ನೆಟ್ಫ್ಲಿಕ್ಸ್ ಓಟಿಟಿಯಲ್ಲಿ ಇತ್ತೀಚೆಗೆ ಮಾರ್ಚ್ 13, 2025ರಂದು ಬಿಡುಗಡೆಯಾದ “Adolescence” ಈಗಾಗಲೇ ಜಾಗತಿಕ ಬಿರುಗಾಳಿ ಎಬ್ಬಿಸಿದೆ. ಇದೊಂದು ಬ್ರಿಟಿಷ್ ಕ್ರೈಮ್ ಡ್ರಾಮಾ ವೆಬ್ ಸೀರೀಸ್ ಆಗಿದ್ದು, ಸ್ಟೀಫನ್ ಗ್ರಹಾಂ ಮತ್ತು ಜ್ಯಾಕ್ ಥಾರ್ನ್ ಇದನ್ನು ರಚಿಸಿದ್ದಾರೆ ಹಾಗೂ ಫಿಲಿಪ್ ಬರಂತಿನಿ ನಿರ್ದೇಶಿಸಿದ್ದಾರೆ. ಇತರ ವೆಬ್ ಸೀರೀಸ್ಗಳಂತೆ ದೀರ್ಘವಾಗಿರದೆ ಕೇವಲ 4 ಎಪಿಸೋಡ್ಗಳನ್ನು ಒಳಗೊಂಡ ಈ ಸೀರೀಸ್ ಒಂದು ಭಾವನಾತ್ಮಕ ಮತ್ತು ಗಾಢ ಕಥೆಯನ್ನು ಹೊಂದಿದ್ದು, ಆಧುನಿಕ ಸಮಾಜದಲ್ಲಿ ಹದಿಹರೆಯದವರ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ ಹಾಗೂ ಕಿಶೋರಾವಸ್ಥೆಯಲ್ಲಿರುವ ಮಕ್ಕಳ ಮನಸ್ಥಿತಿ, ಅವರು ಎದುರಿಸುತ್ತಿರುವ ಸಂಕೀರ್ಣತೆ, ಸಂದಿಗ್ದತೆಗಳ ಕುರಿತು ತೀವ್ರವಾದ ಚರ್ಚೆಗೆ ದಾರಿಮಾಡಿಕೊಟ್ಟಿದೆ. ನಟನೆ, ಕಥಾವಸ್ತು ಹಾಗೂ ಸಾಮಾಜಿಕ ವಿಷಯಗಳನ್ನು ಎತ್ತಿ ತೋರಿಸುವ ವೈಖರಿ ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸುತ್ತಿದೆ.
ಕಥೆಯ ಸಾರಾಂಶ
13 ವರ್ಷದ ಶಾಲಾ ಬಾಲಕ ಜೇಮೀ ಮಿಲ್ಲರ್ (ಓವನ್ ಕೂಪರ್ನ ಚೊಚ್ಚಲ ಅಭಿನಯ) ತನ್ನ ಸಹಪಾಠಿಯಾದ ಕೇಟಿಯನ್ನು ಕೊಲೆ ಮಾಡಿದನೆಂಬ ಆರೋಪದಲ್ಲಿ ಬಂಧಿಸಲ್ಪಡುವುದರ ಸುತ್ತ ಸುತ್ತುತ್ತದೆ. ಈ ಘಟನೆಯು ಜೇಮೀಯ ಕುಟುಂಬ, ಅವನ ಥೆರಪಿಸ್ಟ್ ಮತ್ತು ತನಿಖಾ ಅಧಿಕಾರಿಗಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಕಥೆಯು ಚಾಕು ಇರಿತದ ಅಪರಾಧ, ಸೈಬರ್ ಬೆದರಿಕೆ (ಸೈಬರ್ ಬುಲಿಯಿಂಗ್), ಆನ್ಲೈನ್ ಮಿಸೊಜಿನಿ (ಅಂತರ್ಜಾಲ ಲೋಕದಲ್ಲಿನ ಸ್ತ್ರೀದ್ವೇಷ), ಮತ್ತು ಹದಿಹರೆಯದವರ ಮೇಲೆ ಇಂಟರ್ನೆಟ್ನ ಪ್ರಭಾವದಂತಹ ಗಂಭೀರ ವಿಷಯಗಳನ್ನು ಪರಿಶೀಲಿಸುತ್ತದೆ. ಜೇಮೀಯ ತಂದೆ ಎಡ್ಡಿ ಮಿಲ್ಲರ್ (ಸ್ಟೀಫನ್ ಗ್ರಹಾಂ) ಮತ್ತು ತಾಯಿ ಮಂಡಾ (ಕ್ರಿಸ್ಟೀನ್ ಟ್ರೆಮಾರ್ಕೊ) ತಮ್ಮ ಮಗನ ಆರೋಪದಿಂದ ಉಂಟಾದ ಭಾವನಾತ್ಮಕ ಗೊಂದಲವನ್ನು ಎದುರಿಸುತ್ತಾರೆ. ಪ್ರತಿಯೊಂದು ಎಪಿಸೋಡನ್ನು ಒಂದೇ ನಿರಂತರ ಟೇಕ್ನಲ್ಲಿ ಚಿತ್ರಿಕರಿಸಿದ್ದು ಇದರ ವಿಶೇಷತೆ.
