ಇತ್ತೀಚೆಗೆ, ಕೋಲ್ಕತ್ತಾದಲ್ಲಿ ನಡೆದ ಹಿಂದುತ್ವ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿಯ ಭಾಷಣಕಾರರ ಹೇಳಿಕೆಗಳಿಗೆ ಬಂದ ಚಪ್ಪಾಳೆಗಳು ಕೋಲ್ಕತ್ತಾದಲ್ಲಿ ಹಿಂದುತ್ವದ ಬೇರುಗಳನ್ನು ಬಹಿರಂಗಗೊಳಿಸಿವೆ.
ಉದಾರವಾದಿ ಚಿಂತನೆ, ಜನಪರ ಕಾಳಜಿ ಹಾಗೂ ಜನರ ಧ್ವನಿಗೆ ಹೆಸರಾಗಿದ್ದ ಪಶ್ಚಿಮ ಬಂಗಾಳದ ರಾಜಕೀಯ ಈಗ ಕೋಮುವಾದಿ ಧೋರಣೆಗಳತ್ತ ವಾಲುತ್ತಿದೆ. ಚುನಾವಣೆ ಸನಿಹದಲ್ಲಿರುವ ರಾಜ್ಯದಲ್ಲಿ ಕೋಮುವಾದಿ ಭಾಷಣಗಳಿಗೆ ಜೈಕಾರಗಳು ಮೊಳಗುತ್ತಿವೆ. ಹಿಂದುತ್ವ ಬೇರೂರುತ್ತಿದೆ. ಜನರ ಆಲೋಚನೆಗಳನ್ನು ಸಂಕುಚಿತಗೊಳಿಸುತ್ತಿವೆ. ಇತ್ತೀಚೆಗೆ, ಕೋಲ್ಕತ್ತಾದಲ್ಲಿ ನಡೆದ ಹಿಂದುತ್ವ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿಯ ಭಾಷಣಕಾರರ ಹೇಳಿಕೆಗಳಿಗೆ ಬಂದ ಚಪ್ಪಾಳೆಗಳು ಕೋಲ್ಕತ್ತಾದಲ್ಲಿ ಹಿಂದುತ್ವದ ಬೇರುಗಳನ್ನು ಬಹಿರಂಗಗೊಳಿಸಿವೆ.
ಹೌದು, ಕೋಲ್ಕತ್ತಾ ಕ್ಲಬ್ನಲ್ಲಿ ‘ಕೋಲ್ಕತ್ತಾ ಡಿಬೇಟಿಂಗ್ ಸರ್ಕಲ್’ ಆಯೋಜಿಸಿದ್ದ ಚರ್ಚೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಸ್ವಪನ್ ದಾಸ್ಗುಪ್ತಾ, ಅಗ್ನಿಮಿತ್ರ ಪಾಲ್, ಜೆ. ಸಾಯಿ ದೀಪಕ್ ಹಾಗೂ ಸುಧಾಂಶು ತ್ರಿವೇದಿ ಭಾಗವಹಿಸಿದ್ದರು. ಅವರ ಭಾಷಣಗಳಿಗೆ ನೆರೆದಿದ್ದವರು ಜೋರು ಚಪ್ಪಾಳೆ, ಶಿಳ್ಳೆಗಳೊಂದಿಗೆ ಹರ್ಷೋದ್ಗಾರ ವ್ಯಕ್ತಪಡಿಸಿದರು. ‘ಹಿಂದೂ ಧರ್ಮಕ್ಕೆ ಹಿಂದುತ್ವದಿಂದ ರಕ್ಷಣೆ ಬೇಕು’ ಎಂಬ ನಿರ್ಣಯವನ್ನು ಎಲ್ಲರೂ ಸಮ್ಮತಿಸಿದರು. ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಅದನ್ನು ವಿರೋಧಿಸಿದರು. ಅವರಲ್ಲಿ, ಮಣಿಶಂಕರ್ ಅಯ್ಯರ್, ಮಹುವಾ ಮೊಯಿತ್ರಾ, ಅಶುತೋಷ್ ಮತ್ತು ರುಚಿಕಾ ಶರ್ಮಾ ಮೊದಲಿಗರು. ಆದರೆ, ಅವರ ವಿರೋಧದ ದನಿಗೆ ಹೆಚ್ಚು ಅವಕಾಶವೇ ಇರಲಿಲ್ಲ.

