ಬುಧವಾರದವರೆಗೂ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಲಘು ಮಳೆಯಾಗಬಹುದು. ಹೈದ್ರಾಬಾದ್ ಕರ್ನಾಟಕದಲ್ಲಿ ಸ್ವಲ್ಪ ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಭುಗಿಲೆದ್ದಿರುವ ‘ಮೊಂತಾ’ ಚಂಡಮಾರುತ ರಭಸದಿಂದ ಆಂಧ್ರಪ್ರದೇಶ, ಒರಿಸ್ಸಾ ಕರಾವಳಿ ಪ್ರದೇಶದತ್ತ ಧಾವಿಸುತ್ತಿದೆ. ಈ ಚಂಡಮಾರುತವು ತೀವ್ರಗೊಂಡು ಭಾರತದ ಪೂರ್ವ ಕರಾವಳಿಯನ್ನು ಅಪ್ಪಳಿಸಿದೆ. ಪರಿಣಾಮ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಅಕ್ಟೋಬರ್ 26 ರಂದು ಬೆಳಿಗ್ಗೆ 8:30 ಸೃಷ್ಟಿಯಾಗಿರುವ ಚಂಡಮಾರುತ ಪೋರ್ಟ್ ಬ್ಲೇರ್ನ ಪಶ್ಚಿಮಕ್ಕೆ ಸುಮಾರು 620 ಕಿ.ಮೀ., ಚೆನ್ನೈನ ಪೂರ್ವ-ಆಗ್ನೇಯಕ್ಕೆ 780 ಕಿ.ಮೀ., ಮತ್ತು ವಿಶಾಖಪಟ್ಟಣಂನ ದಕ್ಷಿಣ-ಆಗ್ನೇಯಕ್ಕೆ 830 ಕಿ.ಮೀ. ದೂರದಲ್ಲಿತ್ತು. ಇದು ಗಂಟೆಗೆ 6 ಕಿ.ಮೀ. ವೇಗದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಂಡಮಾರುತ ಚಲಿಸುತ್ತಿದೆ. ಈ ವ್ಯವಸ್ಥೆಯು ಸೋಮವಾರ (ಅಕ್ಟೋಬರ್ 27) ರ ವೇಳೆಗೆ ಚಂಡಮಾರುತವಾಗಿ ಮತ್ತು ಮಂಗಳವಾರ (ಅಕ್ಟೋಬರ್ 28) ರ ವೇಳೆಗೆ ಚಂಡಮಾರುತ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕದ ಪರಿಸ್ಥಿತಿ ಏನು?
ಮೊಂತಾ’ ಚಂಡಮಾರುತದಿಂದ ಕರ್ನಾಟಕದ ಪರಿಸ್ಥಿತಿ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವ ಮಾಹಿತಿ ಪಡೆಯಲು ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ, “ಚಂಡಮಾರುತದ ಕೇಂದ್ರಬಿಂದುವಿನಿಂದ ಕರ್ನಾಟಕ ದೂರವಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಗಡಿ ಭಾಗಗಳಿಗೆ ಹತ್ತಿರದಲ್ಲಿರುವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ” ಎಂದು ಸಿಬ್ಬಂದಿ ತಿಳಿಸಿದರು.
“ಬುಧವಾರದವರೆಗೂ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಲಘು ಮಳೆಯಾಗಬಹುದು. ಹೈದ್ರಾಬಾದ್ ಕರ್ನಾಟಕದಲ್ಲಿ ಸ್ವಲ್ಪ ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗಿದೆ. ಉದಾಹರಣೆಗೆ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ ಹೀಗೆ ಗಡಿಯಲ್ಲಿರುವ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ” ಎಂದು ಹೇಳಿದರು.
“ರೈತರ ಬಗ್ಗೆ ಏನಾದ್ರೂ ಎಚ್ಚರಿಕೆ ನೀಡುವೀರಾ ಎಂದು ಪ್ರಶ್ನಿಸಿದಾಗ, “ಬುಧವಾರ ಇಲ್ಲವೇ ಗುರುವಾರಕ್ಕೆ ಮೋಡಕವಿದ ವಾತಾವರಣ ಕ್ಲೀಯರ್ ಆಗಲಿದೆ. ಬೆಳೆ ಕಟಾವು ಮಾಡಿದ್ದರೆ ಮಳೆ ಹನಿ ಸ್ಪರ್ಶಿಸದಂತೆ ಸುರಕ್ಷಿತ ಕ್ರಮ ಕೈಗೊಳ್ಳಬೇಕು. ಗುರುವಾರದ ವರೆಗೂ ಬೆಳೆ ಕಟಾವು ಕಾರ್ಯಕ್ಕೆ ಮುಂದಾಗಬಾರದು. ಅಂತಹ ದೊಡ್ಡ ಹಾನಿ ನಿರೀಕ್ಷೆ ಏನಿಲ್ಲ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆ ಇರಲಿದೆ” ಎಂದು ಮಾಹಿತಿ ನೀಡಿದರು.

ಮೊಂತಾ ಎಂದು ಹೆಸರಿಟ್ಟಿರುವ ಈ ಚಂಡಮಾರುತಕ್ಕೆ ಥಾಯ್ ಭಾಷೆಯಲ್ಲಿ ‘ಪರಿಮಳಯುಕ್ತ ಅಥವಾ ಸುಂದರವಾದ ಹೂವು’ ಎಂಬರ್ಥವನ್ನು ನೀಡುತ್ತದೆ. ಈ ಚಂಡಮಾರುತವೂ ಗಂಟೆಗೆ 90 ರಿಂದ 110 ಕಿ.ಮೀ ವೇಗವನ್ನು ತಲುಪಬಹುದು ಎಂದು ಅಂದಾಜು ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ತಲೆ ಮೇಲೆ ಹೊತ್ತು ಮೆರೆಸಿದವರು ಈಗ ಪಲಾಯನ ಮಾಡುವುದು ತರವೇ?
ಒಡಿಶಾದಲ್ಲಿ ಜನರ ಸ್ಥಳಾಂತರ
ದಕ್ಷಿಣ ಒಡಿಶಾದ ಎಂಟು ಜಿಲ್ಲೆಗಳಲ್ಲಿ 128 ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಒಡಿಶಾದಲ್ಲಿ ‘ಮೊಂತಾ’ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. ಸಂಭವನೀಯ ಪ್ರಾಕೃತಿಕ ವಿಕೋಪವನ್ನು ಎದುರಿಸಲು ರಾಜ್ಯ ಸರ್ಕಾರವು ಸಿದ್ಧವಾಗಿದೆ ಎಂದು ವರದಿಯಾಗಿದೆ.
ಒಡಿಶಾದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಮಾಧ್ಯಮಗಳ ಜೊತೆ ಮಾತನಾಡಿದ್ದು, “ಇಂದು (ಸೋಮವಾರ) ಸಂಜೆಯೊಳಗೆ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು” ಎಂದಿದ್ದಾರೆ.