ಇತ್ತೀಚೆಗಿನ ಒಂದು ದಶಕದಲ್ಲಿ ಅದೂ ಕೊರೊನಾ ನಂತರದಲ್ಲಿ ನಾವು ನೀವು ನಮ್ಮ ನಮ್ಮ ಮನೆಗಳಲ್ಲಿ ನಮ್ಮ ಸುತ್ತಲಿನ ಸಮಾಜದಲ್ಲಿ ಮೊಬೈಲ್ ಗೀಳಿಗೆ ಬಲಿಯಾಗಿರುವ ಶಾಲಾ ಮಕ್ಕಳನ್ನು ಕಾಣುತ್ತಲೇ ಬಂದಿದ್ದೇವೆ, ಆ ಬಗ್ಗೆ ಉಪದೇಶಿಸಿಯೂ ಇದ್ದೇವೆ. ಅಂಗಡಿಗೆ ಹೋಗಿ ಹಾಲು ತರಲೋ, ಇಲ್ಲ ಸಕ್ಕರೆ ತರಲೋ, ಅಥವಾ ಇಂತಹ ಸಣ್ಣ ಪುಟ್ಟ ಮನೆಗೆಲಸವನ್ನೋ ತಾಯಂದಿರು ಮಕ್ಕಳಿಗೆ ಹೇಳಿದಾಗ, “ಮೊಬೈಲ್ ಕೊಟ್ಟರೆ ಮಾಡ್ತೀವಿ ಇಲ್ಲದಿದ್ದರೆ ಇಲ್ಲ” ಎನ್ನುವ ಷರತ್ತನ್ನು ಮಕ್ಕಳು ಹಾಕುತ್ತಾರೆ. ಹೇಗಾದರೂ ಮೊಬೈಲ್ ಕಸಿದುಕೊಳ್ಳುವ ಕಲೆಯನ್ನು ಪೋಷಕರ ಮೇಲೆ ಬಳಸಿ ಸಲೀಸಾಗಿ ಭಾವನಾತ್ಮಕವಾಗಿ ಬ್ಲ್ಯಾಕ್ ಮೇಲ್ ಮಾಡುವಷ್ಟರ ಮಟ್ಟಿಗೆ ಜಾಣರಾಗಿದ್ದಾರೆ. ಈ ಗೀಳಿಗೆ ಬಲಿಯಾಗಿರುವ ಬಹುತೇಕ ಮಕ್ಕಳು (ಎಲ್ಲರೂ ಅಲ್ಲ) ಶಾಲೆಯ ತರಗತಿಗಳಲ್ಲಾಗಲಿ, ಓದಿನಲ್ಲಾಗಲಿ, ಓದಿ ಒಳ್ಳೆಯ ಅಂಕ ಗಳಿಸಬೇಕೆಂಬ ಧ್ಯೇಯ ಗುರಿಯನ್ನಾಗಲಿ ಹೊಂದಿಲ್ಲವೆಂಬುದೂ ಅಷ್ಟೇ ಸತ್ಯವಾಗಿದೆ. ಎಲ್ಲಾ ಮಕ್ಕಳೂ ಹೀಗೆ ಅಂತಲ್ಲ, ಯಾವ ಗೀಳಿಗೂ ಬೀಳದ ಓದುವ ಮಕ್ಕಳೂ ಇರಬಹುದು. ಅಂತಹ ಮಕ್ಕಳನ್ನು ಪಡೆದ, ಅಂತಹ ಆರೋಗ್ಯಕರ ವಾತಾವರಣವನ್ನು ಕಲ್ಪಿಸಿಕೊಟ್ಟ ಪೋಷಕರು ಪುಣ್ಯವಂತರೆನ್ನಬಹುದು.
