ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿದ್ದು ಈ ನಡುವೆ ಚುನಾವಣಾ ಆಯುಕ್ತ ಸ್ಥಾನಕ್ಕೆ ಅರುಣ್ ಗೋಯಲ್ ರಾಜೀನಾಮೆ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಗೋಯಲ್ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಇದ್ದ ಕಾರಣಕ್ಕೆ ಅಥವಾ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಜೊತೆ ಭಿನ್ನಾಭಿಪ್ರಾಯ ಇರುವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆಯೇ ಅಥವಾ ಬೇರೆಯೇ ಕಾರಣ ಇದೆಯೇ? ಗೋಯಲ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಎಂದು ಪ್ರಶ್ನಿಸಲಾಗುತ್ತಿದೆ.
ಇನ್ನು ಹೊಸ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಮಾರ್ಚ್ 14 ಅಥವಾ 15ರಂದು ಸಭೆ ನಡೆಯುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ವಿಪಕ್ಷದಿಂದ ಅಧೀರ್ ರಂಜನ್ ಚೌಧರಿ ಅವರನ್ನು ಮಾರ್ಚ್ 15ರಂದು ಸಭೆಗೆ ಆಹ್ವಾನಿಸಲಾಗಿದೆ. ಆದರೆ ಅಧೀರ್ ಕಚೇರಿಯಲ್ಲಿ ಮಾರ್ಚ್ 14ರಂದು ಅಧೀರ್ ಲಭ್ಯವೇ ಎಂದು ಸರ್ಕಾರ ಕೇಳಿದೆ. ಒಟ್ಟಿನಲ್ಲಿ ಸಭೆಯ ಬಗ್ಗೆ ಗೊಂದಲವಿದೆ ಎಂದು ವರದಿ ಹೇಳುತ್ತದೆ.
ಇನ್ನು ಚುನಾವಣಾ ಆಯುಕ್ತರ ರಾಜೀನಾಮೆಯು ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೆ ಯಾವುದೇ ಪ್ರಭಾವ ಬೀರಿಲ್ಲ ಎಂಬ ಮಾಹಿತಿಯಿದ್ದು ಇನ್ನು ಕೆಲವೇ ದಿನಗಳಲ್ಲಿ ರಾಜೀವ್ ಕುಮಾರ್ ಚುನಾವಣಾ ದಿನಾಂಕ ಘೋಷಿಸುವ ನಿರೀಕ್ಷೆಯಿದೆ. ಇವೆಲ್ಲವುದರ ನಡುವೆ ಗೋಯಲ್ ರಾಜೀನಾಮೆ ಚರ್ಚೆಗೆ ಗ್ರಾಸವಾಗಿದೆ.
“ಪಶ್ಚಿಮ ಬಂಗಾಳ ಲೋಕಸಭೆ ಚುನಾವಣೆ ಮತ್ತು ಪಡೆಗಳ ನಿಯೋಜನೆಗೆ ಸಂಬಂಧಿಸಿದಂತೆ ದೆಹಲಿ ನಾಯಕರು ಮತ್ತು ಅವರ ಉನ್ನತ ಮುಖ್ಯಸ್ಥರ ಒತ್ತಡಕ್ಕೆ ಮಣಿಯದ ಅರುಣ್ ಗೋಯಲ್ರನ್ನು ನಾವು ವಂದಿಸುತ್ತೇನೆ. ಚುನಾವಣೆಯ ಹೆಸರಲ್ಲಿ ಅವರು (ಬಿಜೆಪಿ ನಾಯಕರು) ಏನು ಮಾಡಲು ಬಯಸುತ್ತಾರೆ ಎಂಬುವುದು ಇಲ್ಲಿ ಸಾಬೀತಾಗಿದೆ. ಅವರು ಮತಗಳನ್ನು ಲೂಟಿ ಮಾಡಲು ಬಯಸುತ್ತಾರೆ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಇನ್ನು ಕಾಂಗ್ರೆಸ್ ಗೋಯಲ್ ರಾಜೀನಾಮೆಯಿಂದ ಮೂರು ಪ್ರಶ್ನೆಗಳು ಉದ್ಭವಿಸಿದೆ ಎಂದಿದೆ. “ಗೋಯಲ್ ಮೋದಿ ಸರ್ಕಾರ ಅಥವಾ ಮುಖ್ಯ ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯ ಕಾರಣ ರಾಜೀನಾಮೆ ನೀಡಿದ್ದಾರಾ? ಅಥವಾ ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ನೀಡಿದ್ದಾರೆಯೇ? ಅಥವಾ ಲೋಕಸಭೆ ಚುನಾವಣೆಗೂ ಕೆಲವೇ ವಾರಗಳು ಇರುವಾಗ ಬಿಜೆಪಿಯಿಂದ ಸ್ಪರ್ಧಿಸಲು ರಾಜೀನಾಮೆ ನೀಡಿದ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಂತೆಯೇ ಗೋಯಲ್ ಕೂಡವೇ?” ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಗೋಯಲ್ ರಾಜೀನಾಮೆ ಬಗ್ಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, “ನಾನು ಬಿಜೆಪಿಗೆ ಸೇರಲು ರಾಜೀನಾಮೆ ನೀಡಿದ, ಈಗ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಆಲೋಚಿಸುತ್ತಿದ್ದೇನೆ. ಬಿಜೆಪಿ ಅಂತಹ ಮನಸ್ಥಿತಿ ಇರುವವರನ್ನೇ ನೇಮಕಾತಿ ಮಾಡುತ್ತದೆ ಎಂದು ತಿಳಿದು ಬರುತ್ತದೆ. ಈಗ ಚುನಾವಣಾ ಆಯುಕ್ತರೂ ರಾಜೀನಾಮೆ ನೀಡಿದ್ದಾರೆ. ಅವರು ಮುಂದೆ ಏನು ಮಾಡುತ್ತಾರೆ ಎಂಬುವುದನ್ನು ನಾವು ಕಾದು ನೋಡೋಣ” ಎಂದರು.
“ಚುನಾವಣೆಗೂ ಮುನ್ನ ಚುನಾವಣಾಧಿಕಾರಿ ರಾಜೀನಾಮೆ ನೀಡಿರುವುದು ನೋಡುವಾಗ ಆಯೋಗ ಒತ್ತಡದಲ್ಲಿದೆಯೇ ಎಂಬ ಪ್ರಶ್ನೆ ಬರುತ್ತದೆ. ಈ ರಾಜೀನಾಮೆಯಿಂದಾಗಿ ಚುನಾವಣಾ ಆಯೋಗದ ಮೇಲೆ ಯಾರ ಉತ್ತಡವಿದೆ ಎಂಬ ಪ್ರಶ್ನೆ ಹುಟ್ಟುತ್ತದೆ” ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು.
ಈ ನಡುವೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರನ್ನು ನೇಮಿಸುವುದಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಕಾಂಗ್ರೆಸ್ ನಾಯಕ ಜಯ ಠಾಕೂರ್ ಅರ್ಜಿ ಸಲ್ಲಿಸಿದ್ದಾರೆ.





