ಬೆಂಗಳೂರು ನಗರದ ಯಲಹಂಕ ಸಮೀಪವಿರುವ ಕೋಗಿಲು ಬಡಾವಣೆಯ ಫಕೀರ್ ಕಾಲೋನಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಅಧಿಕಾರಿಗಳು ಸುಮಾರು 180 ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಅಲ್ಲಿದ್ದ 2500ಕ್ಕೂ ಹೆಚ್ಚು ಜನ ಬೀದಿಪಾಲಾಗಿದ್ದಾರೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೋಗಿಲು ಗ್ರಾಮದ ಸರ್ವೆ ನಂ.99ರಲ್ಲಿ ಸರ್ಕಾರಕ್ಕೆ ಸೇರಿದ ಗೋಮಾಳ ಜಾಗದಲ್ಲಿ 25-30 ವರ್ಷಗಳಿಂದಲೂ ನಿರ್ಗತಿಕರು, ಬಡವರು ಮನೆ ಕಟ್ಟಿಕೊಂಡು ನೆಲೆಸಿದ್ದರು. ಅಲ್ಲಿರುವವರಲ್ಲಿ ಬಹುತೇಕ ಮನೆಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ‘ಫಕೀರ್’ ಎಂಬ ಮುಸ್ಲಿಂ ಬಿಕ್ಷುಕ ಸಮುದಾಯವರಾಗಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕೋಗಿಲು ಗ್ರಾಮದಲ್ಲಿ 14 ಎಕರೆ 36 ಗುಂಟೆ ವಿಸ್ತೀರ್ಣದ ಪಾಲಿಕೆ ಜಾಗದಲ್ಲಿ 180 ಮನೆಗಳನ್ನು ಆಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಮತ್ತು ಜಿಬಿಎ ಸೇರಿ ಶನಿವಾರ (20/12/2025) ಬೆಳಗ್ಗೆ 6 ಗಂಟೆಗೆ 6 ಜೆಸಿಬಿಗಳು, 300ಕ್ಕೂ ಹೆಚ್ಚು ಪೊಲೀಸರು ಮತ್ತು ಜಿಬಿಎ ಮಾರ್ಷಲ್ ಗಳನ್ನು ಬಳಸಿಕೊಂಡು 180 ಮನೆಗಳನ್ನು ಧ್ವಂಸಗೊಳಿಸಲಾಗಿದೆ.
ಮಕ್ಕಳು, ಬಾಣಂತಿಯರು, ವಯಸ್ಸಾದವರು, ಅನಾರೋಗ್ಯಕ್ಕೀಡಾದವರು, ಬಿಕ್ಷೆ ಬೇಡಿ ಬದುಕುತ್ತಿದ್ದ ಜನರೆಲ್ಲರೂ ಬೀದಿಪಾಲಾಗಿದ್ದಾರೆ. ಮಲಗಲು ಸೂರಿಲ್ಲದೆ ಸುಮಾರು 2500 ಕ್ಕೂ ಹೆಚ್ಚು ಜನರ ಬದುಕು ಅತಂತ್ರ ಸ್ಥಿತಿಯಲ್ಲಿದೆ.
“ಡಿ. 20ರಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಪೊಲೀಸರು ಮತ್ತು ಜಿಬಿಎ ಮಾರ್ಷಲ್ ಗಳು ಏಕಾಏಕಿ ಯಾವುದೇ ಸೂಚನೆ ಕೊಡದೆ ಸ್ಥಳಕ್ಕೆ 6 ಜೆಸಿಬಿಗಳನ್ನು ತಂದರು. ಮನೆಯನ್ನು ಸುತ್ತಿವರಿದು, ಗ್ಯಾಸ್ ಸಿಲಿಂಡರ್ ಗಳನ್ನು ಹೊರಹಾಕಿ ಎಂದು ಹೇಳಿದರು. ಆದರೆ ಮನೆಯಲ್ಲಿದ್ದ ಪಾತ್ರೆ, ಬಟ್ಟೆ, ಇತರ ಯಾವುದೇ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲೂ ಬಿಡದೆ ದಿಢೀರನೇ ಜೆಸಿಬಿ ನುಗ್ಗಿಸಿ ಧ್ವಂಸಗೊಳಿಸಿದರು. ಏನಾಗುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲೇ, ಕಾಲೋನಿಯಲ್ಲಿದ್ದ ಅಷ್ಟೂ ಮನೆಗಳು ನೆಲಕ್ಕೆ ಉರುಳಿದವು. ಪ್ರಶ್ನೆ ಮಾಡೋಕೆ ಹೋದವರಿಗೆ ಪೊಲೀಸರು ಎದುರಿಸಿದರು. ಮಕ್ಕಳು, ಬಾಣಂತಿಯರು ಎಂದೂ ನೋಡದೆ ಮನೆಯಿಂದ ಹೊರಕ್ಕೆ ಎಳೆದು ಹಾಕಿದ್ದಾರೆ” ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡರು.
