ಪೌಷ್ಟಿಕಾಂಶವೆಂದು ಮಕ್ಕಳಿಗೆ ನೀಡುತ್ತಿರೋ ಈ ಪುಷ್ಠಿಯನ್ನು ಮಕ್ಕಳು ತಿನ್ನಲು ಯೋಗ್ಯವಲ್ಲವೆಂದು ಅಂಗನವಾಡಿ ಶಿಕ್ಷಕಿಯರು ಹಾಗೂ ಅಂಗನವಾಡಿ ಸಹಾಯಕಿಯರಿಗೆ ಗೊತ್ತಿದೆ. ಆದರೆ, ಕೆಲಸಕ್ಕೆ ಕುತ್ತು ಬರುತ್ತದೆಂಬ ಅವರು ಬಾಯಿ ಬಿಡುತ್ತಿಲ್ಲ
ಕೇಂದ್ರದ 40% ಮತ್ತು ರಾಜ್ಯದ 60% ಅನುದಾನದಲ್ಲಿ ಜಾರಿಗೆ ಬಂದ ‘ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು’ (ICDS) ಎಂಬ ಮಕ್ಕಳ ಕಲ್ಯಾಣದ ಯೋಜನೆ ಹಲವು ವರ್ಷಗಳಿಂದ ರಾಜ್ಯದಲ್ಲಿ ಜಾರಿಯಲ್ಲಿದೆ. ಈ ಯೋಜನೆಯ ಮೂಲ ಆಶಯ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಿ ಆರೋಗ್ಯಪೂರ್ಣ ಸದೃಢ ಮಕ್ಕಳನ್ನಾಗಿಸುವುದು. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ಹಣದ ದಾಹಕ್ಕೆ ಇಡೀ ಯೋಜನೆಯೇ ಇಂದು ಭ್ರಷ್ಟಾಚಾರದ ಕೂಪವಾಗಿದೆ. ಅಧಿಕಾರಿಗಳು ಹಾಗು ಗುತ್ತಿಗೆದಾರರು ಮೇಯುವ ಹುಲ್ಲುಗಾವಲಾಗಿದೆ.
‘ಗೌರ್ವಮೆಂಟ್ ಆಫ್ ಇಂಡಿಯನ್ ನಾರ್ಮ್ಸ್’ ಪ್ರಕಾರ, ಅಂಗನವಾಡಿಗಳಿಗೆ ಸರಬರಾಜಾಗುವ ಆಹಾರದ ಗುಣಮಟ್ಟ ಮತ್ತು ಪೌಷ್ಟಿಕಾಂಶದ ಕುರಿತು ರಾಜ್ಯದಲ್ಲಿರೋ 132 ಎಂಎಸ್ಪಿಸಿಗಳಲ್ಲಿ ಪರಿಶೀಲನೆ ಮಾಡಿ ಮಕ್ಕಳಿಗೆ ಕೊಡಬೇಕು. ಅದೂ 3 ರಿಂದ 6 ವರ್ಷದ ಮಕ್ಕಳಿಗೆ ಬೇಯಿಸಿದ ಆಹಾರ ಕೊಡಬೇಕು. ಇನ್ನು ಅದಕ್ಕಿಂತ ಸಣ್ಣ ಮಕ್ಕಳಿಗೆ ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರ ಕೊಡಬೇಕು. ಆದರೆ, ಇದ್ಯಾವ ನಿಯಮಗಳು ಈ ಕಲ್ಯಾಣ ಇಲಾಖೆಯಲ್ಲಿ ನಿಜಕ್ಕೂ ಪಾಲಿಸುತ್ತಿಲ್ಲ. ಅದು ಕೇವಲ ಕಾಗದ ಹಾಗೂ ಲೆಕ್ಕ ಪತ್ರದಲ್ಲಿ ಮಾತ್ರ ನಮೂದಾಗುತ್ತಿದೆ.
ಇದಕ್ಕೆ, ಹಾಸನ ಹಾಗೂ ಬೀದರ್ ಜಿಲ್ಲೆಯಲ್ಲಿ ಕಸದ ತೊಟ್ಟಿಯಲ್ಲಿ ಸಿಕ್ಕ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿದ್ದ ‘ಪುಷ್ಟಿ’ ಎಂಬ ಪೌಡರ್ ಪ್ಯಾಕೆಟ್ಟುಗಳು ಸಾಕ್ಷ್ಯವಾಗಿ ಕಾಣುತ್ತಿವೆ. ಮುಖ್ಯ ವಿಚಾರವೆಂದರೆ, ಪೌಷ್ಟಿಕಾಂಶವೆಂದು ಮಕ್ಕಳಿಗೆ ನೀಡುತ್ತಿರೋ ಈ ಪುಷ್ಠಿಯನ್ನು ಮಕ್ಕಳು ತಿನ್ನಲು ಯೋಗ್ಯವಲ್ಲ ಅದೇನಿದ್ದರೂ ಕಸದತೊಟ್ಟಿ ಸೇರಬೇಕಾದ ಮುಗ್ಗಿಲಿಡಿದ ಆಹಾರವೆಂದು ಎಲ್ಲ ಅಂಗನವಾಡಿ ಶಿಕ್ಷಕಿಯರು ಹಾಗೂ ಅಂಗನವಾಡಿ ಸಹಾಯಕಿಯರಿಗೆ ಗೊತ್ತಿದೆ. ಆದರೆ, ಈ ಸತ್ಯವನ್ನು ಹೇಳಿದರೆ ಎಲ್ಲಿ ತಮ್ಮ ಕೆಲಸಕ್ಕೆ ಕುತ್ತು ಬರುತ್ತದೆಯೋ ಎಂಬ ಆತಂಕದಲ್ಲಿ ಬಾಯಿ ಅವರು ಮುಚ್ಚಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ-ಟ್ರಂಪ್ ವ್ಯಾಪಾರ ಒಪ್ಪಂದ: ರೈತರ ಬದುಕಿಗೆ ಕೊಡಲಿಯಾಗುವುದೇ?
