ರಾಜಕೀಯ ನಾಯಕರು, ಹಾಗೆಯೇ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರು ತನಿಖೆ ಮತ್ತು ಬಂಧನಗಳನ್ನು ಎದುರಿಸಿದ ಬಳಿಕ ನ್ಯಾಯಾಲಯಗಳಲ್ಲಿ ಖುಲಾಸೆಯಾಗಿರುವುದು ಗಮನಾರ್ಹ ಬೆಳವಣಿಗೆ. ಆರೋಪಗಳು ನಿಜವಾಗಿರಲಿ ಅಥವಾ ರಾಜಕೀಯ ಪ್ರೇರಿತವಾಗಿರಲಿ — ಅಂತಿಮ ಸತ್ಯವನ್ನು ನಿರ್ಧರಿಸುವುದು ನ್ಯಾಯಾಲಯಗಳೇ. ಆದರೆ, ಪದೇಪದೇ ಸಾಕ್ಷಿಗಳ ಕೊರತೆಯಿಂದ ಪ್ರಕರಣಗಳು ಕುಸಿಯುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಳಿಕ, ಮೋದಿ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಎನ್ಐಎಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳು ಪದೇ-ಪದೇ ಕೇಳಿಬರುತ್ತಲೇ ಇವೆ. ಇದೀಗ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಪ್ರಕರಣದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಕೇಜ್ರಿವಾಲ್, ಮನೀಶ್ ಸಿಸೋಡಿಯಾ ವಿರುದ್ಧ ಬಿಜೆಪಿ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂಬಿಟ್ಟು ಸುಳ್ಳು ಆಪಾದನೆ ಮಾಡಿ, ಜೈಲಿಗಟ್ಟಿತ್ತು ಎನ್ನುವುದು ಸ್ಪಷ್ಟವಾಗಿದೆ. ಮೋದಿ ಸರ್ಕಾರ ಎಎಪಿ ನಾಯಕರ ವಿರುದ್ಧ ಮಾತ್ರವಲ್ಲ, ತಮ್ಮ ವಿರೋಧಿಗಳನ್ನು ಹಣಿಯಲು ಸುಳ್ಳು ಆರೋಪಗಳನ್ನು ಮಾಡಿ, ತನಿಖಾ ಸಂಸ್ಥೆಗಳನ್ನು ಛೂಬಿಟ್ಟು, ಬಂಧಿಸಿ ಕಿರುಕುಳ ನೀಡಿರುವ ಮತ್ತು ಯುಎಪಿಎಯಂತಹ ಕಠಿಣ ಕಾನೂನುಗಳನ್ನು ಹೇರಿ ದೌರ್ಜನ್ಯ ಎಸಗಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.
ದೆಹಲಿ ಅಬಕಾರಿ ನೀತಿ ರಚನೆಯಲ್ಲಿ ನಡೆದಿದೆ ಎಂದು ಆರೋಪಿಸಿ ಮೋದಿ ಸರ್ಕಾರವು ತಾವೇ ನೇಮಿಸಿದ್ದ ದೆಹಲಿ ಲೆಫ್ಟಿನೆಂಟ್ ಗೌವರ್ನರ್ ವಿನೈ ಕುಮಾರ್ ಸಕ್ಸೇನಾ ಮೂಲಕ ಸಿಬಿಐಗೆ ದೂರು ನೀಡಿತ್ತು. ಈ ಬೆನ್ನಲ್ಲೇ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ 23 ಮಂದಿ ವಿರುದ್ಧ ಸಿಬಿಐ ಮತ್ತು ಇಡಿ ಎರಡೂ ತನಿಖಾ ಸಂಸ್ಥೆಗಳು ಪ್ರಕರಣ ದಾಖಲಿಸಿದ್ದವು. ಕೇಜ್ರಿವಾಲ್ ಅವರ ಬಲಗೈ ಬಂಟ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ತನಿಖಾ ಸಂಸ್ಥೆಗಳು ಬಂಧಿಸಿದವು. ಬರೋಬ್ಬರಿ 2 ವರ್ಷಗಳ ಕಾಲ ಅವರನ್ನು ಯಾವುದೇ ವಿಚಾರಣೆ ಇಲ್ಲದೆ ಜೈಲಿನಲ್ಲಿಟ್ಟವು. ಬಳಿಕ, 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಕೇಜ್ರಿವಾಲ್ ಮತ್ತು ಮಾಜಿ ಬಿಆರ್ಎಸ್ ನಾಯಕಿ ಕೆ.ಕವಿತಾ ಅವರನ್ನೂ ಇಡಿ-ಸಿಬಿಐ ಬಂಧಿಸಿದವು. ಹಲವಾರು ತಿಂಗಳುಗಳ ಹಗ್ಗ-ಜಗ್ಗಾಟದ ಬಳಿಕ ಬಂಧಿತರೆಲ್ಲರೂ ಜಾಮೀನು ಪಡೆದು ಹೊರಬಂದರು. ಇದೀಗ, ಪ್ರಕರಣದಲ್ಲಿ ತೀರ್ಪು ನೀಡಿರುವ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂದುವರೆಸಲು ಸರಿಯಾದ ಯಾವುದು ಸಾಕ್ಷಿಗಳಿಲ್ಲ ಎಂದು ಹೇಳಿದೆ. ಕೇಜ್ರಿವಾಲ್ ಸೇರಿದಂತೆ ಎಲ್ಲ 23 ಮಂದಿಯನ್ನು ಖುಲಾಸೆಗೊಳಿಸಿದೆ. ಇಷ್ಟು ಮಾತ್ರವಲ್ಲದೆ, ಬಿಜೆಪಿಯ ಹುನ್ನಾರವನ್ನು ಬಯಲುಗೊಳಿಸಿದೆ.
ಅದೇ ರೀತಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2024ರ ಜನವರಿಯಲ್ಲಿ ಇಡಿ ಬಂಧಿಸಿತ್ತು. ಸೊರೇನ್ ಅವರು ಸುಮಾರು 5 ತಿಂಗಳ ಕಾಲ ಜೈಲಿನಲ್ಲಿದ್ದರು. ಬಳಿಕ, ಅವರಿಗೆ 2024ರ ಜೂನ್ನಲ್ಲಿ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿತು. ಜೊತೆಗೆ, ಇಡಿ ಸಮನ್ಸ್ ಅನ್ನು ಧಿಕ್ಕರಿಸಿದ್ದಕ್ಕಾಗಿ ದಾಖಲಿಸಲಾಗಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್ 2026ರ ಜನವರಿಯಲ್ಲಿ ರದ್ದುಗೊಳಿಸಿದೆ. ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣ ಇನ್ನೂ ಮುಂದುವರೆದಿದೆ. ಆದರೂ, ಸೊರೇನ್ ವಿರುದ್ಧದ ಆರೋಪಗಳನ್ನು ಸಾಬೀತು ಮಾಡಲು ಯಾವುದೇ ಪುರಾವೆಗಳಿಲ್ಲ. ಅದೊಂದು ಸುಳ್ಳು ಪ್ರಕರಣವೆಂದು ಸೊರೇನ್ ಅವರ ಜೆಎಂಎಂ ಪಕ್ಷ ಹೇಳಿದೆ.

ಹಾಗೇಯೇ, ಕರ್ನಾಟಕದ ಹಾಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2019ರ ಸೆಪ್ಟೆಂಬರ್ನಲ್ಲಿ ಇಡಿ ಬಂಧಿಸಿತ್ತು. ಸುಮಾರು 50 ದಿನಗಳ ಕಾಲ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಬಳಿಕ, ಅವರಿಗೆ ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆ ಮಾಡಿತು. ಆ ನಂತರ, 2024ರ ಮಾರ್ಚ್ನಲ್ಲಿ ಡಿಕೆಶಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಯಾವುದೇ ಸಾಕ್ಷ್ಯ ಅಥವಾ ಆಧಾರಗಳನ್ನು ಒದಗಿಸಿಲ್ಲವೆಂದು ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.
ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ಸೆಳೆಯುವ ಭಾಗವಾಗಿಯೇ ಅವರ ವಿರುದ್ಧ ಇಡಿ ಪ್ರಕರಣ ದಾಖಲಿಸಿತ್ತು ಎಂಬ ಆರೋಪವನ್ನು ಕಾಂಗ್ರೆಸ್ ನಿರಂತರವಾಗಿ ಮಾಡಿದೆ.
ಬಿಜೆಪಿಯ ಕೇಂದ್ರ ತನಿಖಾ ಸಂಸ್ಥೆಗಳ ದಾಳಿ ಮತ್ತು ಕಿರುಕುಳಕ್ಕೆ ಕೇವಲ ರಾಜಕೀಯ ನಾಯಕರು ಮಾತ್ರವೇ ತುತ್ತಾಗಿಲ್ಲ. ಪ್ರಮುಖ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರೂ ಗುರಿಯಾಗಿದ್ದಾರೆ.
ಅಂತಹವರಲ್ಲಿ, ಎನ್ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ದಂಪತಿಗಳೂ ಒಬ್ಬರು. ಈ ದಂಪತಿಗಳ ವಿರುದ್ಧ ICICI ಬ್ಯಾಂಕ್ಗೆ ₹48 ಕೋಟಿ ನಷ್ಟ ಉಂಟುಮಾಡಿದ ಆರೋಪದಡಿ 2017ರಲ್ಲಿ CBI ದಾಳಿ ನಡೆಸಿತು. ED ಕೂಡ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತು. ಈ ದಾಳಿಯನ್ನು ‘ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ’ಯೆಂದು ಕರೆಯಲಾಯಿತು. ಆದಾಗ್ಯೂ, ಪ್ರಕರಣ ದಾಖಲಿಸಿದ್ದ ಸಿಬಿಐ ಸ್ವತಃ 2024ರ ಅಕ್ಟೋಬರ್ನಲ್ಲಿ ರಾಯ್ ದಂಪತಿಗಳ ವಿರುದ್ಧದ ಪ್ರಕರಣದ ಸಾಬೀತಿಗೆ ಸಾಕಷ್ಟು ಪುರಾವೆಗಳಿಲ್ಲ, ಕಾನೂನಿನ ಉಲ್ಲಂಘನೆ ಕಂಡುಬಂದಿಲ್ಲವೆಂದು ಮುಕ್ತಾಯ ವರದಿ ಸಲ್ಲಿಸಿತು. ಇದೇ ವರ್ಷದ ಜನವರಿಯಲ್ಲಿ, ದೆಹಲಿ ನ್ಯಾಯಾಲಯವು ರಾಯ್ ದಂಪತಿಗಳ ವಿರುದ್ಧದ ಪ್ರಕರಣವನ್ನು ರದ್ದುಗೊಳಿದೆ.
ಈ ಸುದ್ದಿ ಓದಿದ್ದೀರಾ? ಭೂ ಪರಿಹಾರಕ್ಕೆ ಬದಲಿಯಾಗಿ ನೀಡುವ ʼಟಿಡಿಆರ್ʼಗಳು ಆನ್ಲೈನ್ ಮಾರಾಟಕ್ಕೆ! ಏನಿದು ಟಿಡಿಆರ್?
ಅಂತೆಯೇ, ನ್ಯೂಸ್ ಕ್ಲಿಕ್ – ನ್ಯೂಸ್ ಪೋರ್ಟಲ್ ಮತ್ತು ಅದರ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರು ತಮ್ಮ ಸಂಸ್ಥೆಗೆ ಚೀನಾದಿಂದ ಹಣಕಾಸು ಪಡೆದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ 2023ರಲ್ಲಿ ಯುಎಪಿಎ ಆರೋಪದಡಿ ಎನ್ಐಎ ಬಂಧಿಸಿತ್ತು. ಅವರ ಬಂಧನವನ್ನು ಅಕ್ರಮವೆಂದು ಕರೆದ ಸುಪ್ರೀಂಕೋರ್ಟ್, 2024ರಲ್ಲಿ ಜಾಮೀನು ನೀಡಿತು. ಅದೇ ರೀತಿ, ಇದೇ ಆರೋಪದ ಮೇಲೆ ನ್ಯೂಸ್ ಕ್ಲಿಕ್ ಪತ್ರಕರ್ತ ಗೌತಮ್ ನವಲಖಾ ಅವರನ್ನೂ 2020ರಲ್ಲಿ ಬಂಧಿಸಲಾಗಿತ್ತು. 2024ರಲ್ಲಿ ಅವರಿಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿತು.
ಇನ್ನು, ಆಸಿಫ್ ಸುಲ್ತಾನ್, ಸಿದ್ದೀಕ್ ಕಪ್ಪನ್ ಸೇರಿದಂತೆ ಹಲವಾರು ಪತ್ರಕರ್ತರು ಬಿಜೆಪಿಯ ಕೈಗೊಂಬೆಗಳಾದ ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿಗೆ ತುತ್ತಾಗಿದ್ದಾರೆ. ಜೈಲುವಾಸ ಅನುಭವಿಸಿ, ಜಾಮೀನು ಪಡೆದು ಹೊರಬಂದಿದ್ದಾರೆ.
ಸಾಮಾಜಿಕ ಕಾರ್ಯಕರ್ತರನ್ನೂ ಬಿಜೆಪಿ ಸರ್ಕಾರ ಗುರಿಯಾಗಿಸಿಕೊಂಡು ಕಿರುಕುಳ ನೀಡಿದೆ. ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ದಂಗೆ ಸಂಬಂಧಿತ ಬಂಧಿಸಲಾಗಿತ್ತು. ಅವರು 2023ರಲ್ಲಿ ಜಾಮೀನು ಪಡೆದು ಹೊರಬಂದರು. ಇನ್ನು, 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಗಲಭೆಗೆ ಸಂಚು ಹೂಡಿದ್ದಾರೆಂದು ಆರೋಪಿಸಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರನ್ನು ಯುಎಪಿಎ ಅಡಿಯಲ್ಲಿ ಅದೇ ವರ್ಷ ಬಂಧಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಸರಿಯಾದ ವಿಚಾರಣೆ ನಡೆಯದೆ, ಜಾಮೀನೂ ಸಿಗದೆ ಈ ಇಬ್ಬರೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ಇಷ್ಟೇ ಅಲ್ಲ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನ ಬಂಧಿಸಲು ಇನ್ನಿಲ್ಲದ ಕಸರತ್ತು ನಡೆಸಿದರೂ ಫಲ ಸಿಕ್ಕಿಲ್ಲ. ಹೌದು, ನ್ಯಾಷನಲ್ ಹೆರಾಲ್ಡ್ ಕೇಸ್ ಕುರಿತು ಇಡಿ ತನಿಖೆ ನಡೆಸಿದ್ದು, ಹಲವು ಬಾರಿ ಸಮನ್ಸ್ ನೀಡಿ ಗುಮ್ಮ ಬಂತು ಗುಮ್ಮ ಅಂತ ಆಗಾಗ ಇಡಿ ವಿಚಾರಣೆಗೆ ಕರೆಯೋದು, ಪ್ರಕರಣದಲ್ಲಿ ಹುರುಳಿಲ್ಲ ಎಂಬುದು ಗೊತ್ತಿದ್ದರೂ ಅವರ ಇಮೇಜ್ ಹಾಳು ಮಾಡಲು ಇಡಿ ದುರುಪಯೋಗ ಮಾಡಲಾಗುತ್ತಿದೆ.

2023ರಲ್ಲಿ ಗುಜರಾತ್ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ್ದ ಹಿನ್ನೆಲೆ ರಾಹುಲ್ ಗಾಂಧಿಯ ಸದಸ್ಯತ್ವ ರದ್ದು ಮಾಡಿರುವುದು, ಸಂಸದತ್ವ ರದ್ದಾದ ಬಳಿಕ ರಾಹುಲ್ ಗಾಂಧಿಗೆ ದೆಹಲಿಯ ಅಧಿಕೃತ ನಿವಾಸ ಖಾಲಿ ಮಾಡಲು ನೋಟಿಸ್ ನೀಡಿರುವುದು, ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಹಣಕಾಸು ವ್ಯವಹಾರ ಕುರಿತು ಪರಿಶೀಲನೆ ಒಟ್ಟಾರೆಯಾಗಿ, ವಿರೋಧ ಧ್ವನಿಯನ್ನ ನಿಗ್ರಹಿಸುವ ಎಲ್ಲ ಕೆಲಸಗಳು ಮೋದಿ ಸರ್ಕಾರದಿಂದ ನಡೆದಿದೆ.
ಒಟ್ಟಾರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಪಾತ್ರದ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಇವು ಸ್ಪಷ್ಟವಾಗಿದೆ. ಅರವಿಂದ ಕೇಜ್ರೀವಾಲ್, ಹೇಮಂತ್ ಸೊರೇನ್, ಡಿ ಕೆ ಶಿವಕುಮಾರ್ ಸೇರಿದಂತೆ ಹಲವಾರು ರಾಜಕೀಯ ನಾಯಕರು, ಹಾಗೆಯೇ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರು ತನಿಖೆ ಮತ್ತು ಬಂಧನಗಳನ್ನು ಎದುರಿಸಿದ ಬಳಿಕ ನ್ಯಾಯಾಲಯಗಳಲ್ಲಿ ಖುಲಾಸೆ ಅಥವಾ ಪ್ರಕರಣ ರದ್ದಾಗುತ್ತಿರುವುದು ಗಮನಾರ್ಹ ಬೆಳವಣಿಗೆ.
ಆರೋಪಗಳು ನಿಜವಾಗಿರಲಿ ಅಥವಾ ರಾಜಕೀಯ ಪ್ರೇರಿತವಾಗಿರಲಿ — ಅಂತಿಮ ಸತ್ಯವನ್ನು ನಿರ್ಧರಿಸುವುದು ನ್ಯಾಯಾಲಯಗಳೇ. ಆದರೆ, ಪದೇಪದೇ ಸಾಕ್ಷಿಗಳ ಕೊರತೆಯಿಂದ ಪ್ರಕರಣಗಳು ಕುಸಿಯುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ.
ಪ್ರಜಾಪ್ರಭುತ್ವದಲ್ಲಿ ವಿರೋಧದ ಧ್ವನಿಯನ್ನು ತನಿಖಾ ಪ್ರಕ್ರಿಯೆಗಳ ಮೂಲಕ ನಿಗ್ರಹಿಸುವ ಆರೋಪಗಳು ಮರುಕಳಿಸುತ್ತಿದ್ದರೆ, ಅದರ ಬಗ್ಗೆ ಸಾರ್ವಜನಿಕ ಚರ್ಚೆ ಮತ್ತು ಪಾರದರ್ಶಕತೆ ಅಗತ್ಯ. ನ್ಯಾಯ ಮತ್ತು ಕಾನೂನು ಪ್ರಕ್ರಿಯೆಗಳು ರಾಜಕೀಯ ಪ್ರಭಾವದಿಂದ ಮುಕ್ತವಾಗಿರಬೇಕು ಎಂಬುದು ಪ್ರಜಾಪ್ರಭುತ್ವದ ಮೂಲ ಆತ್ಮ.




