ಧರ್ಮಸ್ಥಳ ಪ್ರಕರಣ: ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿದ್ದೇಕೆ ಧರ್ಮಾಧಿಕಾರಿಗಳು?

Date:

ಧರ್ಮಸ್ಥಳ ಊರಿನ ಮೇಲೆ ಬಂದಿರುವ ಆರೋಪವನ್ನ ವೀರೇಂದ್ರ ಹೆಗ್ಗಡೆ ಅವರು ಯಾಕೆ ಧರ್ಮಸ್ಥಳ ದೇಗುಲಕ್ಕೆ ಬಂದಿರುವ ಆರೋಪದಂತೆ ಭಾವಿಸುತ್ತಿದ್ದಾರೆ? 

ಧರ್ಮಸ್ಥಳದ ನಡೆದಾಡುವ ದೇವಮಾನವ ಎಂದು ಕರೆಸಿಕೊಳ್ಳುವ, ಧರ್ಮಸ್ಥಳದ ವಿರುದ್ಧ ಬಂದಿರುವ ಆರೋಪ ತಮ್ಮ ಮೇಲೆಯೇ ಬಂದಿರುವ ಆರೋಪವೆಂದು ಭಾವಿಸಿದ ವೀರೇಂದ್ರ ಹೆಗ್ಗಡೆ ಅವರು ಸುದ್ದಿ ಮಾಧ್ಯಮಗಳನ್ನು ಕರೆದು ಸುದ್ದಿಗೋಷ್ಠಿ ನಡೆಸಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ಎಸ್ಐಟಿ ತನಿಖೆ ಆರಂಭವಾದ ಬಳಿಕ ಸುದ್ದಿಗೋಷ್ಠಿಯೊಂದನ್ನು ನಡೆಸಿರುವುದು ಬಹುಶಃ ಇದೇ ಮೊದಲು. ”ಎಸ್‌ಐಟಿ ತನಿಖೆಯ ಅರ್ಧ ವರದಿ ಈಗಾಗಲೇ ಬಂದಿದೆ. ಎಸ್‌ಐಟಿ ರಚಿಸಿರುವುದಕ್ಕೆ ಸರಕಾರಕ್ಕೆ ಕೃತಜ್ಞನಾಗಿದ್ದೇನೆ. ಈ ತನಿಖೆಯಿಂದ ಕ್ಷೇತ್ರದ ಹೊಳಪು ಇನ್ನಷ್ಟು ಪ್ರಜ್ವಲಿಸಿದೆ” ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಮಾಧ್ಯಮಗಳೆದುರು ಹೇಳಿದ್ದಾರೆ. ಈ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಮೊದಲ ಬಾರಿಗೆ ಪತ್ರ ಬರೆದ ಚಿನ್ನಯ್ಯ “ನಾನು ಒತ್ತಡದ ಮೇಲೆ ನೂರಾರು ಶವಗಳನ್ನ ಹೂತು ಹಾಕಿದ್ದೇನೆ, ಈಗ ನನಗೆ ಪಾಪಪ್ರಜ್ಞೆ ಕಾಡುತ್ತಿದೆ, ಹಾಗಾಗಿ ನಾನು ಸತ್ಯ ಹೇಳುವುದಕ್ಕೆ ಮುಂದೆ ಬಂದಿದ್ದೇನೆ. ನಾನು ಅಕ್ರಮವಾಗಿ ಹೂತಿರುವ ಶವಗಳ ಜಾಗವನ್ನ ತೋರಿಸುವುದಕ್ಕೆ ಸಿದ್ದ” ಎಂದು ಹೇಳುವ ಮೂಲಕ ಧರ್ಮಸ್ಥಳ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಮತ್ತೆ ಮುನ್ನೆಲೆಗೆ ತಂದರು. ತಾನು ಶವ ಹೂತಿದ್ದೇನೆಂದು ಗುರುತು ಮಾಡಿದ್ದ 17 ಸ್ಪಾಟ್‌ಗಳ ಪೈಕಿ ಕೇವಲ 2 ಸ್ಪಾಟ್‌ನಲ್ಲಿ ಮಾತ್ರ ಅಸ್ಥಿಪಂಜರದ ಅವಶೇಷಗಳು ಸಿಕ್ಕವು. ನೂರಾರು ಶವ ಹೂತಿದ್ದೇನೆ ಎಂದು ಧೈರ್ಯದಿಂದ ಹೇಳಿದ್ದ ಚಿನ್ನಯ್ಯ ಯಾರದ್ದೋ ಒತ್ತಡ ಅಥವಾ ಆಮಿಷಕ್ಕೆ ಒಳಗಾಗಿ ಎಸ್‌ಐಟಿ ಅಧಿಕಾರಿಗಳಿಗೆ ತಾನು ಹೂತಿರುವ ಜಾಗವನ್ನ ತೋರಿಸಲಿಲ್ಲ ಎಂದು ಒಂದು ವರ್ಗ ಈಗಲೂ ಆರೋಪಿಸುತ್ತಿದೆ. ತನಿಖೆ ಇನ್ನೂ ದೂರ ಕ್ರಮಿಸಬೇಕಾಗಿದೆ. ಪ್ರಕರಣ ಸಂಬಂಧ ಇದುವರೆಗೂ ಎಸ್‌ಐಟಿಯ ಯಾವುದೇ ವರದಿ ಬಂದಿಲ್ಲ. ಹೀಗಿರುವಾಗ ವೀರೇಂದ್ರ ಹೆಗ್ಗಡೆ ಅವರು ಹೇಳುತ್ತಿರುವ ಅರ್ಧ ವರದಿ ಎಂದರೆ ಯಾವುದು? ಎಂದು ಸ್ಪಷ್ಟವಾಗುತ್ತಿಲ್ಲ. ಈ ಹಿಂದೆ ‘ಸತ್ಯ ಹೊರಗೆ ಬರುತ್ತಿದೆ’ ಎಂಬ ಮಾತನ್ನೂ ಹೇಳಿದ್ದರು. ಅಲ್ಲಿಯೂ ಅವರು ಯಾವ ಸತ್ಯದ ಕುರಿತು ಹೇಳಿಕೆ ನೀಡಿದ್ದರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಇದನ್ನು ಓದಿದ್ದೀರಾ? ಧರ್ಮಸ್ಥಳ ದೇವಸ್ಥಾನದ ಮಾಹಿತಿ ನೀಡಲು ವೀರೇಂದ್ರ ಹೆಗ್ಗಡೆ ನಿರಾಕರಣೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಂಗ್ಲೆಗುಡ್ಡದಲ್ಲಿ ಸೌಜನ್ಯ ಮಾವ ವಿಠಲ್‌ ಗೌಡ ಅವರೊಂದಿಗೆ ಸ್ಥಳ ಮಹಜರಿಗೆ ತೆರಳಿದ್ದ ಎಸ್ಐಟಿ ತಂಡಕ್ಕೆ 7 ತಲೆ ಬುರುಡೆ ಹಾಗೂ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಚಿನ್ನಯ್ಯ ತೋರಿಸಿದ 2 ಸ್ಪಾಟ್‌ಗಳಲ್ಲೂ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಆ ಸತ್ಯವನ್ನ ವೀರೇಂದ್ರ ಹೆಗ್ಗಡೆ ಅವರು ಒಪ್ಪಿಕೊಳ್ಳುವರೇ? ಒಪ್ಪಿಕೊಂಡಿರುವುದಕ್ಕೇ ಅಂದು ಸತ್ಯ ಹೊರಬರುತ್ತಿದೆ ಎಂದು ಹೇಳಿಕೆ ನೀಡಿದ್ದರೇ? ಕೆಲವು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಸುಪ್ರೀಂ ಕೋರ್ಟ್‌ ತೀರ್ಪನ್ನೇ ತಿರುಚಿ ಸುದ್ದಿ ಮಾಡಿರುವುದನ್ನೇ ಇವರು ಸತ್ಯ ಎಂದು ಹೇಳುತ್ತಿದ್ದಾರಾ? ಇವರ ಪ್ರಕಾರ ಇದೇ ಪರಮ ಸತ್ಯವೇ? ಎಂಬ ಪ್ರಶ್ನೆಗಳಿವೆ ಅವರೇ ಉತ್ತರಿಸಬೇಕು.

