ಈ ತರಾತುರಿ ಯಾತಕ್ಕಾಗಿ? ಆನ್ಲೈನ್ ಫಾರ್ಮ್ ಭರ್ತಿ ಮಾಡಲು ತಿಳಿಯದ, ಅದಕ್ಕೆ ಬೇಕಾದ ವ್ಯವಸ್ಥೆ ಇಲ್ಲದ ಜನರು ಮಾಡುವುದೇನು ಎಂಬ ಪ್ರಶ್ನೆ ಕೇಳಿಬಂದಿದೆ.
ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯು ಸದ್ಯ ದೇಶದಾದ್ಯಂತ ಚರ್ಚೆ ಹುಟ್ಟುಹಾಕಿದೆ. ಬಿಹಾರದಲ್ಲಿ ಇನ್ನು ಮೂರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ತರಾತುರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಮುಂದಾಗಿರುವುದಕ್ಕೆ ತೀವ್ರ ಆಕ್ರೋಶ, ವಿರೋಧ ವ್ಯಕ್ತವಾಗಿದೆ. ವಿಪಕ್ಷಗಳು ಸುಪ್ರೀಂ ಕೋರ್ಟ್ ಕದವನ್ನೂ ತಟ್ಟಿವೆ.
ಈ ವಿಶೇಷ ತೀವ್ರ ನಿಗಾ ಪರಾಮರ್ಶೆ ಅಥವಾ SIR ಮಾಡುವುದರಿಂದಾಗಿ ಲಕ್ಷಾಂತರ ಮತದಾರರು ಪಟ್ಟಿಯಿಂದ ಹೊರಗುಳಿಯುತ್ತಾರೆ. ಈ ಕ್ರಮ ಸರಿಯಲ್ಲ ಎಂಬುದು ವಿಪಕ್ಷಗಳ ವಾದ. ಈ ಅರ್ಜಿ ವಿಚಾರಣೆಯನ್ನು ಗುರುವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಈ ಪ್ರಕ್ರಿಯೆ ಮುಂದುವರೆಸಲು ಆಯೋಗಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್, ಪರಿಷ್ಕರಣೆ ವೇಳೆ ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ ಮತ್ತು ಪಡಿತರ ಚೀಟಿಗಳನ್ನು ಕ್ರಮಬದ್ಧ ದಾಖಲೆಯನ್ನಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಇದನ್ನು ಓದಿದ್ದೀರಾ? ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ; ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೀಗಂದಿದ್ದೇಕೆ?
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಹುಟ್ಟಿರುವ ಹಲವು ಪ್ರಶ್ನೆಗಳೇ ಈ ವಿರೋಧಕ್ಕೆ ಕಾರಣ. ನವೆಂಬರ್ನಲ್ಲಿ ಚುನಾವಣೆ ಇರುವಾಗ ತರಾತುರಿಯಲ್ಲಿ ಪರಿಷ್ಕರಣೆ ನಡೆಸುವುದೇಕೆ ಎಂಬ ಪ್ರಶ್ನೆ ಒಂದೆಡೆಯಾದರೆ, ಇನ್ನೊಂದೆಡೆ ತಾಂತ್ರಿಕ ವಿಚಾರಗಳೂ ಮುನ್ನೆಲೆಗೆ ಬಂದಿದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ಫಾರ್ಮ್ ಭರ್ತಿ ಮಾಡುವ ಮೂಲಕ ಮಾಡಬೇಕು. ಆದರೆ ವಿದ್ಯಾವಂತರಿಗೇ ಈ ಫಾರ್ಮ್ ಭರ್ತಿ ಮಾಡುವುದು ಜಟಿಲ ಎನಿಸುವಾಗ ಓದು, ಬರವಣಿಗೆ ಇಲ್ಲದ, ಆನ್ಲೈನ್ ಬಳಕೆ ತಿಳಿಯದವರ ಕಥೆಯೇನು? ಇವೆಲ್ಲವುದಕ್ಕೂ ಮುಖ್ಯವಾಗಿ ಚುನಾವಣಾ ಆಯೋಗ ಮಾನ್ಯ ಎಂದು ಪರಿಗಣಿಸುವ 11 ದಾಖಲೆಗಳ ಪ್ರಸ್ತುತತೆ ಏನು?
