ಹಿಂದು – ಮುಸ್ಲಿಂ ಎಂಬ ವಿಭಜನೆಯನ್ನೇ ರಾಜಕೀಯ ಬಂಡವಾಳವಾಗಿಸಿಕೊಂಡು, ದ್ವೇಷದ ಬೀಜ ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿರುವ ಹೊತ್ತಿನಲ್ಲಿ, ‘ಮಾನವೀಯತೆಯೇ ಧರ್ಮ’ ಎಂಬ ಸಂದೇಶವನ್ನು ಸಾರುವ ಘಟನೆಗಳು ಸಮಾಜಕ್ಕೆ ನಿರಾಳತೆಯ ಉಸಿರನ್ನು ನೀಡುತ್ತಿವೆ. ಇಂತಹದ್ದೇ ಒಂದು ಸಹಬಾಳ್ವೆಯ ಹೃದಯಸ್ಪರ್ಶಿ ಘಟನೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ದೇಶದಲ್ಲಿ ದ್ವೇಷವೇ ರಾಜಕೀಯ ಅಸ್ತ್ರವಾಗಿರುವ ಕಾಲವಿದು. ಟಿವಿ ಚರ್ಚೆಗಳಿಂದ ಹಿಡಿದು ಚಹಾ ಅಂಗಡಿಯ ಮಾತುಕತೆಗಳವರೆಗೂ ಹಿಂದು – ಮುಸ್ಲಿಂ ವಿಭಜನೆ ಬಗ್ಗೆ ವಿಷಕಾರುವ ಮಾತುಕತೆಗಳೇ. ಮುಸ್ಲಿಂ ಎಂಬ ಗುರುತನ್ನೇ ಅಪರಾಧವೆಂಬಂತೆ ಬಿಂಬಿಸಿ, ಒಂದು ಸಮುದಾಯವನ್ನು ಇಡೀ ದೇಶದ ಮುಂದೆ ಆರೋಪಿ ಸ್ಥಾನದಲ್ಲಿಡುವ ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಂರು ಪಾಕಿಸ್ತಾನದವರು, ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನಗಳು ಎಗ್ಗಿಲ್ಲದೇ ನಡೆಯುತ್ತಿವೆ. ಆದರೆ, ಇಂತಹ ದ್ವೇಷ ಹರಡುವ ಘಟನೆಗಳಿಗೆ ಇತ್ತೀಚೆಗೆ, ದೇಶದಲ್ಲಿ ನಡೆದ ಸಹಬಾಳ್ವೆಯ ಘಟನೆಗಳು ಸವಾಲು ಹಾಕಿವೆ. ‘ದ್ವೇಷಕ್ಕಿಂತ ಮನುಷ್ಯತ್ವ ದೊಡ್ಡದು’ ಎಂಬುದನ್ನ ಸಾರಿವೆ.
ಇತ್ತೀಚೆಗೆ, ಉತ್ತರಾಖಂಡದ ಪೌರಿ ಜಿಲ್ಲೆಯ ಕೋಟ್ದ್ವಾರ ಪಟ್ಟಣದಲ್ಲಿ ನಡೆದ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ಬಜರಂಗದಳ ಕಾರ್ಯಕರ್ತರಿಂದ ಕಿರುಕುಳಕ್ಕೆ ಒಳಗಾಗಿದ್ದ 70 ವರ್ಷದ ಮುಸ್ಲಿಂ ವ್ಯಕ್ತಿಯ ಪರವಾಗಿ ನಿಂತ ದೀಪಕ್ ಕುಮಾರ್ ಅವರು ‘ಮೊಹಮ್ಮದ್ ದೀಪಕ್’ ಆದರು. ‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ’ ತೆರೆದರು. ದ್ವೇಷಕ್ಕಿಂತ, ಧರ್ಮಕ್ಕಿಂತ ‘ಮಾನವೀಯತೆ’, ‘ಮನುಷ್ಯತ್ವವೇ’ ದೊಡ್ಡದು ಎಂದು ಇಡೀ ಜಗತ್ತಿಗೆ ತೋರಿಸಿ ಕೊಟ್ಟು ಹೀರೋ ಆದರು.