ಇದನ್ನೂ ಓದಿರಿ: ಭಾರತ ‘ಮುಸ್ಲಿಂ ರಾಷ್ಟ್ರ’ವಾಗಲು ಸಾಧ್ಯವೇ? ಅಸಲಿ ಸಂಗತಿಗಳೇನು?
ನಾವು ಮಕ್ಕಳಿಗೆ ಒಳ್ಳೆಯ ಗುಣಗಳನ್ನು ನುಡಿನಡೆಗಳನ್ನು ಹೇಳಿಕೊಡಬಹುದು. ಹುಷಾರಾಗಿ ಬಸ್ ಹತ್ತಲು, ರಸ್ತೆ ದಾಟಲು, ದೊಡ್ಡವರೊಂದಿಗೆ ಹೇಗೆ ಮಾತಾಡಬೇಕೆಂಬುದನ್ನು, ಹಿರಿಯರಿಗೆ ನಮಸ್ಕರಿಸುವುದನ್ನು, ಉಡುಗೆ ತೊಡುಗೆ ಶಿಸ್ತನ್ನು ಹೇಳಿಕೊಡುತ್ತೇವೆ. ಬೇಡಿದ್ದನ್ನೆಲ್ಲ ಕೊಡಿಸುತ್ತೇವೆ. ತಮಗೆ ತಮ್ಮ ಬಾಲ್ಯದಲ್ಲಿ ಸಿಗದಿದ್ದ ವಸ್ತುಗಳನ್ನೆಲ್ಲ ಮಕ್ಕಳಿಗೆ ಸಿಗಲಿ ಎಂದು ಪೋಷಕರು ಬಯಸುತ್ತಾರೆ ಮತ್ತು ಆ ದಿಸೆಯಲ್ಲಿ ಶ್ರಮಿಸುತ್ತಾರೆ. ತಮ್ಮ ಹೊಟ್ಟೆ-ಬಾಯಿ ಕಟ್ಟಿ ಮಕ್ಕಳಿಗೆಂದು ತೆಗೆದಿಡುತ್ತಾರೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ಟನ್ನು ಹೇಗೆ ಬಳಸಬೇಕು, ಹೇಗೆ ಬಳಸಬಾರದು ಎಂಬುದನ್ನು ಹೇಳಿಕೊಡುವುದರಲ್ಲಿ ನಾವು ಸೋತಿದ್ದೇವೆ ಎನ್ನಬಹುದು ಇಲ್ಲವೇ ಇಂಟರ್ನೆಟ್ ಬಳಕೆಯ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲವೆನ್ನಬೇಕಾಗುತ್ತದೆ. ಅವರು ಗೇಮ್ ಆಡ್ತಿದೀವಿ ಅಂತಾರೆ, ನಿಜವಾಗಿಯೂ ಗೇಮ್ ಆಡ್ತಿದ್ದರಾ ಪೋರ್ನ್ ನೋಡ್ತಿದ್ದಾರಾ ಅಂತ ಮಾತ್ರ ಚೆಕ್ ಮಾಡಲು ಹೋಗುವುದಿಲ್ಲ. ತಮ್ಮ ಸ್ನೇಹಿತರಿಗೆ ಯಾವ ರೀತಿಯ ಸಂದೇಶ ಕಳಿಸ್ತಿದಾರೆ ಅಂತಲೂ ನೋಡಲು ಹೋಗುವುದಿಲ್ಲ. ನಮ್ಮ ಮಕ್ಕಳ ಬಗ್ಗೆ ನಮಗೆ ಅಷ್ಟು ನಂಬಿಕೆ, ವಿಶ್ವಾಸ.

ಅಂತಹದೇ ವಿಶ್ವಾಸ ಹೊಂದಿರುವ ಒಂದು ಕುಟುಂಬ ನೆಮ್ಮದಿಯಿಂದ ಮಲಗಿರುವ ಒಂದು ಬೆಳಗಿನ ಹೊತ್ತು ಹಠಾತ್ತನೆ ಪೊಲೀಸ್ ಪಡೆ ಬಾಗಿಲು ಒಡೆದು ಮನೆಯೊಳಕ್ಕೆ ನುಗ್ಗುತ್ತದೆ. ಮನೆಯವರೆಲ್ಲ ಭೀತಿಯಿಂದ ಏನಾಗುತ್ತಿದೆ ಇಲ್ಲಿ ಎಂದು ನಡುಗುತ್ತಿರುವಾಗಲೇ, ಇನ್ನೂ ಹಾಸಿಗೆಯಲ್ಲಿರುವ ಅವರ ಮಗ 13 ವರ್ಷದ ಜೆಮಿಯನ್ನು ತನ್ನ ಸಹಪಾಠಿಯನ್ನು ಕೊಂದ ಅರೋಪದಡಿ ಎತ್ತಿಕೊಂಡು ಹೋಗುತ್ತದೆ. ಇಲ್ಲಿಂದ ಜೆಮಿಯ ಕುಟುಂಬದೊಂದಿಗೆ ವೀಕ್ಷಕರಾದ ನಾವು ನೀವು ಎಲ್ಲರೂ ಇಂತಹ ಒಳ್ಳೆಯ ಹುಡುಗ ಕೊಲೆ ಮಾಡಿದನಾ? ಛೇ ಇರಲಿಕ್ಕಿಲ್ಲ ಎಂದುಕೊಳ್ಳುತ್ತೇವೆ. ಕೊಲೆಯ ದೃಶ್ಯ ಇನ್ನೇನು ಈಗ ಬಂದೀತು ಎಂದು ಕಾಯುತ್ತೇವೆ. ಬೇರೆನೋ ಮುಂದೆ ರಹಸ್ಯಭೇದವಾಗುತ್ತದೆಂದು ಚಡಪಡಿಸುತ್ತೇವೆ.
ಆದರೆ “Adolescence” ಉದ್ದೇಶ ತನಿಖೆಯ ಬಗ್ಗೆಯಾಗಲಿ, ಸತ್ತುಹೋದ ಕೇಟಿಯನ್ನಾಗಲಿ, ಅವಳ ಪೋಷಕರ ಗೋಳನ್ನಾಗಲಿ, ಚಿತ್ರಿಸುವುದಾಗಿರದೆ ಜೆಮಿ ಮತ್ತು ಜೆಮಿಯಂತಹ ಕಿಶೋರರು ಯಾವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ? ಯಾವೆಲ್ಲ ಸಂಕೀರ್ಣತೆಗಳನ್ನು ಎದುರಿಸುತ್ತಿದ್ದಾರೆ? ನಮ್ಮ ಜನರೇಶನ್ನಿಗಿಂತ ಜೆಮಿಯ ಜನರೇಶ್ ಯಾವ ಗೊಂದಲಗಳಲ್ಲಿ ಸಿಲುಕಿದೆ? ಕೊಲೆ ಮಾಡುವ ಮಟ್ಟಕ್ಕೆ ಈ ಯುವ ಜನಾಂಗವನ್ನು ಪ್ರಭಾವಿಸುತ್ತಿರುವ ಮಾಧ್ಯಮಗಳು ಯಾವ್ಯಾವು? ಯಾಕೆ ಈ ತಲೆಮಾರು ಹಿಂಸಾತ್ಮಕವಾಗುತ್ತಿದೆ? ಇವರನ್ನು ಅರ್ಥಮಾಡಿಕೊಳ್ಳುವುದರಲ್ಲಿಯೇ ನಾವು ತಪ್ಪಿದ್ದೇವೆಯೇ? ಮೂಲ ಕಾರಣಗಳೇನಿರಬಹುದು? ಕಿಶೋರಾವಸ್ಥೆಗೆ ಕಾಲಿಟ್ಟಿರುವ ಯುವಜನರ ಮನೋಭೂಮಿಕೆಯನ್ನು ಮನೋವಿಜ್ಞಾನಿಗಳು ಯಾವ ರೀತಿ ವಿಶ್ಲೇಷಿಸುತ್ತಾರೆ?- ಹೀಗೆ ನೂರಾರು ಸವಾಲುಗಳನ್ನು, ನೂರಾರು ಸಾಧ್ಯಾಸಾಧ್ಯತೆಗಳನ್ನು ವೀಕ್ಷಕರು ಈ ನಾಲ್ಕೂ ಎಪಿಸೋಡ್ಗಳುದ್ದಕ್ಕೂ ಅನುಭವಿಸುತ್ತಾರೆ. ತೀವ್ರ ವ್ಯಾಕುಲತೆಯಲ್ಲಿ ಒದ್ದಾಡುತ್ತಾರೆ.