ಮತ ಚಲಾವಣೆ ಮಾಡುವ ತಮ್ಮ ಹಕ್ಕನ್ನು ಬಿಹಾರದ ಜನರು ಉಳಿಸಿಕೊಳ್ಳಬೇಕಾದರೆ ಒಟ್ಟು 11 ದಾಖಲೆಗಳ ಪೈಕಿ ಒಂದನ್ನು ಸಲ್ಲಿಸಬೇಕು. ಈ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಕೂಡಾ ಇರಬಹುದು ಎಂಬುದು ಸಾಮಾನ್ಯ ಜ್ಞಾನ. ಆದರೆ ಬಿಹಾರದಲ್ಲಿ ನಡೆಯುತ್ತಿರುವುದೇ ಬೇರೆ. ಮತ ಚಲಾಯಿಸಲು ತಾನು ಅರ್ಹ ಎಂದು ಸಾಬೀತುಪಡಿಸಬೇಕಾದರೆ ವ್ಯಕ್ತಿಯು ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಶೈಕ್ಷಣಿಕ ಪ್ರಮಾಣಪತ್ರ, ಸರ್ಕಾರ ನೀಡಿದ ಗುರುತಿನ ಚೀಟಿ ಅಥವಾ ಪಿಂಚಣಿ ಪ್ರತಿ, ಖಾಯಂ ನಿವಾಸ ವಿಳಾಸ ಪತ್ರ, ಫಾರೆಸ್ಟ್ ರೈಟ್ ಸರ್ಟಿಫಿಕೇಟ್, ಜಾತಿ ಪ್ರಮಾಣಪತ್ರ, ಎನ್ಆರ್ಸಿ ದಾಖಲೆ, ಕುಟುಂಬ ನೋಂದಣಿ, ಭೂಮಿ ಅಥವಾ ಮನೆ ಹಂಚಿಕೆ ಪತ್ರ, 1987ಕ್ಕಿಂತ ಹಿಂದಿನ ಸರ್ಕಾರಿ ಅಥವಾ ಪಿಎಸ್ಯು ಗುರುತಿನ ದಾಖಲೆಗಳು- ಈ 11 ದಾಖಲೆಗಳ ಪೈಕಿ ಒಂದನ್ನು ನೀಡಬೇಕು. ಈ ಎಲ್ಲ ವಿಚಾರಗಳು ಈ ಪ್ರಕ್ರಿಯೆಯ ವಿರೋಧಕ್ಕೆ ಕಾರಣವಾದರೆ, ಅಕ್ರಮ ಮತದಾನ ಮಾಡುವುದನ್ನು ತಡೆಯಬೇಕಾದರೆ ಈ ಪ್ರಕ್ರಿಯೆ ನಡೆಸುವುದು ಅನಿವಾರ್ಯ, ಅತ್ಯಗತ್ಯ ಎಂಬ ವಾದಗಳಿವೆ.
ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತ
ವಿಶೇಷ ತೀವ್ರ ನಿಗಾ ಪರಾಮರ್ಶೆ ಅಥವಾ SIR ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ದೇಶದ ನಾಗರಿಕರಾದ ಎಲ್ಲರಿಗೂ ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳಿ ದೊಡ್ಡ ಅಭಿಯಾನವೇ ನಡೆದಿತ್ತು. ಬ್ಯಾಂಕ್ ಖಾತೆ ತೆರೆಯುವುದಾದರೆ ಆಧಾರ್, ಪ್ಯಾನ್ ಕಾರ್ಡ್ಗೆ ಆಧಾರ್ ಕಾರ್ಡ್ ಲಿಂಕ್- ಹೀಗೆ ಎಲ್ಲ ದಾಖಲೆಗಳಿಗೆ ಆಧಾರ್ ಕಾರ್ಡ್ ಮುಖ್ಯ, ಇದು ನೀವು ಭಾರತೀಯರು ಎಂಬುದನ್ನು ಸಾಬೀತುಪಡಿಸುವ ಗುರುತಿನ ಚೀಟಿ ಎಂದು ಹೇಳಲಾಗಿತ್ತು. ಆದರೆ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಬಂದಾಗ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಪರಿಗಣಿಸಿಲ್ಲ. ಎಲ್ಲರೂ ಹೊಂದಿರದ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಪರಿಗಣಿಸಿರುವುದು ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ನೆಟ್ಟಿಗರು ವಾದಿಸಿದ್ದಾರೆ.
