ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಹುಂಡೈ ಐ20 ಕಾರಿನಲ್ಲಿ ಸಂಭವಿಸಿದ ಸ್ಪೋಟ ದೇಶವನ್ನೇ ಬೆಚ್ಚಿಬೀಳಿಸಿದೆ. 12 ಜೀವಗಳನ್ನು ಬಲಿಪಡೆದಿರುವ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಡೆಸುತ್ತಿದೆ. ಪ್ರಕರಣದ ತನಿಖೆ ತೀವ್ರಗೊಂಡಿದೆ. ಈ ಸ್ಫೋಟವನ್ನು “ಭಯೋತ್ಪಾದಕ ದಾಳಿ” ಎಂದು ಕೇಂದ್ರ ಸರ್ಕಾರ ಹೇಳಿದ್ದು, ತನಿಖಾ ಸಂಸ್ಥೆಗಳು ವೃತ್ತಿಪರತೆಯಿಂದ ಅತ್ಯಂತ ತುರ್ತಾಗಿ ಈ ಪ್ರಕರಣವನ್ನು ನಿಭಾಯಿಸಿ ಅಪರಾಧಿಗಳನ್ನು ವಿಳಂಬವಿಲ್ಲದೆ ಬಂಧಿಸುವಂತೆ ನಿರ್ದೇಶಿಸಿದೆ.
ಪ್ರಾಥಮಿಕ ಹಂತದ ತನಿಖೆಯಲ್ಲಿ, “ಶಂಕಿತರು ಸ್ಫೋಟಕಗಳನ್ನು ಸ್ಥಳಾಂತರಿಸಲು ಅಥವಾ ವಿಲೇವಾರಿ ಮಾಡಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿರಬಹುದು” ಎಂದು ಹೇಳಲಾಗಿದೆ. ಯುಎಪಿಎ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಬೆನ್ನತ್ತಿದ್ದಾರೆ.
ದೆಹಲಿಯ ನಾನಾ ಕಡೆ ಹಾಗೂ ಫರೀದಾಬಾದ್ನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳ ಮುಂದೆ ಆಘಾತಕಾರಿ ವಿಚಾರವೊಂದು ಹೊರಬಿದ್ದಿದ್ದು, ಆತಂಕ ಹುಟ್ಟಿಸಿದೆ. ‘ವೈಟ್ ಕಾಲರ್ ಭಯೋತ್ಪಾದನೆ’ ಸಕ್ರಿಯವಾಗಿರುವುದನ್ನು ತನಿಖಾಧಿಕಾರಿಗಳು ದೇಶದ ಜನರ ಮುಂದಿಟ್ಟಿದ್ದಾರೆ.
ಹೌದು, ದೆಹಲಿಯ ಕೆಂಪು ಕೋಟೆ ಸಮೀಪ ಸಂಭವಿಸಿದ ಸ್ಪೋಟ ಮತ್ತು ಹರಿಯಾಣದ ಫರೀದಾಬಾದ್ನ ಎರಡು ಬಾಡಿಗೆ ಮನೆಯಲ್ಲಿ ಪತ್ತೆಯಾದ 360 ಕೆ.ಜಿ ಅಮೋನಿಯಂ ನೈಟ್ರೇಟ್ ಸೇರಿದಂತೆ 2,900ಕೆಜಿ ಬಾಂಬ್ ತಯಾರಿಕೆ ಸಾಮಾಗ್ರಿಗಳಿಗೆ ಹೋಲಿಕೆ ಇದೆ. ಇದು ವಿಧಿವಿಜ್ಞಾನ ಪರೀಕ್ಷೆಯಲ್ಲಿ ತಿಳಿದುಬಂದಿದ್ದು, ಎರಡೂ ಘಟನೆಗಳಿಗೆ ನೇರ ಸಂಬಂಧವಿರುವುದನ್ನು ಸೂಚಿಸುತ್ತದೆ.

