1944ರಲ್ಲಿ ಅಂದ್ರೆ ಸ್ವಾತಂತ್ರ್ಯ ಹೋರಾಟ ಉತ್ತುಂಗದಲ್ಲಿದ್ದಾಗ, ಮಹಾತ್ಮ ಗಾಂಧಿಯೊಂದಿಗೆ ತೀವ್ರ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದ ಸುಭಾಷ್ ಚಂದ್ರ ಬೋಸ್ ಅವರು ರೇಡಿಯೋ ಸಂದರ್ಶನವೊಂದರಲ್ಲಿ ಮೋಹನ ದಾಸ ಕರಮಚಂದ್ ಗಾಂಧಿ ಅವರನ್ನು ʼರಾಷ್ಟ್ರಪಿತʼ ಎಂದು ಕರೆಯುತ್ತಾರೆ.
“ದೇಶ್ ಕೆ ಪಿತಾ ನಹೀ, ದೇಶ್ ಕೆ ತೋ ಲಾಲ್ ಹೋತೇ ಹೈ -‘ದೇಶಕ್ಕೆ ತಂದೆ ಇಲ್ಲ, ಮಕ್ಕಳಷ್ಟೇ ಇದ್ದಾರೆ” ಎಂದು ಮೊನ್ನೆ ಗಾಂಧಿ ಜಯಂತಿಯ ದಿನ ಟ್ವೀಟ್ ಮಾಡುವ ಮೂಲಕ ವಿವಾದಾತ್ಮಕ ಹೇಳಿಕೆಗೆ ಖ್ಯಾತರಾಗಿರುವ ಬಿಜೆಪಿಯ ಸಂಸದೆಯೂ ಆಗಿರುವ ಕಂಗನಾ ರನೌಟ್ ತಮ್ಮೊಳಗಿನ ಗಾಂಧಿ ದ್ವೇಷವನ್ನು ಕಾರಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಂಗನಾ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನದಂದು ಈ ರೀತಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಗೋಡ್ಸೆ ಆರಾಧಕರು ಮಾತ್ರ ಬಾಪು ಮತ್ತು ಶಾಸ್ತ್ರಿ ನಡುವೆ ಭೇದ ಮಾಡಲು ಸಾಧ್ಯ. ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಹೊಸ ಗೋಡ್ಸೆಭಕ್ತಳನ್ನು ಮನಃಪೂರ್ವಕವಾಗಿ ಕ್ಷಮಿಸುವರೇ? ಎಂದು ಪ್ರಶ್ನಿಸಿದ್ದಾರೆ.
ಅಷ್ಟಕ್ಕೂ ಮಹಾತ್ಮರನ್ನು ರಾಷ್ಟ್ರಪಿತ ಎಂದು ಮೊದಲು ಕರೆದವರು ಯಾರು? ಕಾಂಗ್ರೆಸ್, ಮಹಾತ್ಮ ಗಾಂಧಿ ಅವರನ್ನು ಟೀಕಿಸಲು ಯಾರ ಸಾವನ್ನುಅನುಮಾನಿಸಲಾಗುತ್ತಿದೆಯೋ, ಅಪ್ಪಟ ರಾಷ್ಟ್ರಾಭಿಮಾನಿ, ಸ್ವಾತಂತ್ರ್ಯದ ಸೇನಾನಿ ಎಂದು ಕರೆಸಿಕೊಂಡಿದ್ದ ಸುಭಾಷ್ ಚಂದ್ರ ಬೋಸ್ ಅವರೇ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಮೊದಲು ಕರೆದಿರುವುದು.

