2022ರಲ್ಲಿ ಉತ್ತರಾಖಂಡದ ಪೌರಿಯಲ್ಲಿ ವನಂತ್ರ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಅಂಕಿತಾ ಭಂಡಾರಿಯನ್ನು ಕೊಲೆ ಮಾಡಲಾಯಿತು. ಆಕೆ ರಿಸೆಪ್ಷನಿಸ್ಟ್ ಆಗಿದ್ದಳು, ಕನಸುಗಳಿದ್ದ ಹುಡುಗಿ. ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಯುವತಿ. ಆಕೆಯನ್ನು ಕೊಂದದ್ದು ಯಾರೋ ಅಪರಿಚಿತರು ಅಲ್ಲ, ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಅವನ ಸಹಚರರು. ನ್ಯಾಯಾಲಯವು ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ಇಲ್ಲಿ ತನಕದ ಕತೆಯಲ್ಲಿ “ಕಾನೂನು ತನ್ನ ಕೆಲಸ ಮಾಡಿದೆ” ಅನ್ನಿಸಬಹುದು. ಆದರೆ ನಿಜವಾದ ಪ್ರಶ್ನೆ ಇಲ್ಲಿಂದಲೇ ಆರಂಭವಾಗುತ್ತದೆ.
ಎಲ್ಲರಿಗೂ ಗೊತ್ತಿರುವಂತೆ, 2022ರಲ್ಲಿ ಉತ್ತರಾಖಂಡದ ಪೌರಿ ಜಿಲ್ಲೆಯ ವನಂತ್ರ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಬಡ ಹುಡುಗಿ ಅಂಕಿತಾ ಭಂಡಾರಿಯನ್ನು ಕೊಲೆ ಮಾಡಲಾಗಿತ್ತು. ಆಕೆ ರೆಸಾರ್ಟ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸಕ್ಕೆ ಸೇರಿ ಕೇವಲ 20 ದಿನಗಳು ಕಳೆದಿತ್ತಷ್ಟೇ. ಕುಟುಂಬದ ಹೊರೆ ಇಳಿಸಲು, ತನ್ನ ಓದನ್ನು ಬಿಟ್ಟು ₹10,000 ಸಂಬಳಕ್ಕೆ ಕೆಲಸಕ್ಕೆ ಸೇರಿದ್ದಳು. ಆದರೆ ಆ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಈತ ಬಿಜೆಪಿ ನಾಯಕ ವಿನೋದ್ ಆರ್ಯನ ಮಗ ಮತ್ತು ಅವನ ಇಬ್ಬರು ಸ್ನೇಹಿತರು ಆಕೆಯನ್ನು ಕೊಂದು ನಾಲೆಗೆ ಎಸೆಯುತ್ತಾರೆ. ಏಕೆಂದರೆ? ಆಕೆ ಒಂದು ‘ವಿಐಪಿ’ ಅತಿಥಿಗೆ ‘ಎಕ್ಸ್ಟ್ರಾ ಸರ್ವೀಸ್’, ಅಂದರೆ ಲೈಂಗಿಕ ಸಂಬಂಧಕ್ಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ. ಈ ಮೂವರು ಈಗ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಆದರೆ ಆ ‘ವಿಐಪಿ’ ಯಾರು ಎಂಬ ಪ್ರಶ್ನೆ ಇಷ್ಟು ವರ್ಷಗಳ ಕಾಲ ಗುಪ್ತವಾಗಿತ್ತು. ಆದರೆ ಈಗ ಅದು ಬಯಲಾದಂತಿದೆ.