ಇನ್ನು, ಈ ವಿಚಾರ ಕುರಿತು 2024-25ರಲ್ಲಿ ವರದಿ ನೀಡಿರುವ ಶಾಸಕ ಎ.ಆರ್ ಕೃಷ್ಣಮೂರ್ತಿ ನೇತೃತ್ವದ ಸದನ ಸಮಿತಿಯು “ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಸರಬರಾಜು ಆಗುತ್ತಿಲ್ಲ. ಈ ಹಿಂದೆ ಒಳ್ಳೆಯ ಆಹಾರ ಪೂರೈಕೆಯಾಗುತ್ತಿತ್ತು. ಆದರೆ, ಈಗ ಪೌಡರ್ ರೂಪದಲ್ಲಿ ಆಹಾರ ಪೂರೈಕೆಯಾಗುತ್ತಿದೆ. ಅದರಲ್ಲಿ, ಪೌಷ್ಟಿಕಾಂಶ ಇದೆಯೋ ಇಲ್ಲವೋ ಗೊತ್ತಿಲ್ಲ.. ಔಷಧಿ ರೂಪದಲ್ಲಿ ಆಹಾರ ಕೊಡುತ್ತಿದ್ದಾರೆ. ಗುಣಮಟ್ಟವಿಲ್ಲದ ಅಲ್ಪ ಪ್ರಮಾಣ ಆಹಾರ ಪೂರೈಸುತ್ತಿರೋದು ಕಂಡು ಬಂದಿದೆ. ಹಾಗಾಗಿ, ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿ ಮಾಲ್ಟ್ ಹಾಲು ಕೊಡಲು ಮತ್ತು ಮಕ್ಕಳು ಮಾನಸಿಕವಾಗಿ ಬೆಳೆಯುವುದಕ್ಕೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಿ ಮಕ್ಕಳ ಬೆಳವಣಿಗೆ ಕುಂಟಿತವಾಗದಂತೆ ನೋಡಿಕೊಳ್ಳಬೇಕು” ಎಂದು ಸೂಚಿಸಿದೆ.
ಸದನ ಸಮಿತಿಯ ವರದಿಗೆ ಕಳೆದ ವರ್ಷ ಪ್ರತಿಕ್ರಿಯಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು, “ಸದನ ಸಮಿತಿ ಸೂಚಿಸಿದ ಎಲ್ಲವನ್ನೂ ಜಾರಿಗೊಳಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಮಕ್ಕಳು ಅಪೌಷ್ಟಿಕತೆ ಮುಕ್ತವಾಗಿರುವಂತೆ ನೋಡಿಕೊಳ್ಳುತ್ತೇವೆ” ಎಂದು ಯೋಜನೆಯ ನಿರ್ವಹಣೆ ಮಾಡುತ್ತಿದ್ದ ಭ್ರಷ್ಟ ಅಧಿಕಾರಿಗಳು ಬರೆದುಕೊಟ್ಟ ಸಿದ್ದ ಉತ್ತರವನ್ನು ನೀಡಿ ಕೈತೊಳೆದುಕೊಂಡಿದ್ದರು.
ಆದರೆ, ಈಗ ಅದೇ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 4.79 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ಸತ್ಯ ಈಗ ಬಯಲಾಗಿದೆ. ಹಾಗಾದರೆ, ಈ ಇಲಾಖೆ ಕಳೆದ ವರ್ಷ ಸದನ ಸಮಿತಿಗೆ ನೀಡಿದ ಉತ್ತರ ಏನಾಯಿತು? ಸದನ ಸಮಿತಿಯ ಸಲಹೆಗಳು ಭ್ರಷ್ಟಾಚಾರದ ಮುಂದೆ ಕಳೆದುಹೋದವೇ..? ಟೈಲರಿಂಗ್ ತರಬೇತಿ ಕೇಂದ್ರಗಳನ್ನು ಇಂದು ಆಹಾರ ಸರಬರಾಜು ಮಾಡೋ ಬೇನಾಮಿ ಕಂಪನಿಗಳಾಗಿ ಮಾಡಿಕೊಂಡು ತಿಂಗಳಿಗೆ 70 ಕೋಟಿ ರೂ. ಹಣ ಲೂಟಿ ಮಾಡಲಾಗುತ್ತಿದೆ. ಅವರು ಸರಬರಾಜು ಮಾಡುವ ಕಳಪೆ ಆಹಾರದಿಂದ ಮಕ್ಕಳಿಗೆ ಏನು ಪ್ರಯೋಜನ..? ಸಮಗ್ಗ ಶಿಶು ಅಭಿವೃದ್ಧಿ ಸೇವೆ ಎಂಬ ಈ ಮಹತ್ವ ಪೂರ್ಣ ಯೋಜನೆಯನ್ನು ಹಳ್ಳ ಇಡಿಸಿದ್ದು ಯಾರು..? ಈ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ಮತ್ತು ಈ ಯೋಜನೆಯ ಮೂಲ ಆಶಯವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡವರ ಮುಖವಾಡ ಕಳಚಿ ಬೀಳಬೇಕಿದೆ. ಆಗ ಮಾತ್ರ ಇಂಥಾ ಒಳ್ಳೆಯ ಯೋಜನೆಗಳು ಸಾಕಾರವಾಗಲು ಸಾಧ್ಯ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನ ಹರಿಸಬೇಕು.