ಈ ಸಾಮಾಜಿಕ ಮಾಧ್ಯಮ ಹದಿಹರೆಯದವರನ್ನು ಹೇಗೆ ಪ್ರತಿಗಾಮಿಯನ್ನಾಗಿಸುತ್ತಿದೆ, ಹೆಚ್ಚಾಗಿ ಹಿಂಸಾತ್ಮಕ ಸ್ತ್ರೀದ್ವೇಷಕ್ಕೆ ಅಣಿಗೊಳಿಸುತ್ತಿದೆ ಎಂಬುದನ್ನು ಈ ಸಿರೀಸ್ ಬಹಿರಂಗಗೊಳಿಸಿದೆ. ಇದು ಬ್ರಿಟನ್ನಿನಂತಹ ಪ್ರಗತಿಪರ ದೇಶಗಳಲ್ಲಷ್ಟೇ ಅಲ್ಲ ಭಾರತದಲ್ಲಿಯೂ ನಡೆಯುತ್ತಿದೆ. ಈ ಕಿಶೋರರ ಲೋಕ ನಮಗರ್ಥವಾಗುವುದಿಲ್ಲ. ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು- “ಮಕ್ಕಳು ಸಹಪಾಠಿಗಳಿಗೆ ಕಳಿಸುವ ವಾಟ್ಸಪ್ ಸಂದೇಶಗಳಲ್ಲಿ ಬಳ್ಸಿದ ಇಂಗ್ಲೀಷೇ ಅರ್ಥವಾಗ್ತಿಲ್ಲ. ಒಂಥರ ಕೋಡ್ ಭಾಷೆಯಲ್ಲಿರುತ್ತದೆ” ಎಂದಿದ್ದು ಈಗ ನೆನಪಾಗುತ್ತಿದೆ. ನಮಗೆ ಎಮೋಜಿಗಳಲ್ಲಿ ಕೆಂಪುಬಣ್ಣದ ಹೃದಯ ಒತ್ತಿದರೆ ಮೆಚ್ಚುಗೆ, ಪ್ರೀತಿ ಅಂತಷ್ಟೇ ಗೊತ್ತು. ಆದರೆ ಇವತ್ತಿನ ಹದಿಹರೆಯದವರ ಸಂಕೇತ ಭಾಷೆಗಳೇ ಬೇರೆ. ಒಂದೊಂದು ಬಣ್ಣಕ್ಕೂ ಅದರದೇ ಆದ ವ್ಯಾಖ್ಯೆ ಇದೆ. ಅದರದೇ ಆದ ಸಂಕೇತಗಳಿವೆ. ಇನ್ನೂ ಆಟವಾಡಿಕೊಂಡಿರಬಹುದಾದ ವಯಸ್ಸಿನಲ್ಲಿರಬೇಕಾದ ಕಿಶೋರರಿಗೆ ಈ ಸಾಮಾಜಿಕ ಮಾಧ್ಯಮ ಪುರುಷತ್ವ ನಿರೀಕ್ಷೆಯ ಅಪಾಯಕಾರಿ ಮಾನದಂಡಗಳನ್ನು ಹೇರುತ್ತದೆ, ಲೈಂಗಿಕ ಚೌಕಟ್ಟಿನೊಳಗೆ ಅವರನ್ನು ತಳ್ಳುತ್ತದೆ. ಹದಿಮೂರರ ಜೆಮಿ ‘ವರ್ಜಿನ್’ ಆಗಿದ್ದು ಅವನ ದೊಡ್ದ ಪಾಪವೆಂಬಂತೆ ಅಪಹಾಸ್ಯಕ್ಕೊಳಗಾಗುತ್ತಾನೆ. ಮೂರನೇ ಎಪಿಸೋಡಿನಲ್ಲಿ ಥೆರಪಿಸ್ಟ್ ಜೊತೆಗಿನ ಸಂವಾದ ಅವನ ಆಕ್ರಮಣಶೀಲತೆ (ಅಗ್ರೆಸಿವ್ನೆಸ್) ದಂಗುಬಡಿಸುತ್ತದೆ.
