ಪ್ರಧಾನಿ ಮೋದಿ ಅವರು ಟ್ರಂಪ್ ಕಂಡರೆ ಭಯಪಡುತ್ತಾರೆ ಎಂದು ರಾಹುಲ್ ಗಾಂಧಿ ಯಾಕೆ ಹೇಳಿದರು ಎನ್ನುವುದರ ಕೊಂಡಿಗಳನ್ನು ನೋಡ್ತಾ ಹೋದಾಗ, ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷವನ್ನು ನಾನೇ ನಿಲ್ಲಿಸಿದ್ದೇನೆ ಎಂದು ಟ್ರಂಪ್ 54 ಬಾರಿ ಹೇಳಿಕೊಂಡಿದ್ದಾರೆ. ಆದರೆ ಮೋದಿ ಅವರಿಂದ ಒಮ್ಮೆಯೂ ಟ್ರಂಪ್ ಮಾತಿಗೆ ಆಕ್ಷೇಪವೂ ಇಲ್ಲ, ಖಂಡನೆಯೂ ಇಲ್ಲ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಭಾರತ-ಪಾಕಿಸ್ತಾನ ಸಂಘರ್ಷವನ್ನು ಅಮೆರಿಕ ತಡೆದಿದೆ ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಖಂಡಿಸುವ ಧೈರ್ಯ ಪ್ರಧಾನ ಮಂತ್ರಿಗಿಲ್ಲ ಎಂದು ಆರೋಪಿಸಿದ್ದಾರೆ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾನುವಾರ ಬಿಹಾರದ ಬೆಗುಸರಾಯ್ ನಲ್ಲಿ ನಡೆದ ಚುನಾವಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮೋದಿ ಭಯ ಪಡೋದು ಮಾತ್ರವಲ್ಲ, ಶತಕೋಟ್ಯಧಿಪತಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರ ‘ರಿಮೋಟ್ ಕಂಟ್ರೋಲ್’ನಲ್ಲಿ ಮೋದಿ ಇದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಬಿಹಾರದ ನಲಂದಾ ಮತ್ತು ಶೇಖ್ಪುರದಲ್ಲಿ ನಡೆದ ಚುನಾವಣಾ ರ್ಯಾಲಿಗಳಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಧೈರ್ಯವನ್ನು ಸ್ಮರಿಸುತ್ತಾ, 1971ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷರಿಗೆ ‘ನಾವು ನಿಮಗೆ ಹೆದರುವುದಿಲ್ಲ’ ಎಂದು ಹೇಳಿದ್ದನ್ನು ಉದಾಹರಣೆಯಾಗಿ ನೀಡಿದರು. ಬಿಹಾರದಲ್ಲಿ ಕಾಗದ ಸೋರಿಕೆ ಮತ್ತು ಕಳಪೆ ಆರೋಗ್ಯ ಮೂಲಸೌಕರ್ಯಗಳು ಸಾಮಾನ್ಯವಾಗಿದೆ ಎಂದು ಅವರು ಆರೋಪಿಸಿದರು.
ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷವನ್ನು ತಡೆದಿದ್ದಾರೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ, ನಮ್ಮ ಪ್ರಧಾನ ಮಂತ್ರಿಗಳು ಟ್ರಂಪ್ ಅವರ ಈ ಹೇಳಿಕೆಯನ್ನು ಖಂಡಿಸುವ ಧೈರ್ಯ ತೋರುತ್ತಿಲ್ಲ. ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುವ ಸಾಮರ್ಥ್ಯ ಪ್ರಧಾನ ಮಂತ್ರಿಗಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಪ್ರಧಾನ ಮಂತ್ರಿಗಳು ಅಮೆರಿಕಕ್ಕೆ ಭೇಟಿ ನೀಡಬೇಕಿತ್ತು, ಆದರೆ ಟ್ರಂಪ್ ಅವರಿಗೆ ಹೆದರಿ ಹೋಗುತ್ತಿಲ್ಲ ಎಂದುಹೇಳಿದರು. ಪ್ರಧಾನಮಂತ್ರಿಗಳಿಗೆ ಧೈರ್ಯವಿದ್ದರೆ, ಟ್ರಂಪ್ ಅವರು ‘ಆಪರೇಷನ್ ಸಿಂಧೂರ’ವನ್ನು ತಡೆದಿಲ್ಲ ಎಂದು ಹೇಳಲಿ. ಬಿಹಾರದಲ್ಲಿ ನಡೆಯುತ್ತಿರುವ ತಮ್ಮ ರ್ಯಾಲಿಗಳಲ್ಲಿ ಈ ಬಗ್ಗೆ ಮಾತನಾಡಲಿ ಎಂದು ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.

