ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕೆಂದು ಬಲವಾದ ಒತ್ತಾಯವಿತ್ತು. ಆದಾಗ್ಯೂ, ನಮ್ಮ ಪೂರ್ವಜರು ವಂದೇ ಮಾತರಂ ಜೊತೆಗೆ, ಬ್ರಿಟಿಷರನ್ನು ಸ್ವಾಗತಿಸಲು ರಚಿಸಲಾದ ‘ಜನ ಗಣ ಮನ’ವನ್ನು ಸಹ ಸೇರಿಸಬೇಕೆಂದು ನಿರ್ಧರಿಸಿದರು. ಇಂದು, ನಾವು ಅದನ್ನು ಸ್ವೀಕರಿಸಿದ್ದೇವೆ. ಅದನ್ನು ಅನುಸರಿಸುತ್ತಿದ್ದೇವೆ ಎಂದು ಕಾಗೇರಿ ಹೇಳಿದ್ದರು. ಅದೀಗ ವಿವಾದವಾಗಿದೆ
ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ, ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಮತ್ತು ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿದ ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ‘ವಂದೇ ಮಾತರಂ’ ಗೀತೆಯನ್ನು ಹೊಗಳುವ ಭರದಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ವನ್ನು ಬ್ರಿಟಿಷರನ್ನು ಸ್ವಾಗತಿಸಲು ಬರೆಯಲಾಗಿದೆ ಎಂದು ಆರೋಪಿಸಿ, ವಂದೇ ಮಾತರಂ ಅನ್ನ ರಾಷ್ಟ್ರಗೀತೆಯಾಗಿ ಮಾಡಬೇಕಿತ್ತು ಎಂದು ವಿವಾದ ಸೃಷ್ಟಿಸಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಅಭಿಪ್ರಾಯವಲ್ಲ, ಬಲಪಂಥೀಯ ಸಂಘಟನೆಗಳು ಮತ್ತು ಆರ್ಎಸ್ಎಸ್ನಂತಹ ಸಂಘಪರಿವಾರದಿಂದ ನಿರಂತರವಾಗಿ ಹರಡಲ್ಪಡುತ್ತಿರುವ ಅಪಪ್ರಚಾರದ ಭಾಗವಾಗಿದೆ. ಆದರೆ, ಇತಿಹಾಸದ ಸತ್ಯಗಳನ್ನು ಪರಿಶೀಲಿಸಿದರೆ ಈ ಆರೋಪಗಳು ತಳವಿಲ್ಲದ್ದು ಎಂಬುದು ಸ್ಪಷ್ಟವಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಮೈ ಭಾರತ್ ಕೇಂದ್ರ ಉತ್ತರ ಕನ್ನಡ ಕಾರವಾರ ಹಾಗೂ ತಾಲೂಕಾಡಳಿತದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದಾತ್ಮಕ ಹೇಳಿಕೆಯನ್ನ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದ್ದು: “ಇತಿಹಾಸವನ್ನು ಮರುಪರಿಶೀಲನೆ ಮಾಡಲು ಬರುವುದಿಲ್ಲ. ಆದರೆ, ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕೆಂದು ಬಲವಾದ ಒತ್ತಾಯವಿತ್ತು. ಆದಾಗ್ಯೂ, ನಮ್ಮ ಪೂರ್ವಜರು ವಂದೇ ಮಾತರಂ ಜೊತೆಗೆ, ಬ್ರಿಟಿಷರನ್ನು ಸ್ವಾಗತಿಸಲು ರಚಿಸಲಾದ ‘ಜನ ಗಣ ಮನ’ವನ್ನು ಸಹ ಸೇರಿಸಬೇಕೆಂದು ನಿರ್ಧರಿಸಿದರು. ಇಂದು, ನಾವು ಅದನ್ನು ಸ್ವೀಕರಿಸಿದ್ದೇವೆ. ಅದನ್ನು ಅನುಸರಿಸುತ್ತಿದ್ದೇವೆ.” ಅಂತ ಹೇಳೋ ಮೂಲಕ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಈ ಹಿಂದೆ ರಾಷ್ಟ್ರಧ್ವಜವನ್ನೂ ಕೂಡ ಆರ್ಎಸ್ಎಸ್ ಒಪ್ಪಿರಲಿಲ್ಲ. ಆರ್ಎಸ್ಎಸ್ನ ಅನುಯಾಯಿಗಳೂ ಕೂಡ ಆರ್ಎಸ್ಎಸ್ ಧೋರಣೆಯನ್ನೇ ಅನುಸರಿಸುತ್ತಿದ್ದಾರೆ ಅನ್ನೋದಕ್ಕೆ ಇನ್ನೊಂದು ಉದಾಹರಣೆ ಇದೇ.
