ಅಸ್ಸಾಂ ಅಖಾಡ: ಬಿಜೆಪಿ ಮಿತ್ರಪಕ್ಷ ಎಜಿಪಿಯಿಂದ ಶೇ. 50 ಮುಸ್ಲಿಂ ಅಭ್ಯರ್ಥಿಗಳು; ಏನಿದು ‘ಕಮಲ’ದ ಹೊಸ ರಣತಂತ್ರ?

Date:

ತಾನು ತನ್ನ ಸೈದ್ಧಾಂತಿಕ ನಿಲುವಿನಂತೆ ಮುಸ್ಲಿಮರಿಗೆ ಟಿಕೆಟ್ ನಿರಾಕರಿಸಿದರೂ, ಅಧಿಕಾರ ಹಿಡಿಯುವ ಏಕೈಕ ಮಹತ್ವಾಕಾಂಕ್ಷೆಯಿಂದ ಮಿತ್ರಪಕ್ಷಗಳ ಮುಖಾಂತರ ಅದೇ ಮುಸ್ಲಿಂ ನಾಯಕರನ್ನು ಅಖಾಡಕ್ಕಿಳಿಸಿ ವಿರೋಧಿ ಪಾಳೆಯದ ಮತಬ್ಯಾಂಕ್‌ಗೆ ಕನ್ನ ಹಾಕಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದೆ

ಅಸ್ಸಾಂ ವಿಧಾನಸಭಾ ಚುನಾವಣೆಯ ಕಾವೇರುತ್ತಿದ್ದಂತೆ, ಅಧಿಕಾರ ಉಳಿಸಿಕೊಳ್ಳಲು ಎನ್‌ಡಿಎ ತೀವ್ರ ಕಸರತ್ತು ನಡೆಸುತ್ತಿದೆ. ಪ್ರತಿಪಕ್ಷಗಳನ್ನು ಕಟ್ಟಿಹಾಕಲು ಹೊಸ ತಂತ್ರಗಾರಿಕೆಗಳಿಗೆ ಮೊರೆಹೋಗಿರುವ ಆಡಳಿತಾರೂಢ ಮೈತ್ರಿಕೂಟ, ಅಚ್ಚರಿಯ ಹೆಜ್ಜೆಗಳನ್ನಿಡುತ್ತಿದೆ. ಒಂದು ಕಡೆ ಬಿಜೆಪಿ ತನ್ನ ಪ್ರಖರ ಹಿಂದುತ್ವದ ಅಜೆಂಡಾವನ್ನು ಬಲಪಡಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ತನ್ನ ಪ್ರಾದೇಶಿಕ ಮಿತ್ರಪಕ್ಷವಾದ ‘ಅಸೋಮ್ ಗಣ ಪರಿಷತ್’ (ಎಜಿಪಿ) ಮೂಲಕ ಅಚ್ಚರಿಯ ರಾಜಕೀಯ ನಡೆಯೊಂದನ್ನು ಪ್ರದರ್ಶಿಸಿದೆ. ಇದು ಮೇಲ್ನೋಟಕ್ಕೆ ಎಜಿಪಿಯ ತೀರ್ಮಾನದಂತೆ ಕಂಡರೂ, ಇದರ ಹಿಂದೆ ಕಮಲ ಪಡೆಯ ತಂತ್ರಗಾರಿಕೆ ಅಡಗಿದೆ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಈ ಚುನಾವಣೆಯಲ್ಲಿ ಮಿತ್ರಪಕ್ಷ ಅಸೋಮ್ ಗಣ ಪರಿಷತ್ ಕೈಗೊಂಡಿರುವ ನಿರ್ಧಾರ ಎಲ್ಲರ ಹುಬ್ಬೇರಿಸಿದೆ. ಎನ್‌ಡಿಎ ಮೈತ್ರಿಕೂಟದಲ್ಲಿರುವ ಎಜಿಪಿ ಪಕ್ಷಕ್ಕೆ ಒಟ್ಟು 126 ವಿಧಾನಸಭಾ ಕ್ಷೇತ್ರಗಳ ಪೈಕಿ 26 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಎಜಿಪಿ ತನಗೆ ಹಂಚಿಕೆಯಾದ ಈ 26 ಕ್ಷೇತ್ರಗಳ ಪೈಕಿ ಬರೋಬ್ಬರಿ 13 ಸ್ಥಾನಗಳಲ್ಲಿ ಅಂದರೆ ನಿಖರವಾಗಿ ಶೇಕಡಾ 50ರಷ್ಟು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಪ್ರಾದೇಶಿಕ ಪಕ್ಷವನ್ನು ಮುಂಚೂಣಿಗೆ ತಂದು ಈ ಹೊಸ ಪ್ರಯೋಗಕ್ಕೆ ಎನ್‌ಡಿಎ ಕೈಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದಕ್ಕೆ ತದ್ವಿರುದ್ಧವಾಗಿ, ಮೈತ್ರಿಕೂಟದ ದೊಡ್ಡಣ್ಣ ಬಿಜೆಪಿ ತನ್ನ ಸಾಂಪ್ರದಾಯಿಕ ನಿಲುವಿಗೆ ಅಂಟಿಕೊಂಡಿದೆ. ಒಟ್ಟು 89 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ, ಈವರೆಗೆ ಪ್ರಕಟಿಸಿರುವ 88 ಅಭ್ಯರ್ಥಿಗಳ ಪಟ್ಟಿಯಲ್ಲಿ ಒಬ್ಬರೇ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಮಣೆ ಹಾಕಿಲ್ಲ. ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡದೆ ತನ್ನ ಮೂಲ ಹಿಂದುತ್ವದ ಮತಬ್ಯಾಂಕನ್ನು ನೆಚ್ಚಿಕೊಂಡಿದೆ. ತಾನು ನೇರವಾಗಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿದರೆ ಬಹುಸಂಖ್ಯಾತ ಮತಗಳು ಕೈತಪ್ಪಬಹುದು ಎಂಬ ಲೆಕ್ಕಾಚಾರ ಕೇಸರಿ ಪಕ್ಷದ್ದಾಗಿದೆ. ಇನ್ನೂ ಮೈತ್ರಿಕೂಟದ ಮತ್ತೊಂದು ಪಕ್ಷ ಬೋಡೋಲ್ಯಾಂಡ್ ಪೀಪಲ್ಸ್ ಪ್ರಂಟ್ (ಬಿಪಿಎಫ್) ತನ್ನ ಪಾಲಿಗೆ ದೊರಕಿರುವ 11 ಕ್ಷೇತ್ರಗಳ ಪೈಕಿ ಕೇವಲ ಒಬ್ಬ ಅಭ್ಯರ್ಥಿಗೆ ಅವಕಾಶ ನೀಡಿದೆ.

ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಎಲ್ಲ ರೀತಿಯ ತಂತ್ರಗಳಿಗೆ ಮುಂದಾಗಿದೆಯೇ ಎಂಬ ಪ್ರಶ್ನೆಗೆ ಅಸ್ಸಾಂನ ಈ ಟಿಕೆಟ್ ಹಂಚಿಕೆ ಸ್ಪಷ್ಟ ಉತ್ತರ ನೀಡುತ್ತದೆ. ಎಜಿಪಿಯ ಈ ನಡೆಯ ಹಿಂದೆ ಬಿಜೆಪಿಯ ನಿಖರವಾದ ಮೈಕ್ರೋ ಮ್ಯಾನೇಜ್‌ಮೆಂಟ್‌ ಕೆಲಸ ಮಾಡಿದೆ. ತಾನು ನೇರವಾಗಿ ಮಾಡಲಾಗದ ಕೆಲಸವನ್ನು ಮಿತ್ರಪಕ್ಷದ ಮೂಲಕ ಮಾಡಿಸುವ ಜಾಣ್ಮೆಯನ್ನು ಬಿಜೆಪಿ ಇಲ್ಲಿ ಪ್ರದರ್ಶಿಸಿದೆ. ಚುನಾವಣೆಯಲ್ಲಿ ಎದುರಾಳಿಯನ್ನು ಮಣಿಸಲು ಎನ್‌ಡಿಎ ಎಲ್ಲ ಬಗೆಯ ರಣತಂತ್ರಗಳನ್ನು ಪ್ರಯೋಗಿಸುತ್ತಿರುವುದಕ್ಕೆ ಮತ್ತು ಅಧಿಕಾರಕ್ಕಾಗಿ ಯಾವುದೇ ತಂತ್ರಗಾರಿಕೆಗೂ ಸಿದ್ಧ ಎನ್ನುವುದಕ್ಕೆ ಇದೊಂದು ನೈಜ ಉದಾಹರಣೆಯಾಗಿದೆ.