ಈ ಪ್ರಕರಣದಲ್ಲಿ “ವಿಐಪಿ” ಯಾರು? ಸರ್ಕಾರ ಯಾಕೆ ಹೆದರಿತು? ಎಂಬ ಪ್ರಶ್ನೆಗಳು ಈಗ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ಹೊರಬಂದ ಆಡಿಯೋ ಕ್ಲಿಪ್ಗಳು, ವಿಡಿಯೋಗಳು ಈ ಕೊಲೆಯಲ್ಲಿ “ವಿಐಪಿ”ಯೊಬ್ಬರ ಪಾತ್ರವಿದೆ ಎಂಬುದನ್ನು ಬಯಲಿಗೆ ತಂದಿವೆ. ಶಾಸಕ ಸುರೇಶ್ ರಾಥೋಡ್ ಅವರ ಪತ್ನಿ ಎಂದು ಹೇಳಿಕೊಳ್ಳುವ ನಟಿ ಉರ್ಮಿಳಾ ಸನಾವರ್ ಬಹಿರಂಗವಾಗಿ ಈ ಆರೋಪ ಮಾಡಿದ್ದಾರೆ. ಅವರು ಹೇಳಿರುವ ಆ ವಿಐಪಿ ಹೆಸರು ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್. ಈತ ಉತ್ತರಾಖಂಡದ ಉಸ್ತುವಾರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೂಡ ಹೌದು. ಈತ ಮತ್ತು ರಾಥೋಡ್ ಬಾಲ್ಯದ ಸ್ನೇಹಿತರಂತೆ. ಇದರ ನಂತರ ಉರ್ಮಿಳಾ ಮತ್ತು ರಾಥೋಡ್ ವಿರುದ್ಧ ಡೆಹ್ರಾಡೂನ್ ಮತ್ತು ಹರಿದ್ವಾರದಲ್ಲಿ ಹಲವು ಎಫ್ಐಆರ್ ದಾಖಲಾಗಿವೆ. ಇದಾವ ನ್ಯಾಯ? ಸತ್ಯ ಹೇಳಿದ್ದಕ್ಕೆ ಶಿಕ್ಷೆಯಾ? ಪೊಲೀಸರು ಉರ್ಮಿಳಾರನ್ನ ಪ್ರಶ್ನೆ ಮಾಡಿದ್ದಾರೆ, ಆದರೆ ದುಷ್ಯಂತ್ ಗೌತಮ್ರನ್ನು ಏಕೆ ಸಂಪರ್ಕಿಸಿಲ್ಲ? ಇದು ನ್ಯಾಯದ ಹೋರಾಟಕ್ಕೆ ತಡೆಯಲ್ಲವೇ? ಬಿಜೆಪಿ ನಾಯಕರ ಈಸ್ಟೇನ್ ಫೈಲ್ಗಳು ಇದೇನಾ? ಪವರ್ಫುಲ್ ಲೀಡರ್ಗಳನ್ನು ರಕ್ಷಿಸಲು ಸರ್ಕಾರ ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ? ಇದು ‘ಬೇಟಿ ಬಚಾವೋ’ ಅಲ್ಲ, ‘ಬೇಟಿ ಮಾರೋ’ ಆಗಿದೆ.
ಶಾಸಕ ಸುರೇಶ್ ರಾಥೋಡ್ ಅವರ ಪತ್ನಿ ಎಂದು ಹೇಳಿಕೊಂಡ ನಟಿ ಉರ್ಮಿಳಾ ಸನಾವರ್ ಈ ಕೊಲೆಯಲ್ಲಿ ‘ವಿಐಪಿ’ಯೊಬ್ಬರ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಮೇಲೆ ಏನಾಯ್ತು? ಜನರು ಪ್ರಶ್ನಿಸಿದರು, ಪ್ರತಿಭಟನೆಗಳು ಜೋರಾದವು. ಕಾಂಗ್ರೆಸ್, ಸಾಮಾಜಿಕ ಸಂಘಟನೆಗಳು ಸಿಬಿಐ ತನಿಖೆಗೆ ಒತ್ತಾಯಿಸಿದವು. ಸರ್ಕಾರ ಮಾತ್ರ ಮೌನ ವಹಿಸಿತ್ತು. ಜನರ ಪ್ರತಿಭಟನೆಯ ಕೂಗು ಕೇಳಿದರೂ ಕೇಳದಂತೆ ನಟಿಸುತಲಿತ್ತು. ನಿರ್ಲಕ್ಷ್ಯ ಮಾಡಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ “ರಕ್ಷಣೆ” ಇದೆ ಅಂತ ಸರ್ಕಾರಗಳು ಭಾಷಣ ಮಾಡುತ್ತವೆ. ಆದರೆ ಅಂಕಿತಾ ಕೊಲೆ ಪ್ರಕರಣ ನೋಡಿದರೆ ಒಂದು ಪ್ರಶ್ನೆ ಕಾಡುತ್ತದೆ. ಈ ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಹೆಣ್ಣು ಮಕ್ಕಳನ್ನೋ? ಅಥವಾ “ವಿಐಪಿ”ಗಳನ್ನೋ?

