ಅವಳು ಅವಳಾಗಿದ್ದರೂ ತಪ್ಪೇ.. ಅವಳು ಅವಳಾಗಿರದಿದ್ದರೂ ತಪ್ಪೇ.. ಒಟ್ಟಿನಲ್ಲಿ ಅವಳು ಹೇಗಿದ್ದರೂ ತಪ್ಪೇ. ಈ ಸಮಾಜದ ಪೂರ್ವಗ್ರಹೀತ ದೃಷ್ಟಿಯಲ್ಲಿ. ಹಾಗಿದ್ದ ಮೇಲೆ ಅವಳ ಮೇಲೆ ಅನುಕಂಪದ, ಸಹಾನುಭೂತಿಯ ಮಾತೇಕೆ. ಅದು ಒಂದು ರೀತಿಯಲ್ಲಿ ಸುಟ್ಟ ಗಾಯದ ಮೇಲೆ ಉಪ್ಪಿನ ಬರೆ ಎಳೆದಂತೆ ಅಲ್ಲವೇ?
‘ಹೆಣ್ಣು’. ಅವಳಿಗೂ ಕನಸಿದೆ. ಅವಳದ್ದೇ ಕಣ್ಣೋಟದ ಜಗತ್ತಿದೆ. ಇದಕ್ಕೆ ಅಡ್ಡಿಯಾಗದೇ, ಅದನ್ನು ತನ್ನಂತೆಯೇ ಬಿಟ್ಟರೆ ಸಾಕು, ಸಮಾಜದಲ್ಲಿ ತಾಯ್ತನದ ಕಣ್ಣು ತೆರೆಯುತ್ತದೆ. ಆದರೆ ‘ ಹೆಣ್ಣೆಂದ ಮೇಲೆ ಬರಿ ಅಪವಾದ’ ಇದು ಕೇವಲ ಹೆಣ್ಣಿನ ಮೇಲೆ ಹೊರಿಸುವ ಅಪವಾದವೋ ಅಥವಾ ಅಪವಾದ ಪದಕ್ಕೆ ಹೆಣ್ಣು ಮಾತ್ರ ಅರ್ಹಳೋ..? ಅಥವಾ ಈ ಸಮಾಜದ ಪೂರ್ವಗ್ರಹವೋ..? ಎನ್ನುವ ಅನುಮಾನಗಳು, ಈ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೂಡುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಹೊಸ ನಿರೂಪಣೆ ಕಟ್ಟಿ ಸಮಾಜದ ಈ ಕಣ್ಣೋಟವನ್ನು ಅಳಿಸಬೇಕಿದೆ.
ಈ ಅಪವಾದ ಮತ್ತು ನಿಂದನೆಗಳನ್ನು, ಹೆಣ್ಣಿನ ಪ್ರತಿಭೆ ಮತ್ತು ಸ್ವತಂತ್ರವನ್ನು ನಿಯಂತ್ರಿಸಲು ಪುರುಷ ಪ್ರಧಾನ ಸಮಾಜ ಪ್ರಮುಖ ಅಸ್ತ್ರಗಳಾಗಿ ಬಳಸುತ್ತಾ ಬಂದಿದೆ. ಈ ತಂತ್ರವನ್ನು ಬಲಪಡಿಸಿಕೊಳ್ಳಲು ಹಲವು ಸಂಕಥನಗಳನ್ನು ಹೆಣೆಯಲಾಗಿದೆ.
