'ನಾನು ಪ್ರತಿಯೊಂದು ಕೂದಲು ನಾಟಿ ಮಾಡುವ ಕಂಪನಿ ಮತ್ತು ವೈದ್ಯರ ಪಾಲಿನ ದೊಡ್ಡ ಕನಸು ಒಮ್ಮೆಯಾದರೂ ನಮ್ಮಲ್ಲಿ ಕೂದಲು ನಾಟಿ ಮಾಡಿಸಿಕೊಳ್ಳಿ, ಅದಕ್ಕಾಗಿ ನಾವೇ ನಿಮಗೆ ದೊಡ್ಡ ಮೊತ್ತದ ಹಣ ನೀಡುತ್ತೇವೆ ಎಂದು ಅನೇಕರು ದುಂಬಾಲು ಬಿದ್ದಿದ್ದಾರೆ. ಆದರೆ ನಾನು ಅವರಿಗೆ ಆ ಅವಕಾಶವನ್ನು ನೀಡಲೇ ಇಲ್ಲ' ಎಂದು ಅನುಪಮ್ ಹೇಳುತ್ತಾರೆ.
ಬಣ್ಣದ ಲೋಕವೆಂದರೆ ಅಲ್ಲಿ ಸೌಂದರ್ಯಕ್ಕೆ ಮೊದಲ ಆದ್ಯತೆ. ಅದರಲ್ಲೂ ತಲೆಕೂದಲು ಎಂಬುದು ನಟ-ನಟಿಯರ ಪಾಲಿಗೆ ಅತಿಮುಖ್ಯ ಆಕರ್ಷಣೆ. ಕೂದಲು ಉದುರಿದರೆ, ಬೋಳು ತಲೆ ಬಂದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೂದಲು ನಾಟಿ ಮಾಡಿಸಿಕೊಳ್ಳುವವರೇ ಹೆಚ್ಚು. ಆದರೆ, ಹಿಂದಿ ಚಿತ್ರರಂಗದ ಖ್ಯಾತ ಹಾಗೂ ಹಿರಿಯ ನಟ ಅನುಪಮ್ ಖೇರ್ ಅವರ ನಿಲುವು ಮಾತ್ರ ಇದಕ್ಕೆ ತದ್ವಿರುದ್ದವಾಗಿದೆ. ‘ನನಗೆ ಎಷ್ಟೇ ಹಣ ನೀಡಿದರೂ, ನನ್ನ ಬೋಳು ತಲೆಗೆ ನಾಟಿ ಮಾಡಿಸಿಕೊಳ್ಳಲಾರೆ, ನಾನು ಹೀಗೆಯೇ ಇರಲು ಇಷ್ಟಪಡುತ್ತೇನೆ’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
1981ರಲ್ಲಿ ತಮ್ಮ ಸಿನಿಪಯಣ ಆರಂಭಿಸಿದ ಅನುಪಮ್ ಖೇರ್, ಈವರೆಗೆ ಬರೋಬ್ಬರಿ 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಸಿ ಸೈ ಎನಿಸಿಕೊಂಡಿದ್ದಾರೆ. ಆರಂಭಿಕ ದಿನಗಳಲ್ಲಿ ಅವರ ಬೋಳು ತಲೆಯು ಚಿತ್ರರಂಗದಲ್ಲಿ ಒಂದು ದೊಡ್ಡ ನ್ಯೂನತೆಯಾಗಿ ಪರಿಹಣಿಸಲ್ಪಡಬಹುದು ಎಂದು ಹಲವರು ಭಾವಿಸಿದ್ದರು. ಆದರೆ, ಖೇರ್ ಅವರು ತಮ್ಮ ಅದ್ಭುತ ನಟನಾ ಕೌಶಲ್ಯ ಹಾಗೂ ವಿಶಿಷ್ಟ ಧ್ವನಿಯ ಮೂಲಕ ಆ ನ್ಯೂನತೆಯನ್ನು ತಮ್ಮ ಅತಿದೊಡ್ಡ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಿದ್ದರು. ಕೇವಲ ಬಾಲಿವುಡ್ಡ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದ ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸಿರುವ ಅವರು, ಇದುವರೆಗೂ ಎರಡೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರಷ್ಟು ವಿಭಿನ್ನ ಹಾಗೂ ಸ್ಮರಣೀಯ ಪಾತ್ರಗಳನ್ನು ಮಾಡಿದ ನಟರು ಚಿತ್ರರಂಗದಲ್ಲಿ ವಿರಳ.
ಇತ್ತೀಚೆಗೆ ‘ಪಿಂಕ್ವಿಲ್ಲಾ’ ಮಾಧ್ಯಮದೊಂದಿಗಿನ ಸಂದರ್ಶನದಲ್ಲಿ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ ಹಲವು ಸ್ವಾರಸ್ಯಕರ ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. ತಮಗೆ ಬಂದಿದ್ದ ವಿಚಿತ್ರ ಹಾಗೂ ಆಕರ್ಷಕ ಆಫರ್ಗಳ ಬಗ್ಗೆ ಮಾತನಾಡಿದ ಅವರು, ”ನಾನು ಪ್ರತಿಯೊಂದು ಕೂದಲು ನಾಟಿ ಮಾಡುವ ಕಂಪನಿ ಮತ್ತು ವೈದ್ಯರ ಪಾಲಿನ ದೊಡ್ಡ ಕನಸು. ಒಮ್ಮೆಯಾದರೂ ನಮ್ಮಲ್ಲಿ ಕೂದಲು ನಾಟಿ ಮಾಡಿಸಿಕೊಳ್ಳಿ, ಅದಕ್ಕಾಗಿ ನಾವೇ ನಿಮಗೆ ದೊಡ್ಡ ಮೊತ್ತದ ಹಣ ನೀಡುತ್ತೇವೆ ಎಂದು ಅನೇಕರು ದುಂಬಾಲು ಬಿದ್ದಿದ್ದಾರೆ. ಆದರೆ ನಾನು ಅವರಿಗೆ ಆ ಅವಕಾಶವನ್ನು ನೀಡಲೇ ಇಲ್ಲ” ಎಂದು ಹೇಳಿದ್ದಾರೆ.