ಹಿಂದುತ್ವದ ನಿರ್ಣಯವನ್ನು ವಿರೋಧಿಸಿದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್, “ಹಿಂದು ಧರ್ಮವು ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಿಂದುತ್ವವು ಹಿಂದು ಧರ್ಮವನ್ನು ‘ವಿಕೃತ’ಗೊಳಿಸುತ್ತದೆ. ಸಾವರ್ಕರ್ ಅವರ ಹಿಂದುತ್ವವು ವಿವೇಕಾನಂದ ಮತ್ತು ಮಹಾತ್ಮ ಗಾಂಧಿಯವರ ಹಿಂದು ಧರ್ಮಕ್ಕೆ ವಿರುದ್ಧವಾಗಿದೆ. ಧರ್ಮವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಗೂಂಡಾಗಳು ಮತ್ತು ಕೊಲೆಗಾರರನ್ನು ಅವಲಂಬಿಸಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದರು.
“ಹಿಂದುತ್ವದ ಹೆಸರಿನಲ್ಲಿ ಚರ್ಚ್ಗಳ ಮೇಲೆ ದಾಳಿ ಮಾಡುವುದು, ಕ್ರಿಸ್ ಮಸ್ ವೇಳೆ ಅಲಂಕಾರಗಳನ್ನು ಧ್ವಂಸಗೊಳಿಸುವುದು, ಹಿಂದುತ್ವದ ಹೆಸರಿನಲ್ಲಿ ಮಸೀದಿಗಳನ್ನು ಕೆಡುವುದು ಹಾಗೂ ದಮನಕಾರಿಯಾಗಿ ಬುಲ್ಡೋಜರ್ಗಳನ್ನು ಬಳಸುವುದು ಧರ್ಮದ ರಕ್ಷಣೆಯಲ್ಲ” ಎಂದರು.
ಆದರೆ, ಅಯ್ಯರ್ ಅವರನ್ನು ‘ನೆಪಮಾತ್ರ ಹಿಂದು’ ಎಂದು ಕರೆದ ಬಿಜೆಪಿ ಮಾಜಿ ಸಂಸದ ಸ್ವಪನ್ ದಾಸ್ಗುಪ್ತಾ, “ಭಾರತವನ್ನು ಬಿರುಗಾಳಿಯಂತೆ ಸೆಳೆದಿರುವ ಹಿಂದುತ್ವ ಕಲ್ಪನೆಯ ಶಕ್ತಿಯು ಮುಂದಿನ ತಿಂಗಳುಗಳಲ್ಲಿ ಬಂಗಾಳವನ್ನೂ ಆವರಿಸಲಿದೆ. ಚಂದ್ರನಾಥ್ ಬಸು ಅವರು 1994ರಲ್ಲಿಯೇ ಹಿಂದುತ್ವವನ್ನು ಬಂಗಾಳದಲ್ಲಿ ಪ್ರಚಾರಕ್ಕೆ ತಂದಿದ್ದರು” ಎಂದರು. ಅವರ ಮಾತುಗಳಿಗೆ ಸಭಿಕರು ಭಾರೀ ಚಪ್ಪಾಳೆ ತಟ್ಟಿದರು.
