ಹಿಂದೂಗಳು ತಮ್ಮ ಮನೆಗಳಲ್ಲಿ ಗುಂಪಾಗಿ ಪ್ರಾರ್ಥನೆ ಅಥವಾ ಪೂಜೆ ಮಾಡುವುದನ್ನು ಸರ್ಕಾರ ತಡೆಯಲು ಬರುತ್ತದೆಯೇ? ಹಾಗಿದ್ದಾಗ ಮುಸ್ಲಿಮರು ತಮ್ಮ ಸ್ವಂತ ಮನೆ ಅಥವಾ ಖಾಸಗಿ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ತಡೆಯುವುದು ಹೇಗೆ? ಖಾಸಗಿ ಸ್ಥಳಗಳಲ್ಲಿ ನಮಾಜ್ ಮಾಡಿದರೆ ಅದರಲ್ಲಿ ತಪ್ಪೇನಿದೆ?’ ಹೀಗೆಂದು ಉತ್ತರ ಪ್ರದೇಶ ಸರ್ಕಾರ ಹಾಗೂ ಅಲ್ಲಿನ ಪೊಲೀಸ್ ಆಡಳಿತ ವ್ಯವಸ್ಥೆಯನ್ನು ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಮರು ತಮ್ಮ ಮನೆಗಳಲ್ಲಿ ನಮಾಜ್ ಮಾಡುವುದನ್ನು ನಿರ್ಬಂಧಿಸುತ್ತಿರುವ ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಸಿದ್ದಾರ್ಥ್ ನಂದನ್ ಅವರಿದ್ದ ವಿಭಾಗೀಯ ಪೀಠ, ಆಡಳಿತ ಯಂತ್ರದ ತಾರತಮ್ಯದ ನಡೆಯನ್ನು ಕಟುವಾಗಿ ಟೀಕಿಸಿದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲ ನಾಗರಿಕರು ಸಮಾನರು, ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅಧಿಕಾರ ಯಾರಿಗೂ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಬರೇಲಿಯ ನಿವಾಸಿ ತಾರಿಕ್ ಖಾನ್ ಎಂಬುವವರು ತಮ್ಮ ಮನೆಯೊಳಗೆ ನಮಾಜ್ ಮಾಡುತ್ತಿದ್ದಾಗ ಪೊಲೀಸರು ಏಕಾಏಕಿ ಅವರ ಮನೆಗೆ ನುಗ್ಗಿ ವಶಕ್ಕೆ ಪಡೆದಿದ್ದರು. ಅಷ್ಟೇ ಅಲ್ಲದೆ, ಅವರ ಆಸ್ತಿಯ ಮೇಲೆ ‘ಬುಲ್ಡೋಜರ್’ ಹರಿಸುವ ಬೆದರಿಕೆ ಹಾಕಿ, ಬಲವಂತವಾಗಿ ಖಾಲಿ ಖಾಗದದ ಮೇಲೆ ಹೆಬ್ಬಟ್ಟಿನ ಗುರುತು ಪಡೆದುಕೊಂಡಿದ್ದರು ಎಂದು ಆರೋಪಿಸಿ ನ್ಯಾಯಾಲಯಕ್ಕೆ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಮತ್ತೊಂದೆಡೆ, ರಂಜಾನ್ ಹಿನ್ನೆಲೆಯಲ್ಲಿ ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಕೇವಲ 20 ಜನರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಿ ಆಡಳಿತ ಮಂಡಳಿ ನಿರ್ಬಂಧ ಹೇರಿತ್ತು. ಈ ಕ್ರಮಗಳನ್ನು ವಿಭಾಗೀಯ ಪೀಠವು ತೀವ್ರವಾಗಿ ಖಂಡಿಸಿದೆ.
ಇದನ್ನು ಓದಿದ್ದೀರಾ? ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ?
