ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನದ ಎರಡನೇ ದಿನವಾದ ಇಂದು ಸದನದಲ್ಲಿ ಗದ್ದಲ ಎಬ್ಬಿಸಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋದ ಬಿಜೆಪಿ ನಾಯಕರಿಗೆ, ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ತಿರುಗೇಟು ನೀಡಿದ್ದಾರೆ.
ತಮ್ಮ ವಿರುದ್ಧ ಮುಗಿಬಿದ್ದ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಸದಸ್ಯರ ಬಾಯಿ ಮುಚ್ಚಿಸಲು ಹರಿಪ್ರಸಾದ್ ಅವರು ಬಿಜೆಪಿಯ ನೈತಿಕತೆಯನ್ನೇ ಪ್ರಶ್ನಿಸುವಂತಹ ಗಂಭೀರ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ.
“ರಾಷ್ಟ್ರಗೀತೆಗೆ ಅವಮಾನ ಮಾಡಿದ್ದು ನಾನು ಅಲ್ಲ, ನೀವು!”
ತಮ್ಮ ಅಮಾನತಿಗೆ ಆಗ್ರಹಿಸಿ ಬಿಜೆಪಿ ಸದಸ್ಯರು ನಡೆಸಿದ ರಂಪಾಟಕ್ಕೆ ಜಗ್ಗದ ಹರಿಪ್ರಸಾದ್, “ನನ್ನ ಮೇಲೆ ಗೂಬೆ ಕೂರಿಸುವ ಮೊದಲು ನಿಮ್ಮ ವರ್ತನೆಯನ್ನು ನೋಡಿಕೊಳ್ಳಿ. ರಾಜ್ಯಪಾಲರು ಸದನದಿಂದ ನಿರ್ಗಮಿಸುವಾಗ ರಾಷ್ಟ್ರಗೀತೆ ಮೊಳಗುವ ಸಮಯದಲ್ಲೂ ಘೋಷಣೆ ಕೂಗುತ್ತಾ, ಗದ್ದಲ ಮಾಡುತ್ತಾ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದು ನೀವು (ಬಿಜೆಪಿ ಸದಸ್ಯರು). ದೇಶಭಕ್ತಿಯ ಪಾಠ ಹೇಳುವ ನೀವು, ರಾಷ್ಟ್ರಗೀತೆ ನಡೆಯುವಾಗ ನಡೆದುಕೊಂಡ ರೀತಿ ಅಕ್ಷಮ್ಯ,” ಎಂದು ಬಿಜೆಪಿಯ ಡೋಂಗಿ ದೇಶಭಕ್ತಿಯನ್ನು ಬಯಲು ಮಾಡಿದರು.
ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಹರಿಪ್ರಸಾದ್ ಅವರು ಬಿಜೆಪಿ ನಾಯಕರತ್ತ ನೇರ ವಾಗ್ದಾಳಿ ನಡೆಸಿದರು. “ನನ್ನನ್ನು ಪ್ರಶ್ನಿಸುವ ನೈತಿಕತೆ ನಿಮಗಿಲ್ಲ. ನೀವು ಆರ್ಎಸ್ಎಸ್ನವರು, ದೇಶದ್ರೋಹಿಗಳು, ನೀಲಿ ಚಿತ್ರ ವೀಕ್ಷಿಸಿದವರು ಪೋಕ್ಸೋ (POCSO) ಪ್ರಕರಣದ ಆರೋಪಿಗಳನ್ನು ನಾಯಕರನ್ನಾಗಿ ಹೊಂದಿರುವ ನೀವು ನನಗೆ ಬುದ್ಧಿ ಹೇಳಲು ಬರಬೇಡಿ,” ಎಂದು ಗುಡುಗಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಆಡಳಿತವೇ?
ಹರಿಪ್ರಸಾದ್ ಅವರ ಈ ನೇರ ಮಾತಿನಿಂದ ಕಂಗಾಲಾದ ಬಿಜೆಪಿ ಸದಸ್ಯರು, ಉತ್ತರ ಕೊಡಲಾಗದೆ ಮತ್ತಷ್ಟು ಜೋರಾಗಿ ಕೂಗಾಡಲು ಪ್ರಾರಂಭಿಸಿದರು. “ಮಕ್ಕಳ ಮೇಲಿನ ದೌರ್ಜನ್ಯದಂತಹ ಗಂಭೀರ ಆರೋಪ ಹೊತ್ತಿರುವವರನ್ನು ಸಮರ್ಥಿಸಿಕೊಳ್ಳುವ ನೀವು, ಸದನದ ಗೌರವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ,” ಎಂದು ಹರಿಪ್ರಸಾದ್ ಅವರು ಬಿಜೆಪಿಯ ಇಬ್ಬಗೆಯ ನೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ವಿಧಾನಸಭೆಯಲ್ಲಿ ಅಶೋಕ್, ಅಶ್ವತ್ಥ್ ಆಕ್ರೋಶ
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, ಶಾಸಕ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು, “ಬಿ.ಕೆ. ಹರಿಪ್ರಸಾದ್ ಅವರು ಹಿರಿಯ ಸದಸ್ಯರಾಗಿದ್ದುಕೊಂಡು ಸದನದ ಗೌರವಕ್ಕೆ ಚ್ಯುತಿ ತರುವಂತೆ ನಡೆದುಕೊಂಡಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು,” ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್, ಕಾಂಗ್ರೆಸ್ ಶಾಸಕರಾದ ಶಿವಲಿಂಗೇಗೌಡ, ಎಚ್ ಸಿ ಬಾಲಕೃಷ್ಣ ಕೂಡ ಬಿಜೆಪಿ ಶಾಸಕರಿಗೆ ತಿರುಗೇಟು ನೀಡಿದರು.





