(ಮುಂದುವರಿದ ಭಾಗ..) ಜಾತಿಪದ್ಧತಿ ಮತ್ತು ವರ್ಣವ್ಯವಸ್ಥೆಯ ದುಷ್ಟತನ ಕುರಿತು ‘ಜಾತಿ ವಿನಾಶ’ ಕೃತಿಯಲ್ಲಿ ವ್ಯಕ್ತವಾಗಿರುವ ಬಾಬಾಸಾಹೇಬ್ ಅಂಬೇಡ್ಕರರ ಇತರೆ ಕ್ರಾಂತಿಕಾರಿ ವಿಚಾರಗಳು ಹೀಗಿವೆ-
‘ಮಾನವೀಯತೆಯನ್ನು ಅಳಿಸಿ ಹಾಕುವಲ್ಲಿ ಹಿಂದೂ ಧರ್ಮಶಾಸ್ತ್ರಗಳು ಉಂಟು ಮಾಡುವ ಪರಿಣಾಮಗಳನ್ನು ಎತ್ತಿ ಹೇಳುವ ಈ ಕೃತಿ, ಜಾತಿಯ ವೈಜ್ಞಾನಿಕ ನೆಲೆಯನ್ನು ಪ್ರಶ್ನಿಸುತ್ತದೆ. ಜಾತಿನಿಯತ್ತು ಅಥವಾ ಜಾತಿನಿಷ್ಠೆ ಎಂಬುದು ಉಳಿದೆಲ್ಲ ವಿಶಾಲ ನೈತಿಕ ಪರಿಗಣನೆಗಳು-ಪರ್ಯಾಲೋಚನೆಗಳನ್ನು ಅತಿಕ್ರಮಿಸಿ ಕೆಳಕ್ಕೆ ತುಳಿದು ಮೇಲೆದ್ದುಬಿಡುವ ನಿಷ್ಠುರ ಸತ್ಯವನ್ನು ಸಾರುತ್ತದೆ’.
‘ಜಾತಿಯ ತಳಪಾಯದ ಮೇಲೆ ಏನನ್ನೂ ಕಟ್ಟುವುದು ಸಾಧ್ಯವಿಲ್ಲ. ದೇಶವನ್ನು ಕಟ್ಟಲಾಗದು, ನೈತಿಕತೆಯನ್ನು ಕಟ್ಟಲಾಗದು. ಜಾತಿಯ ಅಡಿಪಾಯದ ಮೇಲೆ ಕಟ್ಟಿದ ಯಾವುದೇ ಸಂಗತಿಯಲ್ಲಿ ಬಿರುಕು ನಿಶ್ಚಿತ’. ‘ಜಾತಿ ವ್ಯವಸ್ಥೆಯು ಹಿಂದೂಗಳನ್ನು ಸಂಪೂರ್ಣವಾಗಿ ಹತವೀರ್ಯರನ್ನಾಗಿಯೂ ಅಸಂಘಟಿತರನ್ನಾಗಿಯೂ ಕುಗ್ಗಿಸಿಬಿಟ್ಟಿದೆ.. ಪ್ರತಿ ಜಾತಿಗೂ ತನ್ನದೇ ಅಸ್ತಿತ್ವದ ಪ್ರಜ್ಞೆ ಉಂಟು. ಅಳಿಯದೆ ಉಳಿದಿರುವುದೊಂದೇ ಪ್ರತಿ ಜಾತಿಯ ಅಸ್ತಿತ್ವದ ಗುರಿ- ಗಮ್ಯ ಎಲ್ಲವೂ…. ಹಿಂದೂ-ಮುಸ್ಲಿಮ್ ಕೋಮು ಗಲಭೆಯ ಸಂದರ್ಭಗಳನ್ನು ಬಿಟ್ಟರೆ ಉಳಿದಂತೆ ಜಾತಿಯೊಂದಕ್ಕೆ ತಾನು ಇತರೆ ಜಾತಿಗಳೊಂದಿಗೆ ಸೇರಿಕೊಂಡಿದ್ದೇನೆ ಎಂಬ ಭಾವನೆ ಇಲ್ಲವೇ ಇಲ್ಲ’.
ಹಾಗಾದರೆ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹೇಗೆ? ಜಾತಿ ವಿನಾಶ ಎಂತು?