“ಯಲಹಂಕ ತಹಶೀಲ್ದಾರ್ 2019ರಲ್ಲಿ 94ಸಿಸಿ ಕಾಯ್ದೆಯಡಿ 148 ಕುಟುಂಬಗಳಿಗೆ ತಾತ್ಕಾಲಿಕ ಹಕ್ಕು ಪತ್ರಗಳನ್ನು ನೀಡಲಾಗಿದೆ ಎಂದು ಸ್ಥಳೀಯರೊಬ್ಬರು ಹೇಳಿದರು. ನಮ್ಮ ಬಳಿ ರೇಷನ್ ಕಾರ್ಡ್, ಕರೆಂಟ್ ಬಿಲ್, ಆಧಾರ್ ಕಾರ್ಡ್ ಎಲ್ಲಾ ಇದೆ. ಆದರೂ ನಮಗೆ ಹೆದರಿಸಿ ನಮ್ಮ ಮನೆಗಳನ್ನು ಧ್ವಂಸಗೊಳಿಸಿದರು.
ಮಕ್ಕಳಿಗೆ ಶಾಲೆಗೆ ಕಳಿಸೋಕೆ ಅವರ ಬುಕ್, ಬ್ಯಾಗ್ ಶಾಲೆ ಯೂನಿಫಾರಂ ಎಲ್ಲವೂ ಒಳಗಡೆ ಇದ್ದವು. ಹೊರಗೆ ತೆಗೆದುಕೊಳ್ಳಲು ಬಿಟ್ಟಿಲ್ಲ. ನನಗೆ ಎರಡು ಮಕ್ಕಳಿದ್ದಾರೆ. ಗಂಡ ಇಲ್ಲ. ನಾನು ಕಷ್ಟಪಟ್ಟು ಬೇರೆಯವರ ಮನೆ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಿದ್ದೆ. ಇಬ್ಬರು ಚಿಕ್ಕ ಮಕ್ಕಳು. ಈಗ ಮಲಗಲು ಜಾಗವಿಲ್ಲ. ಶೌಚಾಲಯವಿಲ್ಲದೆ ಹೆಣ್ಣು ಮಕ್ಕಳು ಪರದಾಡುವ ಸ್ಥಿತಿ ಬಂದಿದೆ. ನಮಗೆ ದಿಕ್ಕು ಕಾಣದಂತಾಗಿದೆ” ಎಂದು ಕಣ್ಣೀರು ಹಾಕುತ್ತ ಮನೆ ಕಳೆದುಕೊಂಡ ಸಂತ್ರಸ್ತೆ ರೆಹನಾ ಆಕ್ರೋಶ ವ್ಯಕ್ತಪಡಿಸಿದರು.
ಒಂದೆರಡು ದಿನ ಬಾಣಂತಿ ಇದ್ದಾರೆ. ಚಿಕ್ಕಮಕ್ಕಳು ದೂಳಲ್ಲಿ, ಹಾವು-ಪಾವು, ಚೇಳು ಬಂದರೆ ಯಾರು ಗತಿ. ಕುಡಿಯೋಕೆ ಒಂದು ಹನಿ ನೀರು ಸಹ ಇಲ್ಲದಾಗಿದೆ. ಮನೆಗಳನ್ನು ಧ್ವಂಸಗೊಳಿಸಿ 4 ರಿಂದ 5 ದಿನ ಆಯ್ತು ಇಲ್ಲಿವರೆಗೂ ಸಚಿವ ಕೃಷ್ಣಬೈರೇಗೌಡರು ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶದಿಂದ ಮಾತನಾಡಿದರು.