ಭಾರತದ ಪ್ರಜೆಗಳಾದ ನಾವು ರಾಷ್ಟ್ರಗೀತೆಯನ್ನು ಕೇಳಿದ ತಕ್ಷಣ ನಮ್ಮಲ್ಲಿ ದೇಶಭಕ್ತಿಯ ಭಾವನೆ ಜಾಗೃತವಾಗುತ್ತದೆ ಮತ್ತು ನಾವೆಲ್ಲರೂ ಅದನ್ನು ಗೌರವಿಸುತ್ತೇವೆ. ರಾಷ್ಟ್ರಗೀತೆಯು ದೇಶದ ರಾಷ್ಟ್ರೀಯ ಸಂಕೇತವಾಗಿಯೂ ಕಾರ್ಯನಿರ್ವಹಿಸುತ್ತದೆ. ಭಾರತೀಯರಾಗಿ, ದೇಶದ ರಾಷ್ಟ್ರಗೀತೆಯು ನಮ್ಮೆಲ್ಲರ ಏಕತೆಯ ಸಂಕೇತವಾಗಿದೆ. ಭಾರತದಲ್ಲಿ ಪ್ರಸ್ತುತ ಇರುವ ರಾಷ್ಟ್ರಗೀತೆ ಜನ-ಗಣ-ಮನ ರಚಿಸಿದ್ದು ರವೀಂದ್ರನಾಥ ಟಾಗೋರ ಅವರು. ಅವರೇ ರಚಿಸಿದ ಅಮೋರ ಸೋನಾರ ಬಾಂಗ್ಲಾ ಎಂಬ ಗೀತೆ ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿದೆ.
‘ಜನ ಗಣ ಮನ’ ಗೀತೆಯನ್ನು ರವೀಂದ್ರನಾಥ ಟ್ಯಾಗೋರ್ ಅವರು 1911ರ ಡಿಸೆಂಬರ್ 11ರಂದು ಬರೆದರು. ಇದು ಬಂಕಿಮ್ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕಾದಂಬರಿಯಲ್ಲಿ ಕಾಣಿಸಿಕೊಂಡ ‘ವಂದೇ ಮಾತರಂ’ಗಿಂತಲೂ ಹಿಂದಿನದಲ್ಲ, ಆದರೆ ಸ್ವಾತಂತ್ರ್ಯ ಚಳವಳಿಯಲ್ಲಿ ಎರಡೂ ಗೀತೆಗಳು ಪ್ರಮುಖವಾದವು. ಆದರೆ, ಸಂಘಪರಿವಾರದ ಅಪಪ್ರಚಾರದ ಪ್ರಕಾರ, ಈ ಗೀತೆಯನ್ನು ಬ್ರಿಟಿಷ್ ದೊರೆ 5ನೇ ಕಿಂಗ್ ಜಾರ್ಜ್ ಅವರನ್ನು ಸ್ವಾಗತಿಸಲು ಬರೆಯಲಾಗಿದೆ ಎಂಬುದು. ಇದಕ್ಕೆ ಕಾರಣವೆಂದರೆ, ಟ್ಯಾಗೋರ್ ಗೀತೆ ಬರೆದ ಮರುದಿನವೇ ಅಂದ್ರೆ ಡಿಸೆಂಬರ್ 12, 1911 ಬ್ರಿಟಿಷರು ‘ದೆಹಲಿ ದರ್ಬಾರ್’ ಆಯೋಜಿಸಿ 5ನೇ ಕಿಂಗ್ ಜಾರ್ಜ್ ಅವರನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದ್ದರು. ಈ ಸಮಯದ ಹೊಂದಾಣಿಕೆಯನ್ನು ತಪ್ಪಾಗಿ ಅರ್ಥೈಸಿ, ಗೀತೆಯು ಬ್ರಿಟಿಷರ ಸ್ವಾಗತಕ್ಕಾಗಿ ಎಂಬ ಸುಳ್ಳು ಹರಡಲಾಗುತ್ತಿದೆ. ಅತ್ಯಂತ ಶ್ರೇಷ್ಠ ಹಾಗೂ ಸುಂದರವಾಗಿ ಸಂಯೋಜನಗೊಂಡ ರಾಷ್ಟ್ರಗೀತೆಯಿದು. ಜಗತ್ತಿನ 5 ಶ್ರೇಷ್ಠ ರಾಷ್ಟ್ರಗೀತೆಗಳಲ್ಲಿ ಒಂದು ಎಂದು ಪ್ರಶಂಸಿಸಲ್ಪಟ್ಟಿದೆ.

