"ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುವ ಮೂಲಕ ಒಬಿಸಿಗಳ ಬಲಿಪಡೆಯಲು ಬಿಜೆಪಿ ಹೊರಟಿದೆ" ಎಂಬ ಟೀಕೆ ವ್ಯಕ್ತವಾಗಿದೆ.
“ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಮಗ್ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಹೇಗಾದರೂ ತಡೆಯಬೇಕು, ಸಮುದಾಯಗಳ ನೈಜ ಸ್ಥಿತಿಗತಿ ಗೊತ್ತಾಗುವುದನ್ನು ತಪ್ಪಿಸಬೇಕು” ಎಂದು ಬಿಜೆಪಿ ಸಂಚು ರೂಪಿಸಿದೆಯೇ ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ.
ಹಿಂದುಳಿದ ಸಮುದಾಯಗಳ ಭವಿಷ್ಯವನ್ನು ನಿರ್ಧರಿಸಲಿರುವ ಸಮೀಕ್ಷೆಗೆ ಆರಂಭದಲ್ಲೇ ಅಡ್ಡಗಾಲು ಹಾಕುವ ಪ್ರಯತ್ನ ಮಾಡಲಾಗಿತ್ತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ರಾಜ್ಯ ಒಕ್ಕಲಿಗರ ಸಂಘ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್ ಸುಬ್ಬಾರೆಡ್ಡಿ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಸಮೀಕ್ಷೆಗೆ ತಡೆ ನೀಡಲು ಕೋರ್ಟ್ ನಿರಾಕರಿಸಿತು. ಆದರೆ ಕೆಲವು ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ, “ಪಡೆದ ಮಾಹಿತಿಯನ್ನು ಸೋರಿಕೆ ಮಾಡಬಾರದು ಮತ್ತು ಸಮೀಕ್ಷೆಗೆ ಪಾಲ್ಗೊಳ್ಳುವಂತೆ ಜನರನ್ನು ಒತ್ತಾಯಿಸಬಾರದು” ಎಂದು ನಿರ್ದೇಶಿಸಿದೆ. ‘ಸಮೀಕ್ಷೆಗೆ ಒತ್ತಾಯಿಸಬಾರದು’ ಎಂಬ ಅಂಶವನ್ನು ಇಟ್ಟುಕೊಂಡು, ಜನರ ದಿಕ್ಕುತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪತ್ರಿಕೆಯೊಂದರ ಜೊತೆ ಸಂವಾದ ನಡೆಸಿದ್ದು, “ಸಮೀಕ್ಷೆಗೆ ಬಂದವರಿಗೆ ಮಾಹಿತಿ ಕೊಡಲು ನಿರಾಕರಿಸಿ. ನಾನಂತೂ ಕೊಡುವುದಿಲ್ಲ. ಸಮೀಕ್ಷೆ ನೆಪದಲ್ಲಿ ತೀರಾ ವೈಯಕ್ತಿಕ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಇದೊಂದು ನಾನ್ಸೆನ್ಸ್. ಸಮಾಜ ಒಡೆಯುವ ಕೆಲಸ ಆಗುತ್ತಿದೆ. ಕೇಂದ್ರ ಸರ್ಕಾರ ವೈಜ್ಞಾನಿಕವಾಗಿ ಜಾತಿಗಣತಿ ಮಾಡುತ್ತದೆ” ಎಂದಿದ್ದಾರೆ.
ಇದನ್ನೂ ಓದಿರಿ: ಜಾತಿ ಸಮೀಕ್ಷೆ; ಜಾಗೃತವಾಗಿದ್ದಾರೆಯೇ ಒಬಿಸಿಗಳು?
