ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ಕರ್ನಾಟಕದ ರಾಜ್ಯ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಸಿಎಂ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿದೆ. ರಾಜ್ಯ ಬಜೆಟ್ ಅಧಿವೇಶನವು ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ಒಟ್ಟು 14 ದಿನಗಳ ಕಾಲ ನಡೆಯಲಿದ್ದು ಸಾಕಷ್ಟು ನಿರೀಕ್ಷೆಗಳಿವೆ.
ಈ ಬಜೆಟ್ನಲ್ಲಿ ಸರ್ಕಾರವು ತನ್ನ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿರೀಕ್ಷೆಯಿದೆ. ಹಾಗೆಯೇ ಕೃಷಿ, ಶಿಕ್ಷಣ, ಆರೋಗ್ಯ, ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಶಕ್ತಿ ಯೋಜನೆ ಸಫಲವಾಗುತ್ತಿರುವ ನಡುವೆ ಸಾರಿಗೆ ಸಂಸ್ಥೆಗಳು (KSRTC/BMTC) ಸುಮಾರು 3,000 ಹೊಸ ಬಸ್ಗಳಿಗಾಗಿ ಅನುದಾನದ ಬೇಡಿಕೆ ಇಟ್ಟಿವೆ. ಅದನ್ನು ಪರಿಗಣಿಸುತ್ತದೆಯೇ ಎಂದು ಕಾದುನೋಡಬೇಕಿದೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಕಲ್ಯಾಣ ಕರ್ನಾಟಕಕ್ಕೆ ₹5,000 ಕೋಟಿ ಅನುದಾನ ನೀಡಲು ಮಲ್ಲಿಕಾರ್ಜುನ ಖರ್ಗೆ ಮನವಿ
ಇನ್ನು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸಣ್ಣ ಉದ್ದಿಮೆಗಳನ್ನು (Micro-enterprises) ಬೆಳೆಸಲು ಮತ್ತು ಮಹಿಳೆಯರನ್ನು ಕೇವಲ ಫಲಾನುಭವಿಗಳನ್ನಾಗಿ ಮಾಡದೆ ಸ್ವತಂತ್ರ ಉದ್ಯಮ ಮಾಲೀಕರನ್ನಾಗಿ ರೂಪಿಸಲು ಹೆಚ್ಚಿನ ಪ್ರೋತ್ಸಾಹ ನೀಡುವ ನಿರೀಕ್ಷೆಯಿದೆ. ಹಾಗೆಯೇ ಉದ್ಯೋಗಸ್ಥ ಮಹಿಳೆಯರಿಗಾಗಿ ಕೆಲಸದ ಸ್ಥಳದ ಹತ್ತಿರದಲ್ಲೇ ಶಿಶುಪಾಲನಾ ಕೇಂದ್ರಗಳು ಮತ್ತು ಸುರಕ್ಷಿತ ವಸತಿ ನಿಲಯಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ತಜ್ಞರು ಶಿಫಾರಸು ಮಾಡಿದ್ದಾರೆ.