‘ಜಾತಿ ಒಂದು ಮನಸ್ಥಿತಿ. ಹಿಂದೂಗಳು ಅಮಾನವೀಯರು- ತಲೆಕೆಟ್ಟವರು ಮತ್ತು ಈ ಕಾರಣಗಳಿಗಾಗಿ ಜಾತಿಯನ್ನು ಅನುಸರಿಸುತ್ತಾರೆ ಎಂಬುದು ಸರಿಯಲ್ಲ. ಅವರು ಆಳವಾಗಿ ಧಾರ್ಮಿಕರು ಎಂಬ ಕಾರಣಕ್ಕಾಗಿ ಜಾತಿಯನ್ನು ಪಾಲಿಸುತ್ತಾರೆ. ಜಾತಿಯನ್ನು ಅನುಸರಿಸುವುದು ತಪ್ಪಲ್ಲ. ನನ್ನ ದೃಷ್ಟಿಯಲ್ಲಿ ಜಾತಿಯ ಮನಸ್ಥಿತಿಯನ್ನು ತುಂಬಿರುವ ಧರ್ಮವೇ ತಪ್ಪು. ಹೀಗಾಗಿ ಜಾತಿಗ್ರಸ್ತ ಧರ್ಮವನ್ನು ಬೋಧಿಸುವ ಶಾಸ್ತ್ರಗಳೇ ನಿಜ ಶತ್ರುಗಳು. ಸಹಭೋಜನ, ಅಂತರ್ಜಾತೀಯ ಮದುವೆ, ಅಂತರ್ಜಾತಿ ಭೋಜನ ಅಥವಾ ಅಂತರ್ಜಾತಿ ಮದುವೆಗಳ ಉತ್ಸವಾಚರಣೆ ಮಾಡುವುದಿಲ್ಲವೆಂದು ಜನರನ್ನು ಜರೆಯುವುದು, ಟೀಕಿಸುವುದು ವ್ಯರ್ಥ. ಶಾಸ್ತ್ರಗಳ ಪಾವಿತ್ರ್ಯ ಕುರಿತ ನಂಬಿಕೆಯನ್ನು ನಾಶಪಡಿಸುವುದೇ ನಿಜವಾದ ಪರಿಹಾರ. ಮಹಾತ್ಮಾ ಗಾಂಧಿ ಸೇರಿದಂತೆ ಅಸ್ಪೃಶ್ಯತಾ ನಿವಾರಣೆಯಂತಹ ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡವರಿಗೆ ಈ ಸಂಗತಿ ಅರ್ಥವಾಗುತ್ತಿಲ್ಲ. ಜನ ಹೇಗೆ ನಡೆದುಕೊಳ್ಳುತ್ತಿದ್ದಾರೋ ಹಾಗೆ ನಡೆದುಕೊಳ್ಳಬಾರದೆಂದರೆ ಅವರ ತಲೆಗಳಿಗೆ ತುಂಬಲಾಗಿರುವ ಶಾಸ್ತ್ರಗಳ ಕುರಿತ ಪಾವಿತ್ರ್ಯವನ್ನು ಗುರಿಯಾಗಿಸಬೇಕು. ಶಾಸ್ತ್ರಗಳ ಮಂಕುಬೂದಿಯ ಮೋಹದಿಂದ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯನ್ನು ಮುಕ್ತಗೊಳಿಸಿ, ಅವರ ಮಿದುಳುಗಳನ್ನು ಸ್ವಚ್ಛಗೊಳಿಸಿದರೆ ಅವನು ಅಥವಾ ಅವಳು ತಂತಾನೇ ಅಂತರ್ಜಾತಿ ಮದುವೆಯಾಗುತ್ತಾರೆ, ಅಂತರ್ಜಾತಿ ಸಹಭೋಜನ ಮಾಡುತ್ತಾರೆ. ನೀವು ಪ್ರತ್ಯೇಕವಾಗಿ ಹೇಳಬೇಕಾದ ಪ್ರಸಂಗವೇ ಬರುವುದಿಲ್ಲ’.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’ (ಭಾಗ- 1)
‘ಜಾತಿಗೆ ಇಂದಿಗೂ ಸಮರ್ಥಕರಿದ್ದಾರೆ ಎನ್ನುವ ಸಂಗತಿಯೇ ಕರುಣಾಜನಕ. ಶ್ರಮ ವಿಭಜನೆಗೆ ಮತ್ತೊಂದು ಹೆಸರೇ ಜಾತಿ ವ್ಯವಸ್ಥೆಯಾಗಿದ್ದು, ಶ್ರಮವಿಭಜನೆಯು ನಾಗರಿಕ ಸಮಾಜದ ಹೆಗ್ಗುರುತಾಗಿದ್ದು, ಈ ವ್ಯವಸ್ಥೆಯಲ್ಲಿ ತಪ್ಪೇನೂ ಇಲ್ಲ ಎಂದು ವಾದಿಸಲಾಗುತ್ತದೆ. ವಾಸ್ತವದಲ್ಲಿ ಜಾತಿ ವ್ಯವಸ್ಥೆಯು ಶ್ರಮ ವಿಭಜನೆ ಮಾತ್ರವೇ ಅಲ್ಲ, ಶ್ರಮಿಕರ ವಿಭಜನೆಯೂ ಹೌದು. ಈ ಶ್ರಮವಿಭಜನೆಯಲ್ಲಿ ವ್ಯಕ್ತಿಯ ಆಯ್ಕೆಗೆ, ಭಾವನೆಗೆ, ಆದ್ಯತೆಗೆ ಅವಕಾಶವೇ ಇಲ್ಲ. ವಿಧಿವಾದವೇ ಈ ವಿಭಜನೆಯ ಆಧಾರ’.