ಮಹಿಳೆ ಪೌರಾಣಿಕವಾಗಿಯೂ ಶೋಷಿತಳು, ವಾಸ್ತವಿಕ ಬದುಕಿನಲ್ಲೂ ಶೋಷಿತಳು. ಮಹಾಭಾರತದಲ್ಲಿ ದ್ರೌಪದಿ, ರಾಮಾಯಣದಲ್ಲಿ ಸೀತೆ ಹೀಗೆ, ಪ್ರಸ್ತುತ ಸಮಾಜದ ನೂರಾರು ಹೆಣ್ಣುಗಳು ಇದರ ಬಲಿಪಶುಗಳೇ ಆಗಿದ್ದಾರೆ. ಇದರ ಮೂಲಕ ಈ ಹೆಣ್ಣುಗಳನ್ನು ಅಮೂರ್ತದ ಅಗ್ನಿಕುಂಡದಲ್ಲಿರಿಸಿ ಪರೀಕ್ಷಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಮಹಿಳಾ ದಿನಾಚರಣೆ ವಿಶೇಷ | ನಾರಿಯರು ‘ಆಡಳಿತಗಾರ್ತಿ’ಯಾಗಿ ಹೊರಹೊಮ್ಮಿದ ಕ್ರಾಂತಿಕಾರಿ ಹಾದಿಯ ಸ್ಮರಣೆ
‘ಏನನ್ನು ನಂಬಿದರು ಕಲಿಯುಗದ ಹೆಣ್ಣನ್ನು ಮಾತ್ರ ನಂಬಬಾರದು’ ಎನ್ನುವ ಮಾತು ಮಹಿಳೆಯ ಆತ್ಮಸ್ಥರ್ಯ ಕುಗ್ಗಿಸಲು ಬಳಸುವ ಮಾತಾಗಿದೆ. ಇಂತಹ ನೂರಾರು ಗಾದೆ ನುಡಿಗಟ್ಟು ಪುರುಷ ಪ್ರಧಾನ ಸಮಾಜದಲ್ಲಿ ಚಾಲ್ತಿಯಲ್ಲಿವೆ. ಹೀಗೆ ಇವರೆಲ್ಲ ಯಾವಾಗಲು ಹೆಣ್ಣನ್ನೇ ಕಟಕಟೆಯಲ್ಲಿ ನಿಲ್ಲಿಸುವುದೇಕೆ..?, ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯ ಸಾಬೀತು ಮಾಡುತ್ತಿರುವುದನ್ನು ನೋಡಿ ಸಹಿಸಲು ಆಗದೆ ಈ ಸ್ಥಾಪಿತ ಶಕ್ತಿಗಳಿಗೆ ದಿಗಿಲು ಹುಟ್ಟಿ ಇಂತಹ ಮಾತುಗಳನ್ನು ತೇಲಿಬಿಡುತ್ತಿದ್ದಾರೆ. ಇದೇ ಲೋಕ ಸತ್ಯವೆಂಬತೆ ಬಿಂಬಿಸುತ್ತಾರೆ. ಯಾಕೆಂದರೆ ಕಾಲದಿಂದಲೂ ಇವರಿಗೆ ಹೆಣ್ಣೆಂದರೆ ಆಟದ ಸಾಮಾನು, ಮನರಂಜನೆಯ ವಸ್ತು. ತಾಯಿ, ಅಕ್ಕ, ತಂಗಿ, ಮಡದಿ, ಅಜ್ಜಿ ಹೀಗೆ ವಾತ್ಸಾಲ್ಯದ ಮಡಿಲಿನಲ್ಲಿ ಪ್ರೀತಿಯ ಊಟವನ್ನಿಕ್ಕಿ ಬದುಕಿಗೆ ದಾರಿ ತೋರಿದ ಇವರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುವುದು, ಮಾನವೀಯತೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿದಂತೆ ಅಲ್ಲವೇ?, ಆಕೆಗೂ ಬದುಕಿದೆ, ಕನಸಿದೆ ಎಂದು ಅರಿಯಲು ನಮಗೆ ಯಾವ ವಿಶ್ವವಿದ್ಯಾನಿಲಯದ ಪಿಎಚ್ಡಿಗಳು ಬೇಕು, ಇದು ಬದುಕಿನ ಸತ್ಯ ಅಲ್ಲವೇ? .
ರಾಷ್ಟ್ರಕವಿ ಕುವೆಂಪು ಅವರ “ಕಾನೂರು ಹೆಗ್ಗಡತಿ” ಕಾದಂಬರಿಯ ‘ಕಡೆಗೊಲು ಕಂಬದ ಸಾಕ್ಷಿಯಲ್ಲಿ’ ಎಂಬ ಅಧ್ಯಯದಲ್ಲಿ, ಅಲ್ಲಿನ ಕಡೆಗೊಲು ಕಂಬಕ್ಕೆ ಮಾತು ಬರುವಂತೆ ಇದ್ದರೆ ಮಹಾಕಾವ್ಯವೇ ಸಂಭವಿಸುತ್ತಿತ್ತು ಎಂದು ಬರೆದಿದ್ದಾರೆ. ಇದು ಹೆಣ್ಣಿನ ಭಾವನೆಗಳು, ಕನಸುಗಳು, ಆಸೆಗಳನ್ನು ಕೇಳಿಸಿಕೊಳ್ಳಲು, ಅದರ ಬಗ್ಗೆ ಮಾತನಾಡಲು ಕಿವಿ, ಬಾಯಿ ಕಳೆದುಕೊಂಡಿರುವ ಸಮಾಜದ ರೂಪಕದಂತೆ ಕಾಣುತ್ತದೆ.
