇಯಲ್ಲೇ ಊಟ ಮಾಡಿದ ವಿಮಾನ ಪ್ರಯಾಣಿಕರು: ವಿಡಿಯೋ ವೈರಲ್; ‘ಇಂಡಿಗೋ’ ಸಂಸ್ಥೆಗೆ ನೋಟಿಸ್
“ವಿಮಾನಯಾನ ದರಗಳು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ನಿರ್ಧಾರವಾಗುತ್ತವೆ. ಹಬ್ಬದ ಸೀಸನ್ಗಳಲ್ಲಿ ಅಥವಾ ನಿರ್ದಿಷ್ಟ ಮಾರ್ಗಗಳಲ್ಲಿ ಬೇಡಿಕೆ ಹೆಚ್ಚಾದಾಗ ದರಗಳು ಏರುವುದು ಸಹಜ. ವಿಮಾನಯಾನ ಕ್ಷೇತ್ರ ಬೆಳೆಯಬೇಕಾದರೆ, ಅದನ್ನು ಅನಿಯಂತ್ರಿತವಾಗಿ (deregulated) ಇಡುವುದು ಮುಖ್ಯ. ಆದರೆ ಸರ್ಕಾರವು ಮಧ್ಯಪ್ರವೇಶಿಸುವ ಮತ್ತು ದರ ಮಿತಿಗಳನ್ನು ಹೇರುವ ವಿಶೇಷ ಅಧಿಕಾರವನ್ನು ಹೊಂದಿದೆ” ಹೇಳಿ ತಮ್ಮ ಕರ್ತವ್ಯದಿಂದ ನುಣುಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ನಾವು ‘ಹವಾಯಿ ಚಪ್ಪಲಿ ಧರಿಸಿದವರು ಹವಾಯಿ ಜಹಜು(ವಿಮಾನ) ಹತ್ತಲು ಸಾಧ್ಯವಾಗಬೇಕು’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಹೇಳಿಕೆ ನೆನಪಾಗುತ್ತದೆ. 2017ರ ಏಪ್ರಿಲ್ 27ರಂದು ಮೊದಲ ‘ಉಡಾನ್’ ವಿಮಾನವು ಶಿಮ್ಲಾ ಮತ್ತು ದೆಹಲಿ ನಡುವೆ ಹಾರಾಟ ನಡೆಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ನೀಡಿದ ಹೇಳಿಕೆಯಿದು. ಪ್ರಧಾನಿ ಮೋದಿ ಈ ಹೇಳಿಕೆ ನೀಡಿ ಸುಮಾರು 8 ವರ್ಷಗಳು ಕಳೆದಿವೆ. ಆದರೆ ಇಂದಿಗೂ ವಾಸ್ತವವಾಗಿಲ್ಲ. ಮೋದಿ ಪ್ರಧಾನಿಯಾಗಿರುವಾಗ ತಮ್ಮ ಕನಸನ್ನು ನನಸಾಗಿಸಬಹುದಲ್ಲವೇ? ಜನರಿಗೆ ಕೈಗೆಟಕುವ ದರದಲ್ಲಿ ವಿಮಾನಯಾನ ಟಿಕೆಟ್ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾದರೆ ಅದಕ್ಕೆ ತಕ್ಕುದಾದ ಕ್ರಮವನ್ನು ಕೈಗೊಳ್ಳಬೇಕಲ್ಲವೇ? ಕೇಂದ್ರ ಸರ್ಕಾರವು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಕಡಿವಾಣ ಹಾಕಲು ಹಿಂದೆಮುಂದೆ ನೋಡುವುದಾದರೆ ಹವಾಯಿ ಚಪ್ಪಲಿ ಧರಿಸುವ ವಿಮಾನವನ್ನು ಹತ್ತುವುದು ಯಾವಾಗ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




