ಇರುವಾಗ ದನಿಯಾಗದೆ
ಸತ್ತ ಮೇಲೆ ಕೊಂಡಾಡಿಸಿಕೊಳ್ಳುವ
ವಿಖ್ಯಾತ ಕವಿಗಳ ಲಘುಬಗೆಯ ಪ್ರೇಮ;
ಕವಿತೆಗಳು ಇಂದು ಸತ್ತು ಹೋದವು!
ರಂಜಾನ್ ತಿಂಗಳ ಮಧ್ಯಾಹ್ನ
ಆಲಿಕಲ್ಲು ಮಳೆ ಬಂತೆಂದು
ಶಾಲೆಯಿಂದ ಹೊರಬರಲು
ಸಂಭ್ರಮದಿಂದ ಕೂಗಿದ ಮಕ್ಕಳು
ರೆಪ್ಪೆ ಮಿಟುಕಿಸುವಷ್ಟರಲ್ಲಿ ಬೆಂಕಿ;
ಉಂಡೆಗಳಾಗಿ ಚಲ್ಲಾಪಿಲ್ಲಿಯಾದವು!
ಆ
ಆಗ
ಆಕಾಶವೂ ಹೊಗೆಯಾಡಿ
ಸೂರ್ಯನಿಗೂ ಗ್ರಹಣ ಹಿಡಿಯಿತು!
ಉಪವಾಸವಿದ್ದ ನೂರಾರು ಜೀವಗಳು
ತಮಗರಿವಿಲ್ಲದೆ ಇನ್ಯಾರದ್ದೋ ಅಹಂ-
ಕ್ಯಾನಕ್ಕೆ ರಾತ್ರಿ ನಕ್ಷತ್ರಗಳಾದವು;
ಅಪ್ಪ-
ಅವ್ವಂದಿರ ಶಾಶ್ವತ ದುಃಖಿಗಳಾದರು!
ಮಾನವೀಯ ಚಿಂತನೆಗಳ ಅಪ್ಪಟ
ಜೀವನ ಪ್ರೇಮಿಗಳೀಗ ಯಾವ
ಹೂವಿನ ತೋಟದಲ್ಲಿ ನೀರು
ಹಾಕುತ್ತಿದ್ದಾರೋ ನಾಕಾಣೆ!
ಗಂಟೆಗಟ್ಟಲೆ ಭಾಷಣ ಹೊಡೆಯುವ
ವಿಶ್ವ ಶ್ರೇಷ್ಠ ನಾಯಕರು ಯಾವ
ಇಫ್ತಾರ್ ಕೂಟದಲಿ ತಿಂದು ಗಂಟಲಲಿ
ಗೋಲಿಸೋಡ ಇಳಿಸಿ ತೇಗುತ್ತಿದ್ದಾರೊ!
ಅವರನ್ನೆಲ್ಲಾ ಬಿಡಿ,
ಈ ರೌರವ ನರಕ ನೋಡಿದ
ಮೇಲೆಯೂ ಮೌನ ಮುರಿಯದ
ದೇಶಕಟ್ಟುವ ಕವಿಗಳ ನಡೆಯೂ
ಮಾನವ ಕುಲದ ಅಂತ್ಯದ ಸಂಕೇತ!
ಈ ದಿನ
ಜಗತ್ತಿನಲ್ಲಿರುವ ಕವಿಗಳೆ
ಬೀದಿಗಿಳಿದು ಯುದ್ಧ ನಿಲ್ಲಿಸಿರೆಂದು
ಜೋರಾಗಿ ಕೂಗಾಡೋಣ ಬನ್ನಿ.
ಶಾಂತಿ ಬಿತ್ತುವ ಮಾತಿನ
ಬಾಂಬುಗಳನ್ನು ಕಂಡು ಹಿಡಿಯೋಣ!
ಎರಡೂ ಕಡೆ ಬಿಸಾಡಿ
ಕೂಗು ಮಾರಿಗಳ ಬಾಯಿ ಮುಚ್ಚಿಸೋಣ!
ಮಾನವನೆದೆಯಲಿ ಸಮತೆಯ
ಪರಂಜ್ಯೋತಿ ಬೆಳಗಿಸೋಣ.
-ಗೋಳೂರ ನಾರಾಯಣಸ್ವಾಮಿ