ಹಿಂದು – ಮುಸ್ಲಿಂ ಎಂಬ ವಿಭಜನೆಯನ್ನೇ ರಾಜಕೀಯ ಬಂಡವಾಳವಾಗಿಸಿಕೊಂಡು, ದ್ವೇಷದ ಬೀಜ ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿರುವ ಹೊತ್ತಿನಲ್ಲಿ, ‘ಮಾನವೀಯತೆಯೇ ಧರ್ಮ’ ಎಂಬ ಸಂದೇಶವನ್ನು ಸಾರುವ ಘಟನೆಗಳು ಸಮಾಜಕ್ಕೆ ನಿರಾಳತೆಯ ಉಸಿರನ್ನು ನೀಡುತ್ತಿವೆ. ಇಂತಹದ್ದೇ ಒಂದು ಸಹಬಾಳ್ವೆಯ ಹೃದಯಸ್ಪರ್ಶಿ ಘಟನೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಹಿಂದು – ಮುಸ್ಲಿಂ ಎಂದು ಕಿತ್ತಾಟ ಹಚ್ಚುವವರ ನಡುವೆ, ಮನುಷ್ಯತ್ವವೇ ನಿಜವಾದ ಧರ್ಮ ಎಂದು ಮುಸ್ಲಿಂ ದಂಪತಿ ಸಾರಿದ್ದಾರೆ. ಧರ್ಮ ಎಂಬ ಬೇಗುದಿಗೆ ಬೀಳದೇ ಇರುವ ಇವರು ಚಿಕ್ಕ ವಯಸ್ಸಿನ ಹಿಂದು ಅನಾಥ ಮಕ್ಕಳನ್ನ ಕೈಬಿಡದೆ ತಮ್ಮ ಮಕ್ಕಳಂತೆ ಸಾಕಿ ಸಲುಹಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿದ್ದಾರೆ. ಇದು ಕೇವಲ ಒಂದು ಕುಟುಂಬದ ಕತೆಯಲ್ಲ, ಬದಲಾಗಿ ಈ ದ್ವೇಷ ರಾಜಕಾರಣಕ್ಕೆ, ಮತಾಂಧತೆಗೆ ಹಿಡಿದ ಕನ್ನಡಿಯಾಗಿದೆ.

ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದ ಮೆಹಬೂಬ್ ಹಸನ್ ನಾಯಿಕವಾಡಿ (ಮುಲ್ಲಾ) ಮತ್ತು ನೂರ್ಜಾನ್ ದಂಪತಿಗಳು ಚಿಕ್ಕ ವಯಸ್ಸಿನಲ್ಲೇ ತಂದೆ – ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಹಿಂದೂ–ಲಿಂಗಾಯತ ಸಮಾಜದ ಶಿವಾನಂದ ಕಾಡಯ್ಯ ಪೂಜಾರ ದಂಪತಿಯ ಇಬ್ಬರು ಮಕ್ಕಳಾದ ಸೋಮಶೇಖರ್ (ನಾಲ್ಕು ವರ್ಷ), ವಸಂತ (ಎರಡು ವರ್ಷ) ಅವರನ್ನು ಸಾಕಿ ಸಲುಹಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮೆಹಬೂಬ್ ಹಸನ್ ನಾಯಿಕವಾಡಿ ದಂಪತಿಗೂ ನಾಲ್ವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ಒಟ್ಟು ಏಳು ಮಕ್ಕಳನ್ನು ಒಂದೇ ಮನೆಯಲ್ಲಿಟ್ಟು, ಊಟ, ಬಟ್ಟೆ, ಶಿಕ್ಷಣ ಎಲ್ಲವನ್ನೂ ಸಮಾನವಾಗಿ ಕೊಟ್ಟು