“ಹಿಂದು ಧರ್ಮದ ಬಗ್ಗೆ ತಪ್ಪು ಊಹೆಗಳಿವೆ. ಧರ್ಮವು ಅದು ವಿವಿಧ ನಂಬಿಕೆಗಳ ಸಮ್ಮಿಲನವಾಗಿದೆ. ಹಿಂದು ಧರ್ಮದ ಶಾಕ್ತ ನಂಬಿಕೆಯು ‘ಕಟ್ಟುನಿಟ್ಟಾಗಿ ಮಾಂಸಾಹಾರಿ’ವನ್ನು ಪ್ರತಿಪಾದಿಸುತ್ತದೆ” ಎಂದು ಗುಪ್ತಾ ಹೇಳಿದರು. ಆದರೆ, ಈ ಚರ್ಚೆ ನಡೆಯುವ ಒಂದು ದಿನ ಮೊದಲು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಜಾಗದಲ್ಲಿ ನಿರ್ಮಿಸಲಾಗಿರುವ ರಾಮಮಂದಿರದ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಅಂದರೆ, ಬಿಜೆಪಿ ಮತ್ತು ಅದರ ಬೆಂಬಲಿಗರು ಭಾರತದ ಉಳಿದ ಭಾಗಗಳಲ್ಲಿ ಮಾಂಸಾಹಾರ ತಿನ್ನುವವರ ಮೇಲೆ ದಾಳಿ ಮಾಡುತ್ತದೆ. ನಿರ್ಬಂಧವನ್ನು ಹೇರುತ್ತದೆ. ಆದರೆ, ಬಂಗಾಳದಲ್ಲಿ ಮಾಂಸಾಹಾರದ ಬಗ್ಗೆ ಮುಕ್ತವಾಗಿ ಮಾತನಾಡುತ್ತದೆ.
“ಹಿಂದುಗಳ ಸಂಕಷ್ಟವನ್ನು ಜಾತ್ಯತೀತ ಮೌನದಿಂದ ಏಕೆ ಎದುರಿಸಲಾಗುತ್ತಿದೆ?” ಎಂದು ಬಿಜೆಪಿಯ ಅಗ್ನಿಮಿತ್ ಪಾಲ್ ಹೇಳಿದರು. ಅವರ ಮಾತಿಗೆ ಮತ್ತೊಮ್ಮೆ ಚಪ್ಪಾಳೆಯ ಹರ್ಷೋದ್ಗಾರ ವ್ಯಕ್ತವಾಯಿತು.
ಗುಪ್ತಾ ಅವರ ಮಾತುಗಳಿಗೆ ತಿರುಗೇಟು ನೀಡಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, “ಚಂದ್ರನಾಥ್ ಬಸು ಅವರು ಮಹಿಳೆಯರಲ್ಲಿ ಪರಿಶುದ್ಧತೆಯನ್ನು ಪ್ರತಿಪಾದಿಸಿದ್ದರು, ಮಹಿಳೆಯರ ಶಿಕ್ಷಣಕ್ಕೆ ವಿರುದ್ಧವಾಗಿದ್ದರು. ವಿಧವಾ ಪುನರ್ ವಿವಾಹವನ್ನು ವಿರೋಧಿಸಿದರು. ಈ ಬಸು ಅವರು ನಮಗೆ ಹಿಂದುತ್ವ ನೀಡಿದ ವ್ಯಕ್ತಿ, ನೀವು ಅವರ ಬಗ್ಗೆ ಹೆಮ್ಮೆಪಡುತ್ತೀರಿ” ಎಂದು ವ್ಯಂಗ್ಯವಾಡಿದರು. ಹಿಂದು ಧರ್ಮ ಮತ್ತು ಹಿಂದುತ್ವದ ನಡುವೆ ಒಂದು ರೇಖೆ ಇದೆ. ಅದೇ ‘ದ್ವೇಷ’ ಎಂದು ಪ್ರತಿಪಾದಿಸಿದರು.
ಈ ಒಂದು ಕಾರ್ಯಕ್ರಮವು ಬಂಗಾಳದಲ್ಲಿ ಹಿಂದುತ್ವವು ಜನರ ಮನಸ್ಸನ್ನು ಆವರಿಸುತ್ತಿರುವುದನ್ನು ಪ್ರತಿಪಾದಿಸುತ್ತದೆ.
ಈ ವರ್ಷದ ಮಾರ್ಚ್-ಏಪ್ರಿಲ್ನಲ್ಲಿ ಬಂಗಾಳ ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಹಿಂದುತ್ವದ ಮೇಲೆಯೇ ಚುನಾವಣೆ ಎದುರಿಸಲು ಮತ್ತು ಮತದಾರರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಹಿಂದುಗಳ ಮೇಲಿನ ಹಲ್ಲೆಗಳು ಬಂಗಾಳದಲ್ಲಿ ಹಿಂದುತ್ವ ಪ್ರತಿಪಾದಿಸಲು ಬಿಜೆಪಿಗೆ ಅಸ್ತ್ರವಾಗಿ ದೊರೆತಿದೆ.