ಇದನ್ನೂ ಓದಿರಿ: ‘ಸಿಲಿಕಾನ್ ವ್ಯಾಲಿ ಬೆಂಗಳೂರು’ ಎಂಬ ವಿಸ್ಮಯ!
ಸಹಪಾಠಿಗಳಾದ ಕೇಟಿ, ಜೆಮಿಯ ನಡುವೆ ಆದದ್ದೂ ಇದೇ ಸಾಮಾಜಿಕ ಮಾಧ್ಯಮದ ಬೆದರಿಕೆ. ಅವಮಾನ ಕೊನೆಗೆ ಅವಸಾನ. ಅವರಿಬ್ಬರ ನಡುವಿನ ಸಣ್ಣ ಎಮೋಜಿ, ಹಾಕಿದ ಒಂದು ಕಮೆಂಟ್ ಖಾಸಗಿಯಾಗಿಯೇ ಉಳಿದಿದ್ದರೆ ಜೆಮಿ ಕೆರಳುತ್ತಿದ್ದಿಲ್ಲ. ಅದನ್ನು Instagramನಲ್ಲಿ ಹಾಕಿ ಜಗಜ್ಜಾಹೀರುಮಾಡಿ, ಖಾಸಗಿಯಾಗಿರಬೇಕಾಗಿದ್ದನ್ನು ನೂರಾರು ಜನ ಓದುವಂತೆ ಮಾಡುತ್ತಾಳೆ ಕೇಟಿ. ಜೇಮಿಯನ್ನು ಅವನೊಳಗಿನ ಪುರುಷತ್ವವನ್ನು ಕೆಣಕಿದ್ದಳು. ಗೆಳೆಯ ತಂದುಕೊಟ್ಟ ಅಡುಗೆಮನೆಯ ಚಾಕುವಿನಿಂದ ಕೇವಲ ಬೆದರಿಸಬೇಕು ಎಂದುಕೊಂಡ ಜೆಮಿ ಕಡೆಗೆ ಕೇಟಿಯನ್ನು ಕೊಚ್ಚಿಹಾಕುತ್ತಾನೆ. ಈ ದೃಶ್ಯವನ್ನು ಫೂಟೇಜ್ನಲ್ಲಿ ಮಾತ್ರ ತೋರಿಸಿದ್ದು ಜೆಮಿಯ ಮನಸ್ಥಿತಿ, ಆತನ ತಂದೆ ತಾಯಿಗಳ ಮನಸ್ಥಿತಿ, ತನಿಖಾಧಿಕಾರಿ, ಥೆರಪಿಸ್ಟ್ ಜೊತೆಗೆ ಸೀರೀಸ್ ನೋಡುವ ನಾವು ನೀವು ಎಲ್ಲರೂ ಜೆಮಿಯನ್ನು ಜೆಮಿ ಇರುವ ಇಂದಿನ ಕಾಲಘಟ್ಟವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದರಲ್ಲಿಯೇ ಕಳೆದುಹೋಗುತ್ತೇವೆ. ದಟ್ಟ ವಿಷಾದದಲ್ಲಿ, ತೀವ್ರ ಮನೋಯಾತನೆಯಲ್ಲಿ ಈ ವಿಷವರ್ತುಲದಿಂದ ಮಕ್ಕಳನ್ನು ಕಾಪಾಡಿಕೊಳ್ಳುವ ಮತ್ತು ಅದರಿಂದ ಹೊರಬರುವುದರ ಕುರಿತ ಯೋಚನೆ ನಿದ್ದೆಗೆಡಿಸುತ್ತದೆ. ನಾವು ಮಕ್ಕಳನ್ನು ನಿಜಕ್ಕೂ ಸರಿಯಾದ ರೀತಿಯಲ್ಲಿ ಬೆಳೆಸುತ್ತಿದ್ದೇವೆಯೇ ಎಂಬ ಪ್ರಶ್ನೆ ಕಾಡುತ್ತದೆ. ಕೊನೆಯ ಎಪಿಸೋಡ್ನಲ್ಲಂತೂ ಜೇಮಿಯ ತಂದೆ- ತಾಯಿ ಅನುಭವಿಸುವ ನೋವು ಕಣ್ಣಲ್ಲಿ ನೀರು ತರಿಸುತ್ತದೆ.