ನೋಡಿಕೊಂಡಿದ್ದಾರೆ. ಅನಾಥರಾಗಿ ದಿಕ್ಕಿಲ್ಲದೇ ಕುಳಿತಿದ್ದ ಮಕ್ಕಳಿಗೆ ದಾರಿದೀಪವಾಗಿದ್ದಾರೆ. ತಮ್ಮ ಮಕ್ಕಳ ಜತೆಗೆ ಇನ್ನಿಬ್ಬರು ಮಕ್ಕಳನ್ನು ತಮ್ಮ ಮಡಿಲಿಗೆ ಹಾಕಿಕೊಂಡು ಪ್ರೀತಿ – ಕಾಳಜಿಯಿಂದ ಸಾಕಿದ್ದಾರೆ. ಕಷ್ಟದಲ್ಲಿಯೇ ಜೀವನ ನಡೆಯುತ್ತಿದ್ದರೂ ತಲೆಕೆಡಿಸಿಕೊಳ್ಳದೇ ತಮ್ಮೇಲ್ಲ ಮಕ್ಕಳನ್ನ ಓದಿಸಿ ಬೆಳೆಸಿದ್ದಾರೆ. ಇದರ ಪ್ರತಿಫಲವಾಗಿ ಸೋಮಶೇಖರ್ ಮತ್ತು ಪಿಯು ಪೂರ್ಣಗೊಳಿಸಿದ ವಸಂತ ಇಬ್ಬರೂ ಯಮಕನಮರಡಿ ಬಳಿಯ ವಿಶೇಷ ಆರ್ಥಿಕ ವಲಯದ ಏಕಸ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಮೃತ ಕಾಡಯ್ಯ ಪೂಜಾರ ಕೂಡ ಖಾಸಗಿ ಬಸ್ ಚಾಲಕರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಮೆಟ್ರೋ ದರ ಏರಿಕೆ; ರಾಜ್ಯ ಅಥವಾ ಕೇಂದ್ರ ಯಾರು ಹೊಣೆ?
ಮಹಾರಾಷ್ಟ್ರದ ಗಡಹಿಂಗ್ಲಜ ತಾಲ್ಲೂಕಿನ ತನೂಡಿ ಗ್ರಾಮದ ಪೂನಂ ಹಿರಿಯ ಪುತ್ರ ಸೋಮಶೇಖರ್ (24) ಮದುವೆ ರವಿವಾರ ಕಾಡಸಿದ್ದೇಶ್ವರ ಸಭಾಭವನದಲ್ಲಿ ನಡೆಯಿತು. ಈ ಮದುವೆ ನಡೆದಿದ್ದು ಹಿಂದೂ ಸಂಪ್ರದಾಯದಂತೆ, ಮದುವೆಯ ವಧು – ವರರು ಹಿಂದೂಗಳು ಆದರೆ, ಈ ಮದುವೆಯ ಸಂಪೂರ್ಣ ಖರ್ಚು – ವೆಚ್ಚ, ಓಡಾಟ, ಕಾಳಜಿ ಮತ್ತು ಮದುವೆಯ ಸಂಪೂರ್ಣ ಜವಾಬ್ದಾರಿ ಮುಸ್ಲಿಂ ಕುಟುಂಬದ್ದಾಗಿದೆ.
ಮುಸ್ಲಿಂ ಮನೆತನದವರು ಹಿಂದೂ ಲಿಂಗಾಯತ ಸಂಪ್ರದಾಯದಂತೆ ಮದುವೆ ನೆರವೇರಿದಿದ್ದಾರೆ. ಈ ಮದುವೆಗೆ ನಾಯಿಕವಾಡಿ ಕುಟುಂಬದವರು, ಊರಿನ ಹಿರಿಯರು ಸಾಕ್ಷಿಯಾಗಿದ್ದಾರೆ.
ತಂದೆ–ತಾಯಿ ಇಲ್ಲದ ಆ ಮಕ್ಕಳ ಬದುಕಿಗೆ ಆಸರೆಯಾಗಿ ನಿಂತ ಈ ದಂಪತಿ, ಯಾವುದೇ ಧರ್ಮದ ಲೆಕ್ಕಾಚಾರವಿಲ್ಲದೆ, ಮಾನವೀಯತೆಯ ನೆಲೆಯಲ್ಲಿ ಅವರನ್ನು ಬೆಳೆಸಿದ್ದಾರೆ. ಶಿಕ್ಷಣ, ಆರೈಕೆ, ಸಂಸ್ಕಾರ—ಎಲ್ಲವನ್ನೂ ನೀಡಿದ ಅವರು, ಮಕ್ಕಳ ಜೀವನದ ಮಹತ್ವದ ಘಟ್ಟವಾದ ಮದುವೆಯನ್ನೂ ಹಿಂದೂ ಸಂಪ್ರದಾಯದ ಪ್ರಕಾರವೇ ನೆರವೇರಿಸಿದ್ದಾರೆ.