ಇತ್ತೀಚಿಗೆ, ಬಿಜೆಪಿಯ ಚುನಾವಣಾ ಪ್ರಚಾರವನ್ನು ಉದ್ಘಾಟಿಸಿದ ಅಗ್ನಿಮಿತ್ರ ಪಾಲ್, “ಹಿಂದೂಗಳ ಮೇಲೆ ದಾಳಿ ನಡೆದಾಗ ಜಾತ್ಯತೀತ ಆಕ್ರೋಶ ಕಣ್ಮರೆಯಾಗುತ್ತದೆ. ನಮ್ಮ ಹಿಂದೂಗಳು ಬಾಂಗ್ಲಾದೇಶದಿಂದ ಪಲಾಯನ ಮಾಡಬೇಕಾಗಿದೆ. ಅದೇ ರೀತಿ ಬಂಗಾಳದಲ್ಲಿಯೂ ನಮ್ಮ ಸ್ವಂತ ಭೂಮಿಯಿಂದ ಹಿಂದೂಗಳು ಯಾಕೆ ಪಲಾಯನ ಮಾಡಬೇಕಾಗಿದೆ” ಎಂದು ಪ್ರಶ್ನಿಸಿದರು.
ಪಾಲ್ ಅವರ ಪ್ರತಿಪಾದನೆಗಳನ್ನು ಟೀಕಿಸಿರುವ ಪತ್ರಕರ್ತ ಅಶುತೋಷ್, “ಹಿಂದುತ್ವವು ಬಿಜೆಪಿಯ ರಾಜಕೀಯ ಸಾಧನವಷ್ಟೇ ಆಗಿದೆ. ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರಗಳು ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವನ್ನು ಪ್ರಚೋದಿಸುತ್ತಿವೆ. ಬಿಲ್ಕಿಸ್ ಬಾನೋ ಅವರ ಮೇಲೆ ಅತ್ಯಾಚಾರ ಎಸಗಿದ್ದ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ ನಂತರ ಬಿಜೆಪಿ ಅವರನ್ನು ಸನ್ಮಾನಿಸಿತು. ಬಿಜೆಪಿಯ ಹಿಂದುತ್ವವನ್ನು ಕ್ರೌರ್ಯ, ವಿಕೃತಿ, ದ್ವೇಷವನ್ನು ಬೆಳೆಸುತ್ತಿದೆ” ಎಂದು ಬಟಾಬಯಲು ಮಾಡಿದ್ದಾರೆ.
ಇನ್ನು, “ಈ ಬಾರಿಯ ವಿಧಾನಸಭಾ ಚುನಾವಣೆಯ ನಂತರ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಪಶ್ಚಿಮ ಬಂಗಾಳವನ್ನು ನುಸುಳುಕೋರರಿಂದ ಮುಕ್ತಗೊಳಿಸುವುದು ಬಿಜೆಪಿಯ ಮೊದಲ ಕೆಲಸ. ಇಷ್ಟು ಮಾತ್ರವಲ್ಲದೆ ಪ್ರಸ್ತುತ ರಾಜ್ಯದೊಳಗೆ ಉಳಿದುಕೊಂಡಿರುವ ಅಕ್ರಮ ನುಸುಳುಕೋರರನ್ನು ಓಡಿಸುವುದು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋಲ್ಕತ್ತಾದಲ್ಲಿ ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ವಿಶ್ವದ ಟಾಪ್ 100ರಲ್ಲಿ ಇಲ್ಲ ಭಾರತದ ವಿವಿಗಳು; IITಗೂ ಸ್ಥಾನವಿಲ್ಲ ಯಾಕೆ?
