13 ಮತ್ತು 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಿಡುಗಡೆಯಾದ ಹಣದ ಪ್ರಮಾಣವನ್ನು ಗಮನಿಸಿದರೆ, 14ನೇ ಆಯೋಗದ ಅಡಿಯಲ್ಲಿ ಬಿಡುಗಡೆಯಾದ ನಗದು ದುಪ್ಪಟ್ಟಾಗಿದೆ ಎನ್ನಿಸುತ್ತದೆ. ಆದರೆ, ಈ ಅವಧಿಯಲ್ಲಿನ ಬೆಲೆ ಏರಿಕೆ, ಹಣದುಬ್ಬರ, ತೆರಿಗೆ ಸಂಗ್ರಹಣೆಗಳ ಆಧಾರದಲ್ಲಿ ನೋಡಿದಾಗ, ಕೇಂದ್ರದ ತೆರಿಗೆಯ ಸಂಗ್ರಹವೂ ಅಷ್ಟೇ ಗಣನೀಯವಾಗಿ ಹೆಚ್ಚುತ್ತದೆ.
15ನೇ ಹಣಕಾಸು ಆಯೋಗದ ಶಿಫಾರಸುಗಳ ವಾಯಿದೆ (2020-25) ಇದೇ ವರ್ಷಕ್ಕೆ ಅಂತ್ಯಗೊಂಡಿದೆ. 2026ರಿಂದ 2030ರ ಅವಧಿಗಾಗಿ 16ನೇ ಹಣಕಾಸು ಆಯೋಗ ರಚನೆಯಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಆಯೋಗವು ತನ್ನ ವರದಿಯನ್ನು ಸಲ್ಲಿಸಲಿದೆ. ಆಯೋಗವು 15ನೇ ಆಯೋಗದಂತೆ ಕರ್ನಾಟಕಕ್ಕೆ ಅನ್ಯಾಯ ಮಾಡುವುದೇ ಅಥವಾ ನ್ಯಾಯ ಒದಗಿಸುವುದೇ ಎಂಬ ಚರ್ಚೆಗಳು ಆರಂಭವಾಗಿದೆ. ರಾಜ್ಯ ಬಿಜೆಪಿಗರು ಈಗಾಗಲೇ ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಸಾರಾಸಗಟಾಗಿ ಸಮರ್ಥಿಸಿಕೊಳ್ಳುತ್ತಿದ್ದು, ಮತ್ತೊಮ್ಮೆ ಅಖಾಡಕ್ಕೆ ಇಳಿಯುವ ನಿರೀಕ್ಷೆಯೂ ಇದೆ.
ಅಂದಹಾಗೆ, ಭಾರತೀಯ ಸಂವಿಧಾನ 280ನೇ ವಿಧಿಯು ‘ಪ್ರತಿ 5 ವರ್ಷಗಳೊಂದಿಗೆ ಹಣಕಾಸು ಆಯೋಗವನ್ನು ರಚಿಸಬೇಕು. ಈ ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ವಿಭಜನೆ ಮತ್ತು ಹಂಚಿಕೆಯನ್ನು ನಿರ್ಧರಿಸಬೇಕು. ರಾಜ್ಯಗಳಿಗೆ ಕೇಂದ್ರವು ಯಾವ ಪ್ರಮಾಣದಲ್ಲಿ ಹಣಕಾಸು ನೆರವು ಒದಗಿಸಬೇಕು ಎಂಬುದನ್ನು ನಿರ್ಧರಿಸುತ್ತದೆ’ ಎಂದು ಹೇಳಿದೆ. ಅದರಂತೆಯೇ, ಜನಸಂಖ್ಯೆ, ಪ್ರದೇಶ ಹಾಗೂ ಹಣಕಾಸು ಸಾಮರ್ಥ್ಯ ಅಂತರವನ್ನು ಪ್ರಮುಖವಾಗಿ ಗಮನಿಸಿ ರಾಜ್ಯಗಳ ತೆರಿಗೆ ಪಾಲನ್ನು ನಿರ್ಧರಿಸುತ್ತವೆ.