ಇನ್ನೂ ಪೋಸ್ಟ್ಮಾರ್ಟಂನಲ್ಲಿ ಲೈಂಗಿಕ ದೌರ್ಜನ್ಯದ ಸಾಧ್ಯತೆಯನ್ನು ನಿರಾಕರಿಸಿಲ್ಲ, ಆದರೆ ಪೊಲೀಸರು ಅದನ್ನು ಪರಿಗಣಿಸದೇ ಇದ್ದರು. ರೆಸಾರ್ಟ್ನ ಸಿಸಿಟಿವಿ ಡಿಸ್ಟ್ರಾಯ್ ಮಾಡಿದರು, ಬಿಜೆಪಿ ಶಾಸಕ ರೇಣು ಬಿಷ್ಟ್ ಬುಲ್ಡೋಜರ್ ಹಾಕಿ ರೆಸಾರ್ಟ್ ನಾಶ ಮಾಡಿಸಿದರು, ಸಾಕ್ಷ್ಯಗಳನ್ನು ಬೆಂಕಿ ಹಚ್ಚಿ ಸುಟ್ಟರು. ಇದೆಲ್ಲಾ ಯಾರ ಆದೇಶದ ಮೇರೆಗೆ ನಡೆದಿದೆ?
ಹಿಂದಿನ ತನಿಖೆಯಲ್ಲಿ ಎಸ್ಐಟಿಯ ಚಾರ್ಜ್ಶೀಟ್ನಲ್ಲಿ ಅತಿಥಿಯ ಹೇಳಿಕೆಯನ್ನು ಮೂರು ಪುಟಗಳಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಇದು ರೆಸಾರ್ಟ್ನಲ್ಲಿ ನಡೆಯುತ್ತಿರುವ ಅನುಮಾನಾಸ್ಪದ ಚಟುವಟಿಕೆಗಳನ್ನು ಬಹಿರಂಗಪಡಿಸಿದೆ. ತನಿಖೆ ವೇಳೆ ರೆಸಾರ್ಟ್ನಲ್ಲಿ ತಂಗಿದ್ದ ಸುಮಾರು 50 ಮಂದಿಯನ್ನು ಎಸ್ಐಟಿ ವಿಚಾರಣೆಗೊಳಪಡಿಸಿದೆ. ಅಂಕಿತಾ ಶವವಾಗಿ ಪತ್ತೆಯಾಗುವ ಒಂದು ವಾರದ ಹಿಂದೆ ರೆಸಾರ್ಟ್ನಲ್ಲಿ ಅತಿಥಿಯೊಬ್ಬರು ತನ್ನನ್ನು ತಬ್ಬಿಕೊಂಡಿದ್ದಾಗಿ ಅಂಕಿತಾ ತನ್ನ ಸ್ನೇಹಿತೆ ಪುಷ್ಪಾಗೆ ಹೇಳಿದ್ದರು. ಆದರೆ ಪೊಲೀಸರು ವಿಐಪಿ ಯಾರೆಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ನ್ಯಾಯಾಲಯದಲ್ಲಿ ಪೊಲೀಸರು ಸಲ್ಲಿಸಿದ 500 ಪುಟಗಳ ಚಾರ್ಜ್ಶೀಟ್ನಲ್ಲಿ ತನಿಖಾಧಿಕಾರಿಗಳು ‘ವಿಐಪಿ ಅತಿಥಿ’ಯೊಂದಿಗೆ ಹೇಗೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಪೊಲೀಸರು ಆರೋಪಪಟ್ಟಿಯಲ್ಲಿ 97 ಸಾಕ್ಷಿಗಳನ್ನು ಹೆಸರಿಸಿದ್ದು, ಇವರಲ್ಲಿ 35 ಮಂದಿ ರೆಸಾರ್ಟ್ನ ಉದ್ಯೋಗಿಗಳು ಮತ್ತು ಇಲ್ಲಿ ತಂಗಿದ್ದ ಜನರಾಗಿದ್ದಾರೆ.