ಇದನ್ನು ಓದಿದ್ದೀರಾ? ಅಸ್ಸಾಂ ಚುನಾವಣೆ: ಬಿಜೆಪಿಯ ಹತಾಶ ‘ಆಪರೇಷನ್’ ತಂತ್ರ, ಪುಟಿದೇಳಲು ಕಾಂಗ್ರೆಸ್‌ಗೆ ಸುವರ್ಣಾವಕಾಶ

ಅಸ್ಸಾಂನ ಜನಸಂಖ್ಯಾಶಾಸ್ತ್ರವನ್ನು ಗಮನಿಸಿದರೆ ಬರಾಕ್ ಕಣಿವೆ ಮತ್ತು ಕೆಳ ಅಸ್ಸಾಂ ಭಾಗಗಳಲ್ಲಿ ಅಲ್ಪಸಂಖ್ಯಾತರು ನಿರ್ಣಾಯಕವಾಗಿದ್ದಾರೆ. ರಾಜ್ಯದ ಸುಮಾರು 24ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳೇ ಗೆಲುವನ್ನು ನಿರ್ಧರಿಸುತ್ತವೆ. ಇಂತಹ ಅಲ್ಪಸಂಖ್ಯಾತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿ ತನ್ನದೇ ಚಿಹ್ನೆಯಡಿ ಸ್ಪರ್ಧಿಸಿದರೆ ಗೆಲುವು ಸಾಧಿಸುವುದು ಅತ್ಯಂತ ಕಷ್ಟಕರ. ಈ ವಾಸ್ತವವನ್ನು ಅರಿತಿರುವ ಬಿಜೆಪಿ, ಆ ನಿರ್ದಿಷ್ಟ ಕ್ಷೇತ್ರಗಳನ್ನು ಮಿತ್ರಪಕ್ಷ ಎಜಿಪಿಗೆ ಬಿಟ್ಟುಕೊಟ್ಟು, ಅಲ್ಲಿ ಪ್ರಬಲ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತೆ ನೋಡಿಕೊಂಡಿದೆ.

ಈ ತಂತ್ರದ ಹಿಂದಿರುವ ಮತ್ತೊಂದು ಪ್ರಮುಖ ಉದ್ದೇಶವೆಂದರೆ ಪ್ರತಿಪಕ್ಷಗಳ ಮತ ವಿಭಜನೆ ಮಾಡುವುದು. ಅಸ್ಸಾಂನಲ್ಲಿ ಮುಸ್ಲಿಂ ಮತಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಅಥವಾ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ (AIUDF) ಪಾಲಾಗುತ್ತವೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಐಯುಡಿಎಫ್ ನಡುವೆ ಮೈತ್ರಿ ಇಲ್ಲದಿರುವುದು ಎನ್‌ಡಿಎಗೆ ವರದಾನವಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಎಐಯುಡಿಎಫ್‌ನಿಂದ ವಲಸೆ ಬಂದ ಕರೀಮ್ ಉದ್ದೀನ್ ಬರ್ಭುಯಿಯಾ ಮತ್ತು ಝಾಕಿರ್ ಹುಸೇನ್ ಲಸ್ಕರ್ ಅವರಂತಹ ಪ್ರಭಾವಿ ನಾಯಕರಿಗೆ ಎಜಿಪಿ ಟಿಕೆಟ್ ನೀಡಿದೆ.