ಆದ್ದರಿಂದ, ಸಂವಿಧಾನಾತ್ಮಕವಾಗಿ ಕಾಲಕಾಲಕ್ಕೆ ಆಯೋಗಗಳು ರಚನೆಯಾಗುತ್ತಿದೆ. ತಮ್ಮ ಶಿಫಾರಸು ವರದಿಗಳನ್ನು ನೀಡುತ್ತಾ ಬಂದಿವೆ. ಆದರೆ, 14 ಮತ್ತು 15ನೇ ಆಯೋಗಗಳು ಕರ್ನಾಟಕಕ್ಕೆ ಅನ್ಯಾಯ ಮಾಡಿವೆ. ಪರಿಣಾಮ ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರಿವೆ ಎಂಬ ಗಂಭೀರ ಆರೋಪಗಳಿವೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಕಳೆದ ವರ್ಷ ದೆಹಲಿಯವರೆಗೂ ಹೋಗಿ ತೆರಿಗೆ ಹಂಚಿಕೆ ಅನ್ಯಾಯದ ವಿರುದ್ಧ ಪ್ರತಿಭಟಿಸಿ ಬಂದಿದೆ. 16ನೇ ಆಯೋಗದ ವರದಿಯಲ್ಲಿ ಅನ್ಯಾಯವನ್ನು ಸರಿದೂಗಿಸಿ, ನ್ಯಾಯಯುತ ಪಾಲು ಕೊಡಬೇಕೆಂದು ಒತ್ತಾಯಿಸಿದೆ.
ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ, 13ನೇ ಹಣಕಾಸು ಆಯೋಗದ ವರದಿ/ಶಿಫಾರಸು ಅಸ್ಥಿತ್ವದಲ್ಲಿತ್ತು. ಡಾ. ವಿಜಯ್ ಕೇಳ್ಕರ್ ನೇತೃತ್ವದ 2010-15 ಅವಧಿಯ ಆ ಆಯೋಗವು, ‘ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು 30.5%ನಿಂದ 32%ಗೆ ಹೆಚ್ಚಿಸಿತ್ತು. ರಾಜ್ಯಗಳಿಗೆ ಹೆಚ್ಚು ಹಣಕಾಸು ಸ್ವಾತಂತ್ರ್ಯ ನೀಡಲು ಪಾಲಿನಲ್ಲಿ ಹೆಚ್ಚಳ ಅಗತ್ಯ’ ಎಂದು ಹೇಳಿತ್ತು. ಅದರಂತೆ, ರಾಜ್ಯಗಳ ಪಾಲಿನ 32%ನಲ್ಲಿ ದಕ್ಷಿಣ ರಾಜ್ಯಗಳಿಗೆ 18.62% ಹಂಚಿಕೆ ಮಾಡಿ, ಕರ್ನಾಟಕಕ್ಕೆ 4.92% ತೆರಿಗೆ ಪಾಲು ನೀಡಿತು. ಇದರಿಂದ ರಾಜ್ಯಕ್ಕೆ ಸುಮಾರು 1.25 ಲಕ್ಷ ಕೋಟಿ ರೂ. ಹಣಕಾಸು ದೊರೆಯಿತು. ಜೊತೆಗೆ, ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಪರಿಗಣಿಸಿ, ಹಣಕಾಸು ಕೊರತೆಯನ್ನು ನೀಗಿಸಲು ಕೆಲವು ಗ್ರಾಂಟ್ಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ (ಪಂಚಾಯತ್ಗಳು) ನೆರವನ್ನೂ ಶಿಫಾರಸು ಮಾಡಿತ್ತು.
13ನೇ ಆಯೋಗದ ಶಿಫಾರಸ್ಸಿನಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ಹಣಕಾಸು ಶಿಸ್ತು ಮತ್ತು ಆರ್ಥಿಕ ಸಾಮರ್ಥ್ಯವು ವೃದ್ಧಿಯಾಗಲು ಸಾಧ್ಯವಾಯಿತು. ಕರ್ನಾಟಕದ ಜಿಡಿಪಿ ಬೆಳವಣಿಗೆ 8%ನಿಂದ 9%ಗೆ ಏರಿಕೆ ಕಂಡಿತು.
