ಪ್ರಧಾನಿಯಾಗಿರುವ ಕಾರಣ ಭದ್ರತೆ ದೃಷ್ಟಿಯಿಂದ ಮೋದಿ ಅವರಿಗೆ ಯಮುನಾ ಘಾಟ್ನಲ್ಲೇ ಪ್ರತ್ಯೇಕ ಛಟ್ ಪೂಜೆಗೆ ಅವಕಾಶ ನೀಡಿದ್ದರೆ, ಅದನ್ನು ಟೀಕಿಸಲಾಗದು. ಆದರೆ ಜನರಿಗೆ ಕಲುಷಿತ ನೀರು, ಪ್ರಧಾನಿಗೆ ಫಿಲ್ಟರ್ ನೀರು ಎಷ್ಟು ಸರಿ?
ಉತ್ತರ ಭಾರತದ ರಾಜ್ಯಗಳಾದ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಛಟ್ ಪೂಜೆಯನ್ನು ಆಚರಿಸಲಾಗುತ್ತದೆ. ಇದನ್ನು ಹೊರತುಪಡಿಸಿ ದೆಹಲಿ, ಮುಂಬೈ, ಕೋಲ್ಕತ್ತಾದ ಕೆಲವು ಭಾಗಗಳಲ್ಲಿಯೂ ಛಟ್ ಪೂಜೆ ಪ್ರತಿ ವರ್ಷದ ಆಚರಣೆ. ಎಂದಿನಂತೆ ಈ ಬಾರಿಯ ದೆಹಲಿ ಛಟ್ ಪೂಜೆಯೂ ರಾಜಕೀಯ ಮಗ್ಗಲಿಗೆ ತಿರುಗಿದೆ. ಅದಕ್ಕೆ ಮುಖ್ಯ ಕಾರಣ ವಿಐಪಿಗಳಿಗಾಗಿ ಮೀಸಲಾದ ‘ನಕಲಿ’ ಯಮುನಾ ಘಾಟ್. ಜನ ಸಾಮಾನ್ಯರಿಗೆ ಛಟ್ ಪೂಜೆ ನಂಬಿಕೆಯ ಸಂಕೇತವಾದರೆ ರಾಜಕಾರಣಿಗಳಿಗೆ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೀ ತೋರ್ಪಡಿಕೆಯಾಗಿದ್ದನ್ನು ಈ ‘ನಕಲಿ ಯಮುನಾ ಘಾಟ್’ ಬಹಿರಂಗಪಡಿಸಿದೆ. ಸದ್ಯ ವಿಪಕ್ಷಗಳಿಗೆ, ಟ್ರೋಲಿಗರಿಗೆ ಈ ‘ಬಿಸ್ಲೇರಿ ನೀರಿನ ಸ್ನಾನ’ ವಿಷಯವಸ್ತುವಾಗಿದೆ.
ಛಟ್ ಪೂಜೆಗಾಗಿ ಸಾಮಾನ್ಯ ಜನರು ಮಲಿನಗೊಂಡಿರುವ ಯಮುನಾ ನದಿಯಲ್ಲಿಯೇ ಪುಣ್ಯಸ್ನಾನ ಮಾಡುವಾಗ, ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಬಿಜೆಪಿ ‘ಫಿಲ್ಟರ್ ನೀರಿನ ನಕಲಿ’ ಯಮುನಾ ಘಾಟ್ ನಿರ್ಮಿಸಿರುವುದು ಸದ್ಯ ತೀವ್ರ ವಿವಾದಕ್ಕೆ ಕಾರಣವಾಗಿದೆ. ನಿಜವಾಗಿಯೂ ಭಕ್ತಿ ತೋರಿಸುವುದಾದರೆ ಯಮುನಾ ನದಿಯ ನೀರಲ್ಲೇ ಸ್ನಾನ ಮಾಡಲಿ, ಪ್ರತ್ಯೇಕ ಫಿಲ್ಟರ್ ನೀರಿನ ಕೃತಕ ಘಾಟ್ ನಿರ್ಮಿಸಿಕೊಂಡು ಪುಣ್ಯಸ್ನಾನ ಮಾಡಿದರೆ ಅಲ್ಲೇನಿದೆ ಭಕ್ತಿ ಎಂಬುದು ಸದ್ಯ ಜನಸಾಮಾನ್ಯರ ಪ್ರಶ್ನೆ. ಜೊತೆಗೆ ಜನರಿಗೂ ಛಟ್ ಪೂಜೆಗಾಗಿ ಪ್ರತ್ಯೇಕ ಶುದ್ದ ನೀರಿನ ವ್ಯವಸ್ಥೆ ಮಾಡಬೇಕಿತ್ತು ಎನ್ನುವ ವಾದವೂ ಇದೆ.