ಕೋಗಿಲು ಗ್ರಾಮದ ಸರ್ವೇ ನಂ.90 ರಲ್ಲಿ ಬರುವ ಫಕೀರ್ ಕಾಲೋನಿಯಲ್ಲಿ ಮತ್ತು ವಸೀಂ ಲೇಔಟ್ ನಲ್ಲಿ 165 ಮನೆಗಳು ನೆಲಸಮಗೊಂಡಿವೆ ಎಂದು ಹೆಸರೆಳಲಿಚ್ಚಿಸದ NGO ವರದಿ ಹೇಳುತ್ತದೆ. ಅದರ ಪ್ರಕಾರ ಫಕೀರ್ ಕಾಲೋನಿಯಲ್ಲಿ 48 ಮನೆಗಳು ನೆಲಸಮಗೊಂಡರೆ, ವಸೀಂ ಲೇಔಟ್ ನಲ್ಲಿ 82 ಮನೆಗಳು ಮತ್ತು ನ್ಯೂ ಹೆಚ್ ಹೆಚ್ (New House Hold) ನಲ್ಲಿ ಸುಮಾರು 35 ಮನೆಗಳು ಧ್ವಂಸಗೊಂಡಿವೆ. ಬಹುತೇಕ ಮುಸ್ಲಿಂ ಸಮುದಾಯಕ್ಕೆ ಸೇರಿದ ಮನೆಗಳು ಹೆಚ್ಚಿದ್ದು 132 ಮನೆ ಎಂದು ಗುರುತಿಸಲಾಗಿದೆ. ಹಿಂದೂಗಳ ಮನೆಗಳು 32 ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮನೆ 1 ಎಂದು ಗುರುತಿಸಲಾಗಿದೆ. ಈ 165 ಸಂಪೂರ್ಣ ಮನೆಗಳ ಜೊತೆಗೆ ಇನ್ನು 15 ಮನೆಗಳು ತಯಾರಿಯ ಹಂತದಲ್ಲಿದ್ದವು. ಒಟ್ಟು 180 ಮನೆಗಳು ನೆಲಸಮಗೊಂಡಿವೆ ಎನ್ನಲಾಗಿದೆ.
ಘನತ್ಯಾಜ್ಯ ನಿರ್ವಹಣೆ ನಿಯಮಿತ ಸಿಇಒ ಕರೀಗೌಡ ಐಎಎಸ್ ಅವರಿಗೆ ನಮ್ಮ ಈದಿನ ಡಾಟ್ ಕಾಮ್ ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.
“ಚಳಿಯಲ್ಲಿ ಮನೆಯಿಲ್ಲದೆ ಸಾವಿರಾರು ಬಡವರು ಪರದಾಡುತ್ತಿದ್ದಾರೆ. ಈಗ ತಕ್ಷಣಕ್ಕೆ ಅವರಿಗೆ ಎಲ್ಲಿಯಾದರೂ ಸೂರು ಮಾಡಿಕೊಡಬೇಕು. ಅಲ್ಲಿರುವವರೆಲ್ಲರೂ ಬಡವರು. ಬಾಡಿಗೆ ಮನೆಯನ್ನು ತೆಗೆದುಕೊಳ್ಳುವ ಶಕ್ತಿ ಇಲ್ಲದವರೇ ಇರುವುದು. ಕೃಷ್ಣ ಬೈರೇಗೌಡರು ಹೀಗೆ ಮಾಡಿದ್ದು ಯಾಕೆ ಎಂದು ಸ್ಪಷ್ಟನೆ ಕೊಡಬೇಕು” ಎಂದು ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿದ ಬಹುತ್ವ ಕರ್ನಾಟಕದ ತನ್ವೀರ್ ಅಹ್ಮದ್ ಆಗ್ರಹಿಸಿದ್ದಾರೆ.
ಇಡೀ ಬೆಂಗಳೂರಿನಲ್ಲಿ ಅಧಿಕೃತವಾಗಿ 350 ಸ್ಲಂಗಳಿವೆ. ಇವೆಲ್ಲವೂ ಕರ್ನಾಟಕ ಸ್ಲಂ ಬೋರ್ಡ್ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುತ್ತವೆ. ಆದರೆ ಫಕೀರ್ ಕಾಲೋನಿ ಮತ್ತು ವಸೀಂ ಲೇಔಟ್ ಸ್ಲಂ ಬೋರ್ಡ್ ಅಡಿಯಲ್ಲಿ ಬರದಿರುವುದರಿಂದಲೇ, ಸರ್ಕಾರವಾಗಲಿ ಅಥವಾ ಸಚಿವರಾಗಲಿ ತಮಗೆ ಇಷ್ಟ ಬಂದ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.