”ಧರ್ಮಸ್ಥಳ ದೇಗುಲ ಬೇರೆ ಅಲ್ಲ, ಧರ್ಮಸ್ಥಳ ಗ್ರಾಮ ಬೇರೆ ಅಲ್ಲ” ಎಂದೂ ಹೆಗ್ಗಡೆಯವರು ಹೇಳಿದ್ದರು. ಈ ಮಾತನ್ನ ಸಾಮಾನ್ಯ ಜನರು ಭಕ್ತಿ ಭಾವದ ಹೊರತಾದ ಮಗ್ಗುಲಲ್ಲಿ ಯೋಚನೆ ಮಾಡಬೇಕಿದೆ. ಧರ್ಮಸ್ಥಳದಲ್ಲಿ ಅಕ್ರಮವಾಗಿ ನೂರಾರು ಶವಗಳನ್ನ ಹೂತು ಹಾಕಿದ್ದೇನೆ ಎಂದು ಹೇಳಿರುವ ಚಿನ್ನಯ್ಯನಾಗಲೀ, ಈಗಾಗಲೇ ಚಿನ್ನಯ್ಯನಿಗೆ ತಲೆಬುರುಡೆ ತಂದು ಕೊಟ್ಟು ಮಹಜರಿನ ವೇಳೆ 7 ತಲೆ ಬುರುಡೆ ತೋರಿಸಿರುವ ಸೌಜನ್ಯ ಮಾವ ವಿಠಲ್‌ ಗೌಡ ಆಗಲೀ, ಸೌಜನ್ಯ ಪರ ಹೋರಾಟಗಾರರಾಗಲೀ ಯಾರೂ ಧರ್ಮಸ್ಥಳ ದೇವಸ್ಥಾನದ ಮೇಲೆ ಯಾವುದೇ ಆರೋಪ ಮಾಡಿಲ್ಲ. ಧರ್ಮಸ್ಥಳ ರಕ್ಷಕ ಎಂದು ಕರೆಸಿಕೊಂಡಿರುವ ಮಂಜುನಾಥ ಸ್ವಾಮಿಯ ಮೇಲೂ ಯಾವುದೇ ಆರೋಪ ಮಾಡಿಲ್ಲ. ಆರೋಪ ಬಂದಿರುವುದು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅನ್ಯಾಯ, ಅತ್ಯಾಚಾರ, ಕೊಲೆಗಳ ವಿರುದ್ಧ. ಧರ್ಮಸ್ಥಳ ಊರಿನ ಮೇಲೆ ಬಂದಿರುವ ಆರೋಪವನ್ನ ವೀರೇಂದ್ರ ಹೆಗ್ಗಡೆ ಅವರು ಯಾಕೆ ಧರ್ಮಸ್ಥಳ ದೇಗುಲಕ್ಕೆ ಬಂದಿರುವ ಆರೋಪದಂತೆ ಭಾವಿಸುತ್ತಿದ್ದಾರೆ? ಧರ್ಮಸ್ಥಳ ದೇಗುಲಕ್ಕೆ ಕಳಂಕ ತರಲಾಗುತ್ತಿದೆ ಎಂದು ಬಿಂಬಿಸಿ, ಜನರ ಭಾವನೆಯನ್ನ ಕೆರಳಿಸಿ ಜನರು ರೊಚ್ಚಿಗೆದ್ದರೆ ಎಸ್‌ಐಟಿ ತನಿಖೆಯನ್ನ ನಿಲ್ಲಿಸಬಹುದು ಅನ್ನುವ ಉದ್ದೇಶದಿಂದಲೇ? ಎನ್ನುವ ಅನುಮಾನ ಅವರ ಹೇಳಿಕೆಗಳಿಂದಲೇ ಭಾಸವಾಗುತ್ತಿದೆ.