ಇದನ್ನು ಓದಿದ್ದೀರಾ? ಛಟ್ ಪೂಜೆ | ನೀರಿನಲ್ಲಿ ಮುಳುಗಿ 15 ಮಂದಿ ಸಾವು
ಪ್ರಧಾನಿ ಮೋದಿ ಫಿಲ್ಟರ್ ನೀರಿನಲ್ಲಿ ಮಿಂದೇಳಲಿರುವ ವಿಚಾರವು ಕಳೆದ ಭಾನುವಾರದಿಂದಲೇ ರಾಜಕೀಯ ಚರ್ಚೆಗೆ ಒಳಗಾಗುತ್ತಿದೆ. ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಏಕೆ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ. ಇನ್ನೊಂದೆಡೆ ದೆಹಲಿ ಮಾಜಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, “ಸಾಮಾನ್ಯ ಜನರನ್ನು ಕಲುಷಿತ ಯಮುನಾ ನದಿಯಲ್ಲಿ ಪೂಜೆ ಮಾಡಲು ಬಿಟ್ಟು ಪ್ರಧಾನಿಗೆ ಮಾತ್ರ ಫಿಲ್ಟರ್ ನೀರು ವ್ಯವಸ್ಥೆ ಮಾಡಿ ಬಿಜೆಪಿ ಪುಣ್ಯ ಛಟ್ ಪೂಜೆಯ ಅಪಹಾಸ್ಯ ಮಾಡಿದೆ” ಎಂದು ಹೇಳಿದ್ದಾರೆ. ತಮಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿರುವುದು ಬಹಿರಂಗವಾಗುತ್ತಿದ್ದಂತೆ ಮೋದಿ ಛಟ್ ಪೂಜೆಯನ್ನೇ ರದ್ದುಗೊಳಿಸಲಾಗಿದೆ ಎನ್ನಲಾಗುತ್ತಿದೆ.
Big Breaking
— Saurabh Bharadwaj (@Saurabh_MLAgk) October 28, 2025
PM Modi cancels his Chhath Puja & Surya Arghya at “Fake Yamuna” manufactured at Vasudev Ghat.
BJP leadership seems quite embarrassed that their CM @gupta_rekha Govt’s fraud on Pollution has been exposed widely on Social Media.
Imagine that Just a week before…
ಕಲುಷಿತ ಯಮುನಾ ನದಿ ರಾಜಕೀಯ
ಯಮುನಾ ನದಿ ಕಲುಷಿತಗೊಂಡು ಅದೆಷ್ಟೋ ವರ್ಷಗಳು ಕಳೆದಿವೆ. ದೆಹಲಿಯಲ್ಲಿ ಬಂದ ಸರ್ಕಾರಗಳೆಲ್ಲ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಸೇರಿಸುವ, ನೀಡುವ ಭರವಸೆಗಳಲ್ಲಿ ಯಮುನಾ ನದಿ ಸಂಸ್ಕರಣೆಯೂ ಒಂದು. ನಗರೀಕರಣ, ಕೈಗಾರೀಕರಣ ಮತ್ತು ಜನಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದಂತೆ ಯಮುನಾ ನದಿ ನೀರು ಕಲುಷಿತಗೊಂಡಿದೆ. 19ನೇ ಶತಮಾನದಲ್ಲಿ ನೀರು ತಿಳಿ ನೀಲಿ ಬಣ್ಣದಲ್ಲಿತ್ತು. ಆದರೆ ಬಳಿಕ ಮಾಲಿನ್ಯ ಹೆಚ್ಚಾದಂತೆ ನೀರಿನ ಬಣ್ಣವೂ ಬದಲಾಗಿದ್ದು, ನೀರು ಕಪ್ಪು-ಕೆಂಪಾಗಿದೆ. ದೆಹಲಿಯಲ್ಲಿದ್ದ ಈ ಹಿಂದಿನ ಎಎಪಿ ಸರ್ಕಾರ, ಪ್ರಸ್ತುತವಿರುವ ಬಿಜೆಪಿ ಸರ್ಕಾರ, ಕೇಂದ್ರ ಸರ್ಕಾರ ಯಮುನಾ ನದಿ ಶುದ್ಧೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಯಾವುದೂ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ, ನೀರೂ ಶುದ್ಧೀಕರಣಗೊಂಡಿಲ್ಲ.