ಜನರ ಆಕ್ರೋಶ ಹೆಚ್ಚಾದಾಗ, ಧಾಮಿ ಸರ್ಕಾರ ಹೂಡಿದ “ಉಪಾಯ” ಏನು ಗೊತ್ತಾ? ಸರ್ಕಾರಿ ನರ್ಸಿಂಗ್ ಕಾಲೇಜಿಗೆ ಅಂಕಿತಾ ಭಂಡಾರಿ ಹೆಸರನ್ನ ಇಡುವುದು. ಅಂಕಿತಾ ಭಂಡಾರಿಗೆ ಸರ್ಕಾರ ನಿಜವಾಗಿಯೂ ಕೊಡುವ ಗೌರವವೇ ಇದು? ಅಥವಾ ಜನರ ಕಣ್ಣಿಗೆ ಮಣ್ಣು ಎರಚುವ ಯತ್ನವೇ? ಒಬ್ಬ ಹೆಣ್ಣುಮಗುವಿನ ಕೊಲೆಗೆ ನ್ಯಾಯ ಕೊಡೋದು ಬಿಟ್ಟು ಅವಳ ಹೆಸರನ್ನು ಫಲಕಕ್ಕೆ ಹಾಕಿದರೆ ಜನರು ಸುಮ್ಮನಾಗುತ್ತಾರೆ ಅಂತ ಸರ್ಕಾರ ಭಾವಿಸಿತಾ? ಒಬ್ಬ ಹೆಣ್ಣುಮಗುವಿನ ಮೇಲೆ ನಡೆದ ಅನ್ಯಾಯಕ್ಕೆ, ನ್ಯಾಯ ಕೊಡಬೇಕಾದ ಸರ್ಕಾರ, ಆಕೆಯ ಹೆಸರನ್ನೇ ಶಾಂತಿಗೊಳಿಸುವ ಆಯುಧವನ್ನಾಗಿ ಮಾಡಿಕೊಂಡಿತು. ಹೆಸರು ಇಟ್ಟರೆ ಸಾಕಾ? ನ್ಯಾಯ ಸಿಗುವುದೇ? ವಿಐಪಿ ಯಾರು ಅಂತ ಗೊತ್ತಾಯಿತಾ? ಅವರ ಬಂಧನ ಆಯಿತಾ? ಯಾವ ಪ್ರಶ್ನೆಗೂ ಉತ್ತರ ಇಲ್ಲವೇ ಆಗಿತ್ತು.

ಕೊನೆಗೂ ಜನರ ಒತ್ತಡ, ನಿರಂತರ ಪ್ರಶ್ನೆಗಳ ಮುಂದೆ ಧಾಮಿ ಸರ್ಕಾರ ಮಣಿಯಲೇ ಬೇಕಾಯಿತು. ಸಿಬಿಐ ತನಿಖೆಗೆ ಒಪ್ಪಲೇಬೇಕಾಯಿತು. ಇದನ್ನು ಸರ್ಕಾರದ ಸತ್ಸಂಕಲ್ಪ ಅಂತ ಹೇಳಬೇಡಿ. ಇದು ಜನಶಕ್ತಿಯ ಗೆಲುವು. ಇದು ಸರ್ಕಾರದ ಮನಸ್ಸು ಮಾಡಿ ಸಿಬಿಐ ತನಿಖೆಗೆ ಕೊಟ್ಟಿರುವುದಲ್ಲ ಬದಲಿಗೆ ಭಯಗೊಂಡು ತನಿಖೆಗೆ ವಹಿಸಿರುವುದು. ಆದರೆ ಒಂದು ಪ್ರಶ್ನೆ, ಸಿಬಿಐ ತನಿಖೆ ಸರ್ಕಾರಕ್ಕೆ ಮೊದಲೇ ಯಾಕೆ ಬೇಕಿರಲಿಲ್ಲ? ಆಡಿಯೋ–ವಿಡಿಯೋ ಬರೋವರೆಗೆ ಯಾಕೆ ಕಾಯಿತು? ಜನ ಬೀದಿಗೆ ಇಳಿಯುವವರೆಗೆ ಯಾಕೆ ಸುಮ್ಮನಿತ್ತು? ಸರ್ಕಾರ ತಾನೇ ನ್ಯಾಯ ಕೊಡಬೇಕು ಅಂತ ಇದ್ದರೆ, ಇಷ್ಟು ತಡ ಯಾಕೆ? ಇಷ್ಟು ವರ್ಷಗಳ ಕಾಲ ಬಿಜೆಪಿ ಸರ್ಕಾರ ಏನು ಮಾಡುತ್ತಿತ್ತು? ಅಂಕಿತಾ ಕುಟುಂಬದ ಕಣ್ಣೀರು ಏಕೆ ಕಾಣಲಿಲ್ಲ? ಏಕೆ ಆ ‘ವಿಐಪಿ’ಯನ್ನು ರಕ್ಷಿಸುತ್ತಾ ಬಂದರು?