ಆದರೆ, ಡಾ. ವೈ. ವಿ. ರೆಡ್ಡಿ 14ನೇ ಹಣಕಾಸು ಆಯೋಗದ ಶಿಫಾರಸುಗಳಿಂದ ಕರ್ನಾಟಕಕ್ಕೆ ಅನ್ಯಾಯವಾಗಲು ಆರಂಭವಾಯಿತು. 2015-20ರ ಅವಧಿಯ ಈ ಆಯೋಗವು ಒಟ್ಟು ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು 42%ಗೆ ಏರಿಕೆ (13ನೇ ಆಯೋಗಕ್ಕೆ ಹೋಲಿಸಿದರೆ 10% ಹೆಚ್ಚಳ) ಮಾಡಿದರೂ, ಕರ್ನಾಟಕದ ಪಾಲನ್ನು ಕಡಿಮೆ ಮಾಡಿತು. ದಕ್ಷಿಣ ರಾಜ್ಯಗಳ ಪಾಲು 18.62%ನಿಂದ 18.04%ಗೆ ಕುಸಿದರೆ, ರಾಜ್ಯದ ಪಾಲು 4.92%ನಿಂದ 4.71%ಗೆ ಕಡಿಮೆಯಾಯಿತು. ಪರಿಣಾಮವಾಗಿ, ಕರ್ನಾಟಕಕ್ಕೆ ಸುಮಾರು 2.5 ಲಕ್ಷ ಕೋಟಿ ರೂ. ದೊರೆಯಿತು.
13 ಮತ್ತು 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಿಡುಗಡೆಯಾದ ಹಣವನ್ನು ಗಮನಿಸಿದರೆ, 14ನೇ ಆಯೋಗದ ಅಡಿಯಲ್ಲಿ ಬಿಡುಗಡೆಯಾದ ನಗದು ದುಪ್ಪಟ್ಟಾಗಿದೆ ಎನ್ನಿಸುತ್ತದೆ. ಆದರೆ, ಈ ಅವಧಿಯಲ್ಲಿನ ಬೆಲೆ ಏರಿಕೆ, ಹಣದುಬ್ಬರ, ತೆರಿಗೆ ಸಂಗ್ರಹಣೆಗಳ ಆಧಾರದಲ್ಲಿ ನೋಡಿದಾಗ, ಕೇಂದ್ರ ತೆರಿಗೆ ಸಂಗ್ರಹಣೆಯ ಮೊತ್ತವೂ ಅಷ್ಟೇ ಗಣನೀಯವಾಗಿ ಹೆಚ್ಚುತ್ತದೆ. 13ನೇ ಹಣಕಾಸು ಆಯೋಗದ ಪ್ರಕಾರ, ಕೇಂದ್ರದ ಒಟ್ಟು ತೆರಿಗೆ ಆದಾಯವು 25.47 ಲಕ್ಷ ಕೋಟಿ ರೂ. ಇದ್ದದ್ದು, 14ನೇ ಆಯೋಗದಲ್ಲಿ 39.48 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು. ಆದ್ದರಿಂದಲೇ, ಹಣವನ್ನು ಶೇಕಡಾವಾರು ಹಂಚಲಾಗುತ್ತದೆ. ಶೇಕಡಾವಾರು ನೋಡಿದಾಗ, ರಾಜ್ಯದ ಪಾಲು ಕುಸಿದಿದೆ ಎಂಬುದು ಸ್ಪಷ್ಟ.
ಒಂದೆಡೆ, ಕರ್ನಾಟಕದ ತೆರಿಗೆ ಪಾಲು ಕುಸಿಯಿತು. ಮತ್ತೊಂದೆಡೆ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ಹಿಂದಿ ಭಾಷಿಕರ ರಾಜ್ಯಗಳಿಗೆ ಹೆಚ್ಚು ತೆರಿಗೆ ಪಾಲು ದೊರೆಯಿತು. 2020-25ರ ಅವಧಿಯ ಎನ್.ಕೆ. ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗದ ಶಿಫಾರಸುಗಳು ಹಿಂದಿ ಭಾಷಿಕ ಮತ್ತು ದಕ್ಷಿಣ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯಲ್ಲಿ ಅತೀ ಹೆಚ್ಚು ತಾರತಮ್ಯ ಮಾಡಿತು.