ಪ್ರಧಾನಿ ಮೋದಿ ಅವರು ಟ್ರಂಪ್ ಅವರನ್ನು ಕಂಡರೆ ಭಯಪಡುತ್ತಾರೆ ಅಂತ ರಾಹುಲ್ ಗಾಂಧಿ ಯಾಕೆ ಹೇಳಿದರು ಅನ್ನೋದರ ಕೊಂಡಿಗಳನ್ನ ನೋಡ್ತಾ ಹೋದಾಗ, ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷವನ್ನು ನಾನೇ ನಿಲ್ಲಿಸಿದ್ದೇನೆ ಎಂದು ಟ್ರಂಪ್ 53 ಬಾರಿ ಹೇಳಿಕೊಂಡಿದ್ದಾರೆ!. ಆದರೆ ಇಲ್ಲಿಯವರೆಗೂ ಮೋದಿ ಅವರು ಒಂದು ಮಾತೂ ಹೇಳಿಲ್ಲ. ಟ್ರಂಪ್ ಮಾತಿಗೆ ಆಕ್ಷೇಪವೂ ಇಲ್ಲ, ಖಂಡನೆಯೂ ಇಲ್ಲ. ನರೇಂದ್ರ ಮೋದಿ ನಡೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಿದೆ ಅನ್ನೋ ಆರೋಪಗಳೂ ಕೇಳಿಬಂದಿತ್ತು. ಈ ಆರೋಪಗಳು ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿತ್ತು ಮತ್ತು ಟ್ರಂಪ್ನ ಹೇಳಿಕೆಗಳು ಭಾರತದ ಸ್ವಾತಂತ್ರ್ಯಕ್ಕೆ ಸವಾಲು ಸೃಷ್ಟಿಸಿತ್ತು.
ರಾಹುಲ್ ಗಾಂಧಿ ಅವರ ಆರೋಪಗಳು ಬರೀ ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಅದಾನಿ ಅಂಬಾನಿಗೆ ಮೋದಿ ಯಾವ ರೀತಿ ಬೆನ್ನೆಲುಬಾಗಿ ನಿಂತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ. ಅದಾನಿ ಗ್ರೂಪ್ನ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಸುಮಾರು 2,200 ಕೋಟಿ ರೂಪಾಯಿ ಲಂಚ ಪ್ರಕರಣದ ವಿರುದ್ಧ ಭಾರತ ಸರ್ಕಾರದ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ಅಮೆರಿಕ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಯುಎಸ್ ಸಿಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ಅದಾನಿ ಗ್ರೂಪ್ನ ವಿರುದ್ಧ ಆರೋಪಗಳನ್ನು ದಾಖಲಿಸಿದ್ದು, ಇದರಲ್ಲಿ ಭಾರತೀಯ ಅಧಿಕಾರಿಗಳ ಸಹಭಾಗಿತ್ವದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಆದರೂ, ಮೋದಿ ಸರ್ಕಾರ ಈ ವಿಚಾರದಲ್ಲಿ ಮೌನವಾಗಿರುವುದು ಗಮನಾರ್ಹ ವಿಚಾರ.