1944ರಲ್ಲಿ ಅಂದ್ರೆ ಸ್ವಾತಂತ್ರ್ಯ ಹೋರಾಟ ಉತ್ತುಂಗದಲ್ಲಿದ್ದಾಗ, ಮಹಾತ್ಮ ಗಾಂಧಿಯೊಂದಿಗೆ ತೀವ್ರ ಸೈದ್ದಾಂತಿಕ ಭಿನ್ನಾಭಿಪ್ರಾಯ ಇದ್ದರೂ ಸುಭಾಷ್ ಚಂದ್ರ ಬೋಸ್ ಅವರು, ಇಂಡಿಯನ್ ನ್ಯಾಷನಲ್ ಆರ್ಮಿ ಸೈನಿಕರನ್ನು ಉದ್ದೇಶಿಸಿ ಮಾತನಾಡುವಾಗ ಮೋಹನದಾಸ ಕರಮಚಂದ್ ಗಾಂಧಿ ಅವರನ್ನು ಫಾದರ್ ಆಫ್ ದಿ ನೇಷನ್ ಎಂದು ಸಂಬೋಧಿಸುತ್ತಾರೆ. ಆ ಭಾಷಣವನ್ನು ಆಜಾದ್ ಹಿಂದ್ ರೇಡಿಯೊ ಪ್ರಸಾರ ಮಾಡಿತ್ತು. 1948 ಜನವರಿ 30ರಂದು ಗಾಂಧಿ ಹತ್ಯೆಯಾದಾಗ ಪ್ರಧಾನಿ ನೆಹರೂ ಅವರು ದೇಶವಾಸಿಗಳಿಗೆ ಈ ದುಃಖದ ವಾರ್ತೆಯನ್ನು ತಿಳಿಸುವಾಗ, ಅದೇ ರೇಡಿಯೋದಲ್ಲಿ ಗದ್ಗದಿತರಾಗಿ “The light has gone out of our lives and there is darkness everywhere. The Father of the Nation is no more” ಎಂದು ಹೇಳುವ ಮೂಲಕ ಸುಭಾಷ್ ಚಂದ್ರ ಬೋಸ್ ಬಣ್ಣನೆಯಂತೆ ಬಾಪು ರಾಷ್ಟ್ರಪಿತ ಎಂದು ದೇಶಕ್ಕೆ ಸಾರುತ್ತಾರೆ.
ನಾಲ್ಕೈದು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ, ತನ್ನನ್ನು ತಾನೇ ʼವೀರʼ ಎಂದು ಕರೆದುಕೊಂಡ ವ್ಯಕ್ತಿಯನ್ನು ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎಂದು ಒಪ್ಪುವ ಕಂಗನಾ ತರಹದ ಮನಸ್ಥಿತಿಯವರಿಗೆ ಗಾಂಧಿ ಯಾವಾಗಲೂ ಅರ್ಥವಾಗದ ವ್ಯಕ್ತಿತ್ವ. ಸಾವರ್ಕರ್ರನ್ನು ಹಿಂದುತ್ವದ ಪಿತಾಮಹ ಎಂದು ಒಪ್ಪುವುದೇ ಆದರೆ ಸಾವರ್ಕರ್ ಗಿಂತ ಪ್ರಾಚೀನ ಎನಿಸಿದ ಹಿಂದೂ ಧರ್ಮ ಪುರಾತನ ಧರ್ಮ ಎನ್ನುವುದು ಸುಳ್ಳೇ? ಹಿಂದುತ್ವಕ್ಕೆ ತಂದೆ ಇದ್ದಾನೆ ಎಂದಾದರೆ ದೇಶಕ್ಕೊಬ್ಬ ತಂದೆ ಯಾಕಿರಬಾರದು?