‘ಜಾತಿಯ ಉದ್ದೇಶ ಜನಾಂಗೀಯ ಪರಿಶುದ್ಧತೆ ಮತ್ತು ರಕ್ತದ ಪರಿಶುದ್ಧತೆಯನ್ನು ಸಂರಕ್ಷಿಸುವುದು ಎಂಬ ಒಂದು ವಾದವಿದೆ. ಆದರೆ ಮಾನವ ವಂಶಶಾಸ್ತ್ರಜ್ಞರು ಹೇಳುವಂತೆ ಪರಿಶುದ್ಧ ಸಂತತಿಯ ಮನುಷ್ಯರೆಂಬುವವರು ಇಲ್ಲವೇ ಇಲ್ಲ. ಪ್ರಪಂಚದ ಎಲ್ಲ ಭಾಗಗಳಲ್ಲೂ ಎಲ್ಲ ಸಂತತಿಗಳ ಮಿಶ್ರಣವೇ ನೆಲೆಸಿದೆ. ಭಾರತದ ಜನರಿಗೆ ಈ ಮಾತು ವಿಶೇಷವಾಗಿ ಅನ್ವಯಿಸುತ್ತದೆ. ವಿದೇಶೀ ಎಳೆ ಇಲ್ಲದಿರುವ ಜಾತಿಯಾಗಲೀ, ವರ್ಗವೇ ಆಗಲಿ ಭಾರತದಲ್ಲಿ ಇಲ್ಲ. ಕೇವಲ ರಜಪೂತರು ಮತ್ತು ಮರಾಠರಂತಹ ಯೋಧ ವರ್ಗಗಳಲ್ಲಿ ಮಾತ್ರವೇ ಅಲ್ಲ, ಎಲ್ಲ ವಿದೇಶೀ ಮಿಶ್ರಣದಿಂದ ಮುಕ್ತರು ತಾವು ಎಂಬ ಭ್ರಮೆಯಲ್ಲಿ ಮುಳುಗಿರುವ ಬ್ರಾಹ್ಮಣರಲ್ಲೂ ಪರಕೀಯ ರಕ್ತ ಬೆರೆತಿದೆ ಎಂದು ಡಿ.ಆರ್. ಭಂಡಾರ್ಕರ್ ತಮ್ಮ Foreign Elements in the Hindu Population ಕೃತಿಯಲ್ಲಿ ಹೇಳಿದ್ದಾರೆ.. .. ಪಂಜಾಬಿನ ಬ್ರಾಹ್ಮಣ ಮತ್ತು ಮದ್ರಾಸಿನ ಬ್ರಾಹ್ಮಣನ ನಡುವೆ ಯಾವ ಜನಾಂಗೀಯ ನಂಟು ಉಂಟು? ಬಂಗಾಳದ ಮತ್ತು ಮದ್ರಾಸಿನ ಅಸ್ಪೃಶ್ಯರ ನಡುವೆ ಜನಾಂಗೀಯ ಮೈತ್ರಿಯಾದರೂ ಏನಿದೆ? ಪಂಜಾಬಿನ ಚಮ್ಮಾರ ಮತ್ತು ಅದೇ ರಾಜ್ಯದ ಬ್ರಾಹ್ಮಣನ ನಡುವೆ ಜನಾಂಗೀಯ ವ್ಯತ್ಯಾಸ ಏನಿದೆ? ಮದ್ರಾಸಿನ ಬ್ರಾಹ್ಮಣ ಮತ್ತು ಅಸ್ಪೃಶ್ಯನ ನಡುವೆ ಯಾವ ಜನಾಂಗೀಯ ವ್ಯತ್ಯಾಸ ಕಂಡು ಬರುತ್ತದೆ? ಪಂಜಾಬಿನ ಬ್ರಾಹ್ಮಣ ಮತ್ತು ಅದೇ ರಾಜ್ಯದ ಚಮ್ಮಾರನ ಜನಾಂಗೀಯ ಮೂಲ ಒಂದೇ. ಮದ್ರಾಸಿನ ಬ್ರಾಹ್ಮಣ ಮತ್ತು ಅದೇ ರಾಜ್ಯದ ಅಸ್ಪೃಶ್ಯ ಒಂದೇ ಜನಾಂಗೀಯ ಮೂಲದಿಂದ ಬಂದವರು. ಜಾತಿ ವ್ಯವಸ್ಥೆ ಜನಾಂಗೀಯ ವಿಭಜನೆಯನ್ನು ಸೂಚಿಸುವುದಿಲ್ಲ. ಅದು ಒಂದೇ ಜನಾಂಗದ ಸಾಮಾಜಿಕ ವಿಭಜನೆ’.