ಮುಂದುವರೆದು, “ನಾವು ಯಾರಿಗೂ ಯಾವುದೇ ನೋವು ಮಾಡಿಲ್ಲ. ಯಾವ ತಪ್ಪು ಮಾಡದಿದ್ದರೂ ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ. ನಮ್ಮ ಮೇಲೆ ಅವರಿಗೆ ಇರುವ ದ್ವೇಷವಾದರೂ ಏನು ಎಂಬುದು ಮಾತ್ರ ಗೊತ್ತಾಗಿಲ್ಲ” ಎಂದು ಹೇಳಿದ್ದಾರೆ. ಅಸಲಿಗೆ ಈ ಪ್ರಕರಣದಲ್ಲಿ ಯಾವೊಬ್ಬ ವ್ಯಕ್ತಿಯೂ ವೀರೇಂದ್ರ ಹೆಗ್ಗಡೆ ಅವರ ಬಗ್ಗೆಯಾಗಲೀ, ಧರ್ಮಸ್ಥಳ-ಮಂಜುನಾಥನ ಕುರಿತಾಗಲೀ ದ್ವೇಷ ಕಾರುತ್ತಿಲ್ಲ. ಬದಲಿಗೆ ರಾಜ್ಯದ ಜನ ಕೇಳುತ್ತಿರುವುದು ಒಂದೇ- ಅದು ನ್ಯಾಯ ಮತ್ತು ಸತ್ಯ ಮಾತ್ರ. ಅದನ್ನ ಧರ್ಮಾಧಿಕಾರಿಗಳು ದ್ವೇಷ ಎಂದು ಭಾವಿಸುವುದಾದರೂ ಯಾಕೆ?

ಈಗಾಗಲೇ ಸೌಜನ್ಯ, ಪದ್ಮಲತಾ, ವೇದವಲ್ಲಿ, ಯುಮನಾ ಹಾಗೂ ನಾರಾಯಣ್‌ ಅವರನ್ನ ಅನ್ಯಾಯವಾಗಿ ಕೊಲೆ ಮಾಡಲಾಗಿದೆ. ಬಂಗ್ಲೆಗುಡ್ಡದಲ್ಲಿ ವಿಠಲ್‌ ಗೌಡ ತೋರಿಸಿದ ಜಾಗದಲ್ಲಿ 7 ತಲೆಬುರುಡೆ ಹಾಗೂ ಅಸ್ಥಿಪಂಜರ ಹಾಗೂ ಚಿನ್ಯಯ್ಯ ತೋರಿಸಿದ ಜಾಗದ ಪೈಕಿ 2 ಸ್ಪಾಟ್‌ಗಳಲ್ಲಿ ಸಿಕ್ಕ ಅಸ್ಥಿಪಂಜರಗಳ ಕುರಿತು ತನಿಖೆಯಾಗಬೇಕಿದೆ. ಅದನ್ನ ಹೂತವರು ಯಾರು? ಯಾಕೆ ಹೂತಿದ್ದರು? ಕೊಲೆ ಮಾಡಿ ಅಕ್ರಮವಾಗಿ ಹೂಳಲಾಗಿತ್ತಾ? ಕೊಲೆಯೇ ಆದಲ್ಲಿ ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆಗಳಿಗೆ ಉತ್ತರ ಬೇಕು ಎನ್ನುವುದು ಈ ನಾಡಿನ ಪ್ರತಿಯೊಬ್ಬರ ಆಶಯ.

ಎಸ್‌ಐಟಿ ತನಿಖೆ ನಡೀತಾ ಇದೆ, ಸತ್ಯ ಹೊರಗೆ ಬರತ್ತೆ ಅನ್ಯಾಯ ಆದವರಿಗೆ ನ್ಯಾಯ ಸಿಗತ್ತೆ. ಹೆಗ್ಗಡೆ ಹಾಗೂ ಅವರ ಕುಟುಂಬದ ಮೇಲಿರುವ ಆಪಾದನೆಗಳು ಸುಳ್ಳೆಂದು ಸಾಬೀತಾಗುವುದೇ ತಾನೆ ಅವರಿಗೂ ಬೇಕಾಗಿರುವುದು. ಅದಕ್ಕಾಗಿ ಅವರು ತನಿಖೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ, ಸಹಕರಿಸಬೇಕು. ಆದರೆ, ಅವರು ನ್ಯಾಯ ಕೇಳುವುದನ್ನೇ ದ್ವೇಷ ಎಂದು ಹೇಳುತ್ತಿದ್ದಾರೆ. ಸತ್ಯ ನ್ಯಾಯಗಳಿಗೆ ಆಗ್ರಹಿಸುವುದು ದ್ವೇಷ ಹೇಗಾಗತ್ತದೆ ಎಂದು ಅವರನ್ನು ಅವರೇ ಒಮ್ಮೆ ಕೇಳಿಕೊಳ್ಳಲಿ.