ಬ್ರಿಟಿಷರಿಂದ ಐವತ್ತು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ, ಐದು ಕ್ಷಮಾಪಣೆ ಪತ್ರ ಬರೆದು ಬ್ರಿಟಿಷರಿಗೆ ವಿಧೇಯನಾಗಿರುವ ವಾಗ್ದಾನ ಕೊಟ್ಟು ಜೈಲಿನಿಂದ ಬಿಡುಗಡೆಯಾಗಿದ್ದ ಸಾವರ್ಕರ್ ವೀರ ಹೇಗಾಗುತ್ತಾರೆ? ತಾನು ತಿಂಗಳಿಗೆ 60 ರೂಪಾಯಿ ಪಿಂಚಣಿ ಪಡೆಯುತ್ತಾ, ಬ್ರಿಟಿಷರ ವಿರುದ್ಧ ಹೋರಾಡದೇ ಹೊಂದಾಣಿಕೆಯಿಂದ ಇರಿ ಎಂದು ಜನರಿಗೆ ತಿಳಿಸಿ ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದಿಂದ ವಿಮುಖನಾಗಿದ್ದ ಸಾವರ್ಕರ್ರನ್ನು ಪೂಜಿಸುವ ಮನಸ್ಥಿತಿಯ ಹಿಂದೆ ನೂರಾರು ವರ್ಷಗಳ ಪ್ರೊಪಗಾಂಡ ಕೆಲಸ ಮಾಡಿದೆ. ಜೈಲಿನಿಂದ ಹೊರಬಂದು ಮತ್ತೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವ ತಂತ್ರಗಾರಿಕೆಯ ಭಾಗವಾಗಿ ಕ್ಷಮಾಪಣೆ ಪತ್ರ ಬರೆದಿದ್ದರು ಎಂದು ಹೇಳುವ ಸಂಘಪರಿವಾರದವರು, ಆತ ಬಿಡುಗಡೆಯಾದ ನಂತರ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಕಾಣಿಸಿಕೊಂಡಿಲ್ಲ ಎಂಬುದಕ್ಕೆ ಉತ್ತರಿಸಲ್ಲ.
ಮಾಲೇಗಾಂವ್ ಬಾಂಬ್ ಸ್ಫೋಟದ ಪ್ರಕರಣದ ಆರೋಪಿ, ಜೈಲು ಸೇರಿ ಜಾಮೀನಿನಲ್ಲಿ ಹೊರಗಿದ್ದ ಪ್ರಗ್ಯಾಸಿಂಗ್ ಠಾಕೂರಳಿಗೆ ಬಿಜೆಪಿ ಟಿಕೆಟ್ ಕೊಟ್ಟು ಭೋಪಾಲ್ನಿಂದ ಎರಡು ಬಾರಿ ಸಂಸದೆಯನ್ನಾಗಿ ಮಾಡಿದ ಮೋದಿ ಪರಿವಾರ ಸಾಧಿಸಿದ್ದೇನು? ತಮ್ಮ ವಿರೋಧಿಗಳೆಲ್ಲರನ್ನೂ ಭಯೋತ್ಪಾದಕರು, ಭಯೋತ್ಪಾದಕರ ಬೆಂಬಲಿಗರು ಎಂದು ಹೇಳುವ ಬಿಜೆಪಿ ಭಯೋತ್ಪಾದಕ ಕೃತ್ಯದ ಆರೋಪಿಯನ್ನು ಸಂಸತ್ತಿನೊಳಗೆ ಕರೆತಂದು ಕೊಟ್ಟ ಸಂದೇಶವೇನು? ಈಗ ಪ್ರಗ್ಯಾ ಸ್ಥಾನವನ್ನು ಕಂಗನಾ ತುಂಬಿದ್ಧಾರೆ. ಇದೇ ಪ್ರಗ್ಯಾಸಿಂಗ್ ಸಂಸತ್ತಿನಲ್ಲಿ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳಿದಾಗ “ನಾನು ಪ್ರಗ್ಯಾ ಹೇಳಿಕೆಯನ್ನು ಮನಸಾರೆ ಕ್ಷಮಿಸಲ್ಲ” ಎಂದು ನಾಟಕ ಆಡಿದ ಪ್ರಧಾನಿ ಮೋದಿ, ಕಂಗನಾಳನ್ನು ಹೇಗೆಲ್ಲ ಕ್ಷಮಿಸುತ್ತಾರೆ ಅಂತ ಜನತೆಗೆ ಜವಾಬು ಹೇಳಲೇಬೇಕು…ಬಾಯಿಗೆ ಬೀಗ ಹಾಕಿಕೊಳ್ಳಬಾರದು.