ಒಂದು ಕ್ಷಣ ಯೋಚಿಸಿ. ಈ “ವಿಐಪಿ” ಸಾಮಾನ್ಯ ವ್ಯಕ್ತಿಯಾಗಿದ್ದರೆ, ತನಿಖೆ ಇಷ್ಟು ತಡವಾಗುತ್ತಿತ್ತಾ? ಸಾಕ್ಷ್ಯಗಳು ಮಾಯವಾಗುತ್ತಿತ್ತಾ? ಸರ್ಕಾರ ಇಷ್ಟು ಕಾಲ ಮೌನವಾಗುತ್ತಿತ್ತಾ? ಕಾಲೇಜಿನ ಹೆಸರು ಇಡುವ ನಾಟಕ ನಡೆಯುತ್ತಿತ್ತಾ? ಉತ್ತರ ನಮಗೆಲ್ಲರಿಗೂ ಗೊತ್ತೇ ಇದೆ. ಅಂಕಿತಾ ಒಬ್ಬಳೇ ಅಲ್ಲ. ದೇಶದಾದ್ಯಂತ ವಿಐಪಿಗಳ ಮುಂದೆ ನಿಂತು ನ್ಯಾಯ ಕಾದಿರುವ ಸಾವಿರಾರು ಮಹಿಳೆಯರು ನಮ್ಮ ಸುತ್ತರ ಇದ್ದಾರೆ.
ಪ್ರಶ್ನೆ ಒಂದೇ, ನಮ್ಮ ದೇಶದಲ್ಲಿ ನ್ಯಾಯ ಎಲ್ಲರಿಗೂ ಸಮಾನವೇ? ಅಥವಾ ಅಧಿಕಾರಿಗಳಿಗೆ ಮಾತ್ರ ಮೀಸಲಾದ ಸೌಲಭ್ಯವೇ? ಅಂಕಿತಾ ಭಂಡಾರಿಯ ಹೆಸರು ಕಟ್ಟಡಕ್ಕೆ ಇಡುವುದಕ್ಕಿಂತ, ಆಕೆಗೆ ನ್ಯಾಯ ಕೊಡಿಸುವುದು ದೊಡ್ಡ ಗೌರವ. ಒಬ್ಬ ವಿಐಪಿಯನ್ನು ರಕ್ಷಿಸಲು ಸಂಪೂರ್ಣ ವ್ಯವಸ್ಥೆ ಮಣಿಯಬಾರದು.
ಇಲ್ಲವಾದರೆ ನಾಳೆ ಮತ್ತೊಬ್ಬ ಅಂಕಿತಾ, ಮತ್ತೊಂದು ರೆಸಾರ್ಟ್, ಮತ್ತೊಬ್ಬ ವಿಐಪಿ, ಮತ್ತೊಂದು ಮೌನ ಸರ್ಕಾರ. ಅಷ್ಟೇ ವ್ಯತ್ಯಾಸ. ನ್ಯಾಯ ತಡವಾದರೆ, ಅದು ನ್ಯಾಯವೇ ಅಲ್ಲ. ಜನರು ಮರೆತಿಲ್ಲ. ಜನರು ಸುಮ್ಮನಿಲ್ಲ. ನ್ಯಾಯ ಸಿಗೋವರೆಗೂ ಪ್ರಶ್ನೆಗಳು ನಿಮ್ಮನ್ನು ಹಿಂಬಾಲಿಸುತ್ತವೆ.