1993ರಲ್ಲೇ ಯಮುನಾ ಕ್ರಿಯಾ ಯೋಜನೆ ಜಾರಿ ಮಾಡಿದ್ದರೆ, ಅದಾದ ಬಳಿಕ ನಮಾಮಿ ಗಂಗೆ ಯೋಜನೆಯನ್ನು 2014ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. 2021ರಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಎಎಪಿ ಸರ್ಕಾರ 6 ಅಂಶಗಳ ಕ್ರಿಯಾ ಯೋಜನೆ ಜಾರಿಗೊಳಿಸಿತು. ಅದಾದ ಬಳಿಕ 2025ರಲ್ಲಿ ರಚನೆಯಾದ ಬಿಜೆಪಿ ಸರ್ಕಾರ 45 ಅಂಶಗಳ ಕ್ರಿಯಾ ಯೋಜನೆಯನ್ನು ಘೋಷಿಸಿದೆ. ಕೇಂದ್ರ ಸರ್ಕಾರವೂ ₹1,816 ಕೋಟಿ ರೂಪಾಯಿ ಬಜೆಟ್ನ ಯೋಜನೆ ಜಾರಿಗೆ ಚಿಂತನೆ ನಡೆಸಿದೆ. ಇವೆಲ್ಲವುದರ ನಡುವೆ ಸಂಸ್ಕರಿಸದ ಕೊಳಚೆ ನೀರನ್ನು ಯಮುನಾ ನದಿಗೆ ಬಿಡುವುದನ್ನು ತಡೆಯಲು ಕ್ರಿಯಾ ಯೋಜನೆ ರೂಪಿಸುವಂತೆ ದೆಹಲಿ ಹೈಕೋರ್ಟ್ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಈ ನಡುವೆ ಕಸ ಮತ್ತು ಹೂಳನ್ನು ತೆಗೆಯುವ ಕಾರ್ಯವೂ ಪ್ರಾರಂಭವಾಗಿದೆ. ಆದರೆ ಇವು ಯಾವುದೂ ಸಫಲವಾಗಿಲ್ಲ. ದಿನ ಕಳೆದಂತೆ ದೆಹಲಿ ಗಾಳಿ ಗುಣಮಟ್ಟದಂತೆ ಯಮುನಾ ನದಿ ನೀರಿನ ಗುಣಮಟ್ಟವೂ ಕಳಪೆಯಾಗುತ್ತಿದೆ. ಇನ್ನು ಛಟ್ ಪೂಜೆ ಮೊದಲಾದವು ನಡೆದ ಬಳಿಕ ನದಿ ನೀರು ಇನ್ನಷ್ಟೂ ಕಲುಷಿತಗೊಳ್ಳುತ್ತಿದೆ.

ಮೋದಿ ರಾಜಕೀಯಕ್ಕೆ ಜನರ ಆರೋಗ್ಯ ಬಲಿಯೇ?
