'ಬೇಟಿ ಬಚಾವೋ ಬೇಟಿ ಪಡಾವೋ' ಮೋದಿಯವರ ಜನಪ್ರಿಯ ಘೋಷಣೆ. ಆದರೆ, ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿಯಿಂದ ಬೇಟಿಯರನ್ನು ರಕ್ಷಿಸುವುದೇ ದೊಡ್ಡ ಸವಾಲಾಗಿದೆ. ಬಿಜೆಪಿ ಮುಖಂಡರೇ ರೇಪಿಸ್ಟ್ಗಳಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದರೂ ಅವರನ್ನು ಪೆರೋಲ್ ಮೂಲಕ ಆರಾಮಾಗಿ ಇರಲು ಬಿಡಲಾಗುತ್ತಿದೆ. ಮತ್ತೊಂದೆಡೆ ಕೋರ್ಟ್ಗಳು ಶಿಕ್ಷೆಗೇ ತಡೆ ನೀಡುತ್ತಿವೆ. ಇದು ಇಡೀ ಮಹಿಳಾ ಕುಲಕ್ಕೆ ಮಾಡುತ್ತಿರುವ ಘೋರ ಅನ್ಯಾಯ.
ಭಾರತದಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಮಾತ್ರವಲ್ಲದೆ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ಕ್ರೌರ್ಯ ವಿಕೃತ ರೀತಿಯಲ್ಲಿ ಬೇರುಬಿಟ್ಟಿದೆ. ಪಿತೃಪ್ರಧಾನ ವ್ಯವಸ್ಥೆ, ಸಾಮಾಜಿಕ ಅಸಮಾನತೆ ಮತ್ತು ಶೋಷಣೆ, ನ್ಯಾಯ ವ್ಯವಸ್ಥೆಯ ದೌರ್ಬಲ್ಯಗಳು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಮೂಲವಾಗಿ ಉಳಿದಿವೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವ ಸುಮಾರು 18 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನೂ, ದಾಖಲಾಗದ ಪ್ರಕರಣಗಳ ಸಂಖ್ಯೆಯೂ ಬೃಹತ್ ಪ್ರಮಾಣದಲ್ಲಿದೆ ಎಂದು ಅಂದಾಜಿಸಲಾಗಿದೆ. ದಾಖಲಾದ ಪ್ರಕರಣಗಳನ್ನು ಗಮನಿಸಿದರೆ, ಭಾರತದಲ್ಲಿ ಸುಮಾರು 50 ನಿಮಿಷಕ್ಕೆ ಒಂದು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಕೃತ್ಯಗಳು ನಡೆಯುತ್ತಿವೆ.
ಈ ವರ್ಷ, 2025ರಲ್ಲಿ ಭಾರತದಾದ್ಯಂತ ಸುಮಾರು 4.5 ಲಕ್ಷ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ ಎಂದು ಅಂಕಿಅಂಶಗಳು ಹೇಳಿವೆ. ನಿಖರವಾದ ಅಂಕಿಅಂಶಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು NCRB ಹೇಳಿದೆ.
ಎನ್ ಸಿ ಆರ್ ಬಿ ಹೇಳುವಂತೆ, 2022ರಲ್ಲಿ 4,45,256 ಪ್ರಕರಣಗಳು, 2023ರಲ್ಲಿ 4,48,211 ಪ್ರಕರಣಗಳು, ಸುಮಾರು 4.3 ಲಕ್ಷ ಹಾಗೂ 2025ರಲ್ಲಿ ಅಂದಾಜು 4.5 ಲಕ್ಷ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ದಾಖಲಾದ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ 80,320 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ, ಬಾಯಿ ಮಾತಿನಲ್ಲಷ್ಟೇ ‘ಬೇಟಿ ಬಚಾವೋ – ಬೇಟಿ ಪಡಾವೋ’ ಎನ್ನುತ್ತಿರುವ ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ.
2025ರಲ್ಲಿ ನಡೆದ ಗಂಭೀರ ಲೈಂಗಿಕ ದೌರ್ಜನ್ಯ ಕೃತ್ಯಗಳಲ್ಲಿ ಕೇರಳದ 13 ವರ್ಷದ ಬಾಲಕಿಯ ಮೇಲೆ ಸುಮಾರು 58 ಕಾಮುಕರು ದೌರ್ಜನ್ಯ ಎಸಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆಯ ಮೇಲೆ ಶಾಲೆಯ ಸಹಪಾಠಿಗಳು, ಸಂಬಂಧಿಕರು, ನೆರೆಹೊರೆಯವರು ಹಾಗೂ ಅಪರಿಚಿತರು ನಿರಂತರವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಎಲ್ಲ 58 ಆರೋಪಿಗಳನ್ನೂ ಬಂಧಿಸಲಾಗಿದೆ.