ಈ ಬಗ್ಗೆ ಈ ದಿನ. ಕಾಮ್ಗೆ ಪ್ರತಿಕ್ರಿಯಿಸಿದ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಪ್ರಧಾನ ಕಾರ್ಯದರ್ಶಿ ದೇವಿ ಮಂಡ್ಯ, “ಮಹಿಳಾಪರವಾದ ಬಜೆಟ್ ಬರಬೇಕು. ಮರ್ಯಾದೆಗೇಡು ಹತ್ಯೆ ತಡೆಗೆ ವಿಶೇಷವಾದ ಕಾನೂನು ಜಾರಿಗೊಳಿಸಬೇಕು. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಕನಿಷ್ಟ ಶೇ.4ರಷ್ಟು ಬಡ್ಡಿದರದಲ್ಲಿ ಹತ್ತು ಲಕ್ಷ ರೂಪಾಯಿವರೆಗೆ ಬ್ಯಂಕ್ಗಳಲ್ಲಿ ಸಾಲ ನೀಡಲಾಗುವ ಯೋಜನೆ ಸರಿಯಾದ ರೀತಿಯಲ್ಲಿ ಜಾರಿಯಾಗಬೇಕು. ಸಂಜೀವಿನಿ ಒಕ್ಕೂಟಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಒಂದು ಪಂಚಾಯತ್ ವ್ಯಾಪ್ತಿಯಲ್ಲಿ ನೂರರಷ್ಟು ಸ್ವಸಹಾಯ ಗುಂಪುಗಳಿವೆ. ಮನರೇಗಾ ಅಡಿಯಲ್ಲಿ ಭವನ ನಿರ್ಮಾಣ ಮಾಡಿ, ಈ ಸಂಜೀವಿನಿ ಒಕ್ಕೂಟದಲ್ಲಿರುವ ಗುಂಪಿನ ಸದಸ್ಯರಿಗೆ ತರಬೇತಿ, ಕಚ್ಚಾ ವಸ್ತುಗಳನ್ನು ನೀಡಿ, ಸರಿಯಾದ ವ್ಯವಸ್ಥೆಯನ್ನು ಒದಗಿಸಿಕೊಡಬೇಕು. ಇದರಿಂದಾಗಿ ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 200-300 ಮಹಿಳೆಯರಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ. ಈ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
“ಒಂಟಿ ಹೆಣ್ಣುಮಕ್ಕಳು, ವಿಧವೆಯರಿಗೆ ವಿಧವಾ ಯೋಜನೆಯಡಿಯಲ್ಲಿ ಬರೀ 800 ರೂಪಾಯಿ ನೀಡಲಾಗುತ್ತಿದೆ. ವೃದ್ಧರಿಗೆ 1,200 ರೂಪಾಯಿ ಕೊಡುತ್ತಿದ್ದಾರೆ. ಅಂಗವೈಕಲ್ಯ ಹೊಂದಿರುವವರಿಗೂ 1000ದಿಂದ 1400 ರೂಪಾಯಿವರೆಗೆ ನೀಡಲಾಗುತ್ತದೆ. ಆದರೆ ಕೇರಳದಲ್ಲಿ ಎರಡು ಸಾವಿರ ರೂಪಾಯಿ ನೀಡಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ 4,000 ರೂಪಾಯಿ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಬೆಲೆ ಏರಿಕೆಯಾಗುತ್ತಿದೆ, ಆರೋಗ್ಯ ವೆಚ್ಚ ಅಧಿಕವಾಗುತ್ತಿದೆ. ಆದ್ದರಿಂದ ಅದಕ್ಕೆ ಅನುಗುಣವಾಗಿ ಯಾವುದೇ ತಾರತಮ್ಯಗಳಿಲ್ಲದೆ, ಮಾಸಿಕ ಐದು ಸಾವಿರ ರೂಪಾಯಿಗಳನ್ನು ವಿಧವೆಯರಿಗೆ ಪಿಂಚಣಿ ಹಣವನ್ನು ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

“ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತದೆ. ಆದರೆ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಏನು ಮಾಡಿದೆ? ಬರೀ ಮೂಗಿಗೆ ತುಪ್ಪ ಸವರುವಂತ ರೀತಿಯಲ್ಲಿ ಮಾತನಾಡಿದರೆ ಪ್ರಯೋಜನವಿಲ್ಲ. ಗ್ಯಾರಂಟಿ ಮೂಲಕ ಎರಡು ಸಾವಿರ ರೂಪಾಯಿ ಮಾಸಿಕ ನೀಡಲಾಗುತ್ತಿದೆ. ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆಯೂ ಜಾರಿಯಲ್ಲಿದೆ. ಆದರೆ ಅವೆಲ್ಲವೂ ತಾತ್ಕಾಲಿಕ ಪರಿಹಾರ. ಆದರೆ ಶಾಶ್ವತವಾದ ಪರಿಹಾರ ಬೇಕಿದೆ. ಬಜೆಟ್ನಲ್ಲಿ ಬರೀ ಆಶ್ವಾಸನೆ ನೀಡಿದರಾಗದು ಅದನ್ನು ಕಾರ್ಯರೂಪಕ್ಕೆ ತರಬೇಕು” ಎಂದರು.
“ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಬದುಕನ್ನು ಬದುಕಬೇಕೆಂದರೆ ಮಹಿಳೆಯರಿಗಾಗಿ ಉದ್ಯೋಗ ಸೃಷ್ಟಿಯಾಗಬೇಕು. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಬೇಕು. ಅದಕ್ಕಾಗಿ ಸ್ವಸಹಾಯ ಸಂಘಗಳಿಗೆ ತರಬೇತಿ, ಕಚ್ಚಾ ವಸ್ತುಗಳನ್ನು ಒದಗಿಸಬೇಕು. ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಿಕೊಡಬೇಕು. ಮಹಿಳೆಯರು ಉದ್ಯಮ ಮಾಡಲು ಅಗತ್ಯವಾದ ತರಬೇತಿ ನೀಡಬೇಕು. ಹೆಣ್ಣುಮಕ್ಕಳು ಖಂಡಿತವಾಗಿಯೂ ಇದರ ಸದುಪಯೋಗ ಪಡೆಯಲು ತಯಾರಿದ್ದಾರೆ. ಅದಕ್ಕೆ ಸರ್ಕಾರ ಒತ್ತು ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್ | ಸಿಎಂ ಸಿದ್ದರಾಮಯ್ಯ ಎದುರು 15 ಹಕ್ಕೊತ್ತಾಯಗಳನ್ನಿಟ್ಟ ಸಂಯುಕ್ತ ಹೋರಾಟ-ಕರ್ನಾಟಕ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, “ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಕಲ್ಯಾಣ ಮಂಡಳಿಯನ್ನು ಸರ್ಕಾರ ರಚಿಸಬೇಕು. ಆ ಮಂಡಳಿಗೆ ಸಮುದಾಯದವರೇ ಅಧ್ಯಕ್ಷರಾಗಿರಬೇಕು. ಸರ್ವ ಸದಸ್ಯರಲ್ಲಿ ಅತಿ ಹೆಚ್ಚು ಮಂದಿ ಸಮುದಾಯದವರಾಗಿರಬೇಕು” ಎಂದು ಒತ್ತಾಯಿಸಿದ್ದಾರೆ.
“ಲೈಂಗಿಕ ಕಾರ್ಯಕರ್ತೆಯರಿಗೆ ಸಂಬಂಧಿಸಿದಂತೆ ಡಾ. ಜಯಮಾಲಾ ಅವರ ಅಧ್ಯಕ್ಷತೆಯ ಸಮಿತಿಯ ವರದಿಯನ್ನು ಸರ್ಕಾರ ಒಪ್ಪಿಕೊಂಡು, ಅನುಷ್ಠಾನಗೊಳಿಸಬೇಕು. ದೇವದಾಸಿ ಎಂಬುದು ಅನಿಷ್ಟ ಪದ್ಧತಿ ಎಂದು ನೋಡುವುದರ ಜತೆಗೆ ಆ ಸಮುದಾಯದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ರೈತ ನಾಯಕಿ ಮತ್ತು ರಾಜ್ಯ ರೈತ ಸಂಘದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಕೆ.ಎಸ್. ನಂದಿನಿ ಜಯರಾಮ್, “ಬಜೆಟ್ ಆಗಲಿ ಅಥವಾ ಏನೇ ಆಗಲಿ ಸರ್ಕಾರ ಕೃಷಿಗೆ ಸಂಬಂಧಿಸಿ ಉತ್ಪಾದನೆ ಹೆಚ್ಚಳವಾಗುವ ಬಗ್ಗೆ ಮಾತನಾಡುತ್ತದೆ. ನಾವು ಕೇಳುವುದು ನೀವು ಏನೂ ಮಾಡಬೇಡಿ, ಮಾರುಕಟ್ಟೆ ಭದ್ರತೆ ಒದಗಿಸಿಕೊಡಿ, ವೈಜ್ಞಾನಿಕ ಬೆಲೆ ಕೊಡಿ ಎಂದು. ಅದಕ್ಕಾಗಿ ಆವರ್ತ ನೀತಿ, ಕೋಲ್ಡ್ ಸ್ಟೋರೆಜ್, ಮೊದಲಾದ ವ್ಯವಸ್ಥಿತ ಮಾರುಕಟ್ಟೆ ಬೇಕಿದೆ” ಎಂದು ಆಗ್ರಹಿಸಿದರು.