ಮರ್ಯಾದೆ (ಗೌರವ) ಎಂಬ ಮೂರಕ್ಷರದ ಹೊಲಿಗೆ ಅವಳ ಬಾಯಿಯನ್ನು ತೆರೆಯದಂತೆ ಮಾಡಿದೆ. ಇದರಿಂದ ಅವಳಿಗೆ, ಅವಳ ಶಕ್ತಿ ಸಾಮರ್ಥ್ಯ ಅವಳರಿವಿಗೆ ಬಾರದಂತೆ ಅವಳನ್ನು ಅಸಹಾಯಕತೆಗೆ ದೂಡಿ, ದುರುಪಯೋಗದ ‘ಸಹಾಯ ಹಸ್ತ’ ನೀಡುವ ಕಾಲದಲ್ಲಿ ನಾವಿದ್ದೇವೆ. ಪ್ರತಿಯೊಬ್ಬರು ಅವಳನ್ನು ಪರೀಕ್ಷಿಸುವವರೇ ಹೊರತು, ಅವಳನ್ನು ಆಲಿಸುವವರು ಯಾರು? ಅವಳ ಭಾವನೆಗೆ ಸ್ಪಂದಿಸುವ ಮತ್ತು ಸಾಂತ್ವಾನಿಸುವ ಮನಸ್ಥಿತಿ ಯಾರಿಗಿದೆ ಎಂಬುದೇ ಪ್ರಶ್ನಾರ್ಥಕ.
ಅವಳು ಅವಳಾಗಿದ್ದರೂ ತಪ್ಪೇ.. ಅವಳು ಅವಳಾಗಿರದಿದ್ದರೂ ತಪ್ಪೇ.. ಒಟ್ಟಿನಲ್ಲಿ ಅವಳು ಹೇಗಿದ್ದರೂ ತಪ್ಪೇ. ಈ ಸಮಾಜದ ಪೂರ್ವಗ್ರಹೀತ ದೃಷ್ಟಿಯಲ್ಲಿ. ಹಾಗಿದ್ದ ಮೇಲೆ ಅವಳ ಮೇಲೆ ಅನುಕಂಪದ, ಸಹಾನುಭೂತಿಯ ಮಾತೇಕೆ. ಅದು ಒಂದು ರೀತಿಯಲ್ಲಿ ಸುಟ್ಟ ಗಾಯದ ಮೇಲೆ ಉಪ್ಪಿನ ಬರೆ ಎಳೆದಂತೆ ಅಲ್ಲವೇ?. ತಾಯಿಗೆ ತನ್ನಷ್ಟು ಜ್ಞಾನವಿಲ್ಲವೆಂದು, ಹೆಂಡತಿಗೆ ತನಷ್ಟು ಸಾಮರ್ಥ್ಯ ಇಲ್ಲವೆಂದು, ಸಹೋದರಿಯರಿಗೆ ತನ್ನಷ್ಟು ಧೈರ್ಯ, ಶಕ್ತಿ ಇಲ್ಲವೆಂದು ಹಿಂದಿಕ್ಕಿದ ಪುರುಷನಿಗೆ ಅವನ ಜೀವನ ಸಂಪೂರ್ಣತೆಗೆ ಇವರೆಲ್ಲರ ಸಹಕಾರ ಬೇಕೇಬೇಕು. ಅದರೇ ಅವಳು ಇವರು ನಿರೂಪಿಸಿದಂತೆ ಬದುಕಬೇಕು ಎಂಬುದು ಗಂಡಾಳ್ವಿಕೆಯ ದಬ್ಬಾಳಿಕೆ.
‘ತಗ್ಗಿ ಬಗ್ಗಿ ನಡೆದರೆ ಸಂಸ್ಕಾರವಂತೆ, ತಲೆ ಎತ್ತಿ ನೆಡೆದರೆ ಗಂಡುಬೀರಿಯಂತೆ…’ ಎನ್ನುವ ಮಾತಿಗೆ ತಲೆ ಎತ್ತಿ ನೆಡೆಯುವ ಪ್ರತಿಯೊಬ್ಬ ಹೆಣ್ಣಿನಲ್ಲೂ ಅದು ಅವಳ ಧೈರ್ಯ, ನೈತಿಕ ನಡೆ, ನೇರ ನುಡಿ, ಏನೇ ಬಂದರೂ ಎದುರಿಸಿ ನಿಲ್ಲುವ ಛಲದ ಪ್ರತೀಕವಾಗಿದೆ ಎಂದೇಕೆ ಅರ್ಥೈಸುವುದಿಲ್ಲ ಈ ಸಮಾಜ.
