ನಾಲ್ಕು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ, ಸಾವಿರ ಹಾಸಿಗೆ ಸಾಮರ್ಥ್ಯದ ಮಾನವ ಬಹು ಅಂಗಾಂಗ ಕಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ! ಇದು ಕಾಗದದ ಮೇಲಿನ ಯೋಜನೆ ಅಲ್ಲ, ಇದು ಸಾವಿರಾರು ಕುಟುಂಬಗಳ ಕಣ್ಣೀರನ್ನು ಒರೆಸುವ ಭರವಸೆ. ರಾಜೀವ್ಗಾಂಧಿ ಆಸ್ಪತ್ರೆ ಆವರಣದಲ್ಲಿ, ಮುಂದಿನ ಐದು ವರ್ಷಗಳಲ್ಲಿ ನಿರ್ಮಾಣಗೊಳ್ಳಲಿರುವ ಈ ಆಸ್ಪತ್ರೆ, ದೇಶದಲ್ಲಿಯೇ ಅಪರೂಪದ ಮಾದರಿಯಾಗಲಿದೆ.
ಕೆಲವು ಸಂಸ್ಥೆಗಳು ಸ್ಥಾಪಕರ ಕಾಲ ಮುಗಿದರೂ ಬದುಕುತ್ತವೆ, ಬೆಳೆಯುತ್ತವೆ, ಸಮಾಜದ ಆತ್ಮವಾಗುತ್ತವೆ. ಇನ್ನು ಕೆಲವು ಸಂಸ್ಥೆಗಳು ಕ್ಷಣಕಾಲ ದೀಪ್ತಿಯಾಗಿ ಉರಿದು, ನಂತರ ಮಂಕಾಗಿ ಮರೆಯಾಗಿ ಹೋಗುತ್ತವೆ. ಲಾಭವೇ ಏಕೈಕ ಗುರಿಯಾಗಿರುವ ಸಂಸ್ಥೆಗಳು ಕಾಲದ ಹೊಡೆತಕ್ಕೆ ನಿಲ್ಲಲಾಗುವುದಿಲ್ಲ. ಆದರೆ ಲಾಭಕ್ಕಿಂತ ಮಿಗಿಲಾದ ಧ್ಯೇಯ, ಮಾನವೀಯ ಹೊಣೆಗಾರಿಕೆ ಮತ್ತು ಸಮಾಜದ ಕಡೆಗಿನ ಬದ್ಧತೆಯನ್ನು ಹೊಂದಿರುವ ಸಂಸ್ಥೆಗಳು ಅವು ಕಾಲವನ್ನೇ ದಾಟಿ ನಿಲ್ಲುತ್ತವೆ. ಅದಕ್ಕಾಗಿಯೇ ಜಗತ್ತಿನಾದ್ಯಂತ ದೀರ್ಘಕಾಲ ಬದುಕಿದ ಅನೇಕ ಮಹಾನ್ ಸಂಸ್ಥೆಗಳು ಶಿಕ್ಷಣ, ಆರೋಗ್ಯ, ಜ್ಞಾನ, ಮಾನವ ಅಭಿವೃದ್ಧಿಯ ಜೊತೆಗಿನ ಸಂಬಂಧ ಹೊಂದಿವೆ. ಶಾಸನಾತ್ಮಕ ರಚನೆ, ಸ್ಪಷ್ಟ ಸಂಕಲ್ಪ ಮತ್ತು ತಲೆಮಾರಿನಿಂದ ತಲೆಮಾರಿಗೆ ಸಾಗುವ ಮೌಲ್ಯಗಳು ಇವುಗಳೇ ಸಂಸ್ಥೆಯನ್ನು ಚಿರಾಯು ಸಂಸ್ಥೆಯನ್ನಾಗಿ ಮಾಡುತ್ತವೆ. ಈ ಮಾತಿಗೆ ಭಾರತದ ನೆಲದಲ್ಲೇ ಜೀವಂತ ಉದಾಹರಣೆ ಅಜೀಂ ಪ್ರೇಮ್ಜಿ ಮತ್ತು ಅವರ ಹೆಸರಿನ ಅಜೀಂ ಪ್ರೇಮ್ಜಿ ಫೌಂಡೇಶನ್.