ಅದಾನಿ ಸಂಸ್ಥೆ ವಿರುದ್ಧ ಈಗಾಗಲೇ ಹಲವು ವಂಚನೆ ಆರೋಪಗಳು ಕೇಳಿಬಂದಿದೆ. ದೇಶದ ಅತ್ಯಧಿಕ ಬಂಡವಾಳ ಹೊಂದಿರುವ ಸಂಸ್ಥೆಗಳಲ್ಲಿ ಒಂದಾದ ಅದಾನಿ ಸಂಸ್ಥೆಯ ವಂಚನೆಗಳು ಬಹಿರಂಗವಾಗುತ್ತಿದ್ದಂತೆ ಷೇರು ಮಾರುಕಟ್ಟೆಯೇ ತಲ್ಲಣಿಸಿತ್ತು. ಭಾರತ ಮಾತ್ರವಲ್ಲದೆ ಅಮೆರಿಕದಲ್ಲಿಯೂ ಅದಾನಿ ಸಂಸ್ಥೆಯ ವಿರುದ್ಧ ವಂಚನೆ ಪ್ರಕರಣಗಳಿವೆ. ಆದರೆ ಭಾರತ ಸರ್ಕಾರ ಮಾತ್ರ ನಿರಂತರವಾಗಿ ಗೌತಮ್ ಅದಾನಿ ರಕ್ಷಣೆಗೆ ನಿಂತಿದೆ. ಹಿಂಡನ್ಬರ್ಗ್ ಮಾಡಿದ ಆರೋಪವನ್ನೆಲ್ಲ ಬದಿಗೊತ್ತಿ ಸೆಬಿ ಅದಾನಿ ವಿರುದ್ಧದ ಪ್ರಕರಣವನ್ನೇ ಮುಚ್ಚಿಹಾಕಿದೆ. ಅದಾನಿ ವಂಚನೆ ಪ್ರಕರಣದಲ್ಲಿ ಭಾರತೀಯ ಅಧಿಕಾರಿಗಳ ಸಹಕಾರಕ್ಕಾಗಿ ಅಮೆರಿಕ ವಿನಂತಿಸಿದೆ. ಆದರೆ ಭಾರತ ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕೈಚೆಲ್ಲಿದೆ. ಅದಾನಿ ಗ್ರೂಪ್ ಸಂಸ್ಥಾಪಕ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿಗೆ ಕಾನೂನು ದಾಖಲೆಗಳನ್ನು ಸಲ್ಲಿಸಲು ಭಾರತದ ಕಾನೂನು ಸಚಿವಾಲಯವನ್ನು ಪದೇ ಪದೇ ಸಂಪರ್ಕಿಸಲಾಗಿದೆ ಎಂದು ಎಸ್ಇಸಿ ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯಕ್ಕೆ ತಿಳಿಸಿತ್ತು.

ಈ ಹಿಂದೆ ರಾಹುಲ್ ಗಾಂಧಿ ತಮ್ಮ ಹಿಂದಿನ ಭಾಷಣಗಳಲ್ಲಿ ‘ವೋಟ್ ಚೋರಿ’ಯಂತಹ ವಿಷಯಗಳನ್ನು ಎತ್ತಿ ಹಿಡಿದಿದ್ದರು. ಈ ಬಗ್ಗೆ ಚುನವಾಣಾ ಆಯೋಗ ಸರಿಯಾದ ಮಾಹಿತಿಯಾಗಲೀ ಅಥವಾ ಸರಿಯಾದ ಉತ್ತರವನ್ನಾಗಲೀ ಕೊಟ್ಟಿಲ್ಲ. ಚುನಾವಣಾ ಆಯೋಗ ಬಿಜೆಪಿ ಜೊತೆ ಕೈಜೋಡಿಸಿದೆ ಅನ್ನೋದು ರಾಹುಲ್ ಗಾಂಧಿ ಆರೋಪವಾಗಿತ್ತು. ಈ ಬಾರಿ ಅಂತರರಾಷ್ಟ್ರೀಯ ಮತ್ತು ಆರ್ಥಿಕತೆಗೆ ಸಂಬಂಧಪಟ್ಟ ದೊಡ್ಡ ಆರೋಪಗಳ ಜೊತೆಗೆ ಮೋದಿ ಅವರನ್ನು ಗುರಿಯಾಗಿಸಿದ್ದಾರೆ. ಈ ಹೇಳಿಕೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗುರಿಯಾಗಿದೆ. ಬಿಜೆಪಿ ಈಗಾಗಲೇ ರಾಹುಲ್ ಅವರ ಆರೋಪಗಳನ್ನು ‘ನಿರಾಧಾರಿತ’ ಎಂದು ತಳ್ಳಿ ಹಾಕಿದೆ, ಆದರೆ ಕಾಂಗ್ರೆಸ್ ಇದನ್ನು ಮೋದಿ ಸರ್ಕಾರದ ‘ಕಾರ್ಪೊರೇಟ್ ಸ್ನೇಹಿ’ ನೀತಿಯ ಸಾಕ್ಷ್ಯವೆಂದು ಪ್ರಸ್ತಾಪಿಸುತ್ತಿದೆ. ಅಷ್ಟೇ ಯಾಕೆ ಹೌಡಿ ಮೋದಿ ನಮಸ್ತೆ ಟ್ರಂಪ್ ಅನ್ನೋ ಸ್ನೇಹವನ್ನ ಟ್ರಂಪ್ ಈಗ ಮುರಿದಿದ್ದಾರೆ. ಭಾರತದ ಎಚ್1ಬಿ ವೀಸಾದ ಶುಂಕವನ್ನ ದುಪ್ಪಟ್ಟು ಮಾಡಿದ್ದರು, ಇದು ಭಾರತೀಯ ಉದ್ಯೋಗಿಗಳ ಕೆರಿಯರ್ಗೆ ಮುಳ್ಳಾಗಿದ್ದಂತೂ ಸತ್ಯ. ಏಕೆಂದರೆ ಅಮೆರಿಕದಲ್ಲಿ H-1B ವೀಸಾ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರತೀಯರ ಪಾಲು ದೊಡ್ಡದಿದೆ. ಇದನ್ನು