“ನಾವು ಯಾರ ವಿರುದ್ಧವೂ ಇಲ್ಲ. ಒಳಮೀಸಲಾತಿ ವಿಚಾರದಲ್ಲಿ ಹೊಲೆಯ ಸಮುದಾಯ ತಕರಾರು ತೆಗೆಯುತ್ತಿದೆ ಎಂದು ಹೊರರಾಜ್ಯಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಒಳಮೀಸಲಾತಿಗೆ ನಮ್ಮ ಬೆಂಬಲವಿದ್ದು, ವರದಿ ಪರಿಷ್ಕರಣೆ ಮಾಡಿ ಜಾರಿ ಮಾಡಬೇಕು” ಎಂದು ಜ್ಞಾನಪ್ರಕಾಶ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಬಲಗೈ ಸಂಬಂಧಿತ ಜಾತಿಗಳನ್ನು ಒಟ್ಟುಗೂಡಿಸಿ, ಶೇ.7ರಷ್ಟು ಮೀಸಲಾತಿಯನ್ನು ನೀಡಬೇಕು ಎಂಬ ಆಗ್ರಹ ‘ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ’ ನಡೆಸಿದ ಸಮಾವೇಶದಲ್ಲಿ ಕೇಳಿಬಂದಿದೆ. ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಇಂದು (ಸೋಮವಾರ) ನಡೆದ ಬೃಹತ್ ಸಮಾವೇಶವು ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ವರದಿಗೆ ತೀವ್ರ ಆಕ್ಷೇಪಗಳನ್ನು ವ್ಯಕ್ತಪಡಿಸಿದೆ.
ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ಸಿ, ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ.ಚಂದ್ರಶೇಖರಯ್ಯ ಸಮಾವೇಶದ ಆಗ್ರಹಗಳನ್ನು ಹಂಚಿಕೊಂಡರು.
“ಜಸ್ಟಿಸ್ ನಾಗಮೋಹನ್ ದಾಸ್ ಅವರು ವರದಿಯಲ್ಲಿ ತಮ್ಮ ಜೀವಮಾನದ ಕನಸು ನನಸಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಹೊಲೆಯ ಸಮುದಾಯವನ್ನು ತುಳಿಯಬೇಕು ಎನ್ನುವ ಅವರ ಕನಸನ್ನು ನುಚ್ಚುನೂರು ಮಾಡುತ್ತಿದ್ದೇವೆ. ಏಕರೂಪಿ ಲಕ್ಷಣಗಳನ್ನು ಹೊಂದಿರುವ ಸಮುದಾಯಗಳನ್ನು ಹೊಂದುಗೂಡಿಸಬೇಕು. ಶೇ.7ಕ್ಕಿಂತ ಕಡಿಮೆ ಮೀಸಲಾತಿಯನ್ನು ಬಲಗೈ ಸಮುದಾಯ ಒಪ್ಪುವುದಿಲ್ಲ. ಯಾರಿಗೆ ಎಷ್ಟಾದರೂ ಕೊಡಿ, ನಮಗೆ 7 ಪರ್ಸೆಂಟ್ ಮೀಸಲಿಡಿ. ಬಲಗೈ ಸಮುದಾಯದ ಕಾಂಗ್ರೆಸ್ ನಾಯಕರು ಇದನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಪರಿಣಾಮಗಳನ್ನು ಎದುರಿಸಲಿದ್ದಾರೆ” ಎಂದರು.
ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, “ನಾವು ತಿಂಗಳುಗಟ್ಟಲೇ, ವರ್ಷಗಟ್ಟಲೇ ಹೋರಾಟ ಮಾಡುವುದಿಲ್ಲ. ಒಂದೇ ಬಾರಿಗೆ ಬೀದಿಗಿಳಿದು ಗೆಲ್ಲುತ್ತೇವೆ. ನಮ್ಮ ಹೋರಾಟದ ಫಲವನ್ನು ಎಲ್ಲರೂ ಉಂಡಿದ್ದಾರೆ. ನಮ್ಮ ಸಾಹಿತಿಗಳು, ಚಿಂತಕರು ನಮ್ಮನ್ನು ಹೀಯಾಳಿಸಿ ಮಾತನಾಡುತ್ತಿದ್ದಾರೆ. ನಮ್ಮ ಸಾಹಿತಿಗಳ ಮಾತು ಕೇಳಲು ಹಿಂಸೆಯಾಗುತ್ತಿದೆ” ಎಂದು ತಿಳಿಸಿದರು.