‘ಪ್ರತಿಯೊಬ್ಬ ಹಿಂದೂವಿನಲ್ಲಿ ಇರುವ ಪ್ರಜ್ಞೆ ತನ್ನ ಜಾತಿಯ ಪ್ರಜ್ಞೆ. ಈ ಕಾರಣದಿಂದಾಗಿಯೇ ಹಿಂದೂಗಳು ಒಂದು ಸಮಾಜವಾಗಿ ಇಲ್ಲವೇ ಒಂದು ರಾಷ್ಟ್ರವಾಗಿ ಹೊಮ್ಮಲಾರರು. ಕೇವಲ ನಂಬಿಕೆಗಳು ಮತ್ತು ಆಲೋಚನೆಗಳಷ್ಟೇ ಮನುಷ್ಯರನ್ನು ಸಮಾಜದಲ್ಲಿ ಒಂದಾಗಿ ಬೆಸೆಯಲಾರವು. ವಸ್ತುಗಳು- ಸಂಗತಿಗಳು ಭೌತಿಕವಾಗಿ ಒಬ್ಬರಿಂದ ಮತ್ತೊಬ್ಬರ ಕೈಗೆ ಇಟ್ಟಿಗೆಗಳಂತೆ ‘ಪಾಸ್’ ಆಗಬಹುದು ಅಷ್ಟೇ. ಇದೇ ರೀತಿಯಲ್ಲಿ ಒಂದು ಗುಂಪಿನ ರೂಢಿಗಳು ಹವ್ಯಾಸಗಳು ಪದ್ಧತಿಗಳು, ನಂಬಿಕೆಗಳು ಹಾಗೂ ಆಲೋಚನೆಗಳನ್ನು ಇನ್ನೊಂದು ಗುಂಪು ಕೈಗೆತ್ತಿಕೊಳ್ಳಬಹುದು. ಭಾರತೀಯರು ಕೇವಲ ಒಂದು ಅಮೂರ್ತ ಜನಸಮೂಹವೇ ವಿನಾ ಒಂದು ರಾಷ್ಟ್ರ ಆಗಿಯೇ ಇಲ್ಲ. ಈ ಸಂಗತಿಯನ್ನು ಒಪ್ಪಿಕೊಳ್ಳಲು ಹಲವಾರು ಭಾರತೀಯರಿಗೆ ಅವರ ದೇಶಪ್ರೇಮ ಅನುಮತಿ ನೀಡುವುದಿಲ್ಲ. ಬಹುತ್ವದಲ್ಲಿ ಅಂತರ್ಗತವಾಗಿರುವ ಮೂಲಭೂತ ಏಕತೆಯ ಎಳೆಯೊಂದಿದೆ. ಹೀಗಾಗಿ ಹವ್ಯಾಸಗಳು, ರೂಢಿಗಳು ಆಚರಣೆಗಳು, ಪದ್ಧತಿಗಳು, ನಂಬಿಕೆಗಳ ಸಮಾನತೆಯನ್ನು ಭಾರತದಾದ್ಯಂತ ಕಾಣಬಹುದು’ ಎಂದು ಅವರು ವಾದಿಸುತ್ತಾರೆ.
