ಕೇಂದ್ರ ಸರ್ಕಾರವು ಹೊಸ ಪರಮಾಣು ಶಕ್ತಿ ಮಸೂದೆ (ಶಾಂತಿ ಮಸೂದೆ) ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಅಂಗೀಕರಿಸಲಾಗಿದೆ. ವಿಪಕ್ಷಗಳು ಈ ಮಸೂದೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ಯಪಡಿಸಿದೆ. ಕಾಂಗ್ರೆಸ್ ಈ ಮಸೂದೆಯನ್ನು, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗಾಗಿ ಮಾತ್ರವಲ್ಲ, ಅದಾನಿಗಾಗಿಯೂ ಸಂಸತ್ತಿನಲ್ಲಿ ಜಾರಿ ಮಾಡಲಾಗಿದೆ” ಎಂದು ಹೇಳಿದೆ. ಇನ್ನು ಸಿಪಿಐಎಂ ಈ ಮಸೂದೆಯನ್ನು ಖಂಡಿಸಿದ್ದು ಹೊಣೆಗಾರಿಕೆ ನಿಯಮ ಸಡಿಲಿಕೆಯನ್ನು ಟೀಕಿಸಿದೆ.
‘ಭಾರತ ಪರಿವರ್ತನೆಗಾಗಿ ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ’ ಮಸೂದೆ (ಶಾಂತಿ ಮಸೂದೆ) ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದೆ. ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ, ಇದುವರೆಗೆ ಕೇವಲ ಸರ್ಕಾರಿ ಸ್ವಾಮ್ಯದಲ್ಲಿದ್ದ ಪರಮಾಣು ಶಕ್ತಿ ವಲಯವನ್ನು ಇದೀಗ ಖಾಸಗಿ ಕಂಪನಿಗಳು ಮತ್ತು ಜಂಟಿ ಉದ್ಯಮಗಳಿಗೆ ಮುಕ್ತಗೊಳಿಸಲಾಗಿದೆ. ಅಂದರೆ ಈಗ ಖಾಸಗಿ ಕಂಪನಿಗಳು ಅಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು, ಮಾಲೀಕತ್ವ ಹೊಂದಲು ಮತ್ತು ನಿರ್ವಹಿಸಲು ಅವಕಾಶವಿದೆ!
ಇದನ್ನು ಓದಿದ್ದೀರಾ? ‘ದೇಶದ್ರೋಹಿ’ಯೊಬ್ಬನ ಅಪೂರ್ಣ ಆಂದೋಲನ
ಈ ಮಸೂದೆಯು 1962ರ ಪರಮಾಣು ಇಂಧನ ಕಾಯ್ದೆ ಮತ್ತು 2010ರ ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆಯನ್ನು (CLNDA) ರದ್ದುಗೊಳಿಸಿ, ಹೊಸ ಏಕೀಕೃತ ಕಾನೂನು ಚೌಕಟ್ಟನ್ನು ಸ್ಥಾಪಿಸುತ್ತದೆ. 2047ರ ವೇಳೆಗೆ ಭಾರತದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಪ್ರಸ್ತುತ 8.8 ಗಿಗಾ ವ್ಯಾಟ್ನಿಂದ ನಿಂದ 100 ಗಿಗಾ ವ್ಯಾಟ್ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
ಇನ್ನು ಈ ಮಸೂದೆಯು ಅಣು ಅಪಘಾತ ಸಂಭವಿಸಿದರೆ ನಿರ್ವಾಹಕರ ಹೊಣೆಗಾರಿಕೆ ಮಿತಿಯನ್ನೂ ಹೊಂದಿದೆ. ಅಣು ಅಪಘಾತ ಸಂಭವಿಸಿದಾಗ ಪ್ರಾಥಮಿಕ ಹೊಣೆಗಾರಿಕೆಯು ಆ ಅಣು ಸ್ಥಾವರವನ್ನು ನಡೆಸುವ ನಿರ್ವಾಹಕರ ಮೇಲೆಯೇ ಇರುತ್ತದೆ. ಆದರೆ ಪರಿಹಾರ ಮೊತ್ತಕ್ಕೆ ಮಿತಿ ನಿಗದಿಪಡಿಸಲಾಗಿದೆ.