ಯಮುನಾ ನದಿ ಎಷ್ಟೊಂದು ಕಲುಷಿತಗೊಂಡಿದೆಯೆಂದರೆ ನೀರಿನ ಬದಲಾಗಿ ನೊರೆಯೇ ಕಾಣಸಿಗುತ್ತದೆ. ಅಷ್ಟಕ್ಕೂ ಯಮುನಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ಈ ಹಿಂದೆಯೇ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (DPCC) ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿಗಳು ಹೇಳಿದೆ. 2025ರ ಅಕ್ಟೋಬರ್ನಲ್ಲಿ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು ದೆಹಲಿಯಾದ್ಯಂತ ಯಮುನಾ ನದಿಯ ನೀರು ಸ್ನಾನಕ್ಕೆ ಅರ್ಹವಾಗಿಲ್ಲ ಎಂದು ಹೇಳಿದೆ. ಯಮುನಾ ನದಿ ನೀರು ಜನರಿಗೆ ಹಲವು ರೋಗ-ರುಜಿನಗಳಿಗೆ ಕಾರಣವಾಗಬಹುದು ಎಂಬ ನಿಟ್ಟಿನಲ್ಲಿ ಈ ಹಿಂದೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಯಮುನಾ ನದಿಯಲ್ಲಿ ಛಟ್ ಪೂಜೆಯನ್ನು ನಿರ್ಬಂಧಿಸಿತ್ತು. 2018ರಿಂದ 2024ರವರೆಗೆ ಯಮುನಾ ನದಿ ದಡದಲ್ಲಿ ಛಟ್ ಪೂಜೆಗೆ ಅವಕಾಶವಿರಲಿಲ್ಲ. ಆದರೂ ಅಲ್ಲಲ್ಲಿ ಭಕ್ತರು ನೀರಿಗಿಳಿದಿದ್ದೂ ಇದೆ. ಎಎಪಿ ಸರ್ಕಾರ ಭಕ್ತರಿಗೆ ಕೃತಕ ಘಾಟ್ಗಳನ್ನು ನಿರ್ಮಿಸಿ ಛಟ್ ಪೂಜೆಗೆ ಅವಕಾಶ ಮಾಡಿಕೊಟ್ಟಿತ್ತು.
ಇದನ್ನು ಓದಿದ್ದೀರಾ? ನಿವೃತ್ತಿ ಘೋಷಿಸಿದ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ
ಈ ನೀರು ಬಳಸಿದರೆ ಚರ್ಮದ ಕಾಯಿಲೆ, ಕಾಲರಾ, ಟೈಫಾಯಿಡ್, ಅತಿಸಾರ ಮತ್ತು ಇತರ ಕರುಳಿನ ಸೋಂಕುಗಳು ಉಂಟಾಗಬಹುದು. ಉಸಿರಾಟದ ಸಮಸ್ಯೆ ಉಂಟಾಗಬಹುದು, ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ಹಲವು ಬಾರಿ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಇಷ್ಟೆಲ್ಲ ಅಪಾಯಗಳು ಇರುವಾಗಲೂ 2025ರಲ್ಲಿ ಬಿಜೆಪಿ ಸರ್ಕಾರವು ಯಮುನಾ ಘಾಟ್ಗಳಲ್ಲಿ ಛಟ್ ಪೂಜೆಗೆ ಅವಕಾಶ ನೀಡಿದೆ. ಜನರ ಆರೋಗ್ಯದ ಬಗ್ಗೆ ಚಿಂತನೆ ನಡೆಸದೆ ಬರೀ ಓಲೈಕೆಗಾಗಿ ಛಟ್ ಪೂಜೆಗೆ ಅವಕಾಶ ನೀಡಿರುವುದನ್ನು ವಿಪಕ್ಷ ಎಎಪಿ ಖಂಡಿಸಿದೆ.
ಇವೆಲ್ಲವುದರ ನಡುವೆ ಸಾಮಾನ್ಯ ಜನರು ಕಲುಷಿತ ನೀರಿನಲ್ಲೇ ಮುಳಿಗೇಳುವಾಗ ಮೋದಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಥಳೀಯರು ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, “ಪ್ರಧಾನಿ ಮೋದಿ, ವಿಐಪಿಗಳಿಗಾಗಿ ನಮ್ಮ ತೆರಿಗೆ ಹಣದಿಂದಲೇ ಪ್ರತ್ಯೇಕವಾಗಿ ಕೃತಕ ಘಾಟ್ ನಿರ್ಮಿಸಲಾಗಿದೆ. ಆದರೆ ನಮಗೆ ಕಲುಷಿತಗೊಂಡ ಯಮುನಾ ನದಿಯಲ್ಲಿ ಛಟ್ ಪೂಜೆ ಮಾಡಲು ಹೇಳಲಾಗುತ್ತಿದೆ. ಅವರೂ ಮನುಷ್ಯರು, ನಾವೂ ಮನುಷ್ಯರು ತಾನೇ? ಇದು ತಾರತಮ್ಯವಲ್ಲವೇ” ಎಂದು ಪ್ರಶ್ನಿಸಿದ್ದಾರೆ. ವಾಸ್ತವದಲ್ಲಿ ಸರ್ಕಾರ ಜನ ಸಾಮಾನ್ಯರಿಗೆ ಯಾವುದೇ ಬೆಲೆಯೇ ನೀಡಲ್ಲ ಎಂಬಂತಾಗಿದೆ.
