ದುರ್ಗಾಪುರ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ ಸಂಸದ ಸೌಗತ ರಾಯ್, “ಎಲ್ಲಾ ಕಡೆ ಪೊಲೀಸರು ಇರಲಾಗದು, ಮಹಿಳೆಯರೇ ಜಾಗರೂಕರಾಗಿರಬೇಕು” ಎಂದು ಹೇಳಿದ್ದಾರೆ. “ಹುಡುಗಿಯರು ರಾತ್ರಿ ವೇಳೆ ಹೊರಗೆ ಹೋಗಬಾರದು” ಎಂದು ಹೇಳಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದಕ್ಕೆ ಸಿಲುಕಿದ ಒಂದು ದಿನದ ನಂತರ ತೃಣಮೂಲ ಕಾಂಗ್ರೆಸ್(ಟಿಎಂಸಿ) ಹಿರಿಯ ನಾಯಕ ಸೌಗತ ಹೇಳಿಕೆ ನೀಡಿದ್ದಾರೆ.
ಇನ್ನು ಈ ವೇಳೆಯೇ ಸೌಗತ ಅವರು ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನೂ ಸಮರ್ಥಿಸಿಕೊಂಡಿದ್ದಾರೆ. “ಮುಖ್ಯಮಂತ್ರಿ ಹೇಳಿದ್ದೆಲ್ಲವೂ ಸಂಪೂರ್ಣವಾಗಿ ಸರಿಯಾಗಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ‘ಹುಡುಗಿಯರು ರಾತ್ರಿ ಹೊರ ಹೋಗಬಾರದು’ – ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ
ಅಕ್ಟೋಬರ್ 10ರ ರಾತ್ರಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿರುವ 23 ವರ್ಷದ ವಿದ್ಯಾರ್ಥಿನಿಯ ಮೇಲೆ ಕ್ಯಾಂಪಸ್ ಬಳಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಒಡಿಶಾ ಮೂಲದ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಊಟ ಮುಗಿಸಿ ಹಿಂತಿರುಗಿದ್ದಾಗ ಮೂವರು ಆಕೆಯ ಫೋನ್ ಕಸಿದು ಅರಣ್ಯ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಈವರೆಗೆ ಐವರನ್ನು ಬಂಧಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ಮಮತಾ ಬ್ಯಾನರ್ಜಿ, “ಹುಡುಗಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಳು. ಮಧ್ಯರಾತ್ರಿ 12.30ಕ್ಕೆ ಅವಳು ಹೇಗೆ ಹೊರಬಂದಳು? ನನಗೆ ತಿಳಿದಿರುವಂತೆ, ಘಟನೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಏನಾಯಿತು ಎಂದು ನನಗೆ ತಿಳಿದಿಲ್ಲ. ತನಿಖೆ ನಡೆಯುತ್ತಿದೆ. ಘಟನೆಯನ್ನು ನೋಡಿ ನನಗೆ ಆಘಾತವಾಗಿದೆ. ಆದರೆ ಖಾಸಗಿ ವೈದ್ಯಕೀಯ ಕಾಲೇಜುಗಳು ಸಹ ತಮ್ಮ ವಿದ್ಯಾರ್ಥಿಗಳನ್ನು, ವಿಶೇಷವಾಗಿ ಹುಡುಗಿಯರನ್ನು ನೋಡಿಕೊಳ್ಳಬೇಕು. ಹುಡುಗಿಯರನ್ನು ರಾತ್ರಿಯಲ್ಲಿ ಹೊರಗೆ (ಕಾಲೇಜಿನ) ಹೋಗಲು ಬಿಡಬಾರದು. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಅರಣ್ಯ ಪ್ರದೇಶವೂ ಇದೆ” ಎಂದಿದ್ದರು.
ಈ ಹೇಳಿಕೆಯ ತೀವ್ರ ವಿವಾದಕ್ಕೆ ಕಾರಣವಾಗಿದೆ. ಟಿಎಂಸಿ ಸಂಸದ ಸೌಗತ ರಾಯ್ ಮಾತ್ರ ಮಮತಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, “ಪೊಲೀಸರು ಎಲ್ಲೆಡೆ ಗಸ್ತು ತಿರುಗಲು ಸಾಧ್ಯವಾಗದ ಕಾರಣ ಮಹಿಳೆಯರು ತಡರಾತ್ರಿ ತಮ್ಮ ಕಾಲೇಜುಗಳಿಂದ ಹೊರಗೆ ಬರಬಾರದು. ಪ್ರತಿಯೊಂದು ರಸ್ತೆಯಲ್ಲೂ ಪೊಲೀಸರು ಇರಲು ಸಾಧ್ಯವಿಲ್ಲ. ಘಟನೆ ನಡೆದ ನಂತರ ಪೊಲೀಸರು ಕ್ರಮ ಕೈಗೊಳ್ಳಬಹುದು. ಆದ್ದರಿಂದ ಮಹಿಳೆಯರು ಸಹ ಜಾಗರೂಕರಾಗಿರಬೇಕು” ಎಂದು ಹೇಳಿದ್ದಾರೆ.
ಹಾಗೆಯೇ, ಇತರ ಪ್ರದೇಶಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮಹಿಳಾ ಸುರಕ್ಷತೆ ಉತ್ತಮವಾಗಿದೆ ಎಂದಿದ್ದಾರೆ. “ಇಂತಹ ಪ್ರಕರಣಗಳು ಬಂಗಾಳದಲ್ಲಿ ಅಪರೂಪ. ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆ ಬೇರೆ ರಾಜ್ಯಗಳಿಗಿಂತ ಉತ್ತಮವಾಗಿದೆ” ಎಂದಿದ್ದಾರೆ.