ಈ ಲೇಖನ ಓದಿದ್ದೀರಾ?: ʼಈ ದಿನʼ ಸಮೀಕ್ಷೆ | ದಕ್ಷಿಣದ ರಾಜ್ಯಗಳು ಯಾವ ಪಾಪ ಮಾಡಿವೆ? ತೆರಿಗೆ ಅನ್ಯಾಯಕ್ಕೆ ಜನಾಕ್ರೋಶ
15ನೇ ಆಯೋಗವು ತನ್ನ ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರದ ಒಟ್ಟು ತೆರಿಗೆಗಳಲ್ಲಿ (ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಜಿಎಸ್ಟಿ ಇತ್ಯಾದಿ) ರಾಜ್ಯಗಳ ಪಾಲನ್ನು 41%ಗೆ ನಿಗದಿ ಮಾಡಿತು. 14ನೇ ಆಯೋಗ ನಿಗದಿ ಮಾಡಿದ್ದ 42%ನಲ್ಲಿ 1%ಅನ್ನು ಕಡಿತಗೊಳಿಸಿತು. ಕರ್ನಾಟಕಕ್ಕೆ ಸಿಗಬೇಕಾದ ತೆರಿಗೆ ಪಾಲನ್ನು 4.71%ನಿಂದ 3.64%ಗೆ ಇಳಿಸಿತು. ಹೀಗಾಗಿ, 2.15 ಲಕ್ಷ ಕೋಟಿ ರೂ. ಮಾತ್ರವೇ ರಾಜ್ಯ ತೊರೆಯಿತು. ಪರಿಣಾಮವಾಗಿ, ಕರ್ನಾಟಕಕ್ಕೆ ಸುಮಾರು 49 ಲಕ್ಷ ಕೋಟಿ ರೂ. ಖೋತಾ ಆಯಿತು. ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿ ಯೋಜನೆಗಳ ಮೇಲೆ ಗಂಭೀರ ಹೊಡೆತ ಕೊಟ್ಟಿತು.
ಮಾತ್ರವಲ್ಲ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರಕ್ಕೆ ಸಂದಾಯವಾದ ಒಟ್ಟು ತೆರಿಗೆಯಲ್ಲಿ 12% ತೆರಿಗೆಯು (ಒಟ್ಟು 18 ಲಕ್ಷ ಕೋಟಿ ರೂ.) ಕರ್ನಾಟಕದಿಂದ ಸಂಗ್ರಹವಾಗಿದೆ. ಕರ್ನಾಟಕದಿಂದ 18 ಲಕ್ಷ ಕೋಟಿ ರೂ. ತೆರಿಗೆ ಪಡೆದ ಕೇಂದ್ರವು ರಾಜ್ಯಕ್ಕೆ ಮರಳಿ ಕೊಟ್ಟಿದ್ದು, ಕೇವಲ 2.15 ಲಕ್ಷ ಕೋಟಿ ರೂ. ಮಾತ್ರ. ಇದು, 9% ಜಿಡಿಪಿ ಹೊಂದಿರುವ ಕರ್ನಾಟಕವು ದೇಶದ ಜಿಡಿಪಿಗೆ ನೀಡಿದ ಕೊಡುಗೆಗಳಿಗೂ ರಾಜ್ಯಕ್ಕೆ ನೀಡಲಾದ ಹಂಚಿಕೆಗೂ ಹೊಂದಾಣಿಕೆಯೇ ಇಲ್ಲ.
ಹೀಗಾಗಿಯೇ, ಕರ್ನಾಟಕವು ತಕರಾರು ತೆಗೆದಿತ್ತು. ಪರಿಣಾಮವಾಗಿ, ಆಯೋಗವು ರಾಜ್ಯಕ್ಕೆ ವಿಶೇಷ ಪ್ಯಾಕೇಜ್ಗಳನ್ನು ಒದಗಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತು. ಅದರಲ್ಲಿ, ಕೃಷ್ಣ ಮೇಲ್ದಂಡೆ ಯೋಜನೆಗೆ 5,495 ಕೋಟಿ ರೂ. ಮತ್ತು ಬೆಂಗಳೂರು ಅಭಿವೃದ್ಧಿಗೆ 11.560 ಕೋಟಿ ರೂ. ನೀಡುವಂತೆ ಸೂಚಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಈವರೆಗೆ ಈ ನೆರವು ಹಣವನ್ನು ಬಿಡುಗಡೆ ಮಾಡಿಯೇ ಇಲ್ಲ.