ವಾಸ್ತವವಾಗಿ, ಟ್ಯಾಗೋರ್ ಅವರು ಈ ಗೀತೆಯನ್ನು ದೆಹಲಿ ದರ್ಬಾರ್ನಲ್ಲಿ ಹಾಡಿರಲಿಲ್ಲ. ಇದನ್ನು ಮೊದಲ ಬಾರಿಗೆ ಹಾಡಿದ್ದು 1911ರ ಡಿಸೆಂಬರ್ 28ರಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ. ಕೋಲ್ಕತಾ ಸಮ್ಮೇಳನದಲ್ಲಿ ಹಾಡಿದ ಜನಗಣನ ರಾಷ್ಟ್ರೀಯತೆಯನ್ನು ಪ್ರತಿಧ್ವನಿಸಿದ್ದಲ್ಲದೆ ಸಭಿಕರಲ್ಲಿ ರೋಮಾಂಚನ, ಭಾವುಕ ಮತ್ತು ಆವೇಶವನ್ನುಂಟು ಮಾಡಿತ್ತು. ‘ಭಾಗ್ಯವಿಧಾತ’ ಎಂದು ಹೆಸರಿಟ್ಟಿದ್ದ ಆ ಹಾಡನ್ನು ಬಂಗಾಳಿಯಲ್ಲಿ ಶಂಕರಾಭರಣದ ರಾಗದಲ್ಲಿ ಹಾಡಲಾಗಿತ್ತು. ಅದಾದ ಕೆಲವೇ ದಿನಗಳಲ್ಲಿ, ಜನವರಿ 1912 ರಲ್ಲಿ ಈ ಹಾಡನ್ನು ತತ್ವಬೋಧಿನಿ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಅದರಲ್ಲಿ ಟಾಗೋರ್ ಸಂಪಾದಕರಾಗಿದ್ದರು ಮತ್ತು ಬಂಗಾಳದಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸಿದರು. ಇದು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ನಂತರ, 1912ರ ಫೆಬ್ರವರಿಯಲ್ಲಿ ಆದಿ ಬ್ರಹ್ಮ ಸಮಾಜದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಎರಡನೇ ಬಾರಿಗೆ ಹಾಡಲಾಯಿತು. ಈ ಗೀತೆಯು ಸ್ವಾತಂತ್ರ್ಯ ಹೋರಾಟದಲ್ಲಿ ಉತ್ಸಾಹ ತುಂಬುವ ಸಾಧನವಾಗಿತ್ತು, ಬ್ರಿಟಿಷರ ಸ್ತುತಿಗಾಗಿ ಅಲ್ಲ.
ರಾಷ್ಟ್ರ ಗೀತೆಯಲ್ಲಿ ಬರುವ ‘ಜನ ಗಣ ಮನ ಅಧಿನಾಯಕ ಜಯ ಹೇ’ ಎಂಬ ಸಾಲಿನ ‘ಅಧಿನಾಯಕ’ ಪದವನ್ನು ಬ್ರಿಟಿಷ್ ದೊರೆಗಳನ್ನು ಸೂಚಿಸುತ್ತದೆ ಎಂದು ವಿವಾದ ಸೃಷ್ಟಿಸಲಾಗಿದೆ. ಆದರೆ, ಈ ಬಗ್ಗೆ 1937ರಲ್ಲಿ ಸ್ವತಃ ಟ್ಯಾಗೋರ್ ಅವರೇ ಪತ್ರವೊಂದರಲ್ಲಿ ಸ್ಪಷ್ಟನೆ ನೀಡಿದ್ದರು. “5ನೇ, 6ನೇ ಅಥವಾ ಯಾವುದೇ ಜಾರ್ಜ್ಗಳ ಆಡಳಿತದಲ್ಲಿ ಮಾನವನ ಹಣೆಬರಹವನ್ನು ರೂಪಿಸಲು ಸಾಧ್ಯವಿಲ್ಲ. ‘ಜನ ಗಣ ಮನ’ ಗೀತೆಯಲ್ಲಿ ನಾನು ಉಲ್ಲೇಖಿಸಿದ್ದು, ಭಾರತದ ಹಣೆಬರಹವನ್ನು ರೂಪಿಸುವವನು, ಎಲ್ಲ ಏಳುಬೀಳುಗಳ ನಡುವೆ ದೇಶಕ್ಕೆ ದಾರಿ ತೋರುವವನು, ಮಾರ್ಗದರ್ಶನ ಮಾಡುವವನು ಎಂಬುದಾಗಿಯೇ ಹೊರತು, ಬ್ರಿಟಿಷ್ ದೊರೆಗಳಿಗಾಗಿ ಅಲ್ಲ” ಎಂದು ಸ್ಪಷ್ಟವಾಗಿ ವಿವರಿಸಿದ್ದರು.