ಬಲ್ಲವರಾಗಿಯೇ ಡೊನಾಲ್ಡ್ ಟ್ರಂಪ್ H-1B ವೀಸಾ ನಿಯಮಗಳಲ್ಲಿ ಬದಲಾವಣೆ ತಂದಿದ್ದರು. H-1B ವೀಸಾ ನಿಯಮ ಬದಲಾವಣೆ ಭಾರತವನ್ನು ಮಣಿಸುವ ಟ್ರಂಪ್ ಆಡಳಿತದ ಪ್ರಯತ್ನದ ಭಾಗವಾಗಿತ್ತು. ಇದಕ್ಕೂ ಮೋದಿ ಯಾವುದೇ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಿಲ್ಲ. ಬಹಿರಂಗವಾಗಿ ಟ್ರಂಪ್ ನಡೆಯನ್ನ ಖಂಡಿಸಲೂ ಇಲ್ಲ.
ಅಮೆರಿಕ ನೇತೃತ್ವದ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಕೂಡ ರಷ್ಯಾದೊಂದಿಗೆ ವ್ಯಾಪಾರ ಮುಂದುವರೆಸುವ ರಾಷ್ಟ್ರಗಳ ಮೇಲೆ ‘ದ್ವಿತೀಯಕ ನಿರ್ಬಂಧ’ (ಸೆಕೆಂಡರಿ ಸ್ಯಾಂಕ್ಷನ್) ಅಡಿಯಲ್ಲಿ 100% ತೆರಿಗೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದಾದ ನಂತರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡ 25 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುವ ಆದೇಶಕ್ಕೆ ಸಹಿ ಹಾಕ್ತಾರೆ, ಇದರಿಂದಾಗಿ ಒಟ್ಟಾರೆ ಸುಂಕದ ಪ್ರಮಾಣವು ಕೆಲವು ವಿನಾಯಿತಿ ಸರಕುಗಳನ್ನು ಹೊರತುಪಡಿಸಿ ಶೇಕಡ 50ಕ್ಕೆ ಏರಿಕೆಯೂ ಆಗಿದೆ. ಇಷ್ಟು ಸಾಲದು ಅಂತ ಕೆಲ ದಿನಗಳ ಹಿಂದೆ ‘ರಷ್ಯಾದಿಂದ ಇನ್ನುಮುಂದೆ ಕಚ್ಚಾ ತೈಲ ಖರೀದಿಸುವುದಿಲ್ಲ ಎಂದು ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಪಕ್ಷೀಯ ಹೇಳಿಕೆಯನ್ನ ನೀಡಿದ್ದರು.

ಅಮೆರಿಕ ಅಧ್ಯಕ್ಷ ಟ್ರಂಪ್ ಮಾತಿಗೆ ಭಾರತ ಸರ್ಕಾರದ ಕಡೆಯಿಂದ ಪ್ರಧಾನಿ ಮೋದಿಯವರು, ಮಾತುಕತೆ ನಡೆದಿದೆ ಅಥವಾ ನಡೆದಿಲ್ಲ; ಒಪ್ಪಿಗೆ ಕೊಟ್ಟಿದ್ದೇನೆ ಅಥವಾ ಕೊಟ್ಟಿಲ್ಲ ಎಂದು ಹೇಳಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಮೋದಿಯವರ ಮೌನ ಟ್ರಂಪ್ಗೆ, ಸಮ್ಮತಿಯ ಲಕ್ಷಣ ಎನಿಸಿದ್ದರೆ ಆಶ್ಚರ್ಯವಿಲ್ಲ. ಆದರೆ, ಭಾರತದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ ಜೈಸ್ವಾಲ್, ‘ಭಾರತದ ಗ್ರಾಹಕರ ಹಿತಾಸಕ್ತಿ ಕಾಪಾಡುವುದೇ ನಮ್ಮ ಆದ್ಯತೆಯಾಗಿದೆ. ಅಮೆರಿಕ-ಭಾರತದ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಅಮೆರಿಕ ಅಧ್ಯಕ್ಷ ಟ್ರಂಪ್, ತಮ್ಮ ವ್ಯಾಪ್ತಿ ಮೀರಿ ಮಾತನಾಡುತ್ತಿದ್ದಾರೆ. ಅದನ್ನು ಅಲ್ಲಗಳೆಯುವಲ್ಲಿ ಭಾರತದ ಪ್ರಧಾನಿ ಮೋದಿಯವರು ಮುಂದಾಗದಿರುವುದು ಹಲವು ಅನುಮಾನಗಳಿಗೆ ಆಸ್ಪದವೀಯುತ್ತಿದೆ. ಅದು ದೇಶದ ವಿದೇಶಾಂಗ ನೀತಿಗೆ ಧಕ್ಕೆ ತರುತ್ತಿದೆ. ಮೋದಿ ಟ್ರಂಪ್ ವಿರುದ್ಧ ಎಲ್ಲಿಯೂ ತುಟಿ ಬಿಚ್ಚೋ ಪ್ರಯತ್ನ ಮಾಡಿಲ್ಲ ಅಂತ ಸಾಮಾನ್ಯ ಜನರೂ ಟೀಕೆ ಮಾಡುವಂತಾಗಿದೆ.