ಕಂಗನಾ ಸಂಸದೆಯಾದ ಕೆಲ ತಿಂಗಳಲ್ಲೇ ಆಕೆ ನೀಡಿದ ಕೆಲವು ಹೇಳಿಕೆಗಳು ಬಿಜೆಪಿಗೇ ಮುಜುಗರ ತಂದವು. ಮೋದಿ ಸರ್ಕಾರ ವಾಪಸ್ ಪಡೆದ ಮೂರು ಕೃಷಿ ಕಾಯ್ದೆಗಳನ್ನು ಮರಳಿ ಜಾರಿಗೆ ತರಬೇಕು. ರೈತರ ಪ್ರತಿಭಟನೆ ನಡೆದಾಗ ಅಲ್ಲಿ ಹೆಣಗಳು ನೇತಾಡುತ್ತಿದ್ದವು. ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿದ್ದವು. ಕಾಯಿದೆಗಳನ್ನು ವಾಪಸ್ ಪಡೆದ ಮೇಲೂ ಪ್ರತಿಭಟನೆ ಕೈಬಿಟ್ಟಿರಲಿಲ್ಲ. ಇದು ವಿದೇಶಿ ಪ್ರೇರಿತ ಪಿತೂರಿ ಎಂದು ಹೇಳಿ ವಿವಾದ ಎಬ್ಬಿಸಿದ್ದರು. ರೈತರ ತೀವ್ರ ವಿರೋಧ ಭುಗಿಲೆದ್ದಾಗ ಹರಿಯಾಣ ಚುನಾವಣೆಗಳಿಗೆ ಅಂಜಿ ಆಕೆಯಿಂದ ಕ್ಷಮೆ ಕೇಳಿಸಿದರು. ಗಾಂಧಿ ಜಯಂತಿಯ ದಿನ ಕಂಗನಾ ಮಾಡಿದ ‘ಗೋಡ್ಸೆ’ ಮನಸ್ಥಿತಿ ಯ ಬಗ್ಗೆ ಬಿಜೆಪಿ ತುಟಿ ಹೊಲಿದುಕೊಂಡಿದೆ.

ಬಿಜೆಪಿಯ ಭಕ್ತರ ಪಾಲಿನ ಫೈರ್ ಬ್ರಾಂಡ್ ನಟಿ ಕಂಗನಾ ಪದೇ ಪದೇ ರೈತರು, ಸ್ವಾತಂತ್ರ್ಯ ಹೋರಾಟಗಾರರು, ಮಹಾತ್ಮ ಗಾಂಧಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಕಡು ಮೂರ್ಖತನದಿಂದ ಕೂಡಿದ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಾ ಬಂದಾಕೆ. ಈ ‘ಸೇವೆ’ ಗಾಗಿ ಈಕೆಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈಕೆಯ ಹಿನ್ನೆಲೆ ಗಮನಿಸಿದರೆ, ಈ ತರಹದ ಎಡಬಿಡಂಗಿ ಹೇಳಿಕೆ ನೀಡುತ್ತಲೇ ನಿರಾಯಾಸವಾಗಿ ರಾಜಕಾರಣಿಯಾಗಿ ಭಡ್ತಿ ಪಡೆದಾಕೆ. ಆಕೆ ಬಾಲಿವುಡ್ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ಕೊಡುತ್ತಲೇ ಅಲ್ಲಿಂದಲೂ ದೂರವಾದಾಕೆ. ಹಿಮಾಚಲದ ಮಂಡಿ ಕ್ಷೇತ್ರದಿಂದ ಟಿಕೆಟ್ ಪಡೆದು ಗೆದ್ದು ಬಂದು ಹೊರಗೆ ಮೋದಿ ಭಕ್ತೆಯಾಗಿ ಮಾಡುತ್ತಿದ್ದ ಹುಚ್ಚಾಟವನ್ನು ಈಗ ಸಂಸದೆಯಾಗಿ ಮಾಡುತ್ತಿದ್ದಾರೆ. ಅಷ್ಟೇ ವ್ಯತ್ಯಾಸ.