ಆದರೆ, ಇದೇ ಅವಧಿಯಲ್ಲಿ ಹಿಂದಿ ಭಾಷಿಕ ರಾಜ್ಯಗಳಿಗೆ ಬಂಪರ್ ಕೊಡುಗೆಗಳು ಕೇಂದ್ರದಿಂದ ತೊರೆತವು. 15ನೇ ಆಯೋಗದ ಶಿಫಾರಸ್ಸಿನಂತೆ ಉತ್ತರ ಪ್ರದೇಶವು ಅತೀ ಹೆಚ್ಚು ತೆರಿಗೆ ಪಾಲು ಪಡೆಯಿತು.
ಉತ್ತರಪ್ರದೇಶಕ್ಕೆ 19.69% ಅಂದರೆ, 22.85 ಲಕ್ಷ ಕೋಟಿ ರೂ. ಹಂಚಿಕೆ ದೊರೆಯಿತು. ಅಂತೆಯೇ, ಬಿಹಾರ 10.2% (11.86 ಲಕ್ಷ ಕೋಟಿ ರೂ.), ಮಧ್ಯಪ್ರದೇಶ 7.85% (9.09 ಲಕ್ಷ ಕೋಟಿ ರೂ.), ರಾಜಸ್ಥಾನ 5.91% (6.86 ಲಕ್ಷ ಕೋಟಿ ರೂ.) ತೆರಿಗೆ ಹಂಚಿಕೆ ಪಡೆದವು. ಗಮನಾರ್ಹವಾಗಿ, ಈ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿಯೇ ಅಧಿಕಾರದಲ್ಲಿದೆ. ಈ ಎಲ್ಲ ರಾಜ್ಯಗಳು ದೇಶದ ಜಿಡಿಪಿಗೆ ಕೊಡುವ ಕೊಡುಗೆ ತೀರಾ ಕಡಿಮೆ ಎಂಬುದು ಗಮನಾರ್ಹ.
15ನೇ ಹಣಕಾಸು ಆಯೋಗದ ತಾರತಮ್ಯವಾದಿ ಧೋರಣೆಯಿಂದಾಗಿ, ಕರ್ನಾಟಕಕ್ಕೆ ಕಳೆದ 5 ವರ್ಷಗಳಲ್ಲಿ ಸುಮಾರು 80,000 ಕೋಟಿ ರೂ.ಗಿಂತ ಹೆಚ್ಚು ನಷ್ಟವಾಗಿ ಎಂದು ರಾಜ್ಯ ಸರ್ಕಾರ ಆರೋಪಿಸಿದೆ. ಅಲ್ಲದೆ, ಸೆಸ್ ಮತ್ತು ಸರ್ಚಾರ್ಜ್ಗಳನ್ನು ಬರೋಬ್ಬರಿ 25%ಗೆ ಏರಿಕೆ ಮಾಡಿಕೊಂಡಿರುವ ಕೇಂದ್ರ ಸರ್ಕಾರ, ಆ ತೆರಿಗೆ ಹಣವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳದ ರೀತಿಯಲ್ಲಿ ನಿಮಯಗಳನ್ನು ರೂಪಿಸಿಕೊಂಡಿದೆ. ಕರ್ನಾಟಕದಿಂದ ಕೇಂದ್ರಕ್ಕೆ ವಾರ್ಷಿಕ 5 ಲಕ್ಷ ಕೋಟಿ ರೂ. ತೆರಿಗೆ ಸಂದಾಯವಾಗುತ್ತಿದ್ದು, ರಾಜ್ಯಕ್ಕೆ ಮರಳಿ ಸಿಗುವುದು 55,000 ಕೋಟಿ ರೂ. ಮಾತ್ರ. ಅಂದರೆ, ಪ್ರತಿ 100 ರೂ.ಗಳಲ್ಲಿ ರಾಜ್ಯಕ್ಕೆ ಸಿಗುತ್ತಿರುವುವು 1.5 ರೂ. ಮಾತ್ರವೇ ಆಗಿದೆ. ಉಳಿದ 98.5 ರೂ.ಗಳಲ್ಲಿ ಕೇಂದ್ರವು 58 ರೂ. ಇಟ್ಟುಕೊಳ್ಳುತ್ತಿದೆ. 40.5 ರೂ.ಗಳನ್ನು ಇತರ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ. ರಾಜ್ಯದಿಂದ ಕಿತ್ತುಕೊಂಡು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಸುರಿಯುತ್ತಿದೆ.
ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದಿಂದಾಗಿ, ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಹಾಗೂ ಗ್ಯಾರಂಟಿ ಯೋಜನೆಗಳಿಗೆ ತೊಡಕು ಉಂಟಾಗಿದೆ. ಅನುದಾನ ಕಡಿತವಾಗಿದೆ. ಆದ್ದರಿಂದ, ರಾಜ್ಯವು ಸ್ವಂತ ತೆರಿಗೆ ಸಂಗ್ರಹಣೆಯನ್ನು ಹೆಚ್ಚಿಸಬೇಕಾದ ಸ್ಥಿತಿಯಲ್ಲಿದೆ. ಕೇಂದ್ರ ಸರ್ಕಾರದ ತಾರತಮ್ಯವು ಒಕ್ಕೂಟ ವ್ಯವಸ್ಥೆಯನ್ನು ಅಲುಗಾಡಿಸುತ್ತಿದೆ.
“ದೇಶದ ಒಟ್ಟು ಜನಸಂಖ್ಯೆಯಲ್ಲಿ 5% ಜನಸಂಖ್ಯೆ ಹೊಂದಿರುವ ಕರ್ನಾಟಕವು, ಭಾರತದ ಒಟ್ಟು ಜಿಡಿಪಿಗೆ 9%ಕೊಡುಗೆ ನೀಡುತ್ತಿದೆ. ಆದರೆ, ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆಗೆ ಕೊಡುಗೆ ನೀಡುತ್ತಿವೆಯೇ ಹೊರತು, ಜಿಡಿಪಿಗೆ ಕೊಡುಗೆ ನೀಡುತ್ತಿಲ್ಲ. ಕೇಂದ್ರವು ದಕ್ಷಿಣ ರಾಜ್ಯಗಳ ಹಣವನ್ನು ಉತ್ತರದ ರಾಜ್ಯಗಳಿಗೆ ಕೊಡುತ್ತಿದೆ. ಜನಸಂಖ್ಯೆಯನ್ನು ನಿಯಂತ್ರಿಸಿದ್ದೇ ದಕ್ಷಿಣ ರಾಜ್ಯಗಳ ತಪ್ಪು ಎನ್ನುವ ರೀತಿಯಲ್ಲಿ ಕೇಂದ್ರವು ನಡೆದುಕೊಳ್ಳುತ್ತಿದೆ. ಇದು, ಒಕ್ಕೂಟ ವ್ಯವಸ್ಥೆಗೆ ಮಾರಕ ಮತ್ತು ಉತ್ತರ ಭಾರತೀಕರಣದ ಕುತಂತ್ರ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ದಕ್ಷಿಣ ರಾಜ್ಯಗಳ ಸರ್ಕಾರಗಳು ದೂರುತ್ತಿವೆ.