ಇಷ್ಟಿದ್ದ ಮಾತ್ರಕ್ಕೇ ಹಿಂದೂಗಳು ಒಂದು ಸಮಾಜ ಎನಿಸಿಬಿಡುತ್ತಾರೆಂಬ ತೀರ್ಮಾನವನ್ನು ಒಪ್ಪುವುದು ಸಾಧ್ಯವಿಲ್ಲ. ಒಪ್ಪಿಕೊಂಡೆವೆಂದರೆ ಸಮಾಜವೊಂದನ್ನು ರೂಪಿಸುವ ಅಗತ್ಯಾಂಶಗಳನ್ನು ಅಪಾರ್ಥ ಮಾಡಿಕೊಂಡಂತೆಯೇ ಸರಿ. ವ್ಯಕ್ತಿಯೊಬ್ಬ ತನ್ನ ಸಮಾಜದಿಂದ ಮೈಲುಗಟ್ಟಲೆ ದೂರದಲ್ಲಿ ವಾಸ ಮಾಡಿದ ಮಾತ್ರಕ್ಕೇ ಆ ಸಮಾಜದಿಂದ ಹೇಗೆ ದೂರ ಆಗುವುದಿಲ್ಲವೋ. ಅದೇ ರೀತಿ ಕೇವಲ ದೈಹಿಕ ಸಾಮೀಪ್ಯದಲ್ಲಿ ಜೀವಿಸುವುದರಿಂದ ಮಾತ್ರವೇ ಮನುಷ್ಯರು ಒಂದು ಸಮಾಜವಾಗಿ ರೂಪುಗೊಳ್ಳಲಾರರು. ಹವ್ಯಾಸ ಪದ್ಧತಿಗಳ ನಡುವಣ ಹೋಲಿಕೆಗಳು ಮತ್ತು ಸಾಂಸ್ಕೃತಿಕ ಹೋಲಿಕೆಗಳಿಗೆ ಅವುಗಳ ಪ್ರಸಾರ ಇಲ್ಲವೇ ಹರಡುವಿಕೆಯೇ ಕಾರಣ. ಹೀಗಾಗಿಯೇ ಸಮೀಪದಲ್ಲಿ ವಾಸ ಮಾಡದೆ ಹೋದರೂ ಹಲವು ಬಗೆಯ ಆದಿಮ ಬುಡಕಟ್ಟುಗಳ ಆಚರಣೆ, ಅಭ್ಯಾಸ, ರೂಢಿಗಳು ನಂಬಿಕೆಗಳು ಆಲೋಚನೆಗಳಲ್ಲಿ ಕಂಡು ಬರುವ ಹೋಲಿಕೆಗಳಿಗೂ ಅವುಗಳ ಹರಡುವಿಕೆಯೇ ಕಾರಣ. ಆದರೆ ಈ ಹೋಲಿಕೆಗಳನ್ನಷ್ಟೇ ಪರಿಗಣಿಸಿ ಈ ಎಲ್ಲ ಆದಿಮ ಬುಡಕಟ್ಟುಗಳನ್ನು ಒಂದು ಸಮಾಜವಾಗಿ ರೂಪುಗೊಳ್ಳುತ್ತವೆ ಎಂದು ಯಾರೂ ಹೇಳಲಾಗದು. ಸಮಾನ ಸಂಗತಿಗಳ ಆಧಾರದ ಮೇಲೆ ಸಮಾಜ ರೂಪುಗೊಳ್ಳುತ್ತದೆ. ಕೇವಲ ಹೋಲಿಕೆಗಳು ಸಮಾನ ಸಂಗತಿಗಳಾಗುವುದಿಲ್ಲ. ಮನುಷ್ಯರು ಸಮಾನ ಸಂಗತಿಗಳನ್ನು ಹೊಂದಿರುವ ಏಕೈಕ ಮಾರ್ಗ ಪರಸ್ಪರರೊಂದಿಗೆ ಸಂವಹನದಲ್ಲಿರುವುದು. ಇತರರ ನಡವಳಿಕೆಯನ್ನು ಒಪ್ಪಿದಂತೆ ನಡೆದುಕೊಂಡರೆ ಸಾಲದು. ಹೋಲಿಕೆ ಇದ್ದರೂ, ಮನುಷ್ಯರನ್ನು ಒಂದು ಸಮಾಜದಲ್ಲಿ ಬೆಸೆಯಲು ಸಮಾನಾಂತರ ಚಟುವಟಿಕೆಯೊಂದೇ ಸಾಕಾಗುವುದಿಲ್ಲ. ಹಿಂದೂಗಳಲ್ಲಿನ ನಾನಾ ಜಾತಿಗಳು ಒಂದೇ ಹಬ್ಬವನ್ನು ಆಚರಿಸುವ ಸಂಗತಿ ಈ ಮಾತಿಗೆ ರುಜುವಾತು. ಆದರೂ ನಾನಾ ಜಾತಿಗಳಿಂದ ಒಂದೇ ಹೋಲಿಕೆಯ ಹಬ್ಬಗಳ ಈ ಸಮಾನಾಂತರ ಆಚರಣೆ, ಈ ಜಾತಿಗಳನ್ನು ಇಡಿಯಾಗಿ ಹಿಡಿದಿಟ್ಟಿಲ್ಲ. ಇತರರ ಯಶಸ್ಸನ್ನು ತನ್ನ ಯಶಸ್ಸೆಂದೂ ಇತರರ ವೈಫಲ್ಯಗಳನ್ನು ತನ್ನ ವೈಫಲ್ಯವೆಂದೂ ಭಾವನಾತ್ಮಕವಾಗಿ ಅನುಭವಿಸಿ ಹಂಚಿಕೊಳ್ಳುವ ಚಟುವಟಿಕೆ ಮನುಷ್ಯರನ್ನು ಒಂದು ಸಮಾಜವಾಗಿ ಬೆಸೆಯುತ್ತದೆ. ಜಾತಿ ವ್ಯವಸ್ಥೆಯು ಸಮಾನ ಚಟುವಟಿಕೆಯನ್ನು ತಡೆ ಹಿಡಿಯುತ್ತದೆ ಮತ್ತು ಹೀಗೆ ತಡೆ ಹಿಡಿಯುವ ಕ್ರಿಯೆಯೇ ಹಿಂದೂಗಳನ್ನು ಒಂದು ಸಮಾಜವಾಗಿ ರೂಪುಗೊಳ್ಳುವುದನ್ನು ತಡೆ ಹಿಡಿದಿದೆ’.