“ಈ ವ್ಯವಸ್ಥಿತ ಮಾರುಕಟ್ಟೆ ಹೇಗೆ ಸಾಧ್ಯ ಎಂದನಿಸಬಹುದು. ಹಾಲಿಗಿಂತ ಅತಿ ವೇಗವಾಗಿ ಕೆಟ್ಟು ಹೋಗುವ ವಸ್ತು ಯಾವುದೂ ಇಲ್ಲ. ಎಲ್ಲಾ ಹಾಲಿನ ಡೈರಿಯಲ್ಲಿ ಅದೇ ಸೌಲಭ್ಯಕ್ಕೆ ಇನ್ನೊಂದಿಷ್ಟು ಸಿಬ್ಬಂದಿ ನೇಮಿಸಿದರೆ ಬಂಡವಾಳ (Working Capital) ಹೂಡುವ ಅಗತ್ಯವಿಲ್ಲ” ಎಂದು ಅಭಿಪ್ರಾಯಿಸಿದರು.
“ನೀವು ಏನು ಬೆಳೆದರೂ ನಾವು ತೆಗೆದುಕೊಳ್ಳುತ್ತೇವೆ ಎಂಬ ವಿಶ್ವಾಸವನ್ನು ರೈತರು ಸರ್ಕಾರಕ್ಕೆ ನೀಡಬೇಕು. ಆಗ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಬೆಲೆ ಏರುಪೇರು ಕಡಿಮೆಯಾಗುತ್ತದೆ. ಅದಕ್ಕಾಗಿ ಒಂದಷ್ಟು ಆವರ್ತ ನಿಧಿ ಇಡಬೇಕಾಗುತ್ತದೆ. ಆದರೆ ಈ ಭ್ರಷ್ಟಾಚಾರದ ವ್ಯವಸ್ಥೆಯಲ್ಲಿ ಇವೆಲ್ಲ ಸಾಧ್ಯವೇ? ಈ ವ್ಯವಸ್ಥೆ ಅಷ್ಟೊಂದು ಹಾಳಾಗೋಗಿದೆ, ಕುಲಗೆಟ್ಟು ಹೋಗಿದೆ. ಹಾಗಾಗಿ ಈ ಬಜೆಟ್ನಲ್ಲಿ ಏನು ನಿರೀಕ್ಷೆ ಇಟ್ಟುಕೊಳ್ಳುವುದು ಎಂದನಿಸುತ್ತದೆ. ಆದರೆ ಮಾರುಕಟ್ಟೆಗೆ ಸಂಬಂಧಿಸಿದಂತೆ ಬಜೆಟ್ನಲ್ಲಿ ಘೋಷಣೆಗಳಾದರೆ ಖುಷಿಯಾಗುತ್ತದೆ. ಈ ‘ಕ್ರೋನಿ ಕ್ಯಾಪಟಲಿಸಂ’ ವ್ಯವಸ್ಥೆಯಲ್ಲಿ ಸರ್ಕಾರದ ಕೈಕಟ್ಟಿಹಾಕಿದಂತೆ ಆಗಿದೆ. ಮುಕ್ತ ವ್ಯಾಪಾರ ಒಪ್ಪಂದ ಆ ರೀತಿಯೇ ಇದೆ. ಒಟ್ಟಾರೆಯಾಗಿ ಸುಧಾರಣೆ ಎಲ್ಲಿಂದ, ಹೇಗೆ ಆಗಬೇಕು ಎನ್ನುವುದು ದೊಡ್ಡ ಪ್ರಶ್ನೆ” ಎಂದರು.