3,600 ಮೆಗಾವ್ಯಾಟ್ಗಿಂತ ಹೆಚ್ಚಿನ ಸಾಮರ್ಥ್ಯದ ಸ್ಥಾವರಗಳಿಗೆ ₹3,000 ಕೋಟಿ, 1,500 – 3,600 ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರಗಳಿಗೆ ₹1,500 ಕೋಟಿ, ಒಟ್ಟಾರೆ ಗರಿಷ್ಠ ಹೊಣೆಗಾರಿಕೆಯನ್ನು ಸುಮಾರು ₹3,900 – ₹4,000 ಕೋಟಿ ಎಂದು ನಿಗದಿಪಡಿಸಲಾಗಿದೆ. ನಿರ್ವಾಹಕರ ಹೊಣೆಗಾರಿಕೆಯ ಮಿತಿಯು ಮೀರಿದ ಸಂದರ್ಭದಲ್ಲಿ, ಉಳಿದ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರವು ಭರಿಸುತ್ತದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸರ್ಕಾರವು ಸಂಪೂರ್ಣ ಹೊಣೆಗಾರಿಕೆಯನ್ನು ತಾನೇ ವಹಿಸಿಕೊಳ್ಳುವ ಅಧಿಕಾರವನ್ನೂ ಹೊಂದಿದೆ ಎಂದು ಮಸೂದೆ ಹೇಳುತ್ತದೆ! ಅಂದರೆ ಕಾರ್ಪೋರೇಟ್ ದೊರೆಗಳನ್ನು ಹೊಣೆಗಾರರನ್ನಾಗಿಸದೆ ಸರ್ಕಾರವೇ ಹೊಣೆ ಹೊತ್ತು ಪರಿಹಾರ ನೀಡುವುದು, ಪರೋಕ್ಷವಾಗಿ ಜನರ ಮೇಲೆಯೇ ಹೊರೆ ಹಾಕುವುದು ಎಂದರ್ಥ.
ಅಷ್ಟು ಮಾತ್ರವಲ್ಲದೆ ಈ ಮಸೂದೆ ಪ್ರಕಾರ ದೋಷಯುಕ್ತ ಉಪಕರಣಗಳಿಂದ ಅಪಘಾತ ಸಂಭವಿಸಿದರೂ ಪೂರೈಕೆದಾರರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ. ನಿರ್ವಾಹಕರು ಪೂರೈಕೆದಾರರೊಂದಿಗೆ ಮೊದಲೇ ಲಿಖಿತ ಒಪ್ಪಂದ ಮಾಡಿಕೊಂಡಿದ್ದರೆ ಮಾತ್ರ ಪೂರೈಕೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಇವುಗಳನ್ನು ವಿಪಕ್ಷಗಳು ಮತ್ತು ತಜ್ಞರುಗಳು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಮನರೇಗಾ ಕಾಯ್ದೆಯನ್ನು ಸಮಾಧಿ ಮಾಡಿದ ಕೇಂದ್ರ ಸರ್ಕಾರ: ಸಿಪಿಐಎಂ ಪಾಲಿಟ್ ಬ್ಯುರೋ ಸದಸ್ಯೆ ವಾಸುಕಿ
ಇದುವರೆಗೆ ಕೇವಲ ಸರ್ಕಾರದ ಅಧೀನದಲ್ಲಿದ್ದ ಆಯಕಟ್ಟಿನ ಪರಮಾಣು ವಲಯವನ್ನು ಈಗ ಖಾಸಗಿ ಮತ್ತು ವಿದೇಶಿ ಕಂಪನಿಗಳಿಗೆ ಮುಕ್ತಗೊಳಿಸಿರುವುದು ರಾಷ್ಟ್ರೀಯ ಭದ್ರತೆಗೆ ಅಪಾಯ ತರಬಹುದು ಎಂದು ವಿಪಕ್ಷಗಳು ಹೇಳಿವೆ. ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಈ ಮಸೂದೆಯನ್ನು “ಲಾಭಕ್ಕಾಗಿ ತಂದಿರುವ ಅಪಾಯಕಾರಿ ಮಸೂದೆ” ಎಂದು ಕರೆದಿದ್ದಾರೆ.
ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅದಾನಿ ಗ್ರೂಪ್ ಪರಮಾಣು ಇಂಧನ ಕ್ಷೇತ್ರಕ್ಕೂ ಪ್ರವೇಶಿಸಲಿದೆ ಎಂಬ ವರದಿಯನ್ನು ಹಂಚಿಕೊಂಡಿದ್ದು, “ಶಾಂತಿ ಮಸೂದೆಯನ್ನು ಸಂಸತ್ತಿನಲ್ಲಿ ಟ್ರಂಪ್ಗಾಗಿ (ದಿ ರಿಯಾಕ್ಟರ್ ಯೂಸ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ) ಮಾತ್ರವಲ್ಲದೆ ಅದಾನಿಗಾಗಿಯೂ (ನ್ಯೂಕ್ಲಿಯರ್ ಇಂಡಿಯಾ ಆಕ್ಸಿಲರೇಟೆಡ್ ಡ್ಯಾಮೇಜಿಂಗ್ ಅಧಿನಿಯಮ್- ಅದಾನಿ) ಬುಲ್ಡೋಜ್(ಅಂಗೀಕಾರ) ಮಾಡಲಾಗಿದೆ” ಎಂದು ದೂರಿದ್ದಾರೆ.
ಇನ್ನು ಬೆಂಗಳೂರು ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆದ ಸಿಪಿಐಎಂ ರಾಜ್ಯ ಸಮಿತಿಯು ‘ಪರ್ಯಾಯ ರಾಜಕಾರಣಕ್ಕಾಗಿ ಜನದನಿ ರ್ಯಾಲಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ, ಕಾರ್ಮಿಕ ಮುಖಂಡ ಮೀನಾಕ್ಷಿ ಸುಂದರಂ, “ಕೇಂದ್ರ ಸರ್ಕಾರ ಶಾಂತಿ ಕಾಯ್ದೆಯನ್ನು ಅಂಗೀಕರಿಸಿದೆ. ಶಾಂತಿ ಕಾಯ್ದೆ ಪರಮಾಣು ಶಕ್ತಿ ಕ್ಷೇತ್ರದ ಖಾಸಗೀಕರಣವನ್ನು ಬೆಂಬಲಿಸುತ್ತದೆ. ಈ ಮೂಲಕ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರವನ್ನು ವಿಸ್ತರಿಸುವ ಉದ್ದೇಶವಿದೆ. ಈ ಕ್ಷೇತ್ರದ ಸ್ವಭಾವವೇ ಅತಿ ಸಂವೇದನಾಶೀಲವಾದುದರಿಂದ ಹಲವು ಗಂಭೀರ ಅಪಾಯಗಳು ಎದುರಾಗಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಪರಮಾಣು ಸ್ಥಾವರಗಳ ಅಪಘಾತಗಳ ಹೊಣೆಗಾರಿಕೆ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕಿದೆ. ಪರಮಾಣು ಅಪಘಾತಗಳ ಪರಿಣಾಮಗಳು ದೀರ್ಘಕಾಲಿಕ ಮತ್ತು ಭೀಕರ ಅಪಘಾತವಾದರೆ ಯಾರು ಹೊಣೆ? ಉದ್ಯೋಗದ ಖಾತರಿಯೂ ಇರುವುದಿಲ್ಲ, ಖಾಸಗೀಕರಣದಿಂದಾಗಿ ಕಂಪೆನಿಗಳು ಎಲ್ಲ ಹೊಣೆಗಳಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಅಂತಿಮವಾಗಿ ಸರ್ಕಾರ ಮತ್ತು ಜನರ ಮೇಲೇ ಹೊರೆ ಬೀಳುವ ಅಪಾಯವಿದೆ” ಎಂದು ಹೇಳಿದ್ದಾರೆ.
ಇನ್ನು, “ಅಪಘಾತದ ಗರಿಷ್ಠ ಹೊಣೆಗಾರಿಕೆ ಮೊತ್ತವನ್ನು ₹1,500 ಕೋಟಿಗೆ ಸೀಮಿತಗೊಳಿಸಲಾಗಿದೆ. ಇದು ಭೋಪಾಲ್ ಗ್ಯಾಸ್ ದುರಂತದಂತಹ ಸನ್ನಿವೇಶಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ” ಎಂದು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಟೀಕಿಸಿದ್ದಾರೆ. ಹಾಗೆಯೇ ಮಸೂದೆಯ ಸೆಕ್ಷನ್ 39ರ ಅಡಿಯಲ್ಲಿ ಪರಮಾಣು ಸಂಬಂಧಿತ ಅನೇಕ ಮಾಹಿತಿಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಇದು ಆರ್ಟಿಐ (RTI) ವ್ಯಾಪ್ತಿಯಿಂದ ಹೊರಗಿರುತ್ತದೆ. ಇದು ಪಾರದರ್ಶಕತೆಯನ್ನು ಕುಂಠಿತಗೊಳಿಸುತ್ತದೆ ಎಂದು ಟೀಕಿಸಲಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