Why is the EC not accepting Aadhar for voter enrolment in this Special Intensive revision of the Electoral rolls? pic.twitter.com/40wfWoj8AQ
— Prashant Bhushan (@pbhushan1) July 11, 2025
ಜೊತೆಗೆ ಆನ್ಲೈನ್ನಲ್ಲಿ ಫಾರ್ಮ್ ಭರ್ತಿ ಮಾಡಲು ಎಲ್ಲರಿಗೂ ಸಾಧ್ಯವಾಗದು. ಇದರಿಂದಾಗಿ ಅರ್ಹರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂಬುದು ನೆಟ್ಟಿಗರ ಅಭಿಪ್ರಾಯ. ಅಷ್ಟಕ್ಕೂ ತರಾತುರಿಯಲ್ಲಿ ಈ ಪರಿಷ್ಕರಣೆ ನಡೆಸುವುದು ಯಾಕೆ? ಎಂಬ ಪ್ರಶ್ನೆಯನ್ನು ಎತ್ತಿರುವ ನೆಟ್ಟಿಗರು ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ಹೇಳಿದ್ದಾರೆ. ಚುನಾವಣಾ ಆಯೋಗವು ಸಂಪೂರ್ಣವಾಗಿ ಬಿಜೆಪಿಯ ಕೈಗೊಂಬೆಯಾಗಿದೆ ಎಂಬ ಆಕ್ರೋಶವೂ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ.
“ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಮೂಲಕ ಚುನಾವಣಾ ಆಯೋಗವು ವಲಸಿಗರು, ದಲಿತರು ಮತ್ತು ಬಡವರ ಮತದಾನದ ಹಕ್ಕನ್ನು ಕಸಿಯುತ್ತಿದೆ” ಎಂದು ಪಕ್ಷೇತರ ಸಂಸದ ಪಪ್ಪು ಯಾದವ್ ಆರೋಪಿಸಿದ್ದಾರೆ. “ಮತದಾರರ ಪಟ್ಟಿಯ ಪರಿಷ್ಕರಣೆಯು ಚುನಾವಣೆಯನ್ನು ಕದಿಯುವ ಯತ್ನವಾಗಿದೆ. ಮತದಾರರ ವಿಶೇಷವಾಗಿ ಯುವಕರ(ಮತದಾನ) ಹಕ್ಕುಗಳನ್ನು ಕದಿಯಲು ನಾವು ಚುನಾವಣಾ ಆಯೋಗಕ್ಕೆ ಅವಕಾಶ ನೀಡುವುದಿಲ್ಲ” ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಿಷ್ಕರಣೆ ಪರವಾಗಿ ವಾದ
ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ಪರವಾಗಿ ಬಲಪಂಥೀಯರೂ ವಾದಿಸುತ್ತಿದ್ದಾರೆ. ನಕಲಿ ಮತ್ತು ಅಕ್ರಮ ಮತದಾನವನ್ನು ತಡೆಯಬೇಕಾದರೆ ಈ ಪರಿಷ್ಕರಣೆ ನಡೆಸುವುದು ಅತ್ಯಗತ್ಯ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಮೂಡಿದೆ. ಇನ್ನೊಂದೆಡೆ ಬಿಹಾರ ಮಾತ್ರವಲ್ಲ ಮೋದಿ ಸರ್ಕಾರವು ದೇಶದೆಲ್ಲೆಡೆ ಈ ಪ್ರಕ್ರಿಯೆಯನ್ನು ನಡೆಸಬೇಕು. ಈ ಮೂಲಕ ದೇಶದಲ್ಲಿ ಅಡಗಿರುವ ಅಕ್ರಮ ವಲಸಿಗರನ್ನು ಹೊರದಬ್ಬಬಹುದು. ಬಿಹಾರದಲ್ಲಿ ಚುನಾವಣಾ ಆಯೋಗ ತೆಗೆದುಕೊಂಡ ನಿರ್ಧಾರ ಪ್ರಶಂಸನೀಯ ಎಂಬುದು ಈ ಪ್ರಕ್ರಿಯೆ ಪರವಾಗಿರುವವರ ವಾದ. ಅದರಲ್ಲೂ ಬಾಂಗ್ಲಾದೇಶದಿಂದ ಬಂದ ವಲಸಿಗರು ಮತ್ತು ರೋಹಿಂಗ್ಯಾ ಮುಸ್ಲಿಮರಿಂದ ಮತದಾನದ ಹಕ್ಕನ್ನು ಮರಳಿ ಪಡೆಯಲು ಈ ಪರಿಷ್ಕರಣೆ ಮಾಡುವುದು ಅತ್ಯಗತ್ಯ ಎಂದೂ ನೆಟ್ಟಿಗರು ಹೇಳಿಕೊಂಡಿದ್ದಾರೆ.