1950ರ ಜನವರಿ 24ರಂದು ಭಾರತದ ಸಂವಿಧಾನ ಸಭೆಯು ‘ಜನ ಗಣ ಮನ’ನ್ನು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು. ‘ವಂದೇ ಮಾತರಂ’ಗೆ ರಾಷ್ಟ್ರಗೀತೆಯಷ್ಟೇ ಮನ್ನಣೆ ನೀಡಲಾಯಿತು. ಇದು ಎಲ್ಲಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುಂಪುಗಳನ್ನು ಒಳಗೊಳ್ಳುವ ನಿರ್ಧಾರವಾಗಿತ್ತು. ‘ವಂದೇ ಮಾತರಂ’ ಭಾರತ ಮಾತೆಯನ್ನು ದೇವತೆಯಂತೆ ಕಾಣುವುದರಿಂದ ಕೆಲವು ಸಮುದಾಯಗಳಿಗೆ ಆಕ್ಷೇಪವಿತ್ತು, ಆದರೆ ‘ಜನ ಗಣ ಮನ’ ಸಾರ್ವತ್ರಿಕವಾಗಿತ್ತು. ಆರ್ಎಸ್ಎಸ್ ಮತ್ತು ಬಲಪಂಥೀಯರು ಈ ಅಪಪ್ರಚಾರವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಇದು ಇತಿಹಾಸವನ್ನು ತಿರುಚುವ ಪ್ರಯತ್ನವಾಗಿದ್ದು, ಸ್ವಾತಂತ್ರ್ಯ ಹೋರಾಟದ ಸತ್ಯಗಳನ್ನು ಮರೆಮಾಚುತ್ತದೆ. ಕಾಗೇರಿ ಅವರ ಹೇಳಿಕೆಯು ಇದೇ ಸಾಲಿನಲ್ಲೇ ಬರುತ್ತದೆ. ಇಂತಹ ಹೇಳಿಕೆಗಳು ರಾಷ್ಟ್ರೀಯ ಏಕತೆಗೆ ಧಕ್ಕೆ ತರುತ್ತವೆ ಮತ್ತು ಜನರಲ್ಲಿ ಗೊಂದಲ ಮೂಡಿಸುತ್ತವೆ. ರಾಷ್ಟ್ರಗೀತೆ ಜನಗಣಮನ ಭಾರತದ ವೈಭವ ಮತ್ತು ಸಾರ್ವಭೌಮತೆಯ ಸಂಕೇತ. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಸಾಹಿತ್ಯವು ರಾಷ್ಟ್ರಗೀತೆಯಲ್ಲಿ ಭಾರತದ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ತುಂಬಿದೆ.

‘ಜನ ಗಣ ಮನ’ ಭಾರತದ ಸ್ವಾತಂತ್ರ್ಯ ಚಳವಳಿಯ ಸಂಕೇತವಾಗಿದೆ. ಇದನ್ನು ಬ್ರಿಟಿಷರ ಸ್ತುತಿಗಾಗಿ ಬರೆಯಲಾಗಿದೆ ಎಂಬ ಆರೋಪಗಳು ಇತಿಹಾಸದ ಸತ್ಯಕ್ಕೆ ವಿರುದ್ಧವಾಗಿವೆ. ಟ್ಯಾಗೋರ್ ಅವರ ಸ್ಪಷ್ಟೀಕರಣ, ಮೊದಲ ಹಾಡು ಹಾಡಿದ್ದ ದಿನಾಂಕಗಳು ಮತ್ತು ಸಂವಿಧಾನ ಸಭೆಯ ನಿರ್ಧಾರಗಳು ಇದನ್ನು ದೃಢೀಕರಿಸುತ್ತವೆ. ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚುವುದು ತಪ್ಪು.
ತಮ್ಮ ಹೇಳಿಕೆ ವಿವಾದದ ರೂಪ ಪಡೆಯುತ್ತಿದ್ದಂತೆ ಕಾಗೇರಿ ಅವರು ಮಾಧ್ಯಮಗಳ ಮುಂದೆ ಕ್ಷಮೆ ಕೇಳಿ, ತಮ್ಮ ಮಾತುಗಳನ್ನು ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ. ಮಾತು ಆಡುವಾಗಲೇ ಜವಾಬ್ದಾರಿಯಿಂದ ಇದ್ದರೆ ಕ್ಷಮೆ ಕೇಳುವ ಸಂದರ್ಭ ಬರುತ್ತಿರಲಿಲ್ಲ. ಆದರೆ ಬಿಜೆಪಿಯವರಿಗೆ ಏನಾದರೊಂದು ಸುಳ್ಳು ಹೇಳಿ ವಿವಾದ ಆದ ನಂತರ ಕ್ಷಮೆ ಕೇಳುವುದು ಸಾಮಾನ್ಯವಾಗಿದೆ.