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇದೇ ವಾದವನ್ನು ಮಂಡಿಸಿದ್ದಾರೆ. “ನಾನು ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ. ನನ್ನ ಮಾಹಿತಿ ಸುರಕ್ಷಿತವಾಗಿರುತ್ತೆ ಅನ್ನೋ ನಂಬಿಕೆ ಇಲ್ಲ. ಸರ್ಕಾರದ ಮೇಲೆ ನಂಬಿಕೆ ಇಲ್ಲವಾದ್ದರಿಂದ ಇದರಲ್ಲಿ ಪಾಲ್ಗೊಳ್ಳಲ್ಲ. ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಜಾತಿ, ಜಾತಿ ಮಧ್ಯೆ ಗಲಾಟೆ ತರಲು ಮಾತ್ರ ಇದನ್ನು ಮಾಡುತ್ತಿದ್ದಾರೆ. ದಯವಿಟ್ಟು ನೀವು ಇದರಲ್ಲಿ ಪಾಲ್ಗೊಳ್ಳಬೇಡಿ. ಜಾತಿ ಗಣತಿಯು ರಾಜಕೀಯ ಪ್ರೇರಿತವಾಗಿದ್ದು, ಲಾಲು ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರಂತಹ ನಾಯಕರು ಮಾಡಿದ ತಂತ್ರಗಳಂತೆಯೇ ಇಲ್ಲಿಯೂ ಬಳಕೆ ಮಾಡಲಾಗುತ್ತಿದೆ. ಇದು ಸಮುದಾಯಗಳನ್ನು ವಿಭಜಿಸುವ ಪ್ರಯತ್ನವಾಗಿದೆ. ಭಾಗವಹಿಸುವಿಕೆ ಸ್ವಯಂಪ್ರೇರಿತವಾಗಿದೆ, ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ” ಎಂದು ತಿಳಿಸಿದ್ದಾರೆ.
ಬ್ರಾಹ್ಮಣ ಸಮುದಾಯದ ಹಿನ್ನೆಲೆಯವರಾದ ಜೋಶಿ ಮತ್ತು ತೇಜಸ್ವಿ ವಿರುದ್ಧ ಜನರು ಕಿಡಿಕಾರಿದ್ದಾರೆ. ‘ಈದಿನ’ದ ಜೊತೆ ಮಾತನಾಡಿದ ಹಿಂದುಳಿದ ವರ್ಗಗಳ ಮುಖಂಡ ಎಣ್ಣೆಗೆರೆ ವೆಂಕಟರಾಮಯ್ಯ ಅವರು, “ಇಂದ್ರಾ ಸಹಾನಿ ಕೇಸ್ ಕೊಟ್ಟ ತೀರ್ಪು ಗೊತ್ತಿದೆಯಾ ಇವರಿಗೆ? ಸುಪ್ರೀಂಕೋರ್ಟ್ ಆದೇಶದ ಅನ್ವಯ ರಾಜ್ಯಗಳು ಜಾತಿ ಸಮೀಕ್ಷೆ ಮಾಡಬೇಕು. ನಮ್ಮ ಮಾಹಿತಿಗೆ ರಕ್ಷಣೆ ಇರುವುದಿಲ್ಲ ಎನ್ನುವ ಬಿಜೆಪಿಯವರು, ಬಿಹಾರದಲ್ಲಿ ಮಾಡಿದ ಸಮೀಕ್ಷೆ ಬಗ್ಗೆ ಏನು ಹೇಳುತ್ತಾರೆ? ಅಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರಾ?” ಎಂದು ಪ್ರಶ್ನಿಸಿದರು.
“ಸಾವಿರಾರು ವರ್ಷಗಳಿಂದ ನಮ್ಮ ತಟ್ಟೆಗೆ ಕೈ ಹಾಕಿ ನಮ್ಮ ಅನ್ನವನ್ನು ಕಿತ್ತುಕೊಂಡು ತಿನ್ನುವಾಗ ಇವರಿಗೆ ಏನೂ ಅನ್ನಿಸಲಿಲ್ಲ. ಸಮೀಕ್ಷೆಯಿಂದ ಇವರ ಬಂಡವಾಳ ಬಯಲಾಗುತ್ತೆ ಅಂತ ಈ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ. ನಮ್ಮಲ್ಲೂ ಲೀಡರ್ಗಳು ಬೆಳೆದಿದ್ದಾರೆ. ನಿಮ್ಮ ಮಂತ್ರಗಳಿಗೆ ಪ್ರತಿತಂತ್ರ ಹಾಕುವ ಚಾಣಕ್ಷತೆ ನಮಗೂ ಬಂದಿದೆ. ಜನರೇನು ಮೂರ್ಖರಲ್ಲ. ಈ ಸಮೀಕ್ಷೆ ಯಶಸ್ವಿ ಆಗುತ್ತೆ. ರಾಜ್ಯದಲ್ಲಿ ಪರಿವರ್ತನೆ ಆಗುತ್ತೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಗುಡುಗಿದರು.
ರಾಜಕೀಯ ವಿಶ್ಲೇಷಕ ಎ.ನಾರಾಯಣ ಅವರು ಪ್ರತಿಕ್ರಿಯಿಸಿ, “ಸಾಮಾಜಿಕ ನ್ಯಾಯದ ವಿರುದ್ಧ ಇರುವ ಶಕ್ತಿಗಳು ಅರ್ಥಾತ್ ಹಿಂದುಳಿದ ವರ್ಗಗಳ ಏಳಿಗೆ ಸಹಿಸದವರು ಕುಂಟು ನೆಪ ಒಡ್ಡಿ ಸಮೀಕ್ಷೆಗೆ ಅಸಹಕಾರ ತೋರುತ್ತಿದ್ದಾರೆ. ಚರಿತ್ರೆಯುದ್ದಕ್ಕೂ ಅವರು ಇದನ್ನೇ ಮಾಡುತ್ತಾ ಬಂದಿದ್ದು ಹಿಂದುಳಿದ ಜಾತಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಒಗ್ಗಟಾಗಿ ಈ ಸವಾಲನ್ನು ಹಿಮ್ಮೆಟ್ಟಿಸದೆ ಹೋದರೆ ಹಿಂದುಳಿದವರು ಶಾಶ್ವತವಾಗಿ ಹಿಂದುಳಿಯುತ್ತಾರೆ” ಎಂದು ಎಚ್ಚರಿಸಿದರು.
ಇದನ್ನೂ ಓದಿರಿ: ವೀರಶೈವ- ಲಿಂಗಾಯತ: ಜಾತಿ ಸಮೀಕ್ಷೆಯಲ್ಲಿ ‘ಧರ್ಮ’ ಯಾವುದಯ್ಯಾ?
ಚಿಂತಕ ಶಿವಸುಂದರ್ ಅವರು ‘ಫೇಸ್ಬುಕ್’ನಲ್ಲಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದು, “ಸಮೀಕ್ಷೆಯ ಕ್ರೊನಾಲಜಿ ನೋಡಿರಿ: 1.ಸಮೀಕ್ಷೆ ಮುಂದೂಡಬೇಕೆಂದು ಒಕ್ಕೊರಲಿಂದ ಪಕ್ಷಾತೀತ ಒತ್ತಾಯ- ಒಕ್ಕಲಿಗ ಸ್ವಾಮೀಜಿಗಳು. 2.ಸಮೀಕ್ಷೆ ಕಡ್ಡಾಯವಲ್ಲ- ಕೋರ್ಟ್. 3. ಸಮೀಕ್ಷೆ ಬಹಿಷ್ಕರಿಸಿ- ಬಿಜೆಪಿ. ಅಷ್ಟೇ, ಬೇರೇನಿಲ್ಲ” ಎಂದು ಕುಟುಕಿದ್ದಾರೆ.
‘ಜಾಗೃತ ಕರ್ನಾಟಕ’ ಸಂಘಟನೆಯ ಮುತ್ತುರಾಜ್ ಪ್ರತಿಕ್ರಿಯಿಸಿ, “ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು. ಇಬ್ಬರು ಬ್ರಾಹ್ಮಣ ಶಿಖಾಮಣಿಗಳು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿರೋಧಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಭಾರತದ ತುಂಬೆಲ್ಲಾ ಬಲಿ ಕಥೆಗಳೇ ತುಂಬಿವೆ. ಅದಕ್ಕೆ ಇಲ್ಲಿ ಸೊಳ್ಳೆಯಷ್ಟು ಇರುವವರು ಆನೆಯಷ್ಟು ಇರುವವರ ಜುಟ್ಟು ಹಿಡಿದು ಆಳ್ವಿಕೆ ನಡೆಸುತ್ತಿದ್ದಾರೆ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಹಿಂದೊಮ್ಮೆ ದಾಖಲಿಸಿರುವುದನ್ನು ಉಲ್ಲೇಖಿಸಿರುವ ಮುತ್ತುರಾಜ್, “ಒಬಿಸಿ ಸಮುದಾಯಗಳನ್ನು ಬಲಿ ಕೊಡಲು ಬಿಜೆಪಿ ಹುನ್ನಾರ ಮಾಡುತ್ತಿದೆ. ಬಲಿಯಾಗಬೇಡಿ. ಬಿಜೆಪಿಯಲ್ಲಿರುವ ಒಬಿಸಿ ಮುಖಂಡರೇ ಯೋಚಿಸಿ” ಎಂದು ಮನವಿ ಮಾಡಿದ್ದಾರೆ.