ಒಕ್ಕೂಟದ ಮೈಸೂರು ವಿಭಾಗೀಯ ಸಂಚಾಲಕ ವೆಂಕಟರಮಣ ಸ್ವಾಮಿ ಮಾತನಾಡಿ, “ನಾಗಮೋಹನ್ ದಾಸ್ ಅವರ ಭಾವಚಿತ್ರ ಮೊದಲು ಸುಟ್ಟವನು ನಾನು. ನಾಳೆಯೂ ಪಟ ಸುಡಲು ಸಿದ್ಧವಾಗಿದ್ದೇನೆ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದರ ಮೇಲೆ ಸಿದ್ದರಾಮಯ್ಯನವರ ಭವಿಷ್ಯ ನಿರ್ಧಾರವಾಗುತ್ತದೆ” ಎಂದು ಹೇಳಿದರು.
ಹಿರಿಯ ಹೋರಾಟಗಾರ ಎಂ. ವೆಂಕಟಸ್ವಾಮಿ ಮಾತನಾಡಿ, “ಜಸ್ಟಿಸ್ ದಾಸ್ ಅವರು ಮೊದಲಿನಿಂದಲೂ ದಲಿತ ಚಳವಳಿಯ ಭಾಗವಾಗಿದ್ದವರು. ಅವರು ತಮ್ಮ ವರದಿಯಲ್ಲಿ ಸರ್ಕಾರ ಇದನ್ನು ತಿರಸ್ಕರಿಸಬಹುದು, ಪುರಸ್ಕರಿಸಬಹುದು ಅಥವಾ ಪರಿಷ್ಕರಿಸಬಹುದು ಎಂದು ಹೇಳಿದ್ದಾರೆ. ವರದಿ ಪರಿಷ್ಕಾರ ಮಾಡಲೇಬೇಕು” ಎಂದರು.
ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, “ನಾವು ಯಾರ ವಿರುದ್ಧವೂ ಇಲ್ಲ. ಒಳಮೀಸಲಾತಿ ವಿಚಾರದಲ್ಲಿ ಹೊಲೆಯ ಸಮುದಾಯ ತಕರಾರು ತೆಗೆಯುತ್ತಿದೆ ಎಂದು ಹೊರರಾಜ್ಯಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಒಳಮೀಸಲಾತಿಗೆ ನಮ್ಮ ಬೆಂಬಲವಿದ್ದು, ಪರಿಷ್ಕರಣೆ ಮಾಡಿ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.

ಚಿತ್ರದುರ್ಗ ಛಲವಾದಿ ಮಹಾಸಂಸ್ಥಾನ ಮಠದ ಬಸವಲಿಂಗನಾಗಿ ಸ್ವಾಮೀಜಿ, ಬೆಂಗಳೂರು ಸಂತ ರವಿದಾಸ ಪೀಠದ ಬುದ್ಧಾನಂದ ಸ್ವಾಮೀಜಿ, ಪ್ರೊ. ಜ್ಞಾನಸ್ವರೂಪಾನಂದ ಸ್ವಾಮೀಜಿ ವೇದಿಕೆಯಲ್ಲಿ ಹಾಜರಿದ್ದರು.