ಕೊನೆಯ ಸಂದೇಶ
“Adolescence” ಕೇವಲ ಕ್ರೈಮ್ ಡ್ರಾಮಾ ಅಲ್ಲ, ಇದು ಇಂದಿನ ಯುವ ಜನಾಂಗದ ಮೇಲೆ ಡಿಜಿಟಲ್ ಜಗತ್ತಿನ ಪರಿಣಾಮವನ್ನು ಚರ್ಚಿಸುತ್ತದೆ. ಕಿಶೋರಾವಸ್ಥೆ ಎಂಬುದು ಎಲ್ಲರ ಬದುಕಿನ ಸುಂದರ ಘಟ್ಟ. ಅಮೃತಾ ಪ್ರೀತಂ ತಮ್ಮ ಆತ್ಮಕತೆ ‘ರಶೀದಿ ತಿಕೀಟಿ’ನಲ್ಲಿ ಹದಿನಾರನೇ ವರ್ಷ ಎಂಬ ಅಧ್ಯಾಯವನ್ನೇ ಪ್ರತ್ಯೇಕವಾಗಿ ಬರೆದಿದ್ದಾರೆ. ಇಂದು ಸಾಮಾಜಿಕ ಮಾಧ್ಯಮದ ವಿಷವರ್ತುಲದಲ್ಲಿ ಸಿಕ್ಕು ಬದುಕಿನ ಅಪೂರ್ವ ಘಟ್ಟವೇ ಅಪಾಯದ ಪ್ರಪಾತಕ್ಕೆ ಜಾರುತ್ತಿದೆ. ಇಂದಿನ ಪೋಷಕರು ತಮ್ಮ ಮಕ್ಕಳೊಂದಿಗೆ ಸಂವಹನ ಮತ್ತು ಸಂಪರ್ಕವನ್ನು ಗಟ್ಟಿಗೊಳಿಸಬೇಕಿದೆ. ಸಾಮಾಜಿಕ ಮಾಧ್ಯಮದಿಂದ ಉಂಟಾಗುವ ಮಾನಸಿಕ ಒತ್ತಡ, ಒಂಟಿತನ ಮತ್ತು ಆಕ್ರಮಣಕಾರಿ ವರ್ತನೆಯನ್ನು ಈ ವೆಬ್ ಸೀರೀಸ್ ಗಂಭೀರವಾಗಿ ಚಿತ್ರಿಸುತ್ತದೆ. ಪ್ರತಿಯೊಬ್ಬರೂ ನೋಡಲೇಬೇಕಾದ್ದು. ಹದಿಹರಯದ ಮಕ್ಕಳ ಪೋಷಕರು, ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರು ಹಾಗೂ ಮನಃಶಾಸ್ತ್ರಜ್ಞರಾದಿಯಾಗಿ ಚಿಂತಿಸಬೇಕಾದ ಗಂಭೀರ ವಿಷಯ. ಸಮಕಾಲೀನ ಸಮಸ್ಯೆಯನ್ನು ಎತ್ತಿಕೊಂಡು ಅದನ್ನು ಸರಳವಾಗಿ ಪ್ರತಿಯೊಂದು ಎಪಿಸೋಡನ್ನು ಒಂದೇ ಟೇಕ್ನಲ್ಲಿ ಚಿತ್ರಿಕರಿಸಿದ ಮತ್ತು ಒಂದು ಗಂಭೀರವಾದ ವಿಷಯದತ್ತ ಜನರ ಗಮನವನ್ನು ಸೆಳೆದ ಈ ವೆಬ್ ಸಿರೀಸ್ನ ರೂವಾರಿಗಳಾದ ಸ್ಟೀಫನ್ ಗ್ರಹಾಂ ಹಾಗೂ ಜ್ಯಾಕ್ ಥಾರ್ನ್ ನಿಜಕ್ಕೂ ಪ್ರಶಂಸಾರ್ಹರು. ಅವರಿಗೊಂದು ಹೃದಯಾಳದ ಸಲಾಮ್.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