ದೇಶದಲ್ಲಿ ಅತ್ಯಂತ ಶ್ರೀಮಂತ ಉದ್ಯಮಿಗಳು ತಮ್ಮ ಐಶಾರಾಮೀ ಜೀವನಕ್ಕಾಗಿ, ತಮ್ಮ ವಿಲಾಸಿ ಕಾರುಗಳು, ಖಾಸಗಿ ವಿಮಾನಗಳಿಗಾಗಿ, ತಮ್ಮ ಅರಮನೆಗಳಿಗಾಗಿ, ಅದರಲ್ಲಿರುವ ಆಳುಕಾಳುಗಳಿಗಾಗಿ, ತಮ್ಮ ಸಾವಿರಾರು ಕೋಟಿ ಖರ್ಚಿನ ಮದುವೆಗಳಿಗಾಗಿ ಚರ್ಚೆಯಲ್ಲಿರುವಾಗ ಅಜೀಂ ಪ್ರೇಮ್ ಜಿ ಬೇರೊಂದು ವಿಷಯದಿಂದಾಗಿ ಈಗ ಚರ್ಚೆಯಲ್ಲಿದ್ದಾರೆ.

ಬೆಂಗಳೂರಲ್ಲಿ ಅಂಗಾಂಗ ಕಸಿಗಾಗಿ ವಿಶೇಷ 1000 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಅಜೀಂ ಪ್ರೇಮ್ ಜಿ ಫೌಂಡೇಶನ್ಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್ಪ್ಲಾಂಟ್ (IGOT) ಸಂಸ್ಥೆಗೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ 10 ಎಕರೆ ಜಮೀನನ್ನು ಎಲ್ಲಾ ಅಂಗಾಂಗ ಕಸಿ ಒಳಗೊಂಡಂತೆ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಆಸ್ಪತ್ರೆ ನಿರ್ಮಾಣಕ್ಕೆ ಅಜೀಮ್ ಪ್ರೇಮ್ಜಿ ಫೌಂಡೇಷನ್ಗೆ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ಬಗ್ಗೆ ಹಾಗೂ ಸಂಸ್ಥೆಯೊಂದಿಗೆ MoU ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಈ ಆಸ್ಪತ್ರೆಯಲ್ಲಿ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಶೇ. 75 ರಷ್ಟು ಉಚಿತ ಸೇವೆ ಇರಲಿದೆ. ಉಳಿದ 30% ಹಾಸಿಗೆ ಕನಿಷ್ಠ ವೆಚ್ಚ ಇರಲಿದೆ. ಮೂರು ವರ್ಷದಲ್ಲಿ 300 ಹಾಸಿಗೆ ನಿರ್ಮಿಸಲಾಗತ್ತೆ, ಉಳಿದಂತೆ ಐದು ವರ್ಷದಲ್ಲಿ 1,000 ಬೆಡ್ ನಿರ್ಮಾಣ ಪೂರ್ಣವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಅಜೀಂ ಪ್ರೇಮ್ಜಿ ಅವರು ಭಾರತದ ಐಟಿ ಕ್ರಾಂತಿಯ ಪಿತಾಮಹರಲ್ಲಿ ಒಬ್ಬರು. ವಿಪ್ರೋ ಕಂಪನಿಯನ್ನು ಸ್ಥಾಪಿಸಿ, ಅದನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ಅವರು, ತಮ್ಮ ಸಂಪತ್ತನ್ನು ಕೇವಲ ವೈಯಕ್ತಿಕ ಸುಖಕ್ಕಾಗಿ ಬಳಸದೆ, ಸಮಾಜಕ್ಕೆ ಮರಳಿ ಕೊಡುತ್ತಿದ್ದಾರೆ. 