ಸಮಾವೇಶದಲ್ಲಿ ಆಯೋಗದ ವಿರುದ್ಧ ಕೇಳಿ ಬಂದ ಆಕ್ಷೇಪಗಳು ಮತ್ತು ಆಗ್ರಹಗಳು
- ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗವು ನಡೆಸಿದ ಜಾತಿಗಳ ಸಮೀಕ್ಷೆಯಲ್ಲಿ ಗಣತಿದಾರರಿಗೆ ಟ್ಯಾಬ್ಗಳನ್ನು ನೀಡದ ಕಾರಣದಿಂದ ಆಯೋಗವು ಬಿಡುಗಡೆ ಮಾಡಿದ App ಹಲವು ಗಣತಿದಾರರ ಮೊಬೈಲ್ನಲ್ಲಿ ಡೌನ್ಲೋಡ್ ಆಗಿಲ್ಲ. ಹೀಗಾಗಿ ಲಕ್ಷಾಂತರ ಕುಟುಂಬಗಳ ಸಮೀಕ್ಷೆಯ ನಂತರ ಸದರಿ App ಅನ್ನು Un-install ಮಾಡಿದ ಪರಿಣಾಮವಾಗಿ ಈಗಾಗಲೇ ಸರ್ವೆ ಮಾಡಿದ್ದ ಲಕ್ಷಾಂತರ ಕುಟುಂಬಗಳ ಮಾಹಿತಿಯು ರದ್ದಾಯಿತು.
- ಗಣತಿದಾರರಿಗೆ ಗುರುತಿನ ಚೀಟಿ ನೀಡದ ಕಾರಣ ಗಣತಿದಾರರ ಬದಲು ಕುಟುಂಬದ ಸದಸ್ಯರು, ಇತರರು ತರಬೇತಿ ಇಲ್ಲದೆ ಗಣತಿ ಕೈಗೊಂಡಿದ್ದಾರೆ. ರೇಷನ್ ಕಾರ್ಡ್ನಲ್ಲಿ ಹೆಸರಿಲ್ಲದವರನ್ನು ಆಧಾರ್ ಕಾರ್ಡ್ನಲ್ಲಿ 8 ಲಕ್ಷ ಸರ್ವೆ ಆಗುವವರೆಗೂ Add memberಗೆ ಅವಕಾಶ ಕಲ್ಪಿಸದ ಕಾರಣ ಸುಮಾರು 8 ಲಕ್ಷಕ್ಕೂ ಹೆಚ್ಚು ಮಕ್ಕಳು ಸರ್ವೆಯಿಂದ ಹೊರಗುಳಿದಿದ್ದಾರೆ.
- ಆಯೋಗವು ತಾನೇ ಘೋಷಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಬೂತ್ಗಳನ್ನು ತೆರೆಯದ ಕಾರಣ ಸಮೀಕ್ಷೆಯು ಎಲ್ಲಾ ಕುಟುಂಬಗಳನ್ನು ಒಳಗೊಂಡಿರುವುದಿಲ್ಲ. ಇದರಿಂದ ತಪ್ಪಿಸಿಕೊಳ್ಳಲು, ಪರಿಶಿಷ್ಟ ಜಾತಿಯ Projected Population ಸಂಖ್ಯೆಯನ್ನು 1.47 ಕೋಟಿಯ ಬದಲು 1.16 ಕೋಟಿಗಳಿಗೆ ಮಿತಿಗೊಳಿಸಿಕೊಂಡಿದ್ದು, ಆಯೋಗವು ಕೇವಲ 1.05 ಕೋಟಿಗಳ ಜನ ಸಂಖ್ಯೆಯನ್ನು ಮಾತ್ರ ಸರ್ವೆ ಮಾಡಿದ್ದು, ಇದರಿಂದ ಸುಮಾರು 40 ಲಕ್ಷ ಜನರು ಸರ್ವೆಯಿಂದ ಹೊರಗುಳಿದಿರುವುದರಿಂದ ಸಮೀಕ್ಷೆಯು ಅಪೂರ್ಣವಾಗಿರುತ್ತದೆ.
- ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳದೆ, ಸಮೀಕ್ಷೆಯನ್ನು ನಡೆಸದೆ ಮನೆಗಳಿಗೆ ಕೇವಲ ಚೀಟಿಗಳನ್ನು ಅಂಟಿಸುವುದರ ಮೂಲಕ ಆಯೋಗವು ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಆ ಮೂಲಕ ತಪ್ಪು ವರದಿಯನ್ನು ಸಿದ್ಧಪಡಿಸಿದೆ.
- ಕರ್ನಾಟಕ ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿಯನ್ನು ಪರಿಗಣಿಸಿ, ವೈಜ್ಞಾನಿಕವಾಗಿ ತರ್ಕಬದ್ದ ಒಳಮೀಸಲಾತಿ (ಉಪ-ವರ್ಗೀಕರಣ) ಪರಿಷ್ಕರಿಸಬೇಕು. ಪರಿಶಿಷ್ಟ ಜಾತಿಗಳಲ್ಲಿ ಸಮಾಜ ಜಾತಿಯ (Homogeneous) ಉಪ-ಜಾತಿಗಳ ಗುಂಪುಗಳನ್ನು ಒಟ್ಟುಗೂಡಿಸಬೇಕು.
- ಆದಿ-ಕರ್ನಾಟಕ, ಆದಿ-ದ್ರಾವಿಡ ಮತ್ತು ಆದಿ-ಆಂಧ್ರ ಎಂಬ ಜಾತಿಗಳು ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದು, 2011ರ ಜನಗಣತಿಯಲ್ಲಿ ಈ ಜಾತಿಗಳ ಜನಸಂಖ್ಯೆಯ ವಿವರ ಇರುತ್ತದೆ. ಆದರೆ, ಸದರಿ ಜಾತಿಗಳಲ್ಲಿನ ಉಪಜಾತಿಗಳ ಜನಸಂಖ್ಯೆಯ ವಿವರಗಳು ಇರುವುದಿಲ್ಲ. ಆದರೂ, ಮೇಲ್ಕಂಡ ಮೂರು ಪದಗಳನ್ನು ಕೆಲವು ಪರಿಶಿಷ್ಟ ಜಾತಿಯ ಸಮುದಾಯದವರು ಸಾಮಾನ್ಯವಾಗಿ ಬಳಕೆ ಮಾಡುತ್ತಿದ್ದಾರೆ. ಸದರಿ ಗುಂಪುಗಳಿಗೆ ಸಂಬಂಧಿಸಿದ ಉಪಜಾತಿಗಳ ಮೂಲ ಜಾತಿಗಳ ಜನಸಂಖ್ಯೆಯ ದತ್ತಾಂಶವನ್ನು ಸಂಗ್ರಹಿಸಬೇಕು.
- ಹಲವು ಬಲಗೈ ಜಾತಿಗಳನ್ನು ಪ್ರವರ್ಗ-ಎ ಗುಂಪಿಗೆ ಸೇರಿಸುವುದರ ಮೂಲಕ 1,38,653 ಜನ ಸಂಖ್ಯೆಯನ್ನು ಬಲಗೈ ಸಮುದಾಯದಿಂದ ಪ್ರತ್ಯೇಕಿಸಿರುತ್ತಾರೆ. ಬಲಗೈ ಸಮೂಹದ ಜನಸಂಖ್ಯೆ ಕಡಿಮೆಯಾಗುವಂತೆ ನೋಡಿಕೊಂಡಿದ್ದಾರೆ.ಸರ್ಕಾರದ ನಿಬಂಧನೆ 5ರಂತೆ ಆದಿ-ಕರ್ನಾಟಕ, ಆದಿ-ದ್ರಾವಿಡ ಮತ್ತು ಆದಿ-ಆಂಧ್ರ ಜಾತಿಗಳಲ್ಲ. ಇವುಗಳು ಜಾತಿಗಳ ಗುಂಪುಗಳಾಗಿದ್ದು, ಇಲ್ಲಿರುವ ಎಡ-ಬಲ ಸಮುದಾಯದ ಜನ ಸಂಖ್ಯೆಯನ್ನು ಗುರುತಿಸುವ ಬದಲು ಆಯೋಗವು ಜಾತಿಗಳೇ ಅಲ್ಲದ ಗುಂಪಿಗೆ ಶೇಕಡ 1ರಷ್ಟು ಮೀಸಲಾತಿಯನ್ನು ನಿಗದಿಪಡಿಸಿರುತ್ತದೆ. ಇಲ್ಲಿರುವ ಎಲ್ಲಾ ಜನರು ಬಲಗೈ ಸಮುದಾಯಕ್ಕೆ ಸೇರಿದ್ದು, ಪ್ರತ್ಯೇಕ ಮೀಸಲಾತಿ ನೀಡಿರುವುದರಿಂದ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕುಗ್ಗಿಸಲು ಆಯೋಗವು ದುರುದ್ದೇಶ ಪೂರ್ವಕವಾಗಿ ಮೀಸಲಾತಿಯನ್ನು ನಿಗದಿಪಡಿಸಿರುತ್ತದೆ.
- ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಾದಿಗ ಸಮುದಾಯದ ಜನಸಂಖ್ಯೆಗೆ ಬಲಗೈ ಸಮುದಾಯದ ಜನಸಂಖ್ಯೆಯನ್ನು ಸೇರ್ಪಡೆಗೊಳಿಸಿರುವುದು ಸರಿಯಲ್ಲ.
- ಜಸ್ಟಿಸ್ ದಾಸ್ ಅವರ ಒಳಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವು ಬಲಗೈ ಸಮುದಾಯದ ಬಗ್ಗೆ ದ್ವೇಷಪೂರಿತ ಭಾವನೆಯನ್ನು ಹೊಂದಿದ್ದು, ಇವರು ಭಾಗವಹಿಸಿದ್ದ ಹಲವಾರು ಸಭೆಗಳಲ್ಲಿ ಪೂರ್ವಗ್ರಹ ಪೀಡಿತರಾಗಿ ಆರಂಭದಿಂದಲೂ ಬಲಗೈ ಸಮುದಾಯದ ವಿರುದ್ಧವಾಗಿ ಮಾತನಾಡುತ್ತಿದ್ದರು. “ಹಿಂದಿನಿಂದ ಉಂಡವರು ತ್ಯಾಗ ಮಾಡಬೇಕು, ಬಲಗೈ ಸಮುದಾಯಕ್ಕೆ ಒಂದು ಚಮಚ ಕಡಿಮೆ ಕೊಡುತ್ತೇನೆ” ಎನ್ನುತ್ತಿದ್ದರು. ಅದೇ ದ್ವೇಷವನ್ನು ಮನದಲ್ಲಿಟ್ಟುಕೊಂಡು ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಕೆಲವು ಜಾತಿಗಳನ್ನು ಮಾದಿಗ ಸಮುದಾಯದ ಗುಂಪಿಗೆ ಸೇರ್ಪಡೆಗೊಳಿಸಿದ್ದಾರೆ. ಆ ಮೂಲಕ ಬಲಗೈ ಸಮುದಾಯದ ಜನಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಿ ಮೀಸಲಾತಿಯ ಪ್ರಮಾಣವನ್ನು ಕಡಿತಗೊಳಿಸಿದ್ದಾರೆ.
ಮೊದಲಾದ ಆಕ್ಷೇಪಗಳನ್ನು ಸಮಾವೇಶವು ಎತ್ತಿದ್ದು, ಸಚಿವ ಸಂಪುಟವು ಏನಾದರೂ ವರದಿಯನ್ನು ಅಂಗೀಕರಿಸಿದ್ದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಸಚಿವರು, ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ಕೊಡುವವರೆವಿಗೂ ಬಲಗೈ ಸಮುದಾಯ ಉಗ್ರ ಹೋರಾಟವನ್ನು ರೂಪಿಸುತ್ತದೆ ಎಂದು ಎಚ್ಚಸಿದೆ.