ವಿಚಾರಣೆ ವೇಳೆ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ ಪೀಠವು, “ಒಬ್ಬ ವ್ಯಕ್ತಿ ತನ್ನ ಖಾಸಗಿ ಜಾಗದಲ್ಲಿ ಅಥವಾ ಮನೆಯ ಚಾವಣಿಯ ಮೇಲೆ ಪ್ರಾರ್ಥನೆ ಸಲ್ಲಿಸಲು ಸರ್ಕಾರದ ಯಾವುದೇ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಒಂದು ವೇಳೆ ಧಾರ್ಮಿಕ ಚಟುವಟಿಕೆಗಳು ಸಾರ್ವಜನಿಕ ರಸ್ತೆಗೆ ಬಂದರೆ ಅಥವಾ ಸಾರ್ವಜನಿಕ ಆಸ್ತಿಗೆ ಅಡ್ಡಿಯುಂಟು ಮಾಡಿದರೆ ಮಾತ್ರ ಪೊಲೀಸರು ಮಧ್ಯಪ್ರವೇಶಿಸಬಹುದು. ಅದನ್ನು ಬಿಟ್ಟು ಮನೆಯೊಳಗೆ ನಡೆಯುವ ಪ್ರಾರ್ಥನೆಗೆ ನಿರ್ಬಂಧ ಹೇರುವುದು ಕಾನೂನುಬಾಹಿರ” ಎಂದು ಸ್ಪಷ್ಟಪಡಿಸಿದೆ.
“ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಆದರೆ, ಶಾಂತಿ ಕದಡುವ ಕಾಲ್ಪನಿಕ ಭ್ರಮೆಯ ನೆಪವೊಡ್ಡಿ ಖಾಸಗಿ ಸ್ಥಳದಲ್ಲಿ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವಂತಿಲ್ಲ. ಒಂದು ವೇಳೆ ಜಿಲ್ಲಾಧಿಕಾರಿ ಅಥವಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ, ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಆ ಜಾಗದಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಳ್ಳಬೇಕು” ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದೆ.
ತಮ್ಮದೇ ಮನೆಯಲ್ಲಿ ನಮಾಜ್ ಮಾಡಿದ್ದಕ್ಕಾಗಿ ಪೊಲೀಸರ ದೌರ್ಜನ್ಯ ಮತ್ತು ಬೆದರಿಕೆಗೆ ಒಳಗಾದ ಅರ್ಜಿದಾರನಿಗೆ ತಕ್ಷಣವೇ ದಿನದ 24 ಗಂಟೆಯೂ ಇಬ್ಬರ ಸಶಸ್ತ್ರ ಅಂಗರಕ್ಷಕರ ಮೂಲಕ ಭದ್ರತೆ ಒದಗಿಸುವಂತೆ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. “ಅರ್ಜಿದಾರರು ಎಲ್ಲಿಗೆ ಹೋದರೂ ಈ ಭದ್ರತಾ ಸಿಬ್ಬಂದಿ ಕಡ್ಡಾಯವಾಗಿ ಅವರ ಜೊತೆಗಿರಬೇಕು. ಒಂದು ವೇಳೆ ಅರ್ಜಿದಾರನಿಗೆ ಅಥವಾ ಆತನ ಆಸ್ತಿಗೆ ಹಾನಿಯಾದರೂ, ಅದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದೆ.
ಇದಕ್ಕೂ ಮುನ್ನ ‘ಮರನಾಥ ಫುಲ್ ಗಾಸ್ಪೆಲ್ ಮಿನಿಸ್ಟ್ರೀಸ್’ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಲಯ, ಖಾಸಗಿ ಸ್ಥಳದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂಬುದನ್ನು ಪುರುಚ್ಚರಿಸಿದೆ. ಈ ಮೂಲಕ ಧಾರ್ಮಿಕ ಅಚರಣೆಗಳ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸುತ್ತಿರುವ ಯುಪಿ ಸರ್ಕಾರದ ಕ್ರಮಗಳಿಗೆ ಹೈಕೋರ್ಟ್ ಬಲವಾದ ಪೆಟ್ಟು ನೀಡಿದಂತಾಗಿದೆ. ಇದು ಕೇವಲ ಒಂದು ಸಮುದಾಯದ ಪ್ರಶ್ನೆಯಲ್ಲಿ, ಸಂವಿದಾನದತ್ತವಾದ ಸಮಾನತೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಯ ಪ್ರಶ್ನೆ ಎಂದು ನ್ಯಾಯಾಲಯ ಎತ್ತಿಕೊಂಡಿದೆ.