2001ರಲ್ಲಿ ಸ್ಥಾಪಿಸಲಾದ ಅಜೀಂ ಪ್ರೇಮ್ಜಿ ಫೌಂಡೇಶನ್, ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯಗಳ ಕ್ಷೇತ್ರದಲ್ಲಿ ಕ್ರಾಂತಿಕಾರಿ ಕೆಲಸ ಮಾಡುತ್ತಿದೆ. ಇದು ಕೇವಲ ಲಾಭೇತರ ಸಂಸ್ಥೆಯಲ್ಲ, ಬದಲಿಗೆ ಸಮಾಜದ ಉನ್ನತಿಗಾಗಿ ಸಮರ್ಪಿತವಾದ ಒಂದು ಚಳುವಳಿ. ಅವರ ಫೌಂಡೇಶನ್ ದೇಶದಾದ್ಯಂತ ಲಕ್ಷಾಂತರ ಮಂದಿಯ ಜೀವನವನ್ನು ಬದಲಾಯಿಸಿದೆ. ಈ ಫೌಂಡೇಶನ್ 3, 50,000ಕ್ಕೂ ಹೆಚ್ಚು ಶಾಲೆಗಳನ್ನು ಪರಿವರ್ತಿಸಿದೆ, 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗ್ರ್ಯಾಜುಯೇಟ್ ಮಾಡಿದೆ ಮತ್ತು 1,550 ಇತರ ಎನ್ಜಿಒಗಳಿಗೆ ಹಣಕಾಸು ಸಹಾಯ ನೀಡಿದೆ. 2025-26ರಲ್ಲಿ 18 ರಾಜ್ಯಗಳಲ್ಲಿ ಹುಡುಗಿಯರಿಗಾಗಿ ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್ ಪ್ರಾರಂಭಿಸಲಾಗಿದೆ. ಇದು ಬಡತನದ ಹಿನ್ನೆಲೆಯ ಹುಡುಗಿಯರ ಕಾಲೇಜು ಶಿಕ್ಷಣಕ್ಕೆ ಸಹಾಯ ಮಾಡುತ್ತದೆ. ಶಿಕ್ಷಣವು ಕೇವಲ ಜ್ಞಾನವಲ್ಲ, ಸಮಾನತೆಯ ಮಾರ್ಗ ಎಂಬುವುದನ್ನು ಅಜೀಂ ಪ್ರೇಮ್ಜಿ ತೋರಿಸಿಕೊಟ್ಟಿದ್ದಾರೆ.
ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್ಜಿ ಪ್ರತಿಷ್ಠಾನದ ನಡುವೆ ನಡೆದ ಒಡಂಬಡಿಕೆ ಅದೊಂದು ಮಾನವೀಯತೆಯ ಘೋಷಣೆಯಾಗಿದೆ. ನಾಲ್ಕು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ, ಸಾವಿರ ಹಾಸಿಗೆ ಸಾಮರ್ಥ್ಯದ ಮಾನವ ಬಹು ಅಂಗಾಂಗ ಕಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇದು ಕಾಗದದ ಮೇಲಿನ ಯೋಜನೆ ಅಲ್ಲ. ಇದು ಸಾವಿರಾರು ಕುಟುಂಬಗಳ ಕಣ್ಣೀರನ್ನು ಒರೆಸುವ ಆಶಾಕಿರಣ. ರಾಜೀವ್ಗಾಂಧಿ ಆಸ್ಪತ್ರೆ ಆವರಣದಲ್ಲಿ, ಮುಂದಿನ ಐದು ವರ್ಷಗಳಲ್ಲಿ ನಿರ್ಮಾಣಗೊಳ್ಳಲಿರುವ ಈ ಆಸ್ಪತ್ರೆ, ದೇಶದಲ್ಲಿಯೇ ಅಪರೂಪದ ಮಾದರಿಯಾಗಲಿದೆ.

ಮೂತ್ರಪಿಂಡ ಕಸಿಗೆ ಐದು ಸಾವಿರಕ್ಕೂ ಹೆಚ್ಚು ಜನರು, ಯಕೃತ್ ಕಸಿಗೆ ಸಾವಿರಕ್ಕೂ ಹೆಚ್ಚು ಜನರು ಕಾಯುತ್ತಿರುವ ರಾಜ್ಯದಲ್ಲಿ, ಈ ಆಸ್ಪತ್ರೆ ಅಂಥವರ ಪಾಲಿಗೆ ವರದಾನವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ , “ಅಜೀಂ ಪ್ರೇಮ್ಜಿ ಮತ್ತು ಅವರ ಪ್ರತಿಷ್ಠಾನದ ಕಾರ್ಯ ಶ್ರೇಷ್ಠ ಕಾರ್ಯ” ಆ ಮಾತು ಕೇವಲ ಸರ್ಕಾರಿ ವೇದಿಕೆಯ ಮೆಚ್ಚುಗೆಯಲ್ಲ, ಸಮಾಜದ ಧ್ವನಿ.