ತೆರಿಗೆ ಅನ್ಯಾಯದ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್, “ತೆರಿಗೆಗಳನ್ನು ಭಾರತ ಸರ್ಕಾರ ಸಂಗ್ರಹಿಸಿ ಹಂಚುವುದೇ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ದವಾದುದ್ದು. ಬೆಂಗಳೂರಿನಲ್ಲಿ ಲಕ್ಷಾಂತರ ಕೋಟಿ ಆದಾಯ ತೆರಿಗೆ ಮತ್ತು ಕಾರ್ಪೊರೆಟ್ ತೆರಿಗೆ ಸಂಗ್ರಹಿಸಲಾಗುತ್ತದೆ. ಈ ತೆರಿಗೆಯಲ್ಲಿ ಬೆಂಗಳೂರಿನ ರಸ್ತೆ ನಿರ್ವಹಣೆ, ಕಸ ನಿರ್ವಹಣೆ ನಡೆಸುವ ಕಾರ್ಪೊರೇಷನ್ (ಬಿಬಿಎಂಪಿ)ಗೆ ಒಂದು ಪೈಸೆಯೂ ದೊರೆಯುವುದಿಲ್ಲ. ಆದರೆ, ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆಯ ಮೇಲೆ ಹೆಚ್ಚಿನ ಪಾಲು ಪಡೆಯುವ ಭಾರತ ಸರ್ಕಾರಕ್ಕೆ ಬೆಂಗಳೂರಿನ ರಸ್ತೆ, ಮೂಲಸೌಕಯ್ಯದ ಕುರಿತು ಯಾವ ಜವಾಬ್ದಾರಿಯೂ ಇಲ್ಲ. ಪರಿಸ್ತಿತಿ ಹೀಗೆ ಇರುವಾಗ, ಒಂದು ಕಡೆ ತೆರಿಗೆ ಸಂಗ್ರಹ ಮಾಡಲು ರಾಜ್ಯ ಸರ್ಕಾರ ಪಾಲಿಕೆಗಳಿಗೆ ಪ್ರಾಪರ್ಟಿ ತೆರಿಗೆ ಹೆಚ್ಚಿಸಲು ಹೇಳುತ್ತದೆ. ಕೊನೆಗೆ, ಯಾವುದೊ ರಾಜ್ಯದ ಉದ್ದಾರಕ್ಕೆ ನಾವು ಹೆಚ್ಚು ಹೆಚ್ಚು ತೆರಿಗೆ ಕಟ್ಟಿ ರಸ್ತೆಯ ಗುಡಿಯಲ್ಲಿ ಬಿದ್ದಿದ್ದೇವೆ. ಇದಕ್ಕೆ ಮೂಲ ಕಾರಣ, ತೆರಿಗೆ ಸಂಗ್ರಹವು ಮೇಲ್ಬಾಗದ ಆಡಳಿತದಲ್ಲಿ ಕೇಂದ್ರೀಕೃತವಾಗಿರುವುದು. ಬದಲಾಗಿ, ತೆರಿಗೆ ಸಂಗ್ರಹವು ಕೆಳ ಹಂತದ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹವಾಗಿ, ಮೇಲ್ಬಾಗದ (ಕೇಂದ್ರ ಸರ್ಕಾರ) ಹಂತ ಹಂತವಾತವಾಗಿ ಹಂಚಿಕೆಯಾದರೆ, ಈ ಅನ್ಯಾಯಕ್ಕೆ ತಡೆ ಬೀಳುತ್ತದೆ. ಆದ್ದರಿಂದ, ದಕ್ಷಿಣದ ರಾಜ್ಯಗಳು ತೆರಿಗೆ ಹಂಚಿಕೆಯಲ್ಲಿ ಒಂದೆರಡು ಪರ್ಸೆಂಟ್ ಹೆಚ್ಚು ಹೇಳುವ ಬದಲು ತೆರಿಗೆ ಸಂಗ್ರಹದ ವ್ಯವಸ್ಥೆಯ ಬದಲಾವಣೆಗೆ ಒತ್ತಾಯಿಸಬೇಕು” ಎಂದು ಹೇಳಿದ್ದಾರೆ.
ಅದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ದಕ್ಷಿಣ ರಾಜ್ಯಗಳ ನೆಟ್ಟಿಗರು, #MyTaxMyRight (ನನ್ನ ತೆರಿಗೆ ನನ್ನ ಹಕ್ಕು) ಆಂದೋಲನವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಕೇಂದ್ರ ಎಸಗಿರುತ್ತಿರುವ ಅನ್ಯಾಯವನ್ನು ಪ್ರಶ್ನಿಸುತ್ತಿದ್ದಾರೆ. ನ್ಯಾಯಯುತ ಪಾಲು ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಅರವಿಂದ್ ಪನಗಾರಿಯಾ ನೇತೃತ್ವದ 16ನೇ ಹಣಕಾಸು ಆಯೋಗವು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ನ್ಯಾಯಯುತ ಹಂಚಿಕೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಕರ್ನಾಟಕಕ್ಕೆ ತೆರಿಗೆ ಅನ್ಯಾಯ | ಕೇಂದ್ರ ಸಮರ್ಥಿಸುವ ಆರ್ ಅಶೋಕ್, ನಾಚಿಕೆ ಆಗಲ್ವಾ?
ಆದಾಗ್ಯೂ, ಕರ್ನಾಟಕ ಬಿಜೆಪಿಗರು ಮಾತ್ರ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ತೆರಿಗೆ ತಾರತಮ್ಯವನ್ನು ಸಮಾನ ಹಂಚಿಕೆಯೆಂದು ವಾದಿಸುತ್ತಿದ್ದಾರೆ. 15ನೇ ಆಯೋಗದ ಶಿಫಾರಸುಗಳು ‘ರಾಷ್ಟ್ರೀಯ ಏಕತೆ’ ಮತ್ತು ‘ಕಡಿಮೆ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಸಮಾನ ಅವಕಾಶ’ ನೀಡುವ ಉದ್ದೇಶ ಹೊಂದಿವೆ. ಇದು, ‘ಒಂದೇ ಭಾರತ’ ಪರಿಕಲ್ಪನೆಯೆಂದು ವಾದಿಸಿದ್ದಾರೆ.
ಕೇಂದ್ರವು ರಾಜ್ಯಕ್ಕೆ ವಿಶೇಷ ಯೋಜನೆಗಳು, ಸ್ಮಾರ್ಟ್ ಸಿಟಿ, ರೈಲ್ವೇ, ಮೂಲಸೌಕರ್ಯ ಯೋಜನೆಗಳು ದೊರೆತಿವೆ ಎಂದು ಬೋಂಗುಬಿಡುತ್ತಿರುವ ಬಿಜೆಪಿಗರು, ಕೇಂದ್ರವು ನೀಡಿದ ಜಿಎಸ್ಟಿ ಪರಿಹಾರವನ್ನೇ ‘ಕೇಂದ್ರ ಸರ್ಕಾರದ ಕಾಳಜಿ’ ಎಂದು ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಅಲ್ಲದೆ, ರಾಜ್ಯದ ಬಿಜೆಪಿ 9%ಗೆ ಏರಿಕೆಯಾಗಲು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಅಭಿಯಾನಗಳೇ ಕಾರಣವೆಂದು ಸಮರ್ಥನೆಗೆ ಇಳಿದಿದ್ದಾರೆ.
ಬಿಜೆಪಿಗರ ಈ ಸಮರ್ಥನೆಯು ರಾಜಕೀಯ ಪಕ್ಷಪಾತಿ ಧೋರಣೆ ಮತ್ತು ಬಿಜೆಪಿಯೇತರ ರಾಜ್ಯಗಳಿಗೆ ಹೇರಲಾಗುತ್ತಿರುವ ಶಿಕ್ಷೆಯೇ ಹೊರತು, ಬೇರೇನೂ ಅಲ್ಲ. 16ನೇ ಹಣಕಾಸು ಆಯೋಗದ ಶಿಫಾರಸುಗಳ ಶೀಘ್ರವೇ ಹೊರಬರಲಿವೆ. ಒಂದು ವೇಳೆ, ಈ ಆಯೋಗವೂ ಕರ್ನಾಟಕಕ್ಕೆ ಅನ್ಯಾಯ ಎಸಗಿದ್ದರೆ, ಅದನ್ನೂ ಬಿಜೆಪಿಗರು ಸಮರ್ಥಿಸಿಕೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲ. ಈಗಾಗಲೇ, ಸಮರ್ಥನೆಗೆ ಬೇಕಾದ ಬುನಾದಿಯನ್ನು ಬಿಜೆಪಿ ಸಿದ್ದಪಡಿಸುತ್ತಿದೆ…!