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು
‘ವಿದ್ವಾಂಸನೊಬ್ಬನನ್ನು ಬ್ರಾಹ್ಮಣನೆಂಬ ಹಣೆಪಟ್ಟಿ ಹಚ್ಚದೆ ಗೌರವಿಸಬಹುದು, ಯೋಧನೊಬ್ಬನ ಕ್ಷತ್ರಿಯ ಪದವಿಯ ಆಚೆಗೂ ಸಮ್ಮಾನ ಗಳಿಸಬಲ್ಲ. ಐರೋಪ್ಯ ಸಮಾಜವು ತನ್ನ ಯೋಧರನ್ನು ಮತ್ತು ಸೇವಕರನ್ನು ಯಾವುದೇ ಶಾಶ್ವತ ಹಣೆಪಟ್ಟಿ ಹಚ್ಚದೆ ಗೌರವಿಸಬಹುದಾದರೆ, ಹಿಂದೂ ಸಮಾಜಕ್ಕೇಕೆ ಇಷ್ಟು ಕಷ್ಟವೆನಿಸಬೇಕು’ ಎಂಬ ಪ್ರಶ್ನೆಯನ್ನು ಆರ್ಯಸಮಾಜಗಳ ಮೂಲಕ ವಿಶಾಲ ಹಿಂದೂ ಸಮಾಜಕ್ಕೆ ಕೇಳುತ್ತಾರೆ ಅಂಬೇಡ್ಕರ್.
ಹಿಂದೂಗಳು ವೇದ, ಸ್ಮೃತಿ ಅಥವಾ ಸದಾಚಾರವನ್ನು ಪಾಲಿಸಬೇಕು. ಉಳಿದೆಲ್ಲವೂ ನಿಷಿದ್ಧ. ವೇದಗಳು ಮತ್ತು ಸ್ಮೃತಿಗಳ ಕುರಿತು ಸಂದೇಹ ಬಂದಾಗ ಅವುಗಳನ್ನು ಹೇಗೆ ವ್ಯಾಖ್ಯಾನ ಮಾಡಬೇಕು? ಈ ಕುರಿತು ಮನು ವಿಧಿಸಿರುವ ಕಟ್ಟಳೆಯಿದೆ. ಈ ಕಟ್ಟಳೆಯ ಪ್ರಕಾರ ವೇದಗಳು ಮತ್ತು ಸ್ಮೃತಿಗಳ ವ್ಯಾಖ್ಯಾನಕ್ಕೆ ವೈಚಾರಿಕತೆಯನ್ನು ಅನ್ವಯಿಸುವುದು ನಿಷಿದ್ಧ. ಅಷ್ಟೇ ಅಲ್ಲ, ತೀವ್ರ ಖಂಡನೀಯ ಕೂಡ. ಸ್ಮೃತಿ ಮತ್ತು ಶ್ರುತಿಗಳ ನಡುವೆ ಸಂಘರ್ಷ ಏರ್ಪಟ್ಟಾಗ ಶ್ರುತಿಯೇ ಅಂತಿಮ. ಎರಡರ ನಡುವೆ ಯಾವುದು ತರ್ಕಬದ್ಧ ಎಂದು ಕಂಡು ಹಿಡಿಯುವ ಪ್ರಯತ್ನ ಸಲ್ಲದು. ಸ್ಮೃತಿಗಳ ನಡುವೆ ಸಂಘರ್ಷ ಏರ್ಪಟ್ಟಾಗ ಮನುಸ್ಮೃತಿಯೇ ಅಂತಿಮ. ಎರಡರ ನಡುವೆ ಯಾವ ಸ್ಮೃತಿ ಮೇಲು ಎಂಬ ತರ್ಕವನ್ನು ಮಾಡಕೂಡದು ಎಂದಿದ್ದಾನೆ ಬೃಹಸ್ಪತಿ. ಜಾತಿ ಮತ್ತು ವರ್ಣಗಳ ಕುರಿತು ತರ್ಕ ಮತ್ತು ವಾದವನ್ನು ಬಳಸಕೂಡದು ಎನ್ನುತ್ತವೆ ಶಾಸ್ತ್ರಗಳು. ಜಾತಿ ಮತ್ತು ವರ್ಣದಲ್ಲಿ ಹಿಂದೂವಿನ ನಂಬಿಕೆಯ ಅಡಿಪಾಯದ ವಿಚಾರಬದ್ಧ ಅಥವಾ ತರ್ಕಬದ್ಧ ಶೋಧನೆ ಅಥವಾ ಪರಿಶೀಲನೆಗೆ ಶಾಸ್ತ್ರಗಳ ಅನುಮತಿಯಿಲ್ಲ. ಉಲ್ಲಂಘಿಸುವವರನ್ನು ಪಾಪ ಸುತ್ತಿಕೊಳ್ಳುತ್ತದೆಯಂತೆ’.