ವರ್ತಮಾನ ಕಾಲದಲ್ಲಿ ಲಿಂಗ ಅಸಮಾನತೆ ಕಡಿಮೆ ಆಗಿರಬಹುದು, ಮಹಿಳೆಯರು ಕೂಡ ಎಲ್ಲಾ ಕ್ಷೇತ್ರದಲ್ಲಿ ಅವಕಾಶ ಪಡೆದಿರಬಹುದು. ಆದರೆ ಅದರ ಹೊರತಾಗಿ ಉದ್ಯೋಗದ ಸ್ಥಾನಮಾನದಲ್ಲಿ, ವೇತನದಲ್ಲಿ ಇನ್ನೂ ಅದೇ ತಾತ್ಸಾರದ ಮಬ್ಬು ಕವಿದಿದೆ. ಅವಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವಕಾಶ ನೀಡುವ ಬದಲಿಗೆ ‘ನಾಮಕವಸ್ತೆ’ ಎಂಬಂತೆ ‘ಸ್ಥಾನ’ ನೀಡುವ ಮತ್ತು ಲಿಂಗಾಸಮಾನತೆಯ ಆರೋಪದಿಂದ ತಪ್ಪಿಸಿಕೊಳ್ಳುವ ನಡೆಗಳೇ ಹೆಚ್ಚು.
ಇದನ್ನು ಓದಿದ್ದೀರಾ? ಮಹಿಳಾ ದಿನದ ವಿಶೇಷ | ವಿನಾಶದ ಸುಳಿಯಲ್ಲಿ ಸಿಲುಕಿ, ದಾಖಲೆಗಳಿಗೂ ಸಿಗದೆ ಹೋದ ಮೂಕ ಹಕ್ಕಿ ʼಹೆಣ್ಣುʼ
ಸರ್ಕಾರಿ ಉದ್ಯೋಗದಲ್ಲಿ ಇಂತಿಷ್ಟು ಮಹಿಳಾ ಮೀಸಲಾತಿಯನ್ನು ಸಂವಿಧಾನಿಕವಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರು ರೂಪಿಸದಿದಿದ್ದರೆ, ಅದೆಷ್ಟು ಹೆಣ್ಣುಮಕ್ಕಳು ಮನೆಯ ಹೊಸಿಲನ್ನು ದಾಟದೆ ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗುತಿದ್ದರೋ…? ಊಹಿಸಲು ಅಸಾಧ್ಯ.
ಲೋಕಸಭೆಯಲ್ಲಿ ಶೇಕಡ 35 ರಷ್ಟು ರಾಜಕೀಯ ಮೀಸಲಾತಿ ಮಹಿಳೆಯರಿಗೆ ನೀಡಬೇಕು ಎಂದು ವಿಧೇಯಕ ರೂಪಿಸಿದೆ. ಅದೇ ರೀತಿಯಲ್ಲಿ ಕರ್ನಾಟಕದ ವಿಧಾನಸಭೆಯಲ್ಲಿ ಶೇಕಡ 50ರಷ್ಟು ರಾಜಕೀಯ ಮೀಸಲಾತಿ ನೀಡುವುದರ ಮೂಲಕ ಮಹಿಳಾ ಸಬಲೀಕರಣಕ್ಕೆ ಭದ್ರ ಬುನಾದಿ ಹಾಕಬೇಕು.
ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರು ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ಆ ದೇಶದ ಮಹಿಳೆಯರ ಪ್ರಗತಿಯಿಂದ ಅಳೆಯಬೇಕು ಎಂದು ಹೇಳಿದ್ದಾರೆ. ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭೀತಿಯಿಂದ ಸಂಚರಿಸುವ ಸ್ಥಿತಿಗೆ ಬಂದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಇಂದಿಗೂ ಈ ಅಳತೆ ಗೋಲಿನಲ್ಲೆ ದೇಶದ ಪ್ರಗತಿ ಅಳೆದುಕೊಂಡು, ಅನುಕ್ಷಣವು ಕನ್ನಡಿ ಮುಂದೆ ನಿಲ್ಲಬೇಕಿದೆ.
ಮಹಿಳಾ ಸ್ವಾತಂತ್ರ್ಯ,ಅದು ಕೇವಲ ಭಾಷಣದಲ್ಲಿ, ಬಹಿರಂಗದ ಮಾತಲ್ಲಿ ಮಾತ್ರ ಸೀಮಿತವಾಗದೆ ಅಂತರಂಗದ ಬಾಗಿಲನ್ನು ಒಂದೊಮ್ಮೆ ತಟ್ಟಬೇಕು. ಸ್ಥಾಪಿತ ಶಕ್ತಿಗಳು ಕಟ್ಟಿರುವ ಸುಳ್ಳು ನಿರೂಪಣೆಗಳ ಗೋಡೆ ಕೆಡವಿ ಲಿಂಗ ಸಂವೇದನೆಯ ಹಣತೆ ಹಚ್ಚಬೇಕು.

ವರ್ಷಿತ ಎಂ ನಾಗರಾಜ್
ಮೂಲತಃ ಹಾಸನದವರು. ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.