ಇಡೀ ವಿಶ್ವದ ಗಮನ ಸೆಳೆದಿದ್ದ ದೆಹಲಿ ಗಡಿಯಲ್ಲಿ ಒಂದೂವರೆ ವರ್ಷಗಳ ಕಾಲ ನಡೆದ ರೈತರ ಪ್ರತಿಭಟನೆಯಲ್ಲಿದ್ದ ರೈತ ಮಹಿಳೆಯರನ್ನು ನೂರು ರೂಪಾಯಿ ಕೊಟ್ಟರೆ ಸಾಕು ಪ್ರತಿಭಟನೆಗೆ ಬರ್ತಾರೆ ಎಂದು ಹೇಳಿ ರೈತರ ಆಕ್ರೋಶಕ್ಕೆ ಒಳಗಾಗಿದ್ದರು. ಅದರ ಪರಿಣಾಮ ಕಂಗನಾ ಮಂಡಿಯಿಂದ ಗೆದ್ದು ಇನ್ನೂ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕುಲ್ವಿಂದರ್ ಸಿಂಗ್ ರಿಂದ ಕಪಾಳ ಮೋಕ್ಷ ಎದುರಿಸುವಂತಾಗಿತ್ತು. ಆ ಯುವತಿಯ ತಾಯಿ ಕೂಡಾ ರೈತರ ಪ್ರತಿಭಟನೆಯಲ್ಲಿದ್ದರು. ನೂರು ರೂಪಾಯಿಗೆ ಪ್ರತಿಭಟನೆಗೆ ಹೋಗುತ್ತಾರೆ ಎಂಬ ಹೇಳಿಕೆ ಆಕೆಯನ್ನು ಘಾಸಿ ಮಾಡಿತ್ತು. ಹೀಗಾಗಿ ಕಂಗನಾಳನ್ನು ತಾನಿದ್ದ ಏರ್ರ್ಪೋರ್ಟ್ನಲ್ಲಿ ಕಂಡ ತಕ್ಷಣ ಕೆನ್ನೆಗೆ ಹೊಡೆದು ಆಕ್ರೋಶ ತೀರಿಸಿಕೊಂಡಿದ್ದರು.

ಕಂಗನಾ ಮಾತಿನ ಮೇಲೆ ಹಿಡಿತ ಇಲ್ಲ, ಯೋಚಿಸಿ ಮಾತನಾಡಲ್ಲ. ಆಕೆಗೆ ಇತಿಹಾಸದ ಜ್ಞಾನ ಎಳ್ಳಷ್ಟೂ ಇಲ್ಲ ಎಂಬುದು ಆಕೆ ಬಾಯಿ ಬಿಟ್ಟಾಗಲೆಲ್ಲ ಬಯಲಾಗಿದೆ. ಆದರೆ ಕಂಗನಾಳಂತೆ ಒಂದು ಸಿದ್ದಾಂತ, ಪಕ್ಷ, ಸಂಘಟನೆಗೆ ಮಿದುಳು ಮಾರಿಕೊಂಡ ಲಕ್ಷಾಂತರ ಯುವಜನರು ನಮ್ಮ ನಡುವೆ ಇದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು 2014ರಲ್ಲಿ ಎಂದು ಹೇಳುವ ಮೂಲಕ ಕಂಗನಾ, ಮೋದಿಗಿಂತ ಹಿಂದೆ ಇದ್ದ ಪ್ರಧಾನಿಗಳು, ಅವರು ಮಾಡಿದ ಕೆಲಸ, ಗೆದ್ದ ಯುದ್ಧ, ಕಟ್ಟಿದ ಕೈಗಾರಿಕೆ, ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ, ಆರ್ಥಿಕತೆ ಎಲ್ಲವನ್ನೂ ನಗಣ್ಯ ಮಾಡಿಬಿಟ್ಟಿದ್ದರು. ಅಷ್ಟೇ ಏಕೆ ಭಾರತೀಯ ಚಿತ್ರರಂಗದ ಸಾಧನೆಯನ್ನೂ ಆಕೆ ಮರೆತುಬಿಟ್ಟರು.