ಹಿಂದೂ ಧರ್ಮ ಅಂದರೇನು?
‘ಅದೊಂದು ತತ್ವಗಳ ಸಂದಣಿಯೇ ಅಥವಾ ನಿಯಮಗಳ ಸಂಹಿತೆಯೇ? ವೇದಗಳು ಮತ್ತು ಸ್ಮೃತಿಗಳಲ್ಲಿರುವಂತೆ ಹಿಂದೂ ಧರ್ಮವು ಯಜ್ಞ ಸಂಬಂಧಿ ಬಲಿಯ ಕುರಿತ, ಸಾಮಾಜಿಕ, ರಾಜಕೀಯ ಹಾಗೂ ನೈರ್ಮಲ್ಯ ನಿಯಮಗಳು ಮತ್ತು ನಿಬಂಧನೆಗಳ ಮಿಶ್ರಣ. ಹಿಂದೂಗಳು ಧರ್ಮ ಎಂದು ಕರೆಯುವುದೆಲ್ಲ ಬಹುಸಂಖ್ಯೆಯ ಆಜ್ಞೆ ಆದೇಶಗಳು ಮತ್ತು ವಿಧಿ ನಿಷೇಧಗಳಷ್ಟೇ. ನಿಜವಾದ ಆಧ್ಯಾತ್ಮಿಕ ತತ್ವಗಳ ಅರ್ಥದಲ್ಲಿ ಧರ್ಮ ಎಂಬುದು ವಿಶ್ವಾತ್ಮಕವಾಗಿರಬೇಕು, ಎಲ್ಲ ಮನುಷ್ಯ ಜನಾಂಗಗಳಿಗೆ, ಎಲ್ಲ ದೇಶ ಕಾಲಗಳಿಗೆ ಅನ್ವಯ ಆಗಬೇಕು, ಆದರೆ ಹಿಂದೂವಿನ ಬದುಕಿನಲ್ಲಿ ಈ ಅಂಶಗಳಿಲ್ಲ. ಹೀಗಾಗಿ ವೇದ ಮತ್ತು ಸ್ಮೃತಿಗಳಲ್ಲಿ ಹಾಗೂ ಭಾಷ್ಯ ಬರೆದವರು ಅರ್ಥ ಮಾಡಿಕೊಂಡಿರುವಂತೆ, ಧರ್ಮ ಎಂದರೆ ವಿಧಿ ನಿಷೇಧಗಳೇ ಆಗಿದೆ. ಅಧ್ಯಾದೇಶಗಳ ದುಷ್ಟತನ ಅನ್ಯಾಯವನ್ನು ಒಳಗೊಂಡಿರುವ, ಬೇರೆ ಬೇರೆಯವರಿಗೆ, ಬೇರೆ ಬೇರೆಯಾದ ಭೇದಭಾವದ ಈ ಅನವರತ ಅಖೈರು ಸಂಹಿತೆಯನ್ನು ಧರ್ಮವೆಂದು ಕರೆಯಲು ನಾನು ಒಪ್ಪುವುದಿಲ್ಲ. ಮನುಷ್ಯತ್ವ -ಮಾನವೀಯತೆಯನ್ನು ಊನಗೊಳಿಸುವ ಧರ್ಮವನ್ನು ನಾಶಗೊಳಿಸಬೇಕು. ಇಂತಹ ಧರ್ಮವನ್ನು ನಾಶಗೊಳಿಸುವುದು ಅಧರ್ಮ ಆಗುವುದಿಲ್ಲ. ಈ ಮುಖವಾಡವನ್ನು ಹರಿದೊಗೆಯುವುದು ನಿಮ್ಮ ಪರಮ ಕರ್ತವ್ಯ ಆಗಬೇಕು’.