#SIR This Special Intensive Revision is highly required to totally eliminate illegal migrants mainly from Bangladesh nd Rohingya Muslims from electoral rolls. EC allows voters who r in electoral rolls as on 1st Jan 2003 in Bihar and those who submit one of d 11 docs allowed by EC
— Ravisankar (@Raviprs53) July 11, 2025
ಇವೆಲ್ಲವುದರ ನಡುವೆ “ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯನ್ನು ಸಮ್ಮತಿಸಿದೆ” ಎಂಬ ಅರ್ಧ ಸತ್ಯವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇವೆಲ್ಲವುದರ ನಡುವೆ ಪರಿಷ್ಕರಣೆ ಬಗ್ಗೆ ವಿಪಕ್ಷಗಳೇ ಅಪಪ್ರಚಾರ ಮಾಡುತ್ತಿರುವುದು ವಾಸ್ತವವೇ ಬೇರೆಯಿದೆ ಎಂದು ಬಿಜೆಪಿ ನಾಯಕರುಗಳು ಹೇಳಿಕೊಂಡಿದ್ದಾರೆ. ನಾವು ಮುಸ್ಲಿಮರನ್ನು ಹೊರದಬ್ಬುವ ಹುನ್ನಾರವನ್ನು ಹೊಂದಿಲ್ಲ. ಎಲ್ಲವೂ ಕಾಂಗ್ರೆಸ್ ಮತ್ತು ವಿಪಕ್ಷಗಳ ಸುಳ್ಳು ಪ್ರಚಾರ. ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶ ಎಂದು ಬಿಜೆಪಿ ವಾದಿಸಿದೆ.
ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ಸಂಸದ ರವಿ ಶಂಕರ್ ಪ್ರಸಾದ್ ಆರೋಪಿಸಿದ್ದಾರೆ. “ಬಿಹಾರಕ್ಕೆ ಸೇರದವರ, ನುಸುಳುಕೋರರ ಹೆಸರು ಮತಪಟ್ಟಿಯಲ್ಲಿ ಇರಬೇಕು ಎಂದು ಅವರು ಬಯಸುತ್ತಾರೆಯೇ? ಎಲ್ಲ ವಿಚಾರದಲ್ಲಿಯೂ ರಾಜಕೀಯ ಮಾಡುವುದೇ ಕಾಂಗ್ರೆಸ್ನ ಕೆಲಸವಾಗಿದೆ” ಎಂದು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ವಾಗ್ವಾದವನ್ನು ನಾವು ಬದಿಗೊತ್ತಿ ನೋಡಿದಾಗ ನಮ್ಮ ಕಣ್ಣಿಗೆ ರಾಚುವುದು ಬರೀ ಓರ್ವ ಅರ್ಹ ನಾಗರಿಕರ ಮತದಾನದ ಹಕ್ಕು. ಗುರುತಿನ ಚೀಟಿಯನ್ನು ಮಾಡಿಸಿಕೊಳ್ಳುವಾಗಲೇ ದಾಖಲೆಗಳನ್ನು ಸಲ್ಲಿಸಿರುವ ನಾವು ಈಗ ಮತ್ತೆ ಯಾಕೆ ದಾಖಲೆ ಸಲ್ಲಿಸಬೇಕು ಎಂಬ ಪ್ರಶ್ನೆ ಜನ ಸಾಮಾನ್ಯರದ್ದು. ಅವೆಲ್ಲವುದಕ್ಕೂ ಹೆಚ್ಚಾಗಿ ಇಲ್ಲಿ ಈ ತರಾತುರಿ ಯಾತಕ್ಕಾಗಿ? ಆನ್ಲೈನ್ ಫಾರ್ಮ್ ಭರ್ತಿ ಮಾಡಲು ತಿಳಿಯದ, ಆ ವ್ಯವಸ್ಥೆ ಇಲ್ಲದ ಜನರು ಮಾಡುವುದೇನು ಎಂಬ ಪ್ರಶ್ನೆ ಮೂಡುತ್ತದೆ.