ಈ ರೀತಿಯ ಪ್ರಬಲ ಮುಸ್ಲಿಂ ನಾಯಕರನ್ನು ಅಖಾಡಕ್ಕಿಳಿಸುವುದರಿಂದ ಕಾಂಗ್ರೆಸ್ ಮತ್ತು ಎಐಯುಡಿಎಫ್‌ಗೆ ಹೋಗಬೇಕಿದ್ದ ಅಲ್ಪಸಂಖ್ಯಾತ ಮತಗಳು ಹಂಚಿಹೋಗಲಿವೆ. ಇದರಿಂದಾಗಿ ವಿರೋಧ ಪಕ್ಷಗಳ ಗೆಲುವಿನ ಹಾದಿ ಕಠಿಣವಾಗಲಿದ್ದು, ಅಂತಿಮವಾಗಿ ಇದರ ಲಾಭ ಎನ್‌ಡಿಎ ಮೈತ್ರಿಕೂಟಕ್ಕೆ ಒಲಿಯಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಜಿಪಿ ಅಧ್ಯಕ್ಷ ಅತುಲ್ ಬೋರಾ ಅವರು, ಅಭ್ಯರ್ಥಿಗಳ ಆಯ್ಕೆಯಲ್ಲಿ ಧರ್ಮಕ್ಕಿಂತ ಅವರು ಗೆಲ್ಲುವ ಸಾಮರ್ಥ್ಯವನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಮೈತ್ರಿಕೂಟದ ಗೆಲುವಿನ ಹಸಿವನ್ನು ಎತ್ತಿತೋರಿಸುತ್ತದೆ.

ಅಧಿಕಾರದ ಗದ್ದುಗೆ ಏರಲು ಕೇವಲ ಭಾಷಣಗಳಷ್ಟೇ ಸಾಲದು, ಬದಲಾಗಿ ಜಾತಿ, ಧರ್ಮ ಮತ್ತು ಕ್ಷೇತ್ರವಾರು ಲೆಕ್ಕಾಚಾರಗಳು ಅತ್ಯಂತ ನಿಖರವಾಗಿರಬೇಕು ಎಂಬುದನ್ನು ಅಸ್ಸಾಂ ಚುನಾವಣೆ ಸಾಬೀತುಪಡಿಸುತ್ತಿದೆ. ತಾನು ತನ್ನ ಸೈದ್ಧಾಂತಿಕ ನಿಲುವಿನಂತೆ ಮುಸ್ಲಿಮರಿಗೆ ಟಿಕೆಟ್ ನಿರಾಕರಿಸಿದರೂ, ಅಧಿಕಾರ ಹಿಡಿಯುವ ಏಕೈಕ ಮಹತ್ವಾಕಾಂಕ್ಷೆಯಿಂದ ಮಿತ್ರಪಕ್ಷಗಳ ಮುಖಾಂತರ ಅದೇ ಮುಸ್ಲಿಂ ನಾಯಕರನ್ನು ಅಖಾಡಕ್ಕಿಳಿಸಿ ವಿರೋಧಿ ಪಾಳೆಯದ ಮತಬ್ಯಾಂಕ್‌ಗೆ ಕನ್ನ ಹಾಕಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಚುನಾವಣಾ ರಣರಂಗದಲ್ಲಿ ಗೆಲುವೊಂದೇ ಅಂತಿಮ ಸತ್ಯ ಎಂಬುದನ್ನು ಅರಿತಿರುವ ಬಿಜೆಪಿ, ಅದಕ್ಕಾಗಿ ತೆರೆಯ ಹಿಂದೆ ಎಲ್ಲ ರೀತಿಯ ರಣತಂತ್ರಗಳನ್ನು ಹೆಣೆಯುತ್ತಿದೆ ಎಂಬುದನ್ನು ಈ ಬೆಳವಣಿಗೆಗಳು ದೃಢಪಡಿಸಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...