ಕೋವಿಡ್ ನಿಯಂತ್ರಣಕ್ಕೆ ಗರಿಷ್ಠ ದೇಣಿಗೆ
ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕೆ ಗರಿಷ್ಠ ದೇಣಿಗೆ ನೀಡಿದ ಜಗತ್ತಿನ ಉದ್ಯಮಿಗಳ ಪಟ್ಟಿಯಲ್ಲಿ ಭಾರತದ ಖ್ಯಾತ ಉದ್ಯಮಿ ಮತ್ತು ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್ ಜಿ 3ನೇ ಸ್ಥಾನದಲ್ಲಿದ್ದರು. ಅಜೀಂ ಪ್ರೇಮ್ ಜಿ ಫೌಂಡೇಶನ್ 1000 ಕೋಟಿ ರೂಪಾಯಿಗಳನ್ನು ಮತ್ತು ವಿಪ್ರೋ 100 ಕೋಟಿ ರೂಪಾಯಿಗಳನ್ನು ನೀಡಿತ್ತು. ವಿಪ್ರೋ ಉದ್ದಿಮೆಗಳು 25 ಕೋಟಿಗಳನ್ನು ನೀಡುವ ಬದ್ಧತೆಯನ್ನು ತೋರಿಸಿತ್ತು. ಒಟ್ಟು 1,125 ಕೋಟಿ ನೀಡಿದ ಅಜೀಂ ಪ್ರೇಮ್ಜಿ ಭಾರತದ ಏಕೈಕ ಗರಿಷ್ಠ ದೇಣಿಗೆ ನೀಡಿ ದಾನಿ ಎಂದು ʼಫೋರ್ಬ್ಸ್ʼ ಹೇಳಿತ್ತು.
ಅಜೀಂ ಪ್ರೇಮ್ಜೀ ಯಾರು ಗೊತ್ತೇ?
ಅಜೀಂ ಪ್ರೇಮ್ಜಿ, ಭಾರತದ ಅತ್ಯಂತ ಪ್ರಸಿದ್ಧ ಉದ್ಯಮಿ ಹೂಡಿಕೆದಾರ ಮತ್ತು ಲೋಕೋಪಕಾರಿಗಳಲ್ಲಿ ಒಬ್ಬರು. ಅವರು ಜುಲೈ 24, 1945ರಂದು ಬಾಂಬೆಯಲ್ಲಿ ಜನಿಸಿದರು. ಅವರು ‘ವಿಪ್ರೋ ಲಿಮಿಟೆಡ್’ ನ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರನ್ನು ‘ಭಾರತೀಯ ಐಟಿ ಉದ್ಯಮದ ಜಾರ್’ ಎಂದು ಅನೌಪಚಾರಿಕವಾಗಿ ಕರೆಯಲಾಗುತ್ತದೆ. ಇನ್ನೂ ಅಜೀಂ ಪ್ರೇಮ್ಜೀ ಅವರ ತಾತ ಕೂಡಾ ಪ್ರಮುಖ ಉದ್ದಿಮೆದಾರರಾಗಿದ್ದು ‘ಬರ್ಮಾದ ಅಕ್ಕಿಯ ರಾಜಾ’ ಎಂದು ಹೆಸರುವಾಸಿಯಾಗಿದ್ದರು. ಅಜೀಂ ಪ್ರೇಮ್ಜಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ದೂರಶಿಕ್ಷಣದ ಮೂಲಕ ವಿಶ್ವವಿದ್ಯಾಲಯದಿಂದ 1999ರಲ್ಲಿ ತಮ್ಮ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
ಪ್ರೇಮ್ಜಿ ಅವರು 1966ರಲ್ಲಿ ತಮ್ಮ ತಂದೆಯ ಮರಣದ ನಂತರ ತಮ್ಮ 21ನೇ ವಯಸ್ಸಿನಲ್ಲಿ ‘ವೆಸ್ಟರ್ನ್ ಇಂಡಿಯಾ ವೆಜಿಟೇಬಲ್ ಪ್ರಾಡಕ್ಟ್ಸ್ ಲಿಮಿಟೆಡ್’ ಎಂಬ ತಮ್ಮ ಕುಟುಂಬದ ಅಡುಗೆ ಎಣ್ಣೆ ವ್ಯಾಪಾರದ ಜವಾಬ್ದಾರಿಯನ್ನು ವಹಿಸಿಕೊಂಡರು. ನಂತರ ಅವರು ಕಂಪನಿಯನ್ನು ವೈವಿಧ್ಯಗೊಳಿಸಿ ಬೇಕರಿ, ಶೌಚಾಲಯ ಸಾಮಗ್ರಿಗಳು ಮತ್ತು ಹೈಡ್ರಾಲಿಕ್ ಸಿಲಿಂಡರ್ಗಳ ಕ್ಷೇತ್ರಕ್ಕೆ ವಿಸ್ತರಿಸಿದರು. 1980ರ ದಶಕದಲ್ಲಿ ಐಬಿಎಂ (IBM) ಭಾರತದಿಂದ ನಿರ್ಗಮಿಸಿದಾಗ ಉಂಟಾದ ಅವಕಾಶವನ್ನು ಗುರುತಿಸಿ ಅವರು ಐಟಿ (ಮಾಹಿತಿ, ತಂತ್ರಜ್ಞಾನ) ಕ್ಷೇತ್ರಕ್ಕೆ ಕಾಲಿಟ್ಟರು. ಅವರು ಕಂಪನಿಯ ಹೆಸರನ್ನು ‘ವಿಪ್ರೋ’ ಎಂದು ಬದಲಾಯಿಸಿದರು ಮತ್ತು ಮೈಕ್ರೋಕಂಪ್ಯೂಟರ್ಗಳ ತಯಾರಿಕೆಯನ್ನು ಪ್ರಾರಂಭಿಸಿದರು. ಅವರ ನಾಯಕತ್ವದಲ್ಲಿ ವಿಪ್ರೋ ಒಂದು ಸಣ್ಣ ಅಡುಗೆ ಎಣ್ಣೆ ಕಂಪನಿಯಿಂದ ಭಾರತದ ಮತ್ತು ವಿಶ್ವದ ಅತಿದೊಡ್ಡ ಐಟಿ ಸಲಹಾ ಮತ್ತು ಸೇವಾ ಕಂಪನಿಗಳಲ್ಲಿ ಒಂದಾಗಿ ಬೆಳೆಯಿತು. ವಿಪ್ರೊ ಟೆಕ್ನಾಲಜೀಸ್ ಒಟ್ಟು 300ಕ್ಕೂ ಹೆಚ್ಚು ಸಂಸ್ಥೆಗಳಿಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸೇವೆಯನ್ನು ಒದಗಿಸುತ್ತದೆ. ಈ ಗ್ರಾಹಕ ಸಂಸ್ಥೆಗಳು ಮುಖ್ಯವಾಗಿ ಅಮೆರಿಕ, ಯೂರೋಪ್ ಮತ್ತು ಜಪಾನ್ಗಳಲ್ಲಿವೆ. ಇದರ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ಅಜೀಂ ಪ್ರೇಮ್ಜಿ ಅವರು ತಮ್ಮ ಉದ್ಯಮಶೀಲತೆಯ ಜೊತೆಗೆ ತಮ್ಮ ಅಸಾಧಾರಣ ದಾನಿಯಾಗಿ ಜಗತ್ಪ್ರಸಿದ್ಧರಾಗಿದ್ದಾರೆ.

ಅಜೀಂ ಪ್ರೇಮ್ಜೀ ಅವರು ‘ದ ಗಿವಿಂಗ ಪ್ಲೆಡ್ಜ್’ ಗೆ ಸಹಿ ಹಾಕಿದ ಮೊದಲ ಭಾರತೀಯರಾಗಿದ್ದಾರೆ. ಇದು ತಮ್ಮ ಸಂಪತ್ತಿನ ಬಹುಪಾಲು ಭಾಗವನ್ನು ದಾನ ಮಾಡಲು ವಾಗ್ದಾನ ಮಾಡುವ ವಿಶ್ವದ ಶ್ರೀಮಂತ ವ್ಯಕ್ತಿಗಳ ಅಭಿಯಾನವಾಗಿದೆ. ಅವರು 2001 ರಲ್ಲಿ ‘ಅಜೀಂ ಪ್ರೇಮ್ಜಿ ಫೌಂಡೇಶನ್’ ಅನ್ನು ಸ್ಥಾಪಿಸಿದರು. ಈ ಸಂಸ್ಥೆಯು ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಅವರು ತಮ್ಮ ಸಂಪತ್ತಿನ ಒಂದು ದೊಡ್ಡ ಭಾಗವನ್ನು ಈ ಫೌಂಡೇಶನ್ಗೆ ದಾನ ಮಾಡಿದ್ದಾರೆ. ಭಾರತ ಸರ್ಕಾರವು ಅವರಿಗೆ ಪದ್ಮಭೂಷಣ (2005) ಮತ್ತು ಪದ್ಮವಿಭೂಷಣ, (2011) ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 2023 ರಲ್ಲಿ ಅಜೀಂ ಪ್ರೇಮ್ಜೀ ಕುಟುಂಬದಿಂದ ದಾನ-ದತ್ತಿ ಎಂದು ಬರೋಬ್ಬರಿ 1774 ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಶಿಕ್ಷಣದ ವಿಚಾರವಾಗಿ ಪ್ರೇಮ್ಜಿ ಹಲವು ಪರೋಪಕಾರಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಅಜಿಮ್ ಪ್ರೇಮ್ಜೀ ಫೌಂಡೇಶನ್ ಒಂದು ವಿಶ್ವವಿದ್ಯಾಲಯ ತೆರೆದಿರುವುದಲ್ಲದೇ ಭಾರತದ ಎಲ್ಲೆಡೆಗಳಲ್ಲಿ ನೂರಾರು ವಿದ್ಯಾಸಂಸ್ಥೆಗಳನ್ನು ಪೋಷಿಸುತ್ತಾ ಬಂದಿದೆ.