ಇನ್ನು ತನಿಖೆಯ ವೇಳೆ ಲಭಿಸಿದ ಮಾಹಿತಿಯನ್ನು ಕಂಡು ತನಿಖಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಈ ಸಂಚಿನಲ್ಲಿ ಭಾಗಿಯಾಗಿದ್ದ ಮೂವರು ಕಾಶ್ಮೀರಿ ವೈದ್ಯರು. ಈ ಶಂಕಿತರ ಮನೆಯಲ್ಲಿಯೇ ಸ್ಪೋಟಕಗಳು ಸಿಕ್ಕಿವೆ.
ಹೌದು, ದಕ್ಷಿಣ ಕಾಶ್ಮೀರದ ಪುಲ್ವಾಮಾದ ವೈದ್ಯ ಡಾ. ಉಮರ್ ನಬಿ (34) ಎಂಬಾತ ಕಾರು ಸ್ಫೋಟದ ಪ್ರಮುಖ ಶಂಕಿತ ವ್ಯಕ್ತಿ ಎಂದು ಹೇಳಲಾಗಿದೆ. ಫರೀದಾಬಾದ್ನಲ್ಲಿ ಪತ್ತೆಯಾದ ಭಯೋತ್ಪಾದಕರ ಜಾಲದೊಂದಿಗೆ ಸಂಪರ್ಕ ಹೊಂದಿದ್ದನು. ಭಯೋತ್ಪಾದನಾ ಜಾಲದ ಭಾಗವಾಗಿದ್ದನೆಂದು ಶಂಕಿಸಲಾಗಿದೆ. ಜತೆಗೆ, ಜೈಶ್-ಎ-ಮೊಹಮ್ಮದ್ ಜತೆಗೆ ನಂಟು ಹೊಂದಿದ್ದನು ಎಂದು ತನಿಖಾಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ, ಆತನ ಕುಟುಂಬ ಸದಸ್ಯರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಘಟನಾ ಸ್ಥಳದಿಂದ ಸಂಗ್ರಹಿಸಲಾದ ಮಾದರಿಗಳ ಡಿಎನ್ಎ ಪರೀಕ್ಷೆಯಲ್ಲಿ ಸ್ಫೋಟಗೊಂಡ ಕಾರನ್ನು ಡಾ.ಉಮರ್ ನಬಿ ಚಲಾಯಿಸುತ್ತಿದ್ದ ಎಂಬುದು ದೃಢಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಉಮರ್ನ ತಾಯಿಯ ಡಿಎನ್ಎ ಮಾದರಿಗಳನ್ನು ಮಂಗಳವಾರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸ್ಫೋಟದ ಸ್ಥಳದಿಂದ ಸಂಗ್ರಹಿಸಲಾದ ಅವಶೇಷಗಳ ಡಿಎನ್ಎ ಜೊತೆಗೆ ಅವುಗಳನ್ನು ವಿಶ್ಲೇಷಿಸಲಾಗಿದ್ದು, ಇದು ಆತನದ್ದೇ ಡಿಎನ್ಎ ಎಂಬುದು ಸ್ಪಷ್ಟವಾಗಿದೆ ಎಂದು ಮೂಲಗಳು ಹೇಳಿವೆ. ಕಾರು ಚಲಾಯಿಸುತ್ತಿದ್ದ ಉಮರ್ ನಬಿಯ ಡಿಎನ್ಎ ಮಾದರಿ ಆತನ ತಾಯಿ ಮತ್ತು ಸಹೋದರನ ಮಾದರಿಯೊಂದಿಗೆ ಶೇ.100ರಷ್ಟು ಹೊಂದಾಣಿಕೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಯೋತ್ಪಾದನಾ ಚಟುವಟಿಕೆಯ ಸಂಚಿನ ಭಾಗವಾಗಿದ್ದ ಸಹ ವೈದ್ಯರನ್ನು ಬಂಧಿಸಿದ ನಂತರ ಉಮರ್ ಆತಂಕ ಹಾಗೂ ಭಯದಿಂದ ಈ ದುಷ್ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಉಮರ್ ಜತೆಗೆ ಸಂಬಂಧ ಹೊಂದಿದ್ದ ಇನ್ನಿಬ್ಬರು ವೈದ್ಯರಾದ ಅದೀಲ್ ಅಹ್ಮದ್ ರಾಥೆರ್ ಮತ್ತು ಮುಜಮ್ಮಿಲ್ ಶಕೀಲ್ ಅವರನ್ನು ಕ್ರಮವಾಗಿ ಉತ್ತರ ಪ್ರದೇಶದ ಸಹರಾನ್ಪುರ ಮತ್ತು ಹರಿಯಾಣದ ಫರೀದಾಬಾದ್ನಲ್ಲಿ ಬಂಧಿಸಲಾಗಿದೆ.
ಇನ್ನು ಹರಿಯಾಣದ ಫರಿದಾಬಾದ್ನಿಂದ ಡಾ. ಶಾಹೀನ್ ಶಾಹಿದ್ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಶಾಹೀನ್, ಜೈಶ್ ಎ ಮೊಹಮ್ಮದ್ನ ಮಹಿಳಾ ವಿಭಾಗವಾದ ‘ಜಮಾತ್ ಉಲ್ ಮೊಮಿನೀನ್’ನ ಭಾರತದ ಮುಖ್ಯಸ್ಥೆಯಾಗಿದ್ದರು ಎಂದು ಹೇಳಲಾಗಿದೆ.
ಡಾಕ್ಟರ್ ಪದವಿಯನ್ನು ಪಡೆದ ಸುಶಿಕ್ಷಿತರೇ ಇತಂಹ ಘೋರ ಕೃತ್ಯಗಳಲ್ಲಿ ಭಾಗಿಯಾಗಿರುವುದು ʼವೈಟ್ ಕಾಲರ್ ಭಯೋತ್ಪಾದನೆಯ ಮಾದರಿʼ ಎಂದು ತನಿಖಾಧಿಕಾರಿಗಳು ವರ್ಗೀಕರಿಸಿದ್ದಾರೆ. ಪಾಕಿಸ್ತಾನ ಬೆಂಬಲಿತ ಜಾಲವೊಂದು ಶಿಕ್ಷಿತ ವೃತ್ತಿಪರರನ್ನು ಬಳಸಿಕೊಂಡು ಭಾರತದ ನಗರಗಳಲ್ಲಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಭಯೋತ್ಪಾದಕತೆಯಲ್ಲಿ ವಿದ್ಯಾವಂತರ ಪಾತ್ರ ಹೊಸದೇನಲ್ಲ. ಈ ಹಿಂದೆಯೂ ಕೂಡ ಇಂತಹ ಘೋರ ಕೃತ್ಯಗಳಲ್ಲಿ ಎಂಜಿನಿಯರ್ಗಳು, ಪ್ರಾಧ್ಯಾಪಕರು ಭಾಗಿಯಾದ ಘಟನೆಗಳಿವೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣದ ಆರೋಪಿಗಳಾಗಿರುವ ಅಬ್ದುಲ್ ಮತೀನ್ ಅಹ್ಮದ್ ತಾಹಾ ಹಾಗೂ ಮಸ್ಸಾವೀರ್ ಹುಸೇನ್ ಶಾಜಿಬ್ ವಿದ್ಯಾವಂತರು. ಈ ಇಬ್ಬರ ಪೈಕಿ ಮಾಝ್ ಮುನೀರ್ ಪದವೀಧರ ಹಾಗೂ ಅಬ್ದುಲ್ ಮತೀನ್ ಐಇಡಿ ಬಾಂಬ್ ತಯಾರಿಸುವುದರಲ್ಲಿ ನಿಪುಣನಾಗಿದ್ದ.
ಈ ಸುದ್ದಿ ಓದಿದ್ದೀರಾ? ಜೈಲಿನಲ್ಲಿ ಕೈದಿಗಳ ‘ವಿಲಾಸಿ ಜೀವನ’: ಶಿಕ್ಷೆ ಯಾರಿಗೆ?
ಇನ್ನು ದೇಶಾದ್ಯಂತ ನಡೆದ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಆರೋಪಿ ಯಾಸೀನ್ ಭಟ್ಕಳ್ ಎಂಜಿನಿಯರ್ ಪದವೀಧರ.
2010ರಲ್ಲಿ ನಡೆದ ಪುಣೆ ಜರ್ಮನ್ ಬೇಕರಿ ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಯಾಸಿರ್ ಗುಫ್ರಾನ್ ಮೊಹಮ್ಮದ್ ತರೀಕ್ ಇಬ್ಬರೂ ಇಂಜಿನಿಯರಿಂಗ್ ಓದಿದವರು.
ಶಿಕ್ಷಣದ ಕೊರತೆ, ಬಡತನ ಹಾಗೂ ಆರ್ಥಿಕ ಮುಗ್ಗಟ್ಟಿನಿಂದಾಗಿ ಜನ ಇಂತಹ ಉಗ್ರಗಾಮಿ ಸಂಘಟನೆಗಳ ಆಮಿಷಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ, ಬಡತನ ಅಥವಾ ಕಡಿಮೆ ಶಿಕ್ಷಣವಷ್ಟೆ ಭಯೋತ್ಪಾದಕತೆಗೆ ಕಾರಣವಲ್ಲ, ಬದಲಿಗೆ ವಿದ್ಯಾವಂತರು ಕೂಡ ಇಂತಹ ಭಯೋತ್ಪಾದಕ ಕೃತ್ಯಗಳಲ್ಲಿ ಆಗಾಗ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಅನೇಕ ಯುವಕರು ಧರ್ಮದ ಪೊಳ್ಳು ಸಿದ್ಧಾಂತಕ್ಕೆ ಬಲಿಯಾಗಿ ತಮ್ಮ ಜೀವವನ್ನು ಒತ್ತೆಯಿಟ್ಟಾದರೂ ಇಂತಹ ಘೋರ ದುರಂತಗಳಿಗೆ ಕಾರಣರಾಗುತ್ತಿದ್ದಾರೆ. ಆದರೆ, ಧಾರ್ಮಿಕ ಮೂಲಭೂತವಾದ ಮತ್ತು ರಾಜಕೀಯ ಹೀಗೆ ನಾನಾ ಕಾರಣಗಳಿಂದ ಭಯೋತ್ಪಾದಕ ಕೃತ್ಯ ನಡೆದಾಗ ಬಲಿಯಾಗುವುದು ಅಮಾಯಕ ಜೀವಗಳು.
ತನ್ನ ಕಾರ್ಯತಂತ್ರವನ್ನು ಬದಲಾಯಿಸಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಸುಶಿಕ್ಷಿತ ವೃತ್ತಿಪರರನ್ನು ಬಳಸಿಕೊಂಡು ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಸಾಂಪ್ರದಾಯಿಕ ವಿಧಾನದ ಬದಲಾಗಿ ಕಪಟತನದಿಂದ ಕೂಡಿದ ಭಯೋತ್ಪಾದನಾ ಮಾದರಿಯನ್ನು ಅನುಸರಿಸುತ್ತಿದೆ. ಉಗ್ರ ಕೃತ್ಯಗಳಿಗೆ ಶಿಕ್ಷಿತರನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆ.

ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಸ್ಪೋಟದಲ್ಲಿ ಮೃತಪಟ್ಟವರ ಪೈಕಿ ಯುವಕರು, ಟ್ಯಾಕ್ಸಿ ಚಾಲಕರು, ಕಂಡಕ್ಟರ್ಗಳು ಸೇರಿದ್ದಾರೆ. ಕುಟುಂಬಕ್ಕೆ ಜೀವನಾಧಾರ ಆಗಿದ್ದವರನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ದೇಶದ ರಾಜಧಾನಿ ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಅಷ್ಟೊಂದು ಪ್ರಮಾಣದ ಸ್ಪೋಟಕ ಕಾರಿನಲ್ಲಿ ಸಾಗಿಸುವುದು ಸಾಧ್ಯವಾಗಿದೆ ಎಂದರೆ ಭದ್ರತಾ ವೈಫಲ್ಯ ಎಂದು ಹೇಳಲೇಬೇಕಾಗಿದೆ. ಇದು ಗೃಹ ಇಲಾಖೆಯ ವೈಫಲ್ಯವಲ್ಲದೇ ಮತ್ತೇನೂ ಅಲ್ಲ.