ಇದಕ್ಕೆ ಕಾರಣವನ್ನೂ ವಿವರಿಸಿರುವ ಅವರು, “ನನಗೆ ಎಷ್ಟೇ ಹಣದ ಅವಶ್ಯಕತೆ ಇದ್ದರೂ, ಕೂದಲು ನಾಟಿ ಮಾಡಲು ನಾನು ಹಣ ಪಡೆಯುವುದಿಲ್ಲ. ಏಕೆಂದರೆ, ಹಾಗೆ ಮಾಡಿದರೆ ನಾನು ನಾನಾಗಿ ಉಳಿಯುವುದಿಲ್ಲ ಎಂಬುದು ನನ್ನ ದೃಢವಾದ ನಂಬಿಕೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಬಿಗ್ಬಾಸ್ ನಿರೂಪಕನಾಗಲಿರುವ ಕ್ರಿಕೆಟಿಗ ಸೌರವ್ ಗಂಗೂಲಿ
ಇದೇ ವೇಳೆ, ತಮ್ಮ ಪುತ್ರ ಸಿಕಂದರ್ ಖೇರ್ ಬಾಲ್ಯದ ಒಂದು ಮೋಜಿನ ಪ್ರಸಂಗವನ್ನು ಅವರು ನೆನಪಿಸಿಕೊಂಡರು. “ಸಿಕಂದರ್ ಬಹಳ ಚಿಕ್ಕವನಿದ್ದಾಗ ನಡೆದ ಘಟನೆಯಿದು. ನಾನೊಮ್ಮೆ ದಿನಪತ್ರಿಕೆ ಓದುತ್ತಿದ್ದೆ. ಆ ಪತ್ರಿಕೆಯಲ್ಲಿ ಹೇರ್ ಆಯಿಲ್ (ಕೂದಲಿನ ಎಣ್ಣೆ) ಜಾಹೀರಾತು ಇತ್ತು ಎಂಬುದು ನನಗೂ ತಿಳಿದಿರಲಿಲ್ಲ. ನಾನು ಆ ಜಾಹೀರಾತನ್ನೇ ಗಮನಿಸುತ್ತಿದ್ದೇನೆ ಎಂದು ಭಾವಿಸಿದ ಸಿಕಂದರ್, ‘ಡ್ಯಾಡ್, ಅದರ ಬಗ್ಗೆ ಯೋಚಿಸಲೂಬೇಡಿ’ ಎಂದು ಮುದ್ದಾಗಿ ಎಚ್ಚರಿಸಿದ್ದ. ನನ್ನ ಕುಟುಂಬಕ್ಕೆ ಇಂತಹ ಅದ್ಭುತವಾದ ಹಾಸ್ಯ ಪ್ರಜ್ಞೆ ಇರುವುದು ನಿಜಕ್ಕೂ ನನ್ನ ಪುಣ್ಯ, ಇದು ನನಗೆ ಸಾಕಷ್ಟು ನೆರವಾಗಿದೆ” ಎಂದು ಅವರು ನಗುಮೊಗದಿಂದ ಸ್ಮರಿಸಿದರು.
ವೃತ್ತಿಪರ ರಂಗದಲ್ಲಿ ಸದಾ ಸಕ್ರಿಯರಾಗಿರುವ ಅನುಪಮ್ ಖೇರ್, ಮುಂದಿನ ದಿನಗಳಲ್ಲಿ ಪ್ರಶಾಂತ್ ಭಾಗಿಯಾ ನಿರ್ದೇಶನದ ‘ಖೋಸ್ಲಾ ಕಾ ಘೋಸ್ಲಾ 2’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2006ರಲ್ಲಿ ತೆರೆಕಂಡು ಭಾರಿ ಜನಮನ್ನಣೆ ಗಳಿಸಿದ್ದ ‘ಖೋಸ್ಲಾ ಕಾ ಘೋಸ್ಲಾ!’ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಈ ಚಿತ್ರವನ್ನು ಭೂಷಣ್ ಕುಮಾರ್, ಕೃಷ್ಣ ಕುಮಾರ್, ಸವಿತಾ ರಾಜ್ ಹಿರೇಮಠ್ ಮತ್ತು ರಾಜ್ ಹಿರೇಮಠ್ ಅವರು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ತಮ್ಮ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಪ್ರತಿಭೆ ಹಾಗೂ ಸಹಜತೆಯನ್ನು ನಂಬಿರುವ ಅನುಪಮ್ ಖೇರ್, ಕೃತಕತೆಗೆ ಮಾರುಹೋಗುವ ಇಂದಿನ ಪೀಳಿಗೆಗೆ ನಿಜವಾದ ಆದರ್ಶವಾಗಿದ್ದಾರೆ.