ಗಮನಾರ್ಹವಾಗಿ, ಇತ್ತೀಚೆಗೆ ಕೇಂದ್ರ ಸರ್ಕಾರವು ‘ವಂದೇ ಮಾತರಂ’ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಿತು. ಇದೂ ಕೂಡ ಬಂಗಾಳಿ ಜನರನ್ನು ಬಿಜೆಪಿಯತ್ತ ಸೆಳೆಯುವುದರ ಭಾಗವೇ ಆಗಿತ್ತು. ಜೊತೆಗೆ, ವಂದೇ ಮಾತರಂ ಬರೆದ ಬಂಕಿಮ್ ಚಂದ್ ಚಟರ್ಜಿ ಅವರು ತಮ್ಮ ಆನಂದಮಠ ಕೃತಿಯಲ್ಲಿ ಮುಸ್ಲಿಮರನ್ನು ಸ್ವಾತಂತ್ರ್ಯ ಹೋರಾಟದಿಂದ ದೂರವಿಡಬೇಕು. ಅವರ ಮೇಲೆ ಹಲ್ಲೆ ನಡೆಸಬೇಕೆಂದೇ ಪ್ರತಿಪಾದಿಸಿದ್ದರು. ಆನಂದಮಠ ಕೃತಿಯಿಂದ, ವಂದೇ ಮಾತರಂ ಕುರಿತು ಚರ್ಚೆಯಿಂದ ಹಿಡಿದು, ಇಂದಿನ ಬಾಂಗ್ಲಾದಲ್ಲಿನ ಘಟನೆಗಳವರೆಗೆ ಎಲ್ಲದರಲ್ಲಿಯೂ ಹಿಂದುತ್ವ ಮತ್ತು ಮುಸ್ಲಿಂ ದ್ವೇಷವನ್ನು ಬಿಜೆಪಿ ಹುಡುಕಿ, ಮುನ್ನೆಲೆಗೆ ತರುತ್ತಿದೆ. ಬಂಗಾಳ ಚುನಾವಣೆಯಲ್ಲಿ ಹಿಂದುತ್ವ ಮತ್ತು ಮುಸ್ಲಿಂ ದ್ವೇಷವನ್ನು ಚುನಾವಣಾ ಚರ್ಚೆಯ ವಸ್ತುವಾಗಿ ಮಾಡುವ ಪ್ರಯತ್ನದಲ್ಲಿದೆ.
ಆದರೆ, ಇದೇ ಬಿಜೆಪಿಯ ಮಾತೃ ಸಂಘಟನೆ ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ ಎಂಬ ಸತ್ಯವನ್ನು ಮರೆಮಾಚಲಾಗುತ್ತಿದೆ. ಆದಾಗ್ಯೂ, ಬಿಜೆಪಿಯ ಕೋಮುವಾದಿ ಮತ್ತು ದ್ವೇಷ ರಾಜಕಾರಣದ ವಿರುದ್ಧ ಮಮತಾ ಬ್ಯಾನರ್ಜಿ ಭುಜತಟ್ಟಿ ನಿಂತಿದ್ದಾರೆ. ಬಂಗಾಳದ ಸೌಹಾರ್ದತೆಯನ್ನು ಹಿಂದುತ್ವ ಒಡೆಯಲಾರದು ಎಂದು ಟಿಎಂಸಿ ಹೇಳುತ್ತಿದೆ. ಆದರೂ, ನಿರುದ್ಯೋಗ ಮತ್ತು ಬಡನತದ ವಿರುದ್ಧದ ಜನರ ಅಸಮಾಧಾನವು ಟಿಎಂಸಿ ವಿರುದ್ಧ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿದೆ ಎಂಬುದೂ ಕಾಣುತ್ತಿದೆ. ಈಗ ಟಿಎಂಸಿಗೆ ಒಂದೆಡೆ ಹಿಂದುತ್ವ, ಮತ್ತೊಂದೆಡೆ ಜನರ ಅಸಮಾಧಾನ ಎದುರಾಗಿ ನಿಂತಿವೆ. ಈ ಎರಡನ್ನೂ ನಿಭಾಯಿಸಿ ಮಮತಾ ಮತ್ತೆ ಅಧಿಕಾರ ಉಳಿಸಿಕೊಳ್ಳುವರೇ? ಬಿಜೆಪಿಗೆ ಹಿಂದುತ್ವ ನೆರವಾಗುವುದೇ? ಅಥವಾ ಟಿಎಂಸಿ ವಿರುದ್ಧದ ಆಡಳಿತ ವಿರೋಧಿ ಅಲೆ ಗೆಲುವು ತಂದುಕೊಡುವುದೇ? ಕಾದುನೋಡಬೇಕಷ್ಟೇ.