ಸೌಜನ್ಯ ಪ್ರಕರಣದಲ್ಲಿ ಅಪರಾಧಿಗಳು ಇನ್ನೂ ಸಿಕ್ಕಿಲ್ಲ, ಆನೆ ಮಾವುತ ನಾರಾಯಣನನ್ನ ಕೊಂದವರೂ ಸಿಕ್ಕಿಲ್ಲ. ವೇದವಲ್ಲಿ, ಪದ್ಮಲತಾರ ಕೊಲೆ ಪ್ರಕರಣಗಳಲ್ಲೂ ಅಪರಾಧಿಗಳು ಸಿಕ್ಕಿಲ್ಲ. ಅಪರಾಧಿಗಳನ್ನು ಪತ್ತೆಹಚ್ಚಲಾಗದೆ ಪೊಲೀಸರೇ ತನಿಖೆಯನ್ನು ದಿಕ್ಕಿ ತಪ್ಪಿಸಿದ್ದರು. ಈ ಎಲ್ಲಾ ಪ್ರಕರಣಗಳಲ್ಲಿ ನ್ಯಾಯ ಕೊಡಿಸುವುದು ಧರ್ಮಾಧಿಕಾರಿಗಳಾದವರ ಕರ್ತವ್ಯವಲ್ಲವೇ ಎನ್ನುವುದು ಸಾಮಾನ್ಯ ಜನರ ನ್ಯಾಯಬದ್ಧ ಪ್ರಶ್ನೆ.

ತುಮಕೂರಿನ ಸಿದ್ದಗಂಗಾ ಮಠದ ಬಗ್ಗೆಯೂ ಮಾತನಾಡಿರುವ ವೀರೇಂದ್ರ ಹೆಗ್ಗಡೆಯವರು, ‘ಸಿದ್ಧಗಂಗಾ ಮಠದ ಸ್ವಾಮಿಯವರ ಕೃತಿಯನ್ನು ಓದುತ್ತಿದ್ದೆ’ ಎಂದೂ ಹೇಳಿದ್ದಾರೆ. ಇಲ್ಲಿ ವೀರೇಂದ್ರ ಹೆಗ್ಗಡೆ ಅವರು ತಮ್ಮನ್ನು ತಾವು ಸಿದ್ದಗಂಗಾ ಮಠದ ಸ್ವಾಮೀಜಿಗಳಿಗೆ ಹೋಲಿಕೆ ಮಾಡಿಕೊಂಡು ಮಾತನಾಡಿದಂತೆ ಭಾಸವಾಗತ್ತದೆ. ಸಿದ್ದಗಂಗಾ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಇದೆ. ಆದರೆ ವೀರೇಂದ್ರ ಹೆಗ್ಗಡೆ ಅವರ ಯಾವ ಶಿಕ್ಷಣ ಸಂಸ್ಥೆ ಬಡವರಿಗೆ ಉಚಿತ ಮತ್ತು ವಸತಿ ಶಿಕ್ಷಣವನ್ನ ನೀಡಿದೆ? ವೀರೇಂದ್ರ ಹೆಗ್ಗಡೆ ಅವರ ಎಲ್ಲಾ ಶಿಕ್ಷಣ ಸಂಸ್ಥೆಗಳು ಖಾಸಗಿ ಸಂಸ್ಥೆಗಳ ರೀತಿಯಲ್ಲಿ ಲಕ್ಷ ಲಕ್ಷ ದುಡ್ಡನ್ನ ಪೀಕುವ ಸಂಸ್ಥೆಗಳಿಗಿಂತ ಹೊರತಾಗಿಲ್ಲ.