ಬಿಹಾರದಲ್ಲಿ ಛಟ್ ಪೂಜೆ ಬರೀ ಹಬ್ಬವಲ್ಲ ಇದಕ್ಕೆ ವಿಶೇಷವಾದ ಸಾಂಸ್ಕೃತಿಕ ಮಹತ್ವವೂ ಇದೆ. ಈ ಹಿಂದಿನಿಂದಲೂ ಧಾರ್ಮಿಕ ಆಚರಣೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಂಡು ಬರುತ್ತಿರುವ ಬಿಜೆಪಿ, ಪ್ರಧಾನಿ ಮೋದಿ ಇದೀಗ ಛಟ್ ಪೂಜೆಯನ್ನೂ ರಾಜಕೀಯಕ್ಕೆ ಎಳೆದುಕೊಂಡಿರುವುದು ಸ್ಪಷ್ಟ. 2014ರಿಂದ ಈವರೆಗೆ ಮೂರು ಬಾರಿ ಪ್ರಧಾನಿಯಾದ ನರೇಂದ್ರ ಮೋದಿ ಅವರು ಈವರೆಗೂ ಛಟ್ ಪೂಜೆಯಲ್ಲಿ ಭಾಗಿಯಾಗಿಲ್ಲ. ಆದರೆ ಈ ಬಾರಿ ಬಿಹಾರ ಚುನಾವಣೆ ಮೇಲೆ ಕಣ್ಣಿಟ್ಟು ಛಟ್ ಪೂಜೆಗೆ ಮಾಡಲು ಮುಂದಾಗಿದ್ದರು, ಅದೂ ‘ನಕಲಿ ಯಮುನಾ ಘಾಟ್, ಫಿಲ್ಟರ್ ನೀರು’ ಬಳಸಿ!
ಈ ಹಿಂದೆ ಕುಂಭಮೇಳ ನಡೆದಾಗ ಉತ್ತರ ಪ್ರದೇಶ ಸರ್ಕಾರವೂ ಇದೇ ರೀತಿಯಲ್ಲಿ ವಿಐಪಿ ವ್ಯವಸ್ಥೆಯನ್ನು ಮಾಡಿತ್ತು. ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ವಿಶೇಷ ನೌಕಾ ಸೇವೆಗಳ ಜೊತೆಗೆ ನಿರ್ದಿಷ್ಟ ಘಾಟ್ಗಳಲ್ಲಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿತ್ತು. ಇದೂ ತೀವ್ರ ಟೀಕೆಗೆ ಗುರಿಯಾಗಿತ್ತು. ಇದಕ್ಕೆ ಭಿನ್ನವಾಗಿ ಪ್ರಧಾನಿಯಾಗಿರುವ ಕಾರಣ ಭದ್ರತೆ ದೃಷ್ಟಿಯಿಂದ ಮೋದಿ ಅವರಿಗೆ ಯಮುನಾ ಘಾಟ್ನಲ್ಲೇ ಪ್ರತ್ಯೇಕ ಛಟ್ ಪೂಜೆಗೆ ಅವಕಾಶ ನೀಡಿದ್ದರೆ, ಅದನ್ನು ಟೀಕಿಸಲಾಗದು. ಆದರೆ ಜನರಿಗೆ ಕಲುಷಿತ ನೀರು, ಪ್ರಧಾನಿಗೆ ಫಿಲ್ಟರ್ ನೀರು ಎಷ್ಟು ಸರಿ? ‘ಈ ಹಿಂದೆ ಎಎಪಿ ಸರ್ಕಾರ ಛಟ್ ಪೂಜೆಗೆ ಅವಕಾಶ ನೀಡಿರಲಿಲ್ಲ, ಆದರೆ ನಮ್ಮ ಬಿಜೆಪಿ ಸರ್ಕಾರ ಯಮುನಾ ನದಿಯಲ್ಲೇ ಛಟ್ ಪೂಜೆಗೆ ಅವಕಾಶ ನೀಡುತ್ತಿದ್ದೇವೆ’ ಎಂದು ಸಾರುತ್ತಾ ತಮ್ಮ ರಾಜಕೀಯಕ್ಕಾಗಿ ಕಲುಷಿತ ನೀರಿನಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ಕೊಟ್ಟು ಜನರ ಆರೋಗ್ಯವನ್ನು ಬಲಿಕೊಡುವುದಲ್ಲವೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