ಇನ್ನೂ ಅಜೀಂ ಪ್ರೇಮ್ಜಿ ಎಂದರೆ ಕೇವಲ ಆಸ್ಪತ್ರೆಗಳ ಹೆಸರು ಅಲ್ಲ. ಕಳೆದ 25 ವರ್ಷಗಳಿಂದ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಎಲ್ಕೆಜಿಯಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ ವಿತರಣೆಗೆ 1500 ಕೋಟಿಯನ್ನ ದಾನವಾಗಿ ಕೊಟ್ಟಿದ್ದಾರೆ. ಮಕ್ಕಳ ದೇಹದ ಜೊತೆಗೆ ಅವರ ಭವಿಷ್ಯವನ್ನೂ ಪೋಷಿಸುವ ಯೋಜನೆ ಇದಾಗಿದೆ. ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ದೀಪಿಕಾ ವಿದ್ಯಾರ್ಥಿ ವೇತನದ ಮೂಲಕ ವರ್ಷಕ್ಕೆ 30 ಸಾವಿರ ರೂಪಾಯಿ.

ಇವೆಲ್ಲಾ ಒಟ್ಟಾಗಿ ನೋಡಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಅಜೀಂ ಪ್ರೇಮ್ಜಿ ಅವರು “ಸರ್ಕಾರ ಮಾಡಲಿ” ಎಂದು ಕಾಯಲಿಲ್ಲ. “ನಾನು ಮಾಡಬಹುದು” ಎಂದು ಮುಂದೆ ಬಂದರು. ಸಮಾಜ ಕೊಟ್ಟಿರುವುದನ್ನ ಸಮಾಜಕ್ಕೆ ಹಿಂತಿರುಗಿದುವುದಕ್ಕೆ ಅಜೀಂ ಪ್ರೇಮ್ಜಿ ಹುಡುಕಿಕೊಂಡ ಒಂದು ದಾರಿಯೇ ಈ ಸಮಾಜ ಸೇವೆ. ಸಂಪತ್ತು ಎಂದರೆ ಸಂಗ್ರಹಿಸುವುದಲ್ಲ, ಹಂಚಿಕೊಳ್ಳುವ ಧೈರ್ಯ. ಯಶಸ್ಸು ಎಂದರೆ ಎತ್ತರಕ್ಕೆ ಏರುವುದಲ್ಲ, ಇತರರನ್ನು ಎತ್ತಿಕೊಳ್ಳುವುದು.
ಐಟಿ ಉದ್ಯಮದಲ್ಲಿ ಅಪಾರ ಸಂಪತ್ತು ಗಳಿಸಿದ ನಂತರವೂ, ಅಜೀಂ ಪ್ರೇಮ್ಜಿ ಅವರು “ಎಷ್ಟು ಗಳಿಸಿದೆ” ಎನ್ನುವುದಕ್ಕಿಂತ “ಎಷ್ಟು ಹಂಚಿಕೊಂಡೆ” ಎನ್ನುವುದನ್ನೇ ತಮ್ಮ ಬದುಕಿನ ಅಳತೆಯಾಗಿಸಿಕೊಂಡಂತವರು. ಇಂತಹ ವ್ಯಕ್ತಿಗಳು ಒಂದು ದೇಶಕ್ಕೆ ಕೇವಲ ದಾನಿಗಳು ಅಲ್ಲ. ಅವರು ಆ ದೇಶದ ಅದಮ್ಯ ಚೈತನ್ಯವಿದ್ದಂತೆ. ರಾಜಕೀಯ ಬದಲಾವಣೆಗಳು ಬರುತ್ತವೆ, ಸರ್ಕಾರಗಳು ಬದಲಾಗುತ್ತವೆ, ಆದರೆ ಅಜೀಂ ಪ್ರೇಮ್ಜಿ ತರಹದ ಸಂಸ್ಥೆಗಳು ಮಾತ್ರ ಕಾಲಾಂತರದಲ್ಲೂ ಸಮಾಜದ ನೆಲೆಯನ್ನು ಗಟ್ಟಿಗೊಳಿಸುತ್ತವೆ.