ನಾನು ‘ನಿಮಿತ್ತ’ ಮಾತ್ರ ಎಂದು ಹೆಗ್ಗಡೆಯವರು ಹೇಳಿಕೊಂಡಿದ್ದಾರೆ. ಈ ನಿಮಿತ್ತ ಅನ್ನೋ ಪದಕ್ಕೆ ಬಹಳ ದೊಡ್ಡ ಅರ್ಥ ಇದೆ. ನಿಜವಾಗಿಯೂ ನೀವು ನಿಮಿತ್ತ ಆಗಿದ್ದೇ ಆದಲ್ಲಿ ಸಾವಿರಾರು ಕೋಟಿ ಆಸ್ತಿ ಯಾಕೆ? ಮೈಕ್ರೋಫೈನಾನ್ಸ್‌ ಯಾಕೆ? ಗ್ರಾಮೀಣಾಭಿವೃದ್ಧಿ ಸಂಘಗಳ ಹೆಸರಿನಲ್ಲಿ ಬಡ್ಡಿ ಕಟ್ಟಿ ಎಂದು ಮಹಿಳೆಯರಿಗೆ ಕಿರುಕುಳ ಕೊಡುವುದಾದರೂ ಯಾಕೆ? ಹಣ ಕಟ್ಟಲಾಗದೇ ಹೆಣ್ಮಕ್ಕಳು ಊರು ಬಿಟ್ಟರು, ಜೀವ ಬಿಟ್ಟರು, ಅದಕ್ಕೆಲ್ಲಾ ಹೊಣೆ ಯಾರು? ‘ನಿಮಿತ್ತ’ ಮಾತ್ರ ಇರೋರಿಗೆ ಶಿಕ್ಷಣ ಸಂಸ್ಥೆಗಳು ಯಾಕೆ ಬೇಕು? ದೇವಸ್ಥಾನದ ಹೆಸರು ಮತ್ತು ವಿಳಾಸ, ದೇವಾಲಯದ ಮೂಲ ಮತ್ತು ಇತಿಹಾಸ, ದೇವಸ್ಥಾನದ ಭೂಮಿ, ಕಟ್ಟಡ, ಠೇವಣಿಗಳ ಮತ್ತು ಚಿನ್ನಾಭರಣಾದಿ ಸಕಲ ಚರ ಸೊತ್ತುಗಳ ವಿವರ, ವಾರ್ಷಿಕ ಆದಾಯ ಮತ್ತು ಖರ್ಚಿನ ಆಡಿಟ್ ಆದ ಲೆಕ್ಕಪತ್ರದ ಪ್ರತಿಸಹಿತ ಮಾಹಿತಿಯನ್ನು ನೀಡಲು ಈ ಹಿಂದೆ ನಿರಾಕರಿಸಿದ್ದವರು ‘ನಿಮಿತ್ತ’ ಎಂದು ಹೇಳಿಕೊಳ್ಳುವುದು ಎಷ್ಟು ಸಮಂಜಸ?

ಇಡೀ ಗೋಷ್ಠಿಯಲ್ಲಿ ವೀರೇಂದ್ರ ಹೆಗ್ಗಡೆ ಅವರ ಬಾಯಲ್ಲಿ ಒಮ್ಮೆಯೂ ಅನ್ಯಾಯ ಆದವರಿಗೆ ನ್ಯಾಯ ಸಿಗಲಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ, ಅಕ್ರಮವಾಗಿ ಶವಗಳನ್ನ ಹೂತಿರುವವರು ಜೈಲು ಪಾಲಾಗಲಿ ಎಂದು ಬಂದಿಲ್ಲ. ಆ ನೆಲದಲ್ಲಿ ಆದ ಅಮಾಯಕ ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆಗಳಿಗೆ ತಾರ್ಕಿಕ ಅಂತ್ಯ ಸಿಗಲಿ ಎಂದು ಹೇಳಿಲ್ಲ. ಅಪರಾಧಿಗಳು ಕಾನೂನು ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳುವುದು ಧರ್ಮಸಮ್ಮತವಲ್ಲ. ಹಾಗಾಗಿ, ಧರ್ಮಾಧಿಕಾರಿ ಹೆಸರಲ್ಲಿ ಪೀಠ ಅಲಂಕರಿಸುವವರು ಈ ನ್ಯಾಯಯುದ್ಧದಲ್ಲಿ ಪಾಲ್ಗೊಂಡು ನ್ಯಾಯಕ್ಕಾಗಿ ಹೋರಾಡುತ್ತಿರುವವರ ಧ್ವನಿಯಾಗಬೇಕಿದೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...