ಬಿಜೆಪಿ ಸೂಚಿಸಿದರೆ 2029ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಆದರೆ ಉತ್ತರ ಪ್ರದೇಶದ ಝಾನ್ಸಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ ಎಂದು ಬಿಜೆಪಿಯ ಹಿರಿಯ ನಾಯಕಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಉಮಾ ಭಾರತಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇಂದ್ರ ಮತ್ತು ಸಂಸದೀಯ ನಾಯಕತ್ವವನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ | ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ ಮಾಜಿ ಸಿಎಂ ಉಮಾ ಭಾರತಿ!
“ಪಕ್ಷ(ಬಿಜೆಪಿ) ಹೇಳಿದರೆ ನಾನು ಖಂಡಿತವಾಗಿಯೂ 2029ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಆದರೆ ಝಾನ್ಸಿ ಲೋಕಸಭೆ ಸ್ಥಾನದಿಂದ ಮಾತ್ರ ಸ್ಪರ್ಧಿಸುತ್ತೇನೆ ಎಂದು ಲಲಿತಪುರದ ಮಾಧ್ಯಮ ಸ್ನೇಹಿತರಿಗೆ ಹೇಳಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮೊದಲು, ಶನಿವಾರ ಲಲಿತಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಉಮಾ ಭಾರತಿ ಅವರು, ಝಾನ್ಸಿಯಲ್ಲಿರುವ ಬುಂದೇಲ್ಖಂಡ್ ತಮ್ಮ ‘ಭಾವನಾತ್ಮಕ ಮನೆ’ ಎಂದು ಹೇಳಿಕೊಂಡಿದ್ದಾರೆ. “ನಾನು ಅಲ್ಲಿನ ಜನರೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿದ್ದೇನೆ. ಪಕ್ಷ ಹೇಳಿದರೆ ನಾನು ಖಂಡಿತವಾಗಿಯೂ ಸ್ಪರ್ಧಿಸುತ್ತೇನೆ” ಎಂದಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಝಾನ್ಸಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಉಮಾ ಭಾರತಿ, ಅದಾದ ಬಳಿಕ ಚುನಾವಣೆ ಟಿಕೆಟ್ ಉಮಾ ಪಾಲಾಗಿಲ್ಲ. ಕಳೆದ(2024) ಲೋಕಸಭೆ ಚುನಾವಣೆಗೆ ಮಧ್ಯಪ್ರದೇಶ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಹೆಸರಿರಲಿಲ್ಲ.
मैंने ललितपुर के आत्मीय मीडिया कर्मियों से कहा है कि पार्टी यदि कहेगी तो 2029 का चुनाव जरूर लडूंगी लेकिन मैं सिर्फ झांसी लोकसभा सीट से ही चुनाव लडूंगी। @BJP4India @BJP4MP
— Uma Bharti (@umasribharti) October 18, 2025
“ಉಮಾ ಭಾರತಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಬದಲಾಗಿ ಗಂಗಾ ನದಿಯ ಪುನರುಜ್ಜೀವನಕ್ಕಾಗಿ ಕೆಲಸ ಮಾಡಲಿದ್ದಾರೆ. ಆದರೆ ರಾಜಕೀಯದಿಂದ ಅವರು ನಿವೃತ್ತಿ ಪಡೆಯುವುದಿಲ್ಲ” ಎಂದು ಬಿಜೆಪಿ ನಾಯಕರುಗಳು ಹೇಳಿಕೊಂಡಿದ್ದರು.
ಈ ಎಲ್ಲಾ ಬೆಳವಣಿಗೆ ಬಳಿಕ ಈ ವರ್ಷದ ಆಗಸ್ಟ್ನಲ್ಲಿ ತಾನು ರಾಜಕೀಯದಿಂದ ದೂರ ಉಳಿದಿಲ್ಲ, ಸೂಕ್ತ ಸಮಯದಲ್ಲಿ ಚುನಾವಣಾ ಕ್ಷೇತ್ರಕ್ಕೆ ಮರಳುವುದಾಗಿ ಉಮಾ ಭಾರತಿ ಹೇಳಿದ್ದಾರೆ.
ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಝಾನ್ಸಿ ಸ್ಥಾನವನ್ನು ಗೆದ್ದಿದೆ. ಈ ಕ್ಷೇತ್ರವನ್ನು ಪ್ರಸ್ತುತ ಬಿಜೆಪಿಯ ಅನುರಾಗ್ ಶರ್ಮಾ ಪ್ರತಿನಿಧಿಸುತ್ತಿದ್ದಾರೆ.