ಅಜೀಂ ಪ್ರೇಮ್ಜಿ ಫೌಂಡೇಶನ್ ಎಂದರೆ ವ್ಯಕ್ತಿಗಿಂತ ದೊಡ್ಡ ಉದ್ದೇಶ, ಲಾಭಕ್ಕಿಂತ ದೊಡ್ಡ ಹೊಣೆಗಾರಿಕೆ, ಪ್ರಚಾರಕ್ಕಿಂತ ದೊಡ್ಡ ಮೌಲ್ಯ ಇರುವುದು. ಇಂತಹ ಸಂಸ್ಥೆಗಳು ಇರುವವರೆಗೂ ಈ ದೇಶದಲ್ಲಿ ಬಡವನಿಗೆ ಚಿಕಿತ್ಸೆ ಸಿಗುತ್ತದೆ, ಮಕ್ಕಳಿಗೆ ಶಿಕ್ಷಣದ ಅವಕಾಶ ಉಳಿಯುತ್ತದೆ, ಸಮಾಜಕ್ಕೆ ಮಾನವೀಯತೆ ಉಳಿಯುತ್ತದೆ. ಅಜೀಂ ಪ್ರೇಮ್ಜಿ ಫೌಂಡೇಶನ್ ಮಾನವೀಯ ಉದ್ದೇಶಕ್ಕಾಗಿ ಹುಟ್ಟಿದ ಸಂಸ್ಥೆ. ಅದಕ್ಕಾಗಿಯೇ ಅಜೀಂ ಪ್ರೇಮ್ಜಿ ಫೌಂಡೇಶನ್ ಮೌಲ್ಯದಿಂದಲೇ ಹೆಸರಾಗಿದೆ. ಇಂತಹ ಸಂಸ್ಥೆಗಳು ಇರುವವರೆಗೂ, ಬಡವರ ಆರೋಗ್ಯಕ್ಕೆ ಭರವಸೆ ಇರುತ್ತದೆ, ಮಕ್ಕಳ ಶಿಕ್ಷಣಕ್ಕೆ ದಾರಿ ಇರುತ್ತದೆ, ಸಮಾಜಕ್ಕೆ ಆಸೆಯ ಬೆಳಕು ಇರುತ್ತದೆ. ಅಜೀಂ ಪ್ರೇಮ್ಜಿ ಎಂಬ ಹೆಸರು, ಇಂದಿನ ಭಾರತದಲ್ಲಿ ಮೌನವಾಗಿ ಕೆಲಸ ಮಾಡುವ ಮಹಾತ್ಮನ ಸಂಕೇತ. ತಮ್ಮ ಹೆಸರಿಗೆ ತಕ್ಕಂತೆ ಜಗತ್ತನ್ನು ಪ್ರೇಮಿಸುವ ಗುಣ ಅಜೀಂ ಅವರದ್ದು. ಹಾಗಾಗಿಯೇ ಅವರು ಸದಾ ಬಡವರ ಶಿಕ್ಷಣ, ಆರೋಗ್ಯದ ಕಾಳಜಿಯಿಂದ ಸರ್ಕಾರದ ಜೊತೆಗೆ ಕೈ ಜೋಡಿಸಿ ಕೆಲಸ ಮಾಡ್ತಾರೆ. ಕರ್ನಾಟಕದ ಜನ ಅಜೀಂ ಪ್ರೇಮ್ ಜಿ ಅವರಿಗೆ ಸದಾ ಚಿರಋಣಿಯಾಗಿರಬೇಕು. ಅವರ ಜೀವನ ಉಳ್ಳವರಿಗೆ ಪ್ರೇರಣೆಯಾಗಬೇಕು.