ಇದೊಂದು ಸರಳ ಘಟನೆ ಅಲ್ಲ; ದೇಶದಲ್ಲಿ ಹರಡುತ್ತಿರುವ ದ್ವೇಷದ ರಾಜಕಾರಣಕ್ಕೆ ಇದು ಸವಾಲು. ಒಂದು ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿಟ್ಟು ಬಿಂಬಿಸುವ ಕೋಮುವಾದಿ ರಾಜಕಾರಣಕ್ಕೆ ಈ ಘಟನೆ ತಿರುಗೇಟು ನೀಡುತ್ತದೆ.

ದ್ವೇಷ ಹಬ್ಬಿಸುವ ರಾಜಕಾರಣ ಎಷ್ಟೇ ಜೋರಾಗಿದ್ದರೂ, ಅದಕ್ಕಿಂತ ಜೋರಾಗಿರುವುದು ಈ ದೇಶದ ಮಣ್ಣಿನ ಗುಣವಾಗಿರುವ ಸಹಬಾಳ್ವೆ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯಲು ಯತ್ನಿಸುವವರಿಗೆ, “ಮನುಷ್ಯತ್ವವೇ ಧರ್ಮ” ಎಂದು ಗಟ್ಟಿಯಾಗಿ ಹೇಳುವ ಘಟನೆ ಇದು.
ಅನಾಥ ಹಿಂದು ಮಕ್ಕಳಿಗೆ ತಂದೆ–ತಾಯಿಯಾಗಿ ನಿಂತು, ಅವರ ಬದುಕಿನ ಅತಿ ಪವಿತ್ರ ಕ್ಷಣವಾದ ಮದುವೆಯನ್ನು ಅವರದೇ ಸಂಪ್ರದಾಯದಲ್ಲಿ ನೆರವೇರಿಸಿದ ಈ ದಂಪತಿ, ಮುಸ್ಲಿಂ ಸಮುದಾಯದ ಮೇಲೆ ವ್ಯವಸ್ಥಿತವಾಗಿ ಹೇರಲಾಗುತ್ತಿರುವ ಅಪವಾದಗಳಿಗೆ ಜೀವಂತ ತಿರುಗೇಟು ನೀಡಿದ್ದಾರೆ. ಮುಸ್ಲಿಮರು ಈ ದೇಶದ ಹೊರಗಿನವರು ಅಲ್ಲ, ಶತ್ರುಗಳಲ್ಲ; ಈ ನೆಲದ ಹಕ್ಕುದಾರ ನಾಗರಿಕರು ಎಂಬ ಸತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸುತ್ತದೆ.
ಇತಿಹಾಸ ಬರೆಯುವುದು ಅಧಿಕಾರದಲ್ಲಿರುವವರ ಭಾಷಣಗಳಿಂದಲ್ಲ, ಇಂತಹ ಮನುಷ್ಯತ್ವದ ಕಾರ್ಯಗಳಿಂದ. ದ್ವೇಷ ರಾಜಕಾರಣ ತಾತ್ಕಾಲಿಕವಾಗಿ ಗೆಲ್ಲಬಹುದು. ಆದರೆ, ಅಂತಿಮವಾಗಿ ಸಮಾಜವನ್ನು ಉಳಿಸುವುದು ಇಂತಹ ಸಹಬಾಳ್ವೆಯ ಕತೆಗಳೇ. ಬೆಳಗಾವಿಯ ಈ ಘಟನೆ, ಒಡೆದ ಮನಸ್ಸುಗಳಿಗೆ ಸೇತುವೆ ಕಟ್ಟುವ ಕೆಲಸ ಮಾಡುತ್ತದೆ. ಹಿಂದು – ಮುಸ್ಲಿಂ ಎಂದು ಅಬ್ಬರಿಸುವ ಹಿಂದುತ್ವವಾದಿಗಳು ಈ ಘಟನೆಯನ್ನ ಮನಗಂಡು ಇನ್ನಾದರೂ ಬದಲಾಗಬೇಕಿದೆ.