ಕರ್ನಾಟಕದಲ್ಲಿ ನಡೆದ ಕೃತ್ಯಗಳಲ್ಲಿ ಕೊಪ್ಪಳದಲ್ಲಿ ಇಸ್ರೇಲ್ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿಯ ಮೇಲೆ ದುರುಳರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿತ್ತು. ಪ್ರಕರಣವು 2025ರ ಮಾರ್ಚ್ನಲ್ಲಿ ನಡೆದಿತ್ತು. ಗಂಗಾವತಿ ತಾಲೂಕಿನ ಸಾಣಾಪುರ ಬಳಿ ಇಸ್ರೇಲ್ ಪ್ರವಾಸಿ ಮಹಿಳೆ ಮತ್ತು ಸ್ಥಳೀಯ ಹೋಮ್ ಸ್ಟೇ ಮಾಲಕಿ ನಾಲೆಯ ಬಳಿ ಕುಳಿತಿದ್ದಾಗ, ಅವರ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಪ್ರಕರಣವು ದೇಶ ಮತ್ತು ವಿದೇಶಗಳಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು. ಆಕ್ರೋಶಕ್ಕೆ ಕಾರಣವಾಗಿತ್ತು.
19 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ, ಒಂದು ವಾರದಲ್ಲಿ 23 ಪುರುಷರಿಂದ ಸಾಮೂಹಿಕ ಅತ್ಯಾಚಾರ ಎಸಗಿದ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿತ್ತು. ಮಾರ್ಚ್ 29ರಿಂದ ಏಪ್ರಿಲ್ 4ರ ನಡುವೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆಯ ಕುರಿತು ಏಪ್ರಿಲ್ 6ರಂದು ಲಾಲ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಉತ್ತರಾಖಂಡ ನೈನಿತಾಲ್ನಲ್ಲಿ 12 ವರ್ಷದ ಬಾಲಕಿಯನ್ನು ಆರೋಪಿಯೊಬ್ಬ ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದನು. ಪ್ರಕರಣ ಬೆಳಕಿಗೆ ಬಂದಾಗ, ನೈನಿತಾಲ್ನಲ್ಲಿ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಆರೋಪಿಯನ್ನು ಬಂಧಿಸಲಾಗಿದೆ.
ಇದೇ ವರ್ಷದ ಜೂನ್ನಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವು ದೇಶದಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಸೌತ್ ಕೋಲ್ಕತ್ತಾ ಲಾ ಕಾಲೇಜಿನಲ್ಲಿ ಪರೀಕ್ಷಾ ಫಾರ್ಮ್ ಸಲ್ಲಿಸಲು ಬಂದಿದ್ದ ವಿದ್ಯಾರ್ಥಿಯನ್ನು ಕಾಲೇಜಿನ ಮಾಜಿ ವಿದ್ಯಾರ್ಥಿ ಮನೋಜಿತ್ ಮಿಶ್ರಾ ಮತ್ತು ಇತರ ಮೂವರು ಕಾಮುಕರು ಎಳೆದೊಯ್ದು, ಮದ್ಯ ಕುಡಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಮನೋಜಿತ್ ಮಿಶ್ರಾ ಮತ್ತು ಇತರ ನಾಲ್ವರು ಆರೋಪಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಾವನೇ ಸುಪಾರಿ ಕೊಟ್ಟು ನಾದಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿಸಿ, ಕೊಲೆ ಮಾಡಿರುವ ಭೀಕರ ಘಟನೆಯೊಂದು ಉತ್ತರ ಪ್ರದೇಶದ ಮುಜಫರ್ ನಗರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಫಬ್ರವರಿಯಲ್ಲಿ ನಡೆದಿತ್ತು.
ಉತ್ತರ ಪ್ರದೇಶದ ಮುರ್ಸಾನ್ ಎಂಬ ಗ್ರಾಮದಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿಯಲ್ಲಿ 14 ವರ್ಷದ ಬಾಲಕನ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು. ಈ ಘಟನೆ 2026ರ ಜೂನ್ನಲ್ಲಿ ನಡೆದಿತ್ತು. ಇದಿಷ್ಟೇ ಅಲ್ಲ, ಇನ್ನೂ ಹಲವಾರು ಪ್ರಕಣಗಳು ಇವೆ. ಉತ್ತರಪ್ರದೇಶ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಮಾಣದಲ್ಲಿ ಮುಂಚೂಣಿಯಲ್ಲಿದೆ. ಉತ್ತರಪ್ರದೇಶಕ್ಕೆ ಉತ್ತರಪ್ರದೇಶ ಎಂದು ಕರೆಯುವ ಬದಲಾಗಿ ಅದು ಅತ್ಯಾಚಾರಿಗಳ ಪ್ರದೇಶ ಎಂದು ಹೇಳುವುದೇ ಸೂಕ್ತ.