ಇದನ್ನೂ ಓದಿ ಸೂಪರ್ ಮಾರ್ಕೆಟ್ನಲ್ಲಿ ಕೊಚ್ಚಿ ಹೋಗುತ್ತಿವೆ ಕಿರಾಣಿ ಅಂಗಡಿಗಳು!
ಮೋದಿಯವರ ಈ ಮೌನವನ್ನೇ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸುತ್ತಿರುವುದು. ‘ಭಾರತೀಯರು ದಯವಿಟ್ಟು ಅರ್ಥ ಮಾಡಿಕೊಳ್ಳಿ, ಡೊನಾಲ್ಡ್ ಟ್ರಂಪ್ ಪದೇ ಪದೆ ಬೆದರಿಕೆ ಹಾಕುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಸುಮ್ಮನಿರುವುದಕ್ಕೆ ಕಾರಣ, ಅಮೆರಿಕದಲ್ಲಿ ಅದಾನಿ ವಿರುದ್ಧ ನಡೆಯುತ್ತಿರುವ ತನಿಖೆ’ ಎಂದು ಮೌನದ ಹಿಂದಿನ ಮರ್ಮವನ್ನು ಈ ಹಿಂದೆಯೆ ಬಿಡಿಸಿದ್ದರು. ಟ್ರಂಪ್ನ ಹೇಳಿಕೆಗಳು, ಅದಾನಿ ಪ್ರಕರಣದಂತಹ ಅಂತರರಾಷ್ಟ್ರೀಯ ವಿವಾದಗಳು, ಟ್ರಂಪ್ ಟ್ಯಾರಿಫ್ ಭಾರತದ ರಾಜಕೀಯದಲ್ಲಿ ಹೊಸ ಆಯಾಮವನ್ನು ತಂದಿದೆ. ರಾಹುಲ್ ಗಾಂಧಿಯ ಈ ಆಂಗಲ್, ಸಾಮಾನ್ಯ ಜನರನ್ನು ದೊಡ್ಡ ವ್ಯಾಪಾರಿಗಳಿಂದ ಮುಕ್ತಗೊಳಿಸುವ ‘ನ್ಯಾಯದ ಹೋರಾಟ’ವಾಗಿ ಚಿತ್ರಿಸುತ್ತಿದೆ. ಈಗಾಗಲೇ ಆಡಳಿತ ವಿರೋಧಿ ಅಲೆ ಎದ್ದಿರುವ ಬಿಹಾರದಲ್ಲಿ ಬಿಜೆಪಿಗೆ ಇದು ಮುಳುವಾಗಬಹುದಾ? ಅಥವಾ ಮೋದಿ ಸರ್ಕಾರದ ಬಲವಾದ ಚಿತ್ರಣವೇ ಮೋದಿ ಸರ್ಕಾರವನ್ನ ಉಳಿಸಬಹುದಾ? ಸಮಯ ತಿಳಿಸುತ್ತದೆ. ಆದರೆ ಒಂದು ವಿಷಯ ಸ್ಪಷ್ಟ – ರಾಹುಲ್ ಗಾಂಧಿಯ ಈ ‘ರಿಮೋಟ್ ಕಂಟ್ರೋಲ್’ ಉಪಮೆ, ಭಾರತದ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಉಂಟುಮಾಡಿದೆ.