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಾ, ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು 2014ರಲ್ಲಿ ಎಂದು ಹೇಳುವ ಮೂಲಕ ಕಂಗನಾ, ಮೋದಿಗಿಂತ ಹಿಂದೆ ಇದ್ದ ಪ್ರಧಾನಿಗಳು, ಅವರು ಮಾಡಿದ ಕೆಲಸ, ಗೆದ್ದ ಯುದ್ಧ, ಕಟ್ಟಿದ ಕೈಗಾರಿಕೆ, ಆಸ್ಪತ್ರೆ, ಯುನಿವರ್ಸಿಟಿ, ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ, ಆರ್ಥಿಕತೆ ಎಲ್ಲವನ್ನೂ ನಗಣ್ಯ ಮಾಡಿಬಿಟ್ಟಿದ್ದರು. ಅಷ್ಟೇ ಏಕೆ ಭಾರತೀಯ ಚಿತ್ರರಂಗದ ಸಾಧನೆಯನ್ನೂ ಆಕೆ ಮರೆತುಬಿಟ್ಟರು.
ಆಕೆಗೆ ಬೇಕಾಬಿಟ್ಟಿ ಹೇಳಿಕೆ ಕೊಡಲು, ಟೀಕಿಸಲು ಅಥವಾ ತನ್ನ ಅಜ್ಞಾನ ಪ್ರದರ್ಶಿಸಲು ಯಾವ ವೇದಿಕೆಯಾದರೂ ಸರಿ. ಟೈಮ್ಸ್ ನೌ ಸಂದರ್ಶನದಲ್ಲಿ ಸುಭಾಷ್ ಚಂದ್ರ ಬೋಸ್ ದೇಶದ ಮೊದಲ ಪ್ರಧಾನಿ ಎಂದು ಬಿಟ್ಟಿದ್ದರು. ಅವರು ಪ್ರಧಾನಿ ಆಗಿರಲೇ ಇಲ್ಲ ಎಂದು ಸಂದರ್ಶಕಿ ತಿದ್ದಬೇಕಾಯ್ತು.
ಆಕೆ ತನ್ನ ವೃತ್ತಿಯ ಕ್ಷೇತ್ರವಾದ ಚಿತ್ರರಂಗದಲ್ಲೂ ವಿವಾದಾತ್ಮಕ ಹೇಳಿಕೆ ಕೊಡುತ್ತಲೇ ನಗೆ ಪಾಟಲಿಗೀಡಾದಾಕೆ. ಅಮಿತಾಬ್ ಬಚ್ಚನ್ ನಂತರ ನಾನೇ ಬಾಲಿವುಡ್ನಲ್ಲಿ ಹೆಚ್ಚು ಜನಪ್ರಿಯಳು ಎಂದು ಹೇಳಿದ್ದರು. ಸ್ವಪ್ರತಿಷ್ಠೆ ಮತ್ತು ಎಲ್ಲರನ್ನೂ ಟೀಕಿಸುವ ಚಾಳಿ ಈಕೆಯದು. ಈಕೆಯನ್ನು ಮತ ಹಾಕಿ ಗೆಲ್ಲಿಸಿದ ಜನ ಈಕೆಯ ಭೇಟಿಗೆ ಬರಬೇಕಿದ್ದರೆ ಆಧಾರ್ ಕಾರ್ಡ್ ತೋರಿಸಬೇಕು ಎಂದು ಹೇಳಿದ್ದು ಸುದ್ದಿಯಾಗಿತ್ತು. ಮಾಜಿ ರಾಷ್ಟ್ರಪತಿ ಕೋವಿಂದ್ ಅವರನ್ನು ರಾಮ ಕೋವಿಡ್ ಎಂದು ಕರೆದು ಟ್ರೋಲ್ಗೆ ಒಳಗಾಗಿದ್ದರು.

ಸಂಸದೆಯಾಗಿ ಮೊದಲ ಅಧಿವೇಶನದ ಸಮಯದಲ್ಲಿಯೇ ಮಾಧ್ಯಮಗಳ ಮುಂದೆ ರಾಹುಲ್ ಗಾಂಧಿಯವರನ್ನು ಅವಮಾನಿಸಿದಾಕೆ. ರಾಹುಲ್ ಗಾಂಧಿ ಡ್ರಗ್ಸ್ ಸೇವಿಸಿ ಸಂಸತ್ತಿಗೆ ಬರುತ್ತಾರೆ. ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಲ್ಲದೇ, ರಾಹುಲ್ ಗಾಂಧಿ ಏನ್ ಕಡಿದು ಕಟ್ಟೆ ಹಾಕಿದ್ದಾರೆಂದು ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮೋದಿ ಮಾಡಿದ್ದಾರೆ ಎಂದು ಹೇಳಿ ತನ್ನ ಕಡು ದಡ್ಡತನ ಪ್ರದರ್ಶಿಸಿದಾಕೆ. ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನ ಪಡೆಯಲು ಪಕ್ಷವೊಂದು ಕನಿಷ್ಠ 55 ಸೀಟು ಪಡೆದಿರಬೇಕು. ಕಾಂಗ್ರೆಸ್ 99 ಸ್ಥಾನ ಗೆದ್ದು ಅಧಿಕೃತ ವಿರೋಧ ಪಕ್ಷವಾಗಿದೆ. ಆ ಪಕ್ಷದ ಸದಸ್ಯರು ಸೇರಿ ರಾಹುಲ್ ಗಾಂಧಿ ಅವರನ್ನು ತಮ್ಮ ನಾಯಕನ್ನಾಗಿ ಆರಿಸಿದ್ದಾರೆ. ಈ ಪ್ರಕ್ರಿಯೆಯ ಬಗ್ಗೆ ಆಕೆಗೆ ಜ್ಞಾನ ಇಲ್ಲ ಎಂಬುದು ಆಕೆಯ ಬುದ್ದಿಮಟ್ಟ ತೋರಿಸುತ್ತದೆ.
ನಾಲ್ಕನೇ ಬಾರಿಗೆ ಸಂಸದರಾಗಿರುವ ರಾಹುಲ್ ಗಾಂಧಿ ತರಹದ ಸೀನಿಯರ್ ಬಗ್ಗೆ ಮಾತನಾಡುವಾಗ ಅವರನ್ನು ವಿಪಕ್ಷದ ಸದಸ್ಯ ಅಥವಾ ನಾಯಕ ಎಂಬ ಕಾರಣಕ್ಕೆ ಬೇಕಾಬಿಟ್ಟಿ ನಾಲಿಗೆ ಹರಿಯ ಬಿಡಬಾರದು ಎಂದು ಈಕೆಯನ್ನು ಸಂಸದೆಯನ್ನಾಗಿ ಮಾಡಿದ ಪಕ್ಷದ ನಾಯಕರು ಬುದ್ದಿ ಹೇಳುವ ಅಗತ್ಯವಿದೆ.
ಕಂಗನಾ ಬಾಯಿಬಿಟ್ಟರೆ ಸಾಕು ಒಂದೋ ವಾಟ್ಸಪ್ನ ಪ್ರೊಪಗಾಂಡದ ಹೇಳಿಕೆ, ಅಥವಾ ಯಾರದಾದರೂ ಚಾರಿತ್ರ್ಯ ಹರಣ, ತಿರುಚಿದ ಇತಿಹಾಸ ಹೀಗೆ ಬೇಜವಾಬ್ದಾರಿ ಹೇಳಿಕೆಗಳೇ ಇರುತ್ತವೆ. ಸಂಸದೆ ಕಂಗನಾ ಗಾಂಧಿ ಜಯಂತಿಯ ದಿನ ಟ್ವೀಟ್ ಮಾಡುವಾಗ ಸ್ವಭಾವ ಸ್ವಚ್ಛತೆ ಮತ್ತು ಸಂಸ್ಕಾರದ ಸ್ವಚ್ಛತೆಯ ಬಗ್ಗೆ ಹೇಳಿದ್ದಾರೆ. ಆದರೆ ಆಕೆಗೆ ಅವೆರಡೂ ಇಲ್ಲ ಎಂಬುದು ಎಂದೋ ಗೊತ್ತಾಗಿಬಿಟ್ಟಿದೆ.
ಇದನ್ನೂ ಓದಿ ಮತ್ತೆ ಮುನ್ನೆಲೆಗೆ ಬಂದ ಪಿಎಂ ಕೇರ್ಸ್; ಮೋದಿಯ ಯೋಜನೆ ಸುತ್ತ ಅನುಮಾನದ ಹುತ್ತ
ಗಾಂಧೀಜಿಯವರ ಮೇಲಿರುವ ದ್ವೇಷವೇ ಡಾ. ಬಿ ಆರ್ ಅಂಬೇಡ್ಕರ್ ಅವರ ಮೇಲೂ ಸಂಘಪರಿವಾರ ಮತ್ತು ಬಿಜೆಪಿಯವರಿಗಿದೆ. ಬಾಬಾ ಸಾಹೇಬರು ದೇಶಕ್ಕೆ ಸಮಾನತೆಯ ಸಂವಿಧಾನ ಕೊಟ್ಟ ಉರಿ ಸಂಘಿಗಳ ಮನಸ್ಸಿನಲ್ಲಿ ವರ್ತನೆಯಲ್ಲಿ, ನಡವಳಿಕೆಯಲ್ಲಿ ಇನ್ನೂ ಕಾಣುತ್ತಿದೆ. ಅಂಬೇಡ್ಕರ್ ಅವರನ್ನು ಸಂವಿಧಾನದ ಪಿತಾಮಹ ಎಂದು ಅಧಿಕೃತವಾಗಿ ಘೋಷಿಸಬೇಕು ಎಂದು ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್, ಅಂದಿನ ಉಪಪ್ರಧಾನಿ ಅಡ್ವಾಣಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಹೇಳಿ ಅಡ್ವಾಣಿ ಅದನ್ನು ತಿರಸ್ಕರಿಸಿದ್ದರು. ಅವರು ತಿರಸ್ಕರಿಸಿದರೂ ಅಂಬೇಡ್ಕರ್ ಸಂವಿಧಾನದ ಪಿತಾಮಹ ಎಂದೇ ಜನಮಾನಸದಲ್ಲಿ ಅಚ್ಚಾಗಿದೆ.
ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುವುದನ್ನೂ ಸಹಿಸದ ಮನುವಾದಿ ಮನಸ್ಥಿತಿಯ ಜನರ ಕೈಯಲ್ಲಿ ದೇಶ ಇರುವಾಗ ಈ ಬಹುತ್ವದ ದೇಶಕ್ಕೆ ಭದ್ರ ಅಡಿಪಾಯ ಹಾಕಿದ ಗಾಂಧಿ, ನೆಹರು, ಅಂಬೇಡ್ಕರ್ ಅವರೆಲ್ಲ ಕಂಗನಾ ತರದ ಕ್ಷುಲ್ಲಕ ವ್ಯಕ್ತಿಗಳ ಬಾಯಿಗೆ ತುತ್ತಾಗುತ್ತಲೇ ಇರುತ್ತಾರೆ. ಕಂಗನಾ ನಮೂನೆಯ ಮೊದ್ದುಮಣಿ ಮೂರ್ಖರು ಮೋದಿ ಪರಿವಾರ್ ಕೈಯಲ್ಲಿನ ಸಲೀಸು ದಾಳಗಳಾಗಿ ಉರುಳುತ್ತಲೇ ಇರುತ್ತಾರೆ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.