ಇನ್ನು ಕರ್ನಾಟಕದ ಬೆಂಗಳೂರಿನ ಯಲಹಂಕದಲ್ಲಿನ ಲಾಡ್ಜ್ ಒಂದರಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಈ ಘಟನೆ ಇದೇ ಡಿಸೆಂಬರ್ ತಿಂಗಳಿನಲ್ಲಿ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಕಣ್ಣೀರಲ್ಲಿ ಕರಗಿದ ಕುಸ್ತಿಪಟುಗಳ ಕನಸು: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ಭೂಷಣ್ಗೆ ಬಿಜೆಪಿ ‘ರಕ್ಷಾ ಕವಚ’
ಇನ್ನು ರಾಜಸ್ಥಾನದ ಉದಯಪುರದಲ್ಲಿ ಹುಟ್ಟುಹಬ್ಬದ ಪಾರ್ಟಿ ಮುಗಿದ ನಂತರ ಖಾಸಗಿ ಐಟಿ ಕಂಪನಿಯ ಮಹಿಳಾ ಮ್ಯಾನೇಜರ್ ಅನ್ನು ಮನೆಗೆ ಬಿಡುವ ನೆಪದಲ್ಲಿ ಚಲಿಸುವ ಕಾರಿನಲ್ಲಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಡಿಸೆಂಬರ್ನಲ್ಲಿ ನಡೆದಿದೆ.
ಇದೇ ಡಿಸೆಂಬರ್ನಲ್ಲಿ ಮತ್ತು ಬರುವ ಚಾಕೊಲೇಟ್ ಕೊಡಿಸಿ 13 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೇಶಾದ್ಯಂತ ಇಂತಹ ಹಲವಾರು ಭೀಕರ ಘಟನೆಗಳು ವರದಿಯಾಗಿವೆ. ರಾಷ್ಟ್ರರಾಜಧಾನಿ ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವು ಕೇವಲ ವ್ಯಕ್ತಿಗತ ಸಮಸ್ಯೆಯಲ್ಲ, ಅದು ಸಂಪೂರ್ಣ ಸಮಾಜದ ಮೇಲೆ ಪರಿಣಾಮ ಬೀರುವ ಗಂಭೀರ ವಿಚಾರವಾಗಿದೆ. ಪ್ರತಿಯೊಬ್ಬ ಮಹಿಳೆಯೂ ಭಯವಿಲ್ಲದೆ, ಗೌರವದಿಂದ ಮತ್ತು ಸುರಕ್ಷಿತವಾಗಿ ಬದುಕುವ ಹಕ್ಕು ಹೊಂದಿದ್ದಾಳೆ. ಈ ಹಕ್ಕನ್ನು ಕಾಪಾಡುವುದು ಸರ್ಕಾರದಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಜಾಗೃತಿ, ಶಿಕ್ಷಣ, ಕಾನೂನು ಮತ್ತು ಮಾನವೀಯತೆ ಇವು ಒಂದಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ದೌರ್ಜನ್ಯರಹಿತ ಸಮಾಜವನ್ನು ನಿರ್ಮಿಸಲು ಸಾಧ್ಯ. ಮಹಿಳೆಯರಿಗೆ ಗೌರವ ನೀಡುವ ಸಂಸ್ಕೃತಿ ಬೆಳೆದಾಗಲೇ ನಿಜವಾದ ಪ್ರಗತಿ ಸಾಧ್ಯವಾಗುತ್ತದೆ.

‘ಬೇಟಿ ಬಚಾವೋ ಬೇಟಿ ಪಡಾವೋ’ ಮೋದಿಯವರ ಜನಪ್ರಿಯ ಘೋಷಣೆ. ಆದರೆ, ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿಯಿಂದ ಬೇಟಿಯರನ್ನು ರಕ್ಷಿಸುವುದೇ ದೊಡ್ಡ ಸವಾಲಾಗಿದೆ. ಬಿಜೆಪಿ ಬೆಂಬಲಿತ ಸಾಧು ಸಂತರು, ಬಿಜೆಪಿ ಮುಖಂಡರೇ ರೇಪಿಸ್ಟ್ಗಳಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದರೂ ಅವರನ್ನು ಪೆರೋಲ್ ಮೂಲಕ ಆರಾಮಾಗಿ ಇರಲು ಬಿಡಲಾಗುತ್ತಿದೆ. ಮತ್ತೊಂದೆಡೆ ಕೋರ್ಟ್ಗಳು ಶಿಕ್ಷೆಗೇ ತಡೆ ನೀಡುತ್ತಿವೆ. ಇದು ಇಡೀ ಮಹಿಳಾ ಕುಲಕ್ಕೆ ಮಾಡುತ್ತಿರುವ ಘೋರ ಅನ್ಯಾಯ.