‘ನನ್ನ ದಾರಿಯಲ್ಲಿ ಅಲ್ಲವಾದರೂ ಸರಿ, ನಿಮ್ಮ ದಾರಿಯಲ್ಲಾದರೂ ಜಾತಿಯನ್ನು ಬುಡಮೇಲು ಮಾಡಿರಿ. ಕ್ಷಮಿಸಿ, ನಾನು ನಿಮ್ಮೊಡನೆ ಇರುವುದಿಲ್ಲ. ಬದಲಾಗಲು (ಹಿಂದೂ ಧರ್ಮದಿಂದ ಹೊರಬರಲು) ತೀರ್ಮಾನಿಸಿದ್ದೇನೆ. ಕಾರಣಗಳನ್ನು ಹೇಳುವ ಸ್ಥಳ ಇದಲ್ಲ. ಆದರೆ ನಿಮ್ಮ ಧರ್ಮದ ತೆಕ್ಕೆಯಿಂದ ಹೊರ ಹೋದಾಗಲೂ ನಿಮ್ಮ (ಜಾತ್ ಪಾತ್ ತೋಡಕ್ ಮಂಡಲ್) ಆಂದೋಲನವನ್ನು ಸಹಾನುಭೂತಿಯಿಂದ ನೋಡುತ್ತೇನೆ, ನನ್ನ ನೆರವೂ ನಿಮಗೆ ಸಿಗುತ್ತದೆ. ಜಾತಿ ಎಂಬುದು ಹಿಂದೂಗಳ ಪ್ರಾಣದುಸಿರು. ಆದರೆ ಹಿಂದೂಗಳು ಎಲ್ಲೆಡೆ ಗಾಳಿಯನ್ನು ಮಲಿನಗೊಳಿಸಿದ್ದಾರೆ. ಸಿಖ್ಖರು, ಮುಸಲ್ಮಾನರು ಮತ್ತು ಕ್ರೈಸ್ತರು ಎಲ್ಲರೂ ಮಲಿನ ಗಾಳಿಯ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿಗೆ ತುತ್ತಾಗಿ ನರಳುತ್ತಿರುವ ಎಲ್ಲರಿಗೂ ನೀವು ನೆರವಾಗಬೇಕಿದೆ. ನಿಮ್ಮ ಕೆಲಸ ಸ್ವರಾಜ್ಗಿಂತ ದೊಡ್ಡದು. ಸ್ವರಾಜ್ಗಿಂತ ಹೆಚ್ಚು ಮುಖ್ಯವಾದದ್ದು’.
ಇದನ್ನೂ ಓದಿರಿ: ಅಂಬೇಡ್ಕರ್ ಕನಸಿನ ದಲಿತ ಪತ್ರಿಕೋದ್ಯಮ ನನಸಾಗಲಿಲ್ಲ!
‘ಹಿಂದೂ ಸಮಾಜವು ಜಾತಿಮುಕ್ತವಾದಾಗ ಮಾತ್ರ ತನ್ನನ್ನು ತಾನು ರಕ್ಷಿಸಿಕೊಳ್ಳುವ ಆಂತರಿಕ ಶಕ್ತಿಯನ್ನು ಗಳಿಸಿಕೊಳ್ಳುತ್ತದೆ. ಸ್ವರಾಜ್ ಎಂಬುದು ಹಿಂದೂಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಹೆಜ್ಜೆಯಾಗಿಬಿಡುವ ಅಪಾಯವಿದೆ’.
‘ನಿಮ್ಮ್ ಕೆಲ್ಸ ಏನು’ ಅಂತ ಹಳ್ಳಿಪ್ರದೇಶದ ಪೊಲೀಸನನ್ನು ಕೇಳಿದರೆ, ‘ಶಾಂತಿಯನ್ನು ಕಾಪಾಡುವುದು’ ಎಂಬುದೇ ಆತನ ಉತ್ತರವಾಗಿರುತ್ತದೆ. ಬಹುತೇಕ ಸನ್ನಿವೇಶಗಳಲ್ಲಿ ಶಾಂತಿಯನ್ನು ಕಾಪಾಡುವುದು ಎಂಬುದರ ಅರ್ಥ ಜಾತಿವ್ಯವಸ್ಥೆಯನ್ನು ಎತ್ತಿ ಹಿಡಿಯುವುದು ಎಂದೇ ಆಗಿರುತ್ತದೆ. ದಲಿತರ ಆಶೋತ್ತರಗಳು ‘ಇಂತಹ ಶಾಂತಿ’ಯ ಭಂಗ ಎನಿಸಿಕೊಳ್ಳುತ್ತವೆ. ‘ಅನಾಇಲೇಷನ್ ಆಫ್ ಕಾಸ್ಟ್’ ಕೂಡ ಇಂತಹುದೇ ಒಂದು ಘನವಾದ ಶಾಂತಿಭಂಗ ಎಂದು ಬಣ್ಣಿಸುತ್ತಾರೆ ಬರೆಹಗಾರ್ತಿ ಅರುಂಧತಿ ರಾಯ್.
(ಮುಗಿಯಿತು..)
(‘ಈ ದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಡಿ ಉಮಾಪತಿ
ಹಿರಿಯ ಪತ್ರಕರ್